Tuesday 12 June 2012


ಅಂಥಹದ್ದೊಂದು ಸುಂದರ ಕಿರುನಗೆಯೊಂದನ್ನು ನಮಗಾಗಿ ನಾವೇ ಸೃಷ್ಟಿ ಮಾಡಿಕೊಳ್ಳಲು ನಮಗೆ ಸಮಯವಿಲ್ಲ..... 



ಎರಡು ಮೊಬೈಲ್ ಫೋನ್ ಗಳಲ್ಲಿ ಒಂದನ್ನು ಊರಲ್ಲಿ ಬಿಟ್ಟು ಬಂದವಳಿಗೆ ಮೊನ್ನೆಈ ಮೊಬೈಲ್ ಲ್ಲಿ ಎಲ್ಲರ ನಂಬರ್ ಗಳು ಇದೆಯಾ ಇಲ್ಲವಾ ಎನ್ನುವ ಅನುಮಾನ ಕಾಡಲು ಶುರು ಆಯ್ತು . ಸರಿ ಅನುಮಾನಕ್ಕೊಂದು ಪರಿಹಾರ ಬೇಕೇ ಬೇಕು ಎನ್ನುತ್ತಾ contact list ನಲ್ಲಿ ಹುಡುಕುತ್ತ ಕುಳಿತೆ. ಎಲ್ಲರ ನಂಬರ್ ಗಳಿವೆ ಎಂದೂ confirm ಆದ ನಂತರ ಪಿ ಯು ಸಿ ಯ ಗೆಳತಿಯೊಬ್ಬಳ ನಂಬರ್ ನೋಡಿ ತುಂಬಾ ದಿನ ಆಯ್ತಲ್ಲ ಕಾಲ್ ಮಾಡಿ. ಮೆಸೇಜ್ ಮಾಡೋದಂತೂ ನಿಂತೇ ಹೋಗಿದೆ. ಚಾಟಿಂಗ್ ಹೋಗಲಿ ಫಾರ್ವರ್ಡ್ ಮೆಸೇಜ್ ಕೂಡ ಇಲ್ಲ. ನಂಬರ್ ಚೇಂಜ್ ಮಾಡಿದ್ದಾಳೋ ಏನೋ ಎನ್ನುವಂತಹ ನೂರಾರು ಯೋಚನೆಗಳನ್ನ ತುಂಬಿಕೊಂಡೆ ಡಯಲ್ ಬಟ್ಟನ್ ಒತ್ತಿದೆ. ರಿಂಗ್ ಆಗಿ ರಿಸೀವ್ ಮಾಡಿದವಳು ಯಾರು ? ಎಂದಳು. ನಾನು ನನ್ನ details ಎಲ್ಲ ಹೇಳಿದ ನಂತರ ,ನಿನ್ನ ನಂಬರ್ ಚೇಂಜ್ ಆಗಿದೆ ಅಂದ್ಕೊಂಡೆ ಅದಕ್ಕೆ ಮೆಸೇಜ್ ಅಥವಾ ಕಾಲ್ ಮಾಡಿಲ್ಲ ಎಂದಳು ಅವಳು. ನಾನು ಹಾಗೆ ಅಂದುಕೊಂಡಿದ್ದೆ ಎಂದೇ ನಾನು. ನಮ್ಮ ಮಾತುಗಳಲ್ಲಿ ಮೊದಲರ್ಧ ಏನು ಮಾಡ್ತಿದಿಯಾ? ಎಲ್ಲಿ ವರ್ಕ್ ? ಯಾವ ಏರಿಯ ? ಇದೆ ಆದರೆ ಅಮೆಲಿನದು ಮತ್ತೆ..??? ಅಂದರೆ ಏನಿಲ್ಲ.. ಎಂತಾ ಸುದ್ದಿ ಅಂದರೆ ಎಂತು ಇಲ್ಯೇ .. ಇಷ್ಟರಲ್ಲೇ ಮುಗಿದಿತ್ತು . ಈ ಮತ್ತೆ... ಏನಿಲ್ಲ... ಎಂಬ ರಾಗದ ನಾಟಕ ಸಾಕಾಗಿ ಸರಿ ಮತ್ತೆ ಮಾತನಾಡೋಣ ಎನ್ನುತ್ತಾ ಫೋನ್ ಕಟ್ ಮಾಡಿದೆ.


"Relations are not fade, but we just reduce the communications" ಎಂಬ ಫಾರ್ವರ್ಡ್ ಮೆಸೇಜ್ ಬೇಡವೆಂದರೂ ನೆನಪಾಯಿತು.ಹೊಸ ಹೊಸ ಸಂಪರ್ಕ ತಂತ್ರಜ್ಞಾನಗಳು ಮನುಷ್ಯನನ್ನು ಬೆಸೆಯಲು ಅವಿಷ್ಕಾರವಾಗುತ್ತಿದ್ದರೂ ಯಾಕೋ ಸಂಬಂಧಗಳ ನೆಲೆಗಟ್ಟು ಗಳು ಸಡಿಲಗೊಳ್ಳುತ್ತಿದೆ ಎನ್ನಿಸುತ್ತಿದೆ.ಹೊಸ ಸಂಬಂಧಗಳಿಗೆ ಮನಸ್ಸು ತೆರೆದುಕೊಂಡಾಗ ಪ್ರತಿ ಸಂಬಂಧಗಳು ಆಕರ್ಷಣೀಯವಾಗಿರುತ್ತವೆ. ಆ ಸಂಬಂಧಗಳು ಗಟ್ಟಿಯಾಗಬೇಕಾಗಿರುತ್ತವೆ. ಅವಾಗ ಕುಂತಿದ್ದು, ನಿಂತಿದ್ದು, ಅತ್ತಿದ್ದು , ನಕ್ಕಿದ್ದು. ಮಾರ್ನಿಂಗ್, ಇವಿನಿಂಗ್ ಎಲ್ಲವೂ ಮೆಸೇಜ್ ಅಥವಾ ಕಾಲ್ ಗಳಲ್ಲಿ ಹರಿದಾಡುತ್ತಿರುತ್ತವೆ. ಪ್ರತಿ ಭೇಟಿಗಾಗಿಯು ಮನಸು ಕಾಯುತ್ತದೆ. ಪ್ರತಿ ಭೇಟಿಗಳು ಸ್ಮರಣೀಯವಾಗಿರುತ್ತವೆ. ಯಾವಾಗ ಸಂಬಂಧಗಳು ಗಟ್ಟಿಯಾಗಿವೆ ಎಂಬ ಒಂದು ಹುಂಬ confidence ಬೆಳೆದುಬಿಡುತ್ತದೋ ಆಗ ಇವನು /ಇವಳು ನನ್ನ ಗೆಳೆಯ /ಗೆಳತಿಯಲ್ಲವಾ.. ನನ್ನ ಬಿಟ್ಟು ಎಲ್ಲಿ ಹೋಗುತ್ತಾರೆ ಎಂಬ ಧೈರ್ಯವಿರುತ್ತದೆ. ಇವತ್ತು ಮೆಸೇಜ್ ಅಥವಾ ಕಾಲ್ ಮಾಡಲಾಗಲಿಲ್ಲವಾ ನಾಳೆ ಮಾಡಿದರಾಯಿತು ನನ್ನ ಫ್ರೆಂಡ್ ತಾನೇ ಎಂದುಕೊಳ್ಳುತ್ತೇವೆ.ಈ ವಾರ ಸಿಗಲು ಅಗಲಿಲ್ಲವಾ ಮುಂದಿನವಾರ ನೋಡಿಕೊಳ್ಳೋಣ ಎಂದುಕೊಳ್ಳುತ್ತೇವೆ. ಆದರೆ ಈ ನಾಳೆಗಳ, ವಾರಗಳ ಸಂಖ್ಯೆ ಜಾಸ್ತಿ ಆದಂತೆಲ್ಲ ಸಂಬಂಧಗಳ ನಡುವಿನ ಅಂತರ ಜಾಸ್ತಿಯಾಗುತ್ತ ಹೋಗುತ್ತದೆ. ಕಾಲೇಜ್ , ಆಫೀಸ್ , ಸೋಸಿಯಲ್ ನೆಟ್ವರ್ಕ್ ಗಳಲ್ಲಿ ದಿನ ನಿತ್ಯ ನಾವು ಎಷ್ಟೋ ಹೊಸ ಸಂಬಂಧಗಳಿಗೆ ತೆರೆದು ಕೊಳ್ಳುತ್ತೇವೆ. ಅವುಗಳನ್ನೆಲ್ಲ ಉಳಿಸಿಕೊಳ್ಳುವ ಭರದಲ್ಲಿ ಜೊತೆಯಲ್ಲಿದ್ದ, ಹೆಗಲು ನೀಡಿದ, ಬೆನ್ನುತಟ್ಟಿದ ಎಷ್ಟೋ ಸಂಬಂಧಗಳಿಗೆ ಸಮಯ ಹಾಗೂ ಬೆಲೆ ಕೊಡುವುದನ್ನು ಮರೆತು ಹೋಗಿರುತ್ತೇವೆ. ಯಾವುದೇ ಮನುಷ್ಯ ಹೊಸ ಸಂಬಂಧಗಳಿಗೆ ತೆರೆದು ಕೊಂಡಾಗ ಶುರುವಿನಲ್ಲಿ ಆಕರ್ಷಕವಾಗಿ ಕಾಣುವ ಸಂಬಂಧಗಳು ಕ್ರಮೇಣ ಏಕೆ ಆಕರ್ಷಣೆ ಕಳೆದುಕೊಳ್ಳುತ್ತವೆ?? ಸಂಬಂಧಗಳನ್ನು ಗಟ್ಟಿಯಾಗಿಸುವಲ್ಲಿನ ಉತ್ಸಾಹ, ಆತುರತೆ , ಶ್ರದ್ಧೆ, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಏಕೆ ಕಡಿಮೆಯಾಗುತ್ತಿದೆ??


ಗೆಳತಿಯೊಬ್ಬಳು ಹುಬ್ಬಳ್ಳಿಯಲ್ಲಿ ಓದುತ್ತಿದ್ದಾಗ ನಾನು ಅವಳು ವಾರಕ್ಕೊಂದು ಕಾಗದ ಬರೆದುಕೊಳ್ಳುತ್ತಿದ್ದೆವು. ಅಂಚೆ ಇಲಾಖೆ ಜೀವಂತವಾಗಿರುವುದಕ್ಕೆ ನಾವೇ ಕಾರಣವೇನೋ ಎನ್ನುವಂತೆ..!! ಮೊಬೈಲ್ ಇರಲಿಲ್ಲ ಆಗ. ಅವಳು ಈ ಹಬ್ಬಕ್ಕೆ ಮನೆಗೆ ಬಂದಿರಬಹುದೆಂಬ ಊಹೆಯ ಮೇರೆಗೆ ಲ್ಯಾಂಡ್ ಲೈನ್ ಗೆ ಕಾಲ್ ಮಾಡಿಕೊಳ್ಳುತ್ತಿದ್ದೆವು. ಬಸ್ , ಕ್ಲಾಸಿನ ಗಡಿಬಿಡಿಯಲ್ಲೂ ಹತ್ತು ನಿಮಿಷಗಳ ಮಾತಿಗಾದರೂ ಒಬ್ಬರಿಗೊಬ್ಬರು ಸಿಗುತ್ತಿದ್ದೆವು. ಆದರೆ ಈಗ ಇಬ್ಬರ ಬಳಿಯಲ್ಲೂ ಮೊಬೈಲ್ ಇದೆ. ಕಾಲ್ ಗಳು ಕಡಿಮೆ ಆಗಿವೆ. ಅರ್ಧಗಂಟೆಯ ದಾರಿಯಲ್ಲಿ ಇಬ್ಬರ ಮನೆಗಳಿವೆ. ಆದರೂ ವಾರಕ್ಕೊಮ್ಮೆ ಕೂಡಾ ಸಿಗುವುದಿಲ್ಲ ನಾವು. ಇಂದು advanced ಎನ್ನುವ ತಂತ್ರಜ್ಞಾನಗಳಿದ್ದರೂ ಸಂಪರ್ಕ ಕಡಿಮೆಯಾಗಿದೆ ಎನ್ನುವದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ .


ಹಿಂದಿನ ಕಾಲದಲ್ಲಿ ಸಂಪರ್ಕ ಮಾದ್ಯಮಗಳು ಕಡಿಮೆಯಿದ್ದರೂ ಸಂಬಂಧಗಳು ಅವುಗಳ ಗಟ್ಟಿತನವನ್ನು ಉಳಿಸಿಕೊಂಡಿದ್ದವು. ಸಂಪರ್ಕ ಕಷ್ಟ ಸಾದ್ಯ ಎನ್ನುವ ಕಾಲದಲ್ಲೂ ಆದರ್ಶ ಸ್ನೇಹ ಮೆರೆದ ಎಷ್ಟು ಸ್ನೇಹಿತರ ಕಥೆ ಕೇಳಿಲ್ಲ ನಾವು ?? ಪತ್ರ ಮುಖೇನ ಒಂದಾದ ಎಷ್ಟು ಪ್ರೇಮಕಥನಗಳಿಲ್ಲ .?? ಹಬ್ಬಹರಿದಿನಗಳಿಗೆ ಕರೆದು ಕಳುಹಿಸಿ ಮಾಡಿದ ಎಷ್ಟು ಅಣ್ಣ ತಮ್ಮಂದಿರಿಲ್ಲ?? ಆಷಾಢದ ವಿರಹದ ಹೊರೆಯನ್ನು ಪತ್ರಗಳಲ್ಲೇ ನಿವೇದಿಸಿಕೊಂಡ ಅದೆಷ್ಟು ದಂಪತಿಗಳಿಲ್ಲ?? Advanced generation ಎಂದು ಕರೆಸಿಕೊಳ್ಳುತ್ತ, ದಿನ ದಿನಕ್ಕೂ ಹೊಸ ಅವಿಷ್ಕಾರಗಳನ್ನು ಬಳಸುತ್ತಿರುವ ನಮಗೆ ಅವೆಲ್ಲ ಬಾಲಮಂಗಳ , ಚಂದಮಾಮದಲ್ಲಿ ಬರುತ್ತಿದ್ದ ಕಾಲ್ಪನಿಕ ಕಥೆಗಳಂತೆ ಭಾಸವಾಗುತ್ತವೆ. ಆದರೆ ಅವೆಲ್ಲ ವಾಸ್ತವಗಳಾಗಿದ್ದವು.


ಕಾಲದೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುವ ನಮಗೆ ಸಮಯ ಕಡಿಮೆ ಬೀಳುತ್ತಿದೆ. ಉದ್ಯೋಗ, ಉನ್ನತಿ, ಹಣ, ಖ್ಯಾತಿಗಳು ನಮ್ಮನ್ನು ಉತ್ತುಂಗಕ್ಕೆರಿಸುತ್ತಿದ್ದರೂ ಸಂಬಂಧಗಳ ನಿಭಾಯಿಸುವಿಕೆಯಲ್ಲಿ ನಾವು ಸೋಲುತ್ತಿದ್ದೆವಾ?? ಎನಿಸುತ್ತಿದೆ.ಹಾಗಂತ ಈ ಸಂಬಂಧಗಳು ಹಳಸಿಹೊಗಿರುವುದಿಲ್ಲ, ಅಳಿಸಿಯೂಹೊಗಿರುವುದಿಲ್ಲ,ಸ್ವಲ್ಪ ಮಸುಕಾಗಿರುತ್ತವೆ ಅಷ್ಟೇ; ತುಂಬಾ ದಿನ ಮುದ್ದಾಡದೆ show case ನಲ್ಲಿ ಇಟ್ಟ ಮುದ್ದು ಗೊಂಬೆಯ ಮೇಲೆ ಧೂಳು ಕುಳಿತಿರುವಂತೆ. ವಿಶೇಷ ಸಂಧರ್ಬಗಳಲ್ಲಿ ನಮ್ಮವರಿಗೆ ನಾವು ಮಾಡುವ ವಿಶ್ ಅವರಿಗೆ ಧೈರ್ಯ ಅಥವಾ ಖುಷಿ ನೀಡಬಹುದು. ಎಲ್ಲೋ ಒಂದು surprise visit ಅವರ ಮನಸ್ಸನ್ನು ಮುದಗೊಳಿಸಬಹುದು ಅಥವಾ ನಮ್ಮವರೊಂದಿಗಿನ ಒಂದು trip ಅಥವಾ ಒಂದು Get together ನಮ್ಮ ಎಲ್ಲ ಒತ್ತಡಗಳನ್ನು ತಣಿಸಬಲ್ಲದು. ಅಯ್ಯೋ ಅದಕ್ಕೆಲ್ಲ ಸಮಯವೆಲ್ಲಿದೆ ಎಂದುಕೊಂಡರೆ ಈ ಮೊಬೈಲ್ ಎಂಬ ಮಾಯಾಂಗನೆ ದಿನ ನಿತ್ಯದ ಅಗತ್ಯವಾಗಿರುವಾಗ , love You, Miss You, Take care ಅಥವಾ ಪುಟ್ಟದಾದ Good Morning ಮೆಸೇಜ್ ಗಳನ್ನು ಎರಡೇ ನಿಮಿಷದಲ್ಲಿ ಟೈಪ್ ಮಾಡಿ ಸಂಬಂಧಪಟ್ಟವರಿಗೆ ಕಳುಹಿಸಿದರೆ ಮುಂದಿನ ಎರಡೇ ನಿಮಿಷದಲ್ಲಿ ನಮಗೆ ಕಾಣದಿದ್ದರೂ ನಮಗಾಗಿಯೇ ಅವರ ಮುಖದಲ್ಲಿ ಒಂದು ಕಿರುನಗೆ ಅರಳಿರುತ್ತದೆ . ಆದರೆ ಅಂಥಹದ್ದೊಂದು ಸುಂದರ ಕಿರುನಗೆಯೊಂದನ್ನು ನಮಗಾಗಿ ನಾವೇ ಸೃಷ್ಟಿ ಮಾಡಿಕೊಳ್ಳಲು ನಮಗೆ ಸಮಯವಿಲ್ಲ.


ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ. ಸಮಯಕ್ಕೆ ಹೊಂದಿಕೊಳ್ಳಲೇ ಬೇಕು. ಬದಲಾಗುತ್ತಿರಲೇ ಬೇಕು...


ಆದರೆ ಈ ಸಮಯದೊಂದಿಗೆ ಓಡುತ್ತಲೇ ನಾವು ಸಂಬಂಧಗಳ ನೆಲೆಗಟ್ಟನ್ನು ಗಟ್ಟಿಯಾಗಿಸಿಕೊಳ್ಳಬೇಕು ಅಲ್ಲವೇ ...

28 comments:

  1. ಸ್ವಲ್ಪ ಕೊಂಚ ಹಿಂದೆ ಅಂದ್ರೆ ಸುಮಾರು ಹತ್ತು ವರುಷಗಳ ಹಿಂದೆ...ಎಲ್ಲವು ಸುಸೂತ್ರವಾಗಿತ್ತು..ಮೊಬೈಲ್ ಆಗ ಒಂದು ಶ್ರೀಮಂತಿಕೆಯ ಸಂಕೇತವಾಗಿತ್ತು..ಪತ್ರಗಳು, ಲೇಖನಗಳು, ಶುಭಾಶಯ ಪತ್ರಗಳು ಹರಿದಾದುತಿದ್ದವು...ಪ್ರಪಂಚ ಕೂಡ ವಿಶಾಲವಾಗಿ ಹರಡಿತ್ತು..ಹಾಗೆ ಮನಸು ಕೂಡ..ಈಗ ತಾಂತ್ರಿಕತೆಯು ಬೆಳೆದು ಪ್ರಪಂಚ, ಮನಸು ಎರಡು ಕುಗ್ಗಿ ಹೋಗಿದೆ..ಗೆಳೆಯರು ನಮ್ಮ ಕೈಗೆ ಸಿಗುತ್ತಿಲ್ಲ ಎನ್ನುವಾಗ ಮಿಸ್ ಯು, ಟೆಕ್ ಕೇರ್ ಎನ್ನುವ ಪದ ಪುಂಜಗಳು ಹಾರಾಡುತ್ತ ಇರುತ್ತವೆ..ಆದ್ರೆ ಅವರನ್ನು ಸಂಪರ್ಕಿಸುವ ಸಮಯ ಬಳಿಯಲ್ಲಿ ಇರದ ಹಾಗೆ ಕಣ್ಣನ್ನು ಎತ್ತಲೋ ಓಡಿಸುತ್ತಾ ಇರುತ್ತೇವೆ..ಒಂದು ಮೇಲ್, ಒಂದು ಪತ್ರ ಬಂಧಿಸುತ್ತೆ ಅನ್ನುವ ಭಾವ ಇದ್ದರು ಕೂಡ..ಇರಲಿ ಮನೆಗೆ ಹೋದ ಮೇಲೆ ಬರೆಯೋಣ, ಫ್ರೀ ಆದಾಗ ಬರೆಯೋಣ ಎನ್ನುವ ಒಂದು ಸಣ್ಣ ಸೋಮಾರಿ ಭಾವ ತಡೆಯುತ್ತೆ..
    ಸ್ನೇಹ ಸಾಗರ ಬಹು ವಿಶಾಲ..ಅಲ್ಲಿ ತೇಲಾಡಲು ನೌಕೆಯೇ ಬೇಕಾಗಿಲ್ಲ..ಸಣ್ಣ ಹಾಯಿ ದೋಣಿ ಸಾಕು..ಆ ಹಾಯಿ ದೋಣಿ ಎಂದರೆ ಸ್ನೇಹಕ್ಕೆ ಹಾಗು ಉಳಿಸಿಕೊಳ್ಳುವ ಒಂದು ತಹತಹಿಕೆ..ಆಡಿದ್ದಾರೆ ಸ್ನೇಹ ಎಂದೂ ಅಮರ...
    ಚೆಂದದ ಬರವಣಿಗೆ..ನಿಮ್ಮ ಮನದಂಗಳಕ್ಕೆ ನಮನಗಳು

    ReplyDelete
    Replies
    1. ಶ್ರೀಕಾಂತ್ ,
      ನಿಮ್ಮ ಮಾತು ನಿಜ. ಮೊದಲೆಲ್ಲ ಸಂಕ್ರಾಂತಿ ಬಂತೆಂದರೆ ಸಾಕು ವಿಧ ವಿಧವಾದ ಗ್ರೀಟಿಂಗ್ಸ್ ಕೊಂಡು ಸಂಬಂಧಿಕರಿಗೆಲ್ಲ ಕಳಿಸುವ ಮಜವೇ ಬೇರೆ ಇತ್ತು. ಆದರೆ ಈಗ ಸಂಕ್ರಾಂತಿಯ ಗ್ರೀಟಿಂಗ್ಸ್ ಸಂಭ್ರಮ ಕಳೆದು ತುಂಬಾ ವರ್ಷಗಳಾದವು.. ಪ್ರಪಂಚ ಗ್ಲೋಬಲ್ ವಿಲ್ಲೇಜ್ ಆಗುತ್ತ ಹೋದೆಂತೆಲ್ಲ ಮನಸ್ಸೂ ಚಿಕ್ಕದಾಗುತ್ತ ಬಂದಿದ್ದು ವಿಪರ್ಯಾಸವೇ ಸರಿ.. ಧನ್ಯವಾದ ಚಂದದ ಪ್ರತಿಕ್ರಿಯೆಗೆ ..ಹಾಗು ಲೇಖನ ಇಷ್ಟಪಟ್ಟಿದ್ದಕ್ಕೆ..

      Delete
  2. ಮೇಡಂ,
    ಕಾಲಾನು ಸಾರ ನಮ್ಮ ಅನುಕೂಲಕ್ಕೆ ತಕ್ಕಂತೆ ಸಂಬಂಧಗಳೂ ತೆರೆದುಕೊಳ್ಳುತ್ತಾ ಹೋಗುತ್ತದೆ ಅಲ್ವೇ? ಬದುಕೇ ಹಾಗೆ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
    Replies
    1. ಬದರಿ ಸರ್ ,
      ಎಲ್ಲಕ್ಕೂ ಕಾಲಾಯ ತಸ್ಮೈ ನಮಃ ಎನ್ನಬೇಕು ಅಲ್ಲವೇ..
      ಧನ್ಯವಾದಗಳು..

      Delete
  3. ಯಾವುದೇ ಸಂಬಂಧದ ಉಳಿವು ಅಥವಾ ಅಳಿವು ನಾವು ಆ ಸಂಬಂಧದೊಂದಿಗೆ ಬೆಸೆದುಕೊಂಡಿರುವ ಭಾವನಾತ್ಮಕ ಬೆಸುಗೆಯನ್ನು ಅವಲಂಬಿಸಿದೆ...ಬೆಸುಗೆ ಬಲವಾಗಿದ್ದಲ್ಲಿ ಎಲ್ಲ ದೂರಗಳ ನಡುವೆಯೂ ಬಾಂಧವ್ಯ ಜೀವಂತ...ಆಗಾಗ ಗೊಂಬೆಯ ಮೇಲಿನ ಧೂಳು ಒರೆಸಿದರೂ ಸಾಕೇ ಸಾಕು...ಗೊಂಬೆ ಫಳ ಫಳ...ಭಾವನಾತ್ಮಕ ಒಳಸೆಲೆಯೇ ಇಲ್ಲದಿದ್ದಲ್ಲಿ ಪಕ್ಕದಲ್ಲೇ ಇದ್ದ ಜೀವವೂ ದೂರ ದೂರ...
    :::
    ::
    :
    ಒಳ್ಳೆಯ ಬರಹ...

    ReplyDelete
    Replies
    1. ಶ್ರೀವತ್ಸ ,
      ಚಂದದ ಪ್ರತಿಕ್ರಿಯೆಗೆ ಧನ್ಯವಾದ. ನಿಜ ಬೆಸುಗೆ ಗಟ್ಟಿಯಿದ್ದರೆ ಬಾಂಧವ್ಯ ಬೆಳಗುತ್ತಿರುತ್ತದೆ. ಮುದ್ದು ಗೊಂಬೆಯ ಧೂಳನ್ನು ಒರೆಸುವಷ್ಟದಾರು ಸಮಯ ಮಾಡಿಕೊಳ್ಳಬೇಕಾಗಿದೆ.

      Delete
  4. ನಾನ್ಯಾವಾಗಲೋ ಒಮ್ಮೆ ಹೀಗೇ ಅಂದುಕೊಂಡಿದ್ದೆ....
    ನಮ್ಮನ್ನು ನಾವು ಎಷ್ಟು ಹೆಚ್ಚು ಆಧುನಿಕತೆಗೆ ಹೊಂದಿಸಿಕೊಳ್ಳುತ್ತೇವೆಯೋ
    ಅಷ್ಟು ನಮ್ಮ ಭಾವನಾತ್ಮಕತೆಯನ್ನು ಕಡಿಮೆ ಮಾಡಿಕೊಳ್ಳುತ್ತೇವೆ ಅಂತ.....
    ಆಧುನಿಕತೆಯಲ್ಲಿ ವೇಗವಿದೆ....ಭಾವುಕತೆಗೆ ಈ ವೇಗ ಕಷ್ಟ....
    ಪತ್ರಗಳು ಈ ಹಿಂದೆ ನಾಲ್ಕು ವರ್ಷಗಳ ವರೆಗೆ ನಮ್ಮನೆಯವರೆಗೆ
    ಅಲೆದು ದಾರಿ ಸವೆಸಿದ್ದವು.....
    ಅಂತರ್ದೇಶಿ.... ಒಬ್ಬೊಬ್ಬರಿದು ಒಂದೊಂದು ರೀತಿ... ಪತ್ರ ಪ್ರಾರಂಭವಾಗುವ ರೀತಿ
    ಜೋಡಿಸುವ ಪದಗಳು... ಅದರೊಳಗಿನ ಪ್ರೀತಿ..... ಹಿಡಿಯದಿದ್ದರೂ ಇನ್ನಷ್ಟು ಅಕ್ಷರಗಳನ್ನು, ಭಾವನೆಗಳನ್ನು ಪತ್ರದ ಸಂದು ಗೊಂದುಗಳಲ್ಲಿ ತುರುಕಿ ಕಳಿಸುವ ರೀತಿ.....
    ಶಿಟ್....!!!! ಏನೆಲ್ಲ ಕಳೆದುಕೊಳ್ಳುತ್ತಿದ್ದೇವೆ....
    ಎಂತಹ ಖುಷಿಯಿರುತ್ತಿತ್ತು ಅದರಲ್ಲಿ.....
    ಪತ್ರ ಒಡೆಯುವಾಗಿಂದ ಹಿಡಿದು ಜೋಪಾನವಾಗಿ ಡಬ್ಬದಲ್ಲಿ ಇಡುವವರೆಗಿನ ಖುಷಿ....
    ಮೊಬೈಲ್ ನ
    i miss u da...... gud morning... gud evening ನಲ್ಲೆಲ್ಲಿ ಸಿಗ್ಬೇಕು...
    ಈವತ್ತೊಂದು ಬಾರಿ ಈಗಿಲ್ಲವಾದ ಆಗಿನ ಪತ್ರಗಳನ್ನು ಓದಬೇಕಿದೆ...

    ಚಂದದ ಬರಹ... ಮತ್ತೊಮ್ಮೆ ಆ ಖುಷಿಯನ್ನು ನೆನಪಿಸಿದೆ.....

    ReplyDelete
    Replies
    1. ರಾಘವ,
      ಅಂತರ್ದೇಶಿ ಪತ್ರಗಳ ಮಜವೇ ಬೇರೆ ಇತ್ತು. ಅಪ್ಪನಿಗೆ ಅವರ ಗೆಳೆಯರೊಬ್ಬರು ಪತ್ರ ಬರೆಯುತ್ತಿದ್ದರು. ಅಪ್ಪ ಅದನ್ನು ಓದಿ ಜೋಪಾನವಾಗಿ ಇಡುವುದನ್ನು ನೋಡಿ ನನಗೇಕೆ ಯಾರು ಪತ್ರ ಬರೆಯಲ್ಲ ಅಂದುಕೊಂಡಿದ್ದೆ. ನಾಲ್ಕು ಸಾಲಿನ ಆ ಪತ್ರವನ್ನು ಅಷ್ಟು ಜೋಪಾನ ಮಾಡಬೇಕೆ ?? ಎಂದುಕೊಳ್ಳುತ್ತಿದ್ದೆ . ಆದರೆ ನಾನು ನನ್ನ ಗೆಳತಿ ಪತ್ರ ಬರೆಯಲು ಶುರು ಮಾಡಿದಾಗ ತಿಳಿಯಿತು.. ಪತ್ರ ಮತ್ತು ಅಕ್ಷರಗಳನ್ನಲ್ಲ .. ಭಾವನೆಗಳನ್ನೇ ಜೋಪಾನವಾಗಿಡುತ್ತೇವೆ ಎಂದು. ಇನ್ನು ಎಲ್ಲ ಪತ್ರಗಳಿವೆ . ಇಬ್ಬರು ಕೂತು ಓದಿ ನಗುತ್ತೇವೆ.. ಆ ದಿನಗಳು ಮತ್ತೆ ಬರಲ್ಲ.. ಅಲ್ಲವ..
      ಧನ್ಯವಾದ..

      Delete
  5. very nice article.. ಗಡಿಬಿಡಿ ಬದುಕಿನ ನಡುವೆ, ಗೆಜೆಟ್ಟುಗಳ ಗೊಂದಲದ ನಡುವೆ ಕಳೆದುಹೋದ ಸಂಬಂಧಗಳ ಬಗ್ಗೆ ನವಿರಾಗಿ , ಸೂಕ್ಷ್ಮವಾಗಿ ಬರೆದಿದ್ದೀರ.. :) ಧನ್ಯವಾದಗಳು . ಬರೆಯುತ್ತಿರಿ

    ReplyDelete
    Replies
    1. ಸೌಮ್ಯ ರವರೆ,
      ಧನ್ಯವಾದ ಲೇಖನ ಇಷ್ಟಪಟ್ಟಿದ್ದಕ್ಕೆ.. ಸಂಬಂಧಗಳು ಬಹಳ ಸೂಕ್ಮವಾಗಿವೆ ಈಗ..

      Delete
  6. ಹ್ಮ್, article ಓದೋವರೆಗೂ ಛೆ ಬದಲಾಗಬೇಕು ಅನ್ನಿಸುತ್ತೆ , ನಂತರ "ಮತ್ತದೇ ಬೇಸರ, ಅದೇ dash dash dash
    ಏನೋ ಗೊತ್ತಿಲ್ಲ, ನಮ್ಮ ಮನಸುಗಳೆಲ್ಲ major ಆಗಿ ಬದಲಾಗ್ತಿರೋ ಕಾಲಘಟ್ಟದಲ್ಲಿ ಇದ್ದೀವೇನೋ ಅನ್ಸುತ್ತೆ,
    ಬರೀತಾ ಇರೋಣ.....ಅನುಭವಿಸ್ತಾ ಇರೋಣ....

    ReplyDelete
    Replies
    1. ಅಭಿಜ್ಞಾ ,
      ಹ್ಮ್ಮ್, ಪ್ರತಿಸಲ ಏನೋ ಒಂದನ್ನು ನೋಡಿಯೋ ಓದಿಯೋ ಬದಲಾಗಬೇಕು ಎಂದೂ ಹೊರಟುಬಿಡುತ್ತೇವೆ. ಆದರೆ ಅದು ಕಣ್ಣಿಂದ ಮರೆಯಾದ ಮೇಲೆ ಮತ್ತೆ ನೀವೇ ಹೇಳಿದಂತೆ dash... dash.. dash...
      ಎಲ್ಲವು ಬದಲಾಗುತ್ತಲೇ ಇವೆ. ಎಲ್ಲದರಲ್ಲೂ ಖುಷಿ ಕಂಡುಕೊಳ್ಳೋಣ ..:)
      ಧನ್ಯವಾದ ಬರವಣಿಗೆಯನ್ನು ಇಷ್ಟಪಟ್ಟಿದ್ದಕ್ಕೆ

      Delete
  7. ತುಂಬಾ ಚೆನ್ನಾಗಿದೆ ... ಹೀಗೆ ಬರಿತಾ ಇರು

    ReplyDelete
  8. sandhya, congratulations....
    ur article in vk
    http://www.vijaykarnatakaepaper.com/svww_zoomart.php?Artname=20120626a_009101002&ileft=757&itop=92&zoomRatio=130&AN=20120626a_009101002

    ReplyDelete
  9. good article,news paper nalli nodide,Nagaragalige valase hoda janatege jeevanakkagi dudimeyo illa dudimegagi jeevanavo emba gondaladinda sambandhagala sthiti ee mattakke bandide anta annisuttide............

    ReplyDelete
  10. Nija Sandhya......sambadagalige eega bele illa:) thumba arthapoorna lekana:)

    ReplyDelete
    Replies
    1. ಸಂಬಂಧಗಳಿಗೆ ಬೆಲೆ ಇದೆ ಸುಲತ.. ಆದ್ರೆ ಅದನ್ನ ಅರ್ಥ ಮಾಡಿಕೊಳ್ಳೋ ರೀತಿ ಬದಲಾಗಿದೆ ಅಷ್ಟೇ ... ಧನ್ಯವಾದ ಲೇಖನ ಇಷ್ಟ ಪಟ್ಟಿದ್ದಕ್ಕೆ..

      Delete
  11. ಸಂಧ್ಯಾ ಪುಟ್ಟಾ...ಬಹಳ ಚನ್ನಾಗಿ ನಿರೂಪಿಸಿದ್ದೀಯ...ವಿಷಯ ಮಂಡನೆ ಶೈಲಿ ಇಷ್ಟವಾಯ್ತು...ಅಂಚೆ ಪದ್ದತಿ ತನ್ನದೇ ಆದ ಭಾವ ಬಂಧಗಳ ಒಂದು ಆಯಾಮವನ್ನೇ ಸೃಷ್ಠಿಸಿತ್ತು...

    ReplyDelete
  12. samparkakke ondu balavaada kaarana beku...yaake kare maadiddu emba samarthanege vishayavondu bekallaa emba chintaneyalli ella adhunika samaprka sadhanagalu aprastutavaaguttave....
    chendada lekhana

    ReplyDelete