Monday 18 March 2013

ಹೀಗೊಂದು "ಆಶ"ಯ.. ಪ್ರೀತಿಯ ಶುಭಾಷಯ..




ಆವತ್ತು ಎಂದಿನಂತೆ ಆಫೀಸ್ ಮುಗಿಸಿ ಹೊರಟವಳಿಗೆ direct  buss  ಸಿಗದೇ ಬೇರೆ buss  ಹತ್ತಿದ್ದೆ. ಸಣ್ಣ ಅಯಾಸದೊಂದಿಗೆ ಹಾಡು ಕೇಳುತ್ತಾ ಕಣ್ಣುಮುಚ್ಚಿ  ಕುಳಿತವಳಿಗೆ bus  ಎಲ್ಲಿ ಹೋಗುತ್ತಿದೆ ಅಂತ ಗೊತ್ತಿರಲಿಲ್ಲ. ಒಂದು ಕಡೆ bus ನಿಂತ ಅನುಭವವಾಗಿ ಕಣ್ ಬಿಟ್ಟರೆ, ಒಂದಿಷ್ಟು ಜನ ಇಳಿದಿದಿದ್ದು , ಹತ್ತಿದ್ದು ಕಾಣಿಸಿದ್ದು. ಹತ್ತಿ ಒಳಬಂದವರನ್ನು ನೋಡುತ್ತಿರುವಂತೆ ಕಂಡಿದ್ದು ನೀನು .!! ಹೌದಾ ? ಇದು ನಿಜವಾ ? ನೀನಾ ? ಅಂತ ಎರಡೆರಡು ಬಾರಿ ನೋಡಿಕೊಂಡೆ. ಹೌದು ಅದು ನೀನೆ ಅಂತ  ಗೊತ್ತಾದಾಗ ಮನಸ್ಸು ಎಷ್ಟು ಕುಣಿದಿತ್ತು ಗೊತ್ತಾ ? ನನ್ನ ಎದುರು ಸೀಟ್ ನಲ್ಲಿಯೇ ಕುಳಿತು ನೀ ನನ್ನನ್ನು ನೋಡದೆ ನಿನ್ನ ಪಾಡಿಗೆ ಕುಳಿತಾಗ ಮಾತ್ರ ಎಲ್ಲಿಲ್ಲದ ಸಿಟ್ಟು ಬಂತು . ಆದರೆ ಯಾವಾಗ ನೀ ನನ್ನ ನೋಡಿದೆಯೋ ಆಗ ನಿನ್ನ ಮುಖದಲ್ಲಿನ expression  ಇವತ್ತಿಗೂ ಮರೆಯಲು ಆಗೋಲ್ಲ. ಏನೋ ಒಂದು ಅಚಾನಕ್ ಆಗಿ ಸಿಕ್ಕ ಖುಷಿ ನಿನ್ನ ಕಣ್ಣಲ್ಲಿ ಕಂಡಿತ್ತು. ನಿನ್ನ ಕಣ್ಣಲ್ಲಿ ಖುಷಿ ಗೆ ನೀರು ಬರುವುದೊಂದು ಬಾಕಿ ಎನಿಸಿತ್ತು. ಈ ವರ್ಕೋ ಹಾಲಿಕ್ ಜಗತ್ತಿನಲ್ಲಿ ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಬೇಕಲ್ಲ. ಒಬ್ಬರಿಗೊಬ್ಬರು ಸಿಗುವುದಾದರೂ. ಆದರೆ ಏನೇ ಹೇಳು plan  ಪ್ರಕಾರವೇ ಸಿಕ್ಕಿದ್ದರೂ ಇಷ್ಟು ಖುಷಿಯನ್ನು ನಿನ್ನ ಕಣ್ಣಲ್ಲಿ ನಾ ನೋಡುತ್ತಿರಲಿಲ್ಲ. ನವರಂಗ್ ಲ್ಲಿ ಇಳಿದ ತಕ್ಷಣ  ಪಾನಿಪುರಿ ತಿನ್ನೋಣವಾ ಅಂತ ಕೇಳಿದವಳಿಗೆ ಬೇಡ ಎಂದರೆ , ಮದ್ಯಾಹ್ನ ಏನು ತಿಂದಿಲ್ಲ ಎಂದಾಗ ಮಾತ್ರ ಒಂದು ಗುದ್ದು ಕೊಡುವಷ್ಟು ಸಿಟ್ಟು ಬಂದಿತ್ತು. ಆದರೆ ನಿನ್ನ ಆ ಮುಖ ನೋಡಿದ್ರೆ ಅದ್ಯಾವನಿಗೆ ಹೊಡಿಯೋ ಮನಸ್ಸು ಬರುತ್ತೆ ಹೇಳು. ಬಹುಷಃ ಅದಕ್ಕೆ ನೀನು ಅಪ್ಪನ ಹತ್ತಿರ ಕೂಡ ಹೊಡೆತ ತಿಂದಿರಲಿಕ್ಕಿಲ್ಲ. ಪುಟ್ಟ ಮಗುವಂತೆ ಪಾರ್ಕ್ ನಲ್ಲಿ ಕೈ ಹಿಡಿದು ಕರೆದುಕೊಂಡು ಹೋಗಿ ಕೈ ಹಿಡಿದೇ ಕುಳಿತಿದ್ದು ತುಂಬಾ ಆಪ್ಯಾಯಮಾನವಾಗಿತ್ತು.ಎಷ್ಟೇ ಬೆಳೆದಿದ್ದೇವೆ ಎಂದುಕೊಂಡರೂ,ಇಬ್ಬರ ಪ್ರಪಂಚಗಳು ಎಷ್ಟೇ ದೊಡ್ದದ್ದಾಗಿದ್ದರೂ ನಮ್ಮ ಮಾತುಗಳು ಮಾತ್ರ ಯಾವತ್ತಿಗೂ ಆ ದಿನಗಳಿಗೆ ಮಾತ್ರ ಸೀಮಿತ ಅಲ್ಲವಾ.  ಪುಟ್ಟ ಮಗುವಂತೆ ನೀ ಖುಷಿಯನ್ನು ವ್ಯಕ್ತ ಪಡಿಸುವಾಗ ನನಗೆ ಎಲ್ಲೋ ನಿನ್ನಂತೆ ಖುಷಿಯನ್ನು ಹೊರಹಾಕಲು ಬರುತ್ತಿಲ್ಲವೇನೋ ಅನಿಸಿದ್ದು ಸುಳ್ಳಲ್ಲ. ನಮ್ಮನೆಗೆ ಬಾ ಎಂದು ಮಗುವಂತೆ ಹಠ ಮಾಡುತ್ತಿದ್ದ ನಿನ್ನ , ಆ ನಿನ್ನ ಖುಷಿಯನ್ನ ಕದಡುವ ಮನಸ್ಸಾಗಲೇ ಇಲ್ಲ. ಅದಕ್ಕೆ ಪಿಜಿ, ಆಫೀಸ್ ಎಲ್ಲವನ್ನೂ ಮರೆತು ನಿನ್ನ ಜೊತೆ ಹೆಜ್ಜೆ ಹಾಕಿದ್ದು. ಮನೆಗೆ ಹೋದರೂ ಅಷ್ಟೇ, ನಾ ಬಂದ ಸಂಭ್ರಮ ನಿನ್ನ ಹೆಜ್ಜೆ ಹೆಜ್ಜೆಗಳಲ್ಲಿ ಗೊತ್ತಾಗುತ್ತಿತ್ತು. ಮನಸ್ಸು ನಿಜಕ್ಕೂ ಮೂಕ .. ಮೋಕ.. ನಾ ಮಾಡಿದ ಪ್ರಾಜೆಕ್ಟ್ ನಿನಗೆ ತೋರಿಸಲಾ ? ಎಂದು ಕೇಳಿದಾಗ ಏನೂ ಅರ್ಥವಾಗೋಲ್ಲ ಎಂದು ಗೊತ್ತಿದ್ದರೂ ಬೇಡ ಎನ್ನುವ  ಮನಸ್ಸೇ ಬರಲಿಲ್ಲ ಕಣೆ. ಕಾರಣ ಇಷ್ಟೇ ನಿನ್ನ ಪಕ್ಕದಲ್ಲಿ ಕೂರಬೇಕಿತ್ತು. ನಿನ್ನ ಮಾತುಗಳನ್ನು ಕೇಳಬೇಕಿತ್ತು. ಒಂದು ವಿಷಯದಲ್ಲಿ ಆಳವಾಗಿ ಹೋಗಿ explain  ಮಾಡುವ ನನ್ನ ಹೈಸ್ಕೂಲಿನ ಆಶಾ ನನಗೆ ಮತ್ತೆ ಬೇಕಿತ್ತು. 

ರಾತ್ರಿ ಮಲಗುವ ಮನಸ್ಸಿರಲಿಲ್ಲ , ನಿನ್ನೊಂದಿಗಿನ ಮಾತುಗಳು ಎಂದಿಗಾದರೂ ಮುಗಿದಾವಾ? ಹೇಳು. ಆದರೆ ನಾಳೆಯ ಆಫೀಸ್ ಭೂತ ಇಬ್ಬರನ್ನೂ ಕಾಡುತ್ತಿದ್ದಕ್ಕೆ ನಾವು ಮಲಗಿದ್ದು. ಒಲ್ಲದ ಮನಸ್ಸಿನಿಂದಲೇ ಮುಸುಕೆಳೆದಿದ್ದು ಸುಳ್ಳಲ್ಲ ಅಲ್ಲವಾ... ಮರುದಿನ bus  ಲ್ಲಿ ಎರಡೇ stop  ಗೆ ನೀ bus  change  ಮಾಡಬೇಕೆಂದು ಹೇಳಿದಾಗ, ಇನ್ನುಳಿದ ಅಷ್ಟು ದೂರದ ಪಯಣಕ್ಕೆ ಪಕ್ಕದಲ್ಲಿ ಯಾರನ್ನೋ ಕಲ್ಪಿಸಿಕೊಳ್ಳುವುದು ಕಷ್ಟವಾಯಿತು ಮುದ್ದು.. ಅಷ್ಟು ದೂರ ನಾನೊಬ್ಬಳೆ ಹೋಗಬೇಕಾ ? ಎಂದವಳನ್ನು , ನೋಡಿ  bus  ಇಳಿದು call  ಮಾಡ್ತೀನಿ. ಮಾತಾಡ್ತಾ ಹೋಗೋಣ ಆಫೀಸ್ ಗೆ ಎಂದವಳ ಕಣ್ಣಲ್ಲಿ ಅದೆಷ್ಟು ಪ್ರೀತಿ ಕಾಣಿಸಿತ್ತು ಗೊತ್ತಾ?. ಆಮೇಲೆ ಆಫೀಸ್ ಮೆಟ್ಟಿಲು ಹತ್ತುತ್ತಿರುವಾಗಲೇ ಗೊತ್ತಾದವರಂತೆ ಬಂದ ನಿನ್ನ reached ? ಎಂಬ ಮೆಸೇಜ್ ಗೆ reached  ಎಂದು ಕಳಿಸಿದರೂ ಕೂಡ ಮನಸ್ಸು ನಿನ್ನನ್ನು ತುಂಬಾ miss  ಮಾಡಿಕೊಳ್ಳುತ್ತಿತ್ತು . 

ಲವ್ ಯು ಕಣೋ . ಬದುಕಲ್ಲಿ ಏನು ಸಾಧಿಸಿದ್ದೇನೋ ಗೊತ್ತಿಲ್ಲ. ಆದರೆ ನಿನ್ನಂತ ಗೆಳತಿಯನ್ನು ಸಂಪಾದಿಸಿದ್ದು ಸಾಕು ಈ ಬದುಕಿಗೆ ....ಈ ಖುಷಿಗೆ.. ಜೀವನದಲ್ಲಿ ಕೆಲವು unexpected ಆಗಿ ಸಿಕ್ಕಾಗ ಆಗುವ ಖುಷಿ , ಆ ಥ್ರಿಲ್ ಇನ್ನೆಲ್ಲೂ ಸಿಗಲಾರದೇನೋ. ಎಲ್ಲೋ ಒಂದು ತಿರುವಲ್ಲಿ ನೀ surprise ಆಗಿ ಸಿಕ್ಕಂತೆಯೇ.   ಹಾಗಾಗಿಯೇ ಈ ಜೀವನ predefined  ಆಗದಿರುವುದೇ ಒಳ್ಳೆಯದು ಅಲ್ಲವಾ.. 

 Golden life ಕೊಟ್ಟ ಚಿನ್ನದಂಥಹ ಗೆಳತಿ ಗೆ 
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ನಿನ್ನೆಲ್ಲ ಕನಸುಗಳು ನನಸಾಗಲಿ... 
 ಒಂದು ದಿನ ತಡವಾಗಿದ್ದಕ್ಕೆ ಕ್ಷಮೆಯಿರಲಿ... 

Friday 15 March 2013

ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...

ತುಂಬಾ ಕಷ್ಟ ಪಟ್ಟು ಅಕ್ಷರಗಳನ್ನು ಜೋಡಿಸುತ್ತಿದ್ದೇನೆ. ಈ ಪತ್ರದ ಪ್ರತಿ ಶಬ್ದಗಳನ್ನು ಬರೆಯುವಾಗಲೂ ಕೈ ಕಂಪಿಸುತ್ತಿದೆ. ನಾವಿಬ್ಬರು ಪ್ರೀತಿಸುತ್ತಿದ್ದಾಗಲೂ ಪತ್ರ ಬರೆದದ್ದು ಕಡಿಮೆಯೇ, ಆದರೆ ಇವತ್ತು ಏನೂ ಅಲ್ಲದ ನನ್ನನ್ನು ಸೊಸೆಯಾಗಿ ತಂದು ಕೊಂಡು, ಸೊಸೆಯಂತೆ ಕಾಣದೆ ತಾಯಿಯಾದ ಆ ಮಮತಾಮಯಿ ನಿಮ್ಮ ಅಮ್ಮನಿಗಾಗಿ ಈ ಪತ್ರ ಬರೆಯಲೇ ಬೇಕಾಗಿದೆ.ಇದೇ ಕೊನೆಯದೇನೋ ಅನಿಸುತ್ತಿದೆ . 

ಆರು ವರ್ಷಗಳು ಕೇವಲ ಆರೇ ವರ್ಷಗಳ ಹಿಂದೆ ಎಷ್ಟು ಚೆನ್ನಾಗಿತ್ತು ನಮ್ಮ ಜೀವನ. ನಿಮಗೊಂದು ಒಳ್ಳೆಯ ಕೆಲಸವಿತ್ತು. ನಮ್ಮ ಪ್ರೀತಿಯಿತ್ತು , ನನ್ನನ್ನು ನಿಮ್ಮಮ್ಮನಿಗೆ ಪರಿಚಯ ಮಾಡಿಸಲು ಕರೆದುಕೊಂಡು ಹೋಗುವಾಗ "ನೋಡು ನಮ್ಮಮ್ಮನಿಗೆ ದವಡೆಯ ಆಪರೇಶನ್ ಆಗಿರುವುದರಿಂದ ಮುಖ ಸ್ವಲ್ಪ ವಿಕಾರವಾಗಿದೆ. ಅವರನ್ನು ನೋಡಿ ಹೆದರಬೇಡ. ನನ್ನ ಮದುವೆಯಾದ ಮೇಲೂ ಎಂದಿಗೂ ಅವರನ್ನು ಹೀಯಾಳಿಸ ಬಾರದು" ಎಂದು. ಅವರನ್ನು  ನೋಡಿದಾಗ ಸ್ವಲ್ಪ ಭಯ ಎನಿಸಿದರೂ, ಅವರ ಮಮತೆ ಎಲ್ಲವನ್ನು ಮರೆಸಿತ್ತು. " ನೋಡಮ್ಮ ನನ್ನ ಮಗ ಕೆಲಸದಲ್ಲಿರುವುದು ನಿಜ, ಆದರೆ ಅವನ ಸಂಬಳ ತಿಂಗಳ ಮನೆ ಖರ್ಚುಗಳಿಗೆ ಸರಿ ಹೋಗತ್ತೆ. ಗಳಿಕೆಯ ಉಳಿಕೆ ಕಡಿಮೆಯೇ . ಮದುವೆಯಾದ ಮೇಲೆ ನಿನ್ನ ಎಲ್ಲ ಆಸೆಗಳು ಈಡೇರಬಹುದು  ಎಂಬ ಭರವಸೆ ಕೊಡಲಾರೆನಮ್ಮ  , ಒಪ್ಪಿಗೆ ಇದ್ದರೆ ಈ ಮನೆ ದೀಪ ಬೆಳಗು ತಾಯಿ" ಎಂದಿದ್ದರು ನಿಮ್ಮಮ್ಮ , ಒಪ್ಪಿ ನಿಮ್ಮ ಕೈ ಹಿಡಿದು ಆ  ಮನೆ ಸೊಸೆಯಾದೆ.(ಆ ಮನೆ ಎಂದು ನಾನೇಕೆ ಹೇಳಿದೆ ಎಂಬುದು ನಿಮಗೂ ಗೊತ್ತು ) ಆ ಪುಟ್ಟ ಮನೆಯಲ್ಲಿ ಖುಷಿ ಮಾತ್ರ ಇತ್ತು  . ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಬರುತ್ತಿದ್ದ ನೀವು . ಅದು ಇದು ಮಾತನಾಡುತ್ತ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮುಗಿಸಿರುತ್ತಿದ್ದ ನಾವು , ಆಮೇಲೆ ಮೂವರು ಸೇರಿ ಮನೆಯಂಗಳದಲ್ಲೇ ಇದ್ದ ಮಾವನವರ ಸಮಾಧಿಯ ಮುಂದೆ ತಾಸುಗಟ್ಟಲೆ ಕುಳಿತು ಮಾಡುತ್ತಿದ್ದ ಭಜನೆ. ಅಪರೂಪಕ್ಕೆ ಬೇಗ ಬಂದರೆ ಓಣಿಯ ಮಕ್ಕಳನ್ನೆಲ್ಲ ಸೇರಿಸಿ ಗಾಳಿಪಟ ಬಿಡುತ್ತಿದ್ದುದ್ದು , ಭಾನುವಾರ ಎಲ್ಲಾ ಸೇರಿಕೊಂಡು ಅಡಿಗೆ ಮಾಡಿ ಅಮ್ಮನ ಕೈತುತ್ತು ತಿನ್ನುತ್ತಿದ್ದುದು. ಸಂಜೆ ಅಮ್ಮ ದೇವಸ್ಥಾನಕ್ಕೆ  ಹೋದರೆ ನಾವಿಬ್ಬರೇ ಟೆರೆಸ್ ಮೇಲೆ ಕುಳಿತು ಹರಟುತ್ತಿದ್ದುದು....  .ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...

ಇಷ್ಟು ಚೆನ್ನಾಗಿದ್ದಾಗ ಜೀವನ, ಅದ್ಯಾರು ತುಂಬಿದರೋ ನಿಮ್ಮ ತಲೆಗೆ ಬ್ಯುಸಿನೆಸ್ ಮಾಡುವ ವಿಚಾರವನ್ನು , ನನ್ನ ಬಳಿ ಹೇಳಿದಾಗಲೂ ಅಚ್ಚುಕಟ್ಟಾದ ಜೀವನಕ್ಕೆ, ಮುಂದೆ ಮಕ್ಕಳಾದರೆ ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು ನಾನೂ  ಸಪೋರ್ಟ್ ಮಾಡಿದೆ."ಅಮ್ಮಾ  ಸಾಲ ಮಾಡಿ ಬ್ಯುಸಿನೆಸ್ ಮಾಡಬೇಕೆಂದಿದ್ದೇನೆ" ಎಂದಾಗ ನಿಮ್ಮಮ್ಮ  "ಬೇಡ ಮಗು ಸಾಲದ ಶೂಲ ಕಷ್ಟವಪ್ಪ , ನನ್ನ ಬಳಿ ನಿಮ್ಮಪ್ಪನ ಸಮಾಧಿಯ ಮೇಲೆ ಗುಡಿ ಕಟ್ಟಿಸಲು ಕೂಡಿಟ್ಟ ಹಣವಿದೆ ಅದನ್ನೇ ಕೊಡುತ್ತೇನೆ ಬಳಸಿಕೋ , ಬ್ಯುಸಿನೆಸ್ ಚೆನ್ನಾಗಿ ನಡೆಸಿ ಅಲ್ಲೊಂದು ಗುಡಿ ನೀನೆ ಕಟ್ಟಿಸುವೆಯಂತೆ"  ಎಂದು ಹಣ ಕೊಟ್ಟರು. ಆ  ತಾಯಿ ಒಳ್ಳೆಯ ಕಾರ್ಯಕ್ಕಾಗಿ, ಒಳ್ಳೆ ಮನಸ್ಸಿನಿಂದ ಹಣ ಕೊಟ್ಟಿದ್ದರ ಪರಿಣಾಮ ನಿಮಗೂ ಒಳ್ಳೆಯದೇ ಆಯಿತು , ಮಾಡಿದ ಬ್ಯುಸಿನೆಸ್ ಕೈ ಹಿಡಿಯಿತು. ನಮ್ಮ ಜೀವನ ಬದಲಾಯಿತು, ಜೊತೆಗೆ ನೀವೂ ಕೂಡ.  ಕೆಲಸ, ಕೆಲಸ, ಕೆಲಸದಲ್ಲೇ ಮುಳುಗಿ ಹೋದಿರಿ. ನೀವು ಬೇಗ ಮನೆಗೆ ಬಂದಿದ್ದೇ  ಮರೆತು ಹೋಗಿದೆ ನನಗೆ. ಸ್ಟೇಟಸ್ ಗೆ ತಕ್ಕಂತೆ ಇರಬೇಕು ಎನ್ನುತ್ತಾ ಆ ಪುಟ್ಟ ಮನೆ ಬಿಡಿಸಿ ಇದ್ಯಾವುದೋ ಫ್ಲಾಟ್ ಎಂಬ ಭೂತ ಬಂಗಲೆಗೆ ತಂದಿರಿಸಿದಿರಿ. ಇದು ಮನೆಯೆಂದು ನಂಗೆ ಯಾವತ್ತೂ  ಅನಿಸಲೇ ಇಲ್ಲ. ಪುಟ್ಟ ಮಕ್ಕಳ ಜೊತೆಗಿನ ಗಾಳಿಪಟದ ಖುಷಿ ಮತ್ತೆ ಕಾಣಲೇ ಇಲ್ಲ, ನಿಮಗೆ ಭಾನುವಾರಗಳೇ ನೆನಪಿನಲ್ಲಿರುವುದು ದೂರವಾದ ಮೇಲೆ,  ಭಾನುವಾರದ ಅಡಿಗೆ, ಕೈ ತುತ್ತುಗಳ ನೆನಪೇ ಇಲ್ಲ, ಒಂದರ್ಧ ಗಂಟೆ ಭಜನೆಗೆ ಬಂದ ನೆನಪು ನಿಮಗಿದೆಯೇ?ನೆನಪಿಸಿಕೊಳ್ಳಿ . ಈ ಮನೆಯ ಟೆರೆಸ್ ಇನ್ನೂ ನೋಡೇ ಇಲ್ಲ , ಇವೆಲ್ಲ ಕೆಲಸದಲ್ಲಿ ಬ್ಯುಸಿ ಇರುವ ಗಂಡನ ಬಗ್ಗೆ ಹೆಂಡತಿಯಾದವಳು ಮಾಡುವ ನಾರ್ಮಲ್ ಕಂಪ್ಲೈಂಟ್ ಗಳು ಎನ್ನುತ್ತಾರೆ ಗೊತ್ತು ಅದಕ್ಕೆ ಇದನ್ನು ನಿಮ್ಮ ಮುಂದೆ ಎಂದು ಆಡಿರಲಿಲ್ಲ . 

ಆದರೆ ನೀವು ನಿಮ್ಮಮ್ಮನಿಗೆ ಮಾಡುತ್ತಿರುವ ಇಂಚಿಂಚು ಮೋಸವನ್ನು ಹೇಗೆ ಸಹಿಸಿಕೊಳ್ಳಲಿ. "ಗುಡಿ ಯಾವಾಗ ಕಟ್ಟಿಸುತ್ತಾನೆ ಎಂದು ಕೇಳಬೇಕಮ್ಮ, ಇವನು ಇತ್ತೀಚೆಗೆ ಮನೆಗೆ ಬರುವುದು ತಡವಾಗುತ್ತಿದೆ ಮನಸು ಯಾಕೋ ಸರಿ ಇಲ್ಲ ,  ನಿಮ್ಮ ಮಾವನರ ಸಮಾಧಿಯ ಮುಂದೆ ಒಂದು ಅರ್ಧ ಗಂಟೆ ಕುಳಿತುಬರಬೇಕು  ಎನಿಸುತ್ತಿದೆ, ನನ್ನ ಕರ್ಕೊಂಡು ಹೋಗ್ತಿಯ ಮಾ" ಎಂದು ಬೇಡುವಾಗ , "ಇಲ್ಲಮ್ಮ ನಿಮ್ಮ ಮಗ ಆ ಮನೆ ಮತ್ತು ಆ ಜಾಗ ಮಾರಿ ಬ್ಯುಸಿನೆಸ್ ಗೆ ಹಣ ಸುರಿದಿದ್ದಾರೆ" ಎಂದು ಹೇಗೆ ಹೇಳಲಿ ನಾನು ? ಇತ್ತೀಚಿಗೆ ಅಸ್ತಮ ಸ್ವಲ್ಪ ಜಾಸ್ತಿಯಾಗಿ ಕೆಮ್ಮುತ್ತಿದ್ದರೆ , ಅಮ್ಮ ಡಾಕ್ಟರ ಹತ್ರ ಹೋಗಿ ಬಾರಮ್ಮ ,ನನ್ನ ಕ್ಲೈಂಟ್, ಅಥವಾ ಗೆಳೆಯರೆಲ್ಲ ಬಂದಾಗ ನೀ ಹೀಗೆ ಕೆಮ್ಮುತ್ತ ಇದ್ದರೆ ಚೆನ್ನಾಗಿರಲ್ಲ ಎಂದಿದ್ದಕ್ಕಾಗಿ , ಮನೆಗೆ ಯಾರಾದರೂ ಬಂದರೆ ಬಚ್ಚಲಮನೆಯಲ್ಲಿ ಕುಳಿತು ಬರುವ ಕೆಮ್ಮನ್ನು ತಡೆ ಹಿಡಿಯಲು ಪ್ರಯತ್ನಿಸುತ್ತಾ ಕಷ್ಟ ಪಡುವ ಅವರನ್ನು ಹೇಗೆ ನೋಡುತ್ತಾ ಇರಲಿ ನಾನು ?ನಾನೇ ಡಾಕ್ಟರ್ ಹತ್ತಿರ  ಕರೆದು ಕೊಂಡು ಹೋಗುತ್ತೇನೆ ಎಂಬ ಮಾತು ನಿಮ್ಮ ಬಾಯಿಂದ ಬರಲೇ ಇಲ್ಲ .  ಮೊನ್ನೆ ನಿಮ್ಮ ಗೆಳೆಯನ ಮಗು ಅತ್ತೆಯನ್ನು ಕಂಡು ಕಿರುಚಿತ್ತು ಎನ್ನುವ ಕಾರಣಕ್ಕೆ , ನಿನ್ನ ಮುಖ ವಿಕಾರ ಎಂದು ಗೊತ್ತಿದ್ದರೂ ಯಾಕಮ್ಮ ಎದುರಿಗೆ ಬರಬೇಕಿತ್ತು ? ನೋಡು ಇನ್ಯಾವತ್ತೂ ಆತ  ನಮ್ಮನೆಗೆ ಬರಲಾರ ಎಂದು ಮುಖಕ್ಕೆಹೊಡೆದಂತೆ ನೀವು ಬೈದಿದ್ದನ್ನು ಹೇಗೆ ಸಹಿಸಿಕೊಳ್ಳಲಿ ? ಮೌನವಾಗಿ ಕಣ್ಣೀರು ಹಾಕುತ್ತಿರುವ ಆಕೆಯನ್ನು ಹೇಗೆ ಸಮಾಧಾನಿಸಲಿ ?

ಇದೆಲ್ಲದಕ್ಕಿಂತ ಹೆಚ್ಚಾಗಿ ಬೆಳಿಗ್ಗೆ ನೀವು ವೃದ್ಧಾಶ್ರಮದವರ  ಬಳಿ ಮಾತಾಡಿದ್ದನ್ನು ಕೇಳಿದ್ದೆ. ನೀವು ಅಲ್ಲಿಯ ಫಾರಂ ತಂದಿದ್ದು ಗೊತ್ತು ನನಗೆ. ಇದನ್ನು ಸಹಿಸಿಕೊಳ್ಳಲು ಸಾದ್ಯವಿಲ್ಲ . ಆ ಮಮತಾಮಯಿ ತಾಯಿಯನ್ನು ಯಾರೂ ಇಲ್ಲದ ಅನಾಥೆಯಂತೆ ಅಲ್ಲಿ ಬಿಡಲು ನಾನು ತಯಾರಿಲ್ಲ . ಅಚ್ಚುಕಟ್ಟಾದ ಜೀವನಕ್ಕೆ ಸಹಾಯವಾಗಬಹುದೆಂಬ  ನಿಮ್ಮ ಬ್ಯುಸಿನೆಸ್ ನನ್ನ ಸಂಸಾರದ ಚೌಕಟ್ಟನ್ನೇ ಒಡೆಯುತ್ತದೆ ಎಂದಾದರೆ ನನಗೆ ಆ ಬ್ಯುಸಿನೆಸ್ ಮತ್ತು ಅದರ ಹಣ ಎರಡೂ  ಬೇಕಾಗಿಲ್ಲ . ನಿಮಗೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಕೆಲಸಕ್ಕೆ ಹೊಗುತ್ತಿರಲಿಲ್ಲ , ಬಿಟ್ಟರೆ ನಿಮ್ಮಮ್ಮನಿಗೆ ಎರಡು ಹೊತ್ತು ಊಟ ಹಾಕಿ ನೆಮ್ಮದಿಯ ಬದುಕು ನೀಡುವಷ್ಟು ಸಂಬಳ ಬರುವ ಕೆಲಸ ಸಿಗುವಷ್ಟು ವಿದ್ಯೆ ನನ್ನಲ್ಲಿದೆ. ನಾನವರನ್ನು ಸಾಕುತ್ತೇನೆ . ಎಲ್ಲ ಸತ್ಯವನ್ನು ಅವರಿಗೆ ತಿಳಿಸಿ ಒಂದು ಹೊಸ ಬದುಕನ್ನು ಕಟ್ಟುತ್ತೇನೆ ಹಾಗಾಗಿಯೇ ಅವರನ್ನು ಕರೆದುಕೊಂಡು ಈ ಮನೆಯಿಂದ ಹೊರಡುತ್ತಿದ್ದೇನೆ. ದುಡ್ಡಿನ ಮದವಿಲ್ಲದೆ ಹುಡುಕಿ ಬಂದರೆ ನಮ್ಮ ಬದುಕಿನಲ್ಲಿ ನಿಮಗೂ ಒಂದು ಜಾಗ ಸಿಗಬಹುದೇನೋ ...

Tuesday 5 March 2013

ಬಾಲ್ಯಕ್ಕಿಷ್ಟೇ ಗೊತ್ತು ..



ರೂಪದರ್ಶಿ : ಶ್ರೇಯಾ . ಫೋಟೋ : ವಿನೋದ್ ಕುಮಾರ್  




ಸ್ನಿಗ್ದ ನಗುವಿಗೊಂದು
ಮುಗ್ದತೆಯ ಚೌಕಟ್ಟು... 
ಪುಟ್ಟ ತಲೆಯೊಳಗೊಂದು ... 
ತುಂಟಾಟದ ಜಗತ್ತು ... 
ಬಾಲ್ಯಕ್ಕಿಷ್ಟೇ ಗೊತ್ತು ..  


ರೂಪದರ್ಶಿ : ಪ್ರಣತಿ ಹೆಗಡೆ , ಫೋಟೊ : ಸುಷಮಾ ಭಟ್ 
ಇಲ್ಲ ಬೆಡಗು ಬಿನ್ನಾಣ              
ಒನಪು ವಯ್ಯಾರಗಳ        
ಜರೂರತ್ತು . ...                             
ಬೆರಗು ಕಂಗಳಲಿ ... 
ಕುತೂಹಲದ  ಸುರುಳಿ ... 
ಬಾಲ್ಯಕ್ಕಿಷ್ಟೇ ಗೊತ್ತು ... 

    









ರೂಪದರ್ಶಿ:ಅಬ್ಜಾ ದಿಗ್ವಾಸ್ , ಪ್ರಾಚಿ ,
 ಫೋಟೊ : ದಿಗ್ವಾಸ್ ಜಿ . ಹೆಚ್ 
ಬೇಕಿಲ್ಲ ಬದುಕಿಗೊಂದೇ ದಾರಿ .. 
ಬದುಕಲ್ಲೊಂದೇ ಗುರಿಯೆಂಬ ಉಯಿಲು  
ಪುಟ್ಟ ಕಂಗಳಿಗೆ 
ಕಾಣೋದೆಲ್ಲ ಆಟದ ಬಯಲು 
ಬಾಲ್ಯಕ್ಕಿಷ್ಟೇ ಗೊತ್ತು .. 

ಗೊತ್ತಿಲ್ಲ ಸಮಾಜ 
ಅದಕ್ಕೊಂದಿಷ್ಟು ಕಟ್ಟು ಪಾಡು .. 
ಪುಟ್ಟ ಗುಲಾಬಿ  ತುಟಿಗಳಲಿ 
ಹಾಲುಗಲ್ಲದ ತೊದಲ ಹಾಡು 
ಬಾಲ್ಯಕ್ಕಿಷ್ಟೇ ಗೊತ್ತು .. 




ರೂಪದರ್ಶಿ: ಪಾರ್ಥ , ಫೋಟೊ : ಸುಷಮಾ ಭಟ್ 

ತಿಳಿದಿಲ್ಲ ಅನಾಚಾರ .. 
ಅದರದಿಷ್ಟು ಲೆಕ್ಕಾಚಾರ .. 
ಬೊಗಸೆ ಕೈಗಳಲಿ 
ಹಿಡಿದ ಸ್ಲೇಟು ಬಳಪದ ಚಿತ್ತಾರ 
ಬಾಲ್ಯಕ್ಕ್ಕಿಷ್ಟೇ ಗೊತ್ತು ...