Thursday 15 November 2018

ಒಲವು


ನಿನ್ನಿರುವ ಚಿಗುರ ಹೊದ್ದುಕೊಂಡಂತೆ 
ನನ್ನೂರ ಹಸಿರು..
ನೊರೆ ಹಾಲ ಜೊಲ್ಲು ಸುರಿಸಿ 
ಕುಣಿವ ಕರುವಿಗೂ ಇಡಬೇಕೆನಿಸುತ್ತಿದೆ 
ನಿನ್ನ ಹೆಸರು..

ಇದು ಬೆಳಿಗ್ಗೆ ಬಸ್ ಇಳಿದು ಊರ ದಾರಿ ಹಿಡಿದು  ಮನೆಯಂಗಳದಿ ಕುಣಿವ ಕರು ನೋಡಿದ ಕೂಡಲೇ ನೆನಪಾಗಿದ್ದು. ಹಿಡಿವ ಪ್ರಯತ್ನಕ್ಕೆ ಸಿಗದ ಕರುವನ್ನು ಅಪ್ಪ ಎತ್ತಿಕೊಂಡು ಬಂದರು. ಮೆತ್ತನೆಯ ಮೈ ಸವರಿದರೆ ನಿನ್ನದೇ ಬೆಚ್ಚನೆಯ ಸ್ಪರ್ಶ ನೆನಪಾಗಿದ್ದು. " ಮೊನ್ನೆ ಹುಟ್ಟಿದ್ದು, ನೀ ಬಂದ ಮೇಲೆ ಹೆಸರಿಡುವ ಎಂದಿದ್ದೆ ಅಮ್ಮನಿಗೆ. ಇದಕ್ಕೊಂದು ಹೆಸರು ಹೇಳು ಎಂದ ಅಪ್ಪ ನಾ ಚಿಕ್ಕವಳಿದ್ದಾಗ ಎತ್ತಿಕೊಂಡಂತೆ ಎತ್ತಿಕೊಂಡಿದ್ದರು ಆ ಕರುವನ್ನು." ಮೂನ್ "  ಅಂತಾ ಇಟ್ರೆ ಓಕೆ ನಾ ಎಂದ ಅಣ್ಣನ ರಟ್ಟೆ ಚಿವುಟಿ ಒಳಗೆ ಹೋದ ಅತ್ತಿಗೆಯನ್ನು , ಅಣ್ಣನ ತುಂಟ ನಗೆಯನ್ನು ಗಮನಿಸದೇ ಇರಲಾಗಲಿಲ್ಲ. ಅಣ್ಣನಿಗೆ ಗೊತ್ತಾಗಿದೆ ಎನ್ನುವ ದುಗುಡದ ಜೊತೆಜೊತೆಗೆ ಸಮಾಧಾನವೂ ಆಯ್ತು. ಅರ್ಥವಾಗದೇ ನಿಂತ ಅಪ್ಪನಿಗೆ ಚಂದು ಎಂದೆ. "ಚಂದು ಬುಡ್ಡಾ ಅಕ್ಕ ಬಂದಿದಾಳೆ, ಇನ್ನಷ್ಟು ದಿನ ಅವಳೇ ನಿನಗೆ ಜಾಯಿ ಕುಡಿಸೋದು. ಕೈ ಕಚ್ಚಬಾರದು ಅವಳದ್ದು " ಎಂದು ಮುದ್ದಿಸುತ್ತಾ  ಅಪ್ಪ ಕರುವನ್ನು ಕೊಟ್ಟಿಗೆಗೆ ತೆಗೆದುಕೊಂಡು ಹೋಗುತ್ತಿದ್ದರೆ ಹೆಸರು ಅರ್ಥ ಮಾಡಿಸಿದಷ್ಟು ಸುಲಭವಲ್ಲ ಹೊಸ ಬಂಧದ ಬಗೆಗೆ ತಿಳಿಸುವುದು ಎನಿಸಿತು. ನಿಂತಲ್ಲೆ ನಡುಗಿದೆ. ಅಣ್ಣ ಬೆನ್ನಿಗೆ ಕೈ ಹಾಕಿ ಒಳಕರೆದುಕೊಂಡು ಬಂದ. 

ಕ್ಷಮಿಸು ಹೊರಡುವ ಮೊದಲೇ ಮಾತಾಗಿತ್ತಲ್ಲ ನಿನ್ನ ನೆನಪಿಸಿಕೊಳ್ಳಬಾರದೆಂದು. ಏನು ಮಾಡಲಿ ಉಸಿರಾಟದಷ್ಟೇ ಸರಾಗ ನೀನು. ಎನಾಗಿರಬಹುದಲ್ಲಿ ಅಬ್ಬಬ್ಬಾ ಎಂದರೆ ನಿನಗೆ ಬಿಕ್ಕಳಿಕೆ ಬಂದಿರಬಹುದು. ನಿಮ್ಮನೆಯ ಬೀದಿ ಕೊನೆಯಲ್ಲಿ ಹೋಗುತ್ತಿರುವ ಹುಡುಗಿ ನನ್ನಂತೆ ಭಾಸವಾಗಿ ನೀ ಕೆಮ್ಮಿರಬಹುದು. ನಿನ್ನ ಕೆಮ್ಮಿನ ಸದ್ದಿಗೆ ನಾನಲ್ಲದ ಅವಳು ತಿರುಗಿದರೆ ನೀ ತಲೆ ಕೆದರಿಕೊಳ್ಳುತ್ತಾ ಪೆಚ್ಚುನಗೆ ನಕ್ಕಿರಬಹುದು. ಆ ನಗೆಯೂ ಚಂದವೇ.. ದೃಷ್ಟಿಯಾದೀತು.

ಅಣ್ಣನ ಜೊತೆ ಎಂಟು ದಿನದ ಅದ್ಯಾವುದೋ ಕ್ಯಾಂಪ್ ಗೆ ಮನೆಗೆ ಬಂದವ ಎಲ್ಲರನ್ನೂ ಇಂಪ್ರೆಸ್ ಮಾಡಿಬಿಟ್ಟಿದ್ದೆಯಲ್ಲ.ನೀವೆಲ್ಲ ಸೇರಿ  ದೇವಿ ಎಂದು ನನಗೆ ರೇಗಿಸುತ್ತಿದ್ದಿರೆ ನಾ ಮುಖ ಊದಿಸಿಕೊಂಡು ತಿರುಗುತ್ತಿದ್ದೆ. ಆದರೆ ಅದೊಂದು ದಿನ ಕಾಗದದ   ಹೃದಯವನ್ನು ಪಾದದ ಮೇಲಿಟ್ಟು " ಹೃದಯವನ್ನು ಪಾದದ ಮೇಲಿಟ್ಟಾಗಿದೆ ಮುಂದಿನದು ದೇವಿ ಚಿತ್ತ" ಎಂದಾಗ ಮಾತ್ರ ದೇವಿ ಎನ್ನುವ ಶಬ್ದ ಖುಷಿಕೊಟ್ಟಿತ್ತು.  ನಿನಗೆ ಗೊತ್ತಿಲ್ಲದೇ ಆ ಹೃದಯವನ್ನು ಜೋಪಾನವಾಗಿಟ್ಟಿದ್ದೆ. ಮತ್ತು ನಿನ್ನೆದೆರು ಅದೇ ಥರದ ಬೇರೆ ಹೃದಯವನ್ನು ಮಾಡಿ ಬೆಂಕಿಗೆ ಹಾಕಿದ್ದೆ. ಅದಾದಮೇಲೆ ನನ್ನ ಡಾನ್ಸ್ ಕ್ಲಾಸ್ ಮತ್ತು ನಿ‌ನ್ನ ಸ್ಪೋರ್ಟ್ಸ್ ಕ್ಲಬ್  ಒಂದೇ ಕಡೆಯಾದಾಗ ಹತ್ತು ನಿಮಿಷದ ಪೆಟ್ಟಿಅಂಗಡಿ ಟೀ ಗೆ ಗೆಳೆಯನಾದೆ.  ಸುಮಾರು ಆರು ತಿಂಗಳ ನಂತರವಿರಬೇಕು ಅಲ್ಲವಾ ಕಾಗದದ ಹೃದಯವನ್ನು ನಿನಗೆ ವಾಪಸ್ ಕೊಟ್ಟಿದ್ದೆ. ನೀ ಎದೆಯಲ್ಲೇ ಕೂರಿಸಿಕೊಂಡುಬಿಟ್ಟೆ. ಅಲ್ಲಿ ಶುರುವಾಗಿತ್ತು ಪ್ರೀತಿ.  ನಮ್ಮ ಅಣ್ಣಂದಿರ ಗೆಳೆತನದಿಂದ ಶುರುವಾದ ಪ್ರೀತಿಯನ್ನು ಅವರಿಗೂ ಗೊತ್ತಿಲ್ಲದಂತೆ ಕಾಪಾಡಿಕೊಂಡು ಬಂದಿದ್ದಕ್ಕೆ ಹೆಮ್ಮೆ ಪಡಬೇಕೋ  ಇಲ್ಲವೋ ತಿಳಿಯುತ್ತಿಲ್ಲ. 

ನಂಗೊತ್ತು ನೀ ಮೌನದಲೆ ನನ್ನ ಕಂಡುಕೊಂಡರೆ ನಾ ಸದ್ದಿನಲೇ ನಿನ್ನ ಹುಡುಕುತ್ತೇನೆ.  ಬೆಳಗಿನ ಕಾವಳದ ಪಳ ಪಳದಲ್ಲೂ ನನ್ನ ಕಾಣುವ ನಿನ್ನನ್ನು, ನಾ ನಿಗಿ ನಿಗಿ ಕೆಂಡದ ಬುರುಬುರು ಸದ್ದು ಮಾಡುವ ಬೆಂಕಿಯ ಸದ್ದಲ್ಲಿ ಕಂಡುಕೊಳ್ಳುತ್ತೇನೆ. ಮತ್ತು ಬೆಚ್ಚಗಾಗುತ್ತೇನೆ. ನಿನಗಲ್ಲಿ ಬೆಳಗಿನ ಟೀ ಯಲ್ಲಿ , ಧ್ಯಾನ ಮಂಟಪದ ತಣ್ಣನೆಯ ಕಂಬಗಳಲ್ಲಿ,  ಕಲ್ಯಾಣಿಯ ಶಾಂತ ನೀರಲ್ಲಿ ನನ್ನದೇ ನೆನಪಾಗಿರುತ್ತೆ ಅಲ್ಲವಾ. ನೆನಪು ಮಾಡಿಕೊಳ್ಳೋದು ಬೇಡ ಎಂದಷ್ಟು ಸುಲಭವಲ್ಲ ಅದರಂತೆ ನಡೆಯೋದು ;  ಬೆಳಿಗ್ಗೆ ತಾಗಿದ ಎಳೆ ಬಿಸಿಲ ಕೋಲಲ್ಲಿ , ಮಧ್ಯಾನ್ಹ ದ ಸ್ನಾನದಲ್ಲಿ ಸುರುವಿಕೊಂಡ ಬಿಸಿ ನೀರ  ಹಿತದಲ್ಲಿ  ನೀನೆ ಇದ್ದೆ. ಅಷ್ಟೇ ಏಕೆ ಸಂಜೆ  ಅಮ್ಮ ...‌.

ಎಣ್ಣೆ ಬತ್ತಿ  ಸೇರಿದರೇನೇ ದೀಪ
ಎಂದಳು  ಜೋಡಿ ದೀಪಗಳ ಬೆಳಗುತ್ತಾ ...
ನಾನು  ಮುಗುಳುನಕ್ಕೆ 
ನಾನು ನೀನು ಬೆರೆತರೇನೇ ಪ್ರೀತಿ 
ಎಂದ ನಿನ್ನ ಜೋಡಿ ಕಣ್ಣುಗಳ 
ನೆನಪಿಸಿಕೊಳ್ಳುತ್ತಾ... 

ಊಟ ಮಾಡಿ ಹೊಡಸಲ ಬೆಂಕಿಯ ಸುತ್ತು ಕುಳಿತು ಮನೆಯವರೆಲ್ಲ ಮದುವೆಯ ವಿಷಯ ಮಾತನಾಡುತ್ತಾ ಈ ಕಾರ್ತಿಕದಲ್ಲಾದ್ರು ನೋಡಬಹುದಿತ್ತು ಎನ್ನುತ್ತಿದ್ದರೆ , ನಾನು ಮೊನ್ನೆ ನೀ ಕಳಿಸಿದ " ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು ಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ " ಸಾಲುಗಳನ್ನು ಓದಿ ನಗುತ್ತಿದ್ದೆ.  ನಾವು ಮಾತನಾಡುತ್ತೇವೆ ಎಂದು ಅತ್ತಿಗೆ ಮಾಡಿದ ಸನ್ನೆಗೆ ಸದ್ದಿಲ್ಲದೇ ಅಲ್ಲಿಂದ ಎದ್ದು ಬಂದಿದ್ದೇನೆ. ಮನದೊಳಗಿನ ದುಗುಡ ಇಷ್ಟೆಲ್ಲ ಬರೆಸಿತು. ಇನ್ನು ಬಾಗಿಲ ಬಳಿಯಲ್ಲಿ ಅಪ್ಪ ಬಂದು ನಿಂತು ಮುಗುಳುನಕ್ಕರೆ ನನಗೇನೋ ಸಮಾಧಾನ. 

Monday 29 October 2018

ಬೆಲೆ....

ನಾನಲ್ಲಿ ಹೋದಾಗ ಅವಳು ಇಲ್ಲದ ಕಾಲಿನ ಮುಂದೆ ಚಾಕ್ ಪೀಸ್ ನಿಂದ ಕಾಲಿನ ಚಿತ್ರ ಬರೆದು ಕುಳಿತುಕೊಂಡಿದ್ದಳು ಎನ್ನುತ್ತಾ  ಕಾಫಿ ಹೀರಿದ ಸ್ಥವಿರ.

ಎಷ್ಟೊತ್ತಿಗೆ  ಏನು ತಗೋತೀಯಾ ಅಂದಾಗೆಲ್ಲಾ ಮಗಾ ಹಾಟ್ ಇರಲಿ ಅಂತಾ ಆಲ್ಕೋಹಾಲ್ ಕ್ಯಾಬಿನ್ ಕಡೆಗೆ ಕೈ ತೋರಿಸುತ್ತಿದ್ದವನು ಇವನೇನಾ ಅನ್ನುತ್ತಾ ಹುಬ್ಬೇರಿಸಿದ ವರುಣ್ ಅವನ ಕೈ ಲಿದ್ದ ಕಾಫಿ ಕಪ್ ನೋಡುತ್ತಾ.

ವಿಚಿತ್ರ ಹುಡುಗಿ , ನಾನವಳನ್ನು ಮೊದಲ ಬಾರಿ ನೋಡಿದ್ದು  ಒಂದು accident ನಲ್ಲಿ . ಆ ಕಣ್ಣುಗಳನ್ನು ಮರೆಯೋಕೆ ಆಗದೆ ಅವಳಲ್ಲಿಗೆ ಹೋಗಿದ್ದೆ.   ಆ ಕಣ್ಣಗಳು ಅದೆಷ್ಟು ಹುಚ್ಚು ಹಿಡಿಸಿದ್ದವು ಎಂದರೆ, ಮದುವೆ ಆಗ್ತೀರಾ ಅಂದಿದ್ದೆ. ಶ್ರೀಮಂತರರಿಗೆಲ್ಲ ಕೈ ಕಾಲಿಲ್ಲದವರನ್ನು ಮದುವೆಯಾಗುವುದು ಚಾರಿಟಿ ಪ್ರೆಸ್ಟೀಜ್ ಅಡಿಯಲ್ಲಿ ಬರುತ್ತಾ ? ಅವನ್ಯಾವನೋ ಕುಡಿದು ಕಾರು ಹತ್ತಿಸಿ ಪ್ರಾಣ ತೆಗೆದು, ಹೋದ ಜೀವಕ್ಕೆ ದುಡ್ಡಲ್ಲಿ ಬೆಲೆ ಕಟ್ಟಿ ಆರಾಮಾಗಿ ಓಡಾಡುತ್ತಾನೆ. ನೀನಿಗ ಮದುವೆಯಾಗಿ ದೊಡ್ಡವನಾಗಹೊರಟಿದ್ದೀಯಾ,  ಅಂದಳು. ಅವಳ ಮಾತು ಮತ್ತು ದೃಷ್ಟಿಯ ತೀಕ್ಷ್ಣತೆಗೆ ಅಲ್ಲಿರಲಾರದೆ ಹೊರಬಂದೆ‌.

ಕಣ್ಣಸನ್ನೆಯಲ್ಲಿ ನೂರು ಹುಡುಗಿಯರನ್ನು ಬೀಳಿಸಿಕೊಳ್ಳಬಲ್ಲ ತಾಕತ್ತಿರುವ, ಅವನಾಡಿಸುವ ದುಡ್ಡಿನ ಕಂತೆಗೆ ಹಿಂದೆ ಬರುವ ಹುಡುಗಿಯರಿರುವ ದ ರಿಚ್ , ರಾಯಲ್ ,ಗ್ರೇಟ್‌ ಸ್ಥವಿರ ಎನ್ನುವ ಹುಡುಗ ಒಬ್ಬ ಕುಂಟಿಯನ್ನು ಮದುವೆಯಾಗಲು ಹೊರಟಿದ್ದನಾ ಎನ್ನುವ ಆಶ್ಚರ್ಯ ವರುಣ್ ಮುಖದ ಮೇಲಿತ್ತು.

ಸ್ಥವಿರ ಮುಂದುವರೆಸಿದ, ಹೊರಬಂದವನಿಗೆ ಅವಳಮ್ಮ "ಇದೇನೋ ಪ್ರಾಜೆಕ್ಟ್  ಅಂತಾ ಓಡಾಡುತ್ತಿದ್ದಳು . ಗೆಳೆಯರ ಜೊತೆ ಸೇರಿ ವೆಡ್ಡಿಂಗ್ ಪ್ಲಾನಿಂಗ್ , ಇವೆಂಟ್ ಮ್ಯಾನೇಜ್ಮೆಂಟ್ ನ ಬ್ಯುಸಿನೆಸ್ ಮಾಡಬೇಕೆಂದು ಅಂದುಕೊಂಡಿದ್ದಳು. ಅಷ್ಟರಲ್ಲಿ ಹೀಗೆ" .. . ಎನ್ನುತ್ತಾ  ಅವರಿಂದ ಮುಂದೆ  ಮಾತನಾಡಲಾಗಲಿಲ್ಲ. 

ಮನೆಗೆ ಬಂದವನೇ ಅವಳ ಪ್ರಾಜೆಕ್ಟ್ ಡೀಟೇಲ್ಸ್ ಸ್ಟಡಿ ಮಾಡಿ ಅವಳ ಗೆಳೆಯರನ್ನೆಲ್ಲ ಸೇರಿಸಿದೆ . ಅವಳದ್ದೇ ಆದ ಕಂಪನಿಯನ್ನು ಸ್ಟಾರ್ಟ್ ಮಾಡಿಸಿದೆ.  ಅವಳನ್ನು ಇಲ್ಲಿಗೆ ಬರುವಂತೆ ಮಾಡಿದೆ. ನಿಧಾನ ಕಂಪನಿ ಹೆಸರು , ಹಣ ಗಳಿಸಿತು. ಅವಳೆಂಥವಳೆಂದರೆ  ನನ್ನ ಹಣ ಸಹಾಯವನ್ನು ಒಂದು ಪೈಸೆ ಬಿಡದೆ ವಾಪಸ್ ಮಾಡಿದಳು.
ಏನೋ ಹೇಳಬೇಕೆಂದು ಬಾಯಿತೆರೆದ ವರುಣ್ ಗೆ ,

ಮೊದಲು ಎಲ್ಲವನ್ನು ಕೇಳು ಎನ್ನುವಂತೆ ಸನ್ನೆ ಮಾಡಿ ಸ್ಥವಿರ ಮತ್ತೆ ಮುಂದುವರೆಸಿದ..
ಮತ್ತೆ ಮಂಡಿಯೂರಿದ್ದೆ ಅವಳ ಮುಂದೆ ಬೊಗಸೆಯೊಡ್ಡಿ ಪ್ರೀತಿಗಾಗಿ.  ಆದರೆ ಅವಳು , ನಿಮ್ಮನ್ನ , ನಿಮ್ಮ ಪ್ರೀತಿಯನ್ನ ಒಪ್ಪಿಕೊಳ್ಳಬೇಕು ಎಂದುಕೊಂಡಾಗೆಲ್ಲ ಇದೇ ಅಡ್ಡಿ ಬರುತ್ತೆ ನೋಡಿ ಅಂದಳು ವಾಕಿಂಗ್ ಸ್ಟಿಕ್ ನೋಡುತ್ತಾ...  ಮಾತನಾಡುತ್ತಿದ್ದ ಸ್ಥವಿರನ ಗಂಟಲು ಕಟ್ಟಿದ್ದು ವರುಣ್ ಗಮನಕ್ಕೆ ಬಂತು..

"ನೀ ಹೇಗೆ ಇಷ್ಟೆಲ್ಲ ಬದಲಾದೆ ? ಅದೂ ಯಕಶ್ಚಿತ್ ಯಾವುದೋ ಆ್ಯಕ್ಸಿಡೆಂಟ್ ನಲ್ಲಿ ಭೇಟಿಯಾದ ಹುಡುಗಿಗಾಗಿ, ಕುಂಟಿಗಾಗಿ, ಇದು ಸಿಲ್ಲಿ ಅನ್ನಿಸ್ತಿಲ್ವಾ ನಿಂಗೆ "ಎಂದ ವರುಣ್  ಮಾತಿಗೆ ಸ್ಥವಿರ "ಇಲ್ಲ"ಎಂದು ಕಿರುಚಿದ್ದು ಆ ಮನೆಯ ಹಾಲ್ ನಲ್ಲಿ ಪ್ರತಿಧ್ವನಿಸಿತ್ತು.

" ಅವತ್ತು ಕುಡಿದ ಮತ್ತಿನಲ್ಲಿ ಆ ಆ್ಯಕ್ಸಿಡೆಂಟ್ ಮಾಡಿದ್ದು ನಾನೇ, ಕಾಲು ಕಳೆದುಕೊಂಡಿದ್ದು ಅವಳು"

ಈ ಮಾತನ್ನು ಕೇಳಿ ಉಗುಳು ನುಂಗಿಕೊಂಡ ವರುಣ್, ಹಾವು ಮೆಟ್ಟಿ ಬೆಚ್ಚಿಬಿದ್ದಂತಾಗಿದ್ದ.
"ಶ್ರೀಮಂತಿಕೆ, ಬುದ್ಧಿವಂತಿಕೆ, ಸೌಂದರ್ಯ ಎಲ್ಲ ಸೇರಿದಾಗ ಸ್ವಲ್ಪ ಹೆಚ್ಚಿನದೇ ಉಡಾಫೆ ಪೊಗರಿರುವುದು ತಪ್ಪಲ್ಲ ಎನಿಸಿತ್ತು , ಆದರೆ ಅದೆಲ್ಲ ಈಮಟ್ಟಕ್ಕೆ ಒಬ್ಬರ ಜೀವ ತೆಗೆಯುವ ಮಟ್ಟಕ್ಕೆ ನಿನ್ನ ತಳ್ಳಬಹುದು ಅಂತಾ ಗೊತ್ತಿರಲಿಲ್ಲ" ಕಣೋ ..

"ನನಗೂ ಗೊತ್ತಿರಲಿಲ್ಲ " ಎಂದು ವರುಣ್ ನ ತಬ್ಬಿಕೊಂಡ ಸ್ಥವಿರನ ಕಣ್ಣಲ್ಲಿ ನೀರಿತ್ತು. "ಸರಿ ಮಾಡಿಕೊಳ್ಳುವುದಕ್ಕೆ ಒಂದೇ ಒಂದು ಅವಕಾಶಕ್ಕೆ ಕಾಯುತ್ತಿದ್ದೀನಿ , ಅವಳನ್ನ ನೋಡುವಾಗೆಲ್ಲಾ  ಚೂರಿ ಇರಿದಂತಾಗುತ್ತೆ.  ಒಪ್ಪದ ಅವಳು ಮಾತ್ರ ತಣ್ಣನೆ ಕಣ್ಣುಗಳ ಕೊಲೆಗಾರ್ತಿ"....
***********
ಟೆರೆಸ್ ಗಾರ್ಡೆನ್ ನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದಳು ಹರಿಣಿ.

 "ನಾನು ವರುಣ್ , ಸ್ಥವಿರನ ಬೆಸ್ಟ್ ಪ್ರೆಂಡ್ " ಪರಿಚಯ ಮಾಡಿಕೊಂಡ ವರುಣ್‌ .

ನಾನು ಹರಿಣಿ ..   ಸ್ಥವಿರ ಹೇಳಿರಬೇಕಲ್ಲ ಎಂದು ನಕ್ಕಳು..

ಥ್ಯಾಂಕ್ಸ್ ನಿಮಗೆ ,   ಅವನಲ್ಲಿನ ಬದಲಾವಣೆಗೆ... ಇವತ್ತು ನೋಡಿ  ನನ್ನ ಇಲ್ಲಿ ಬಿಟ್ಟು ಮೀಟಿಂಗ್ ಅಂತಾ ಹೋಗಿಬಿಟ್ಟ, ಒಂದಷ್ಟು ಜವಾಬ್ದಾರಿ , ಸಹನೆ , ಇನ್ನೊಬ್ಬರಿಗೆ ಸಹಾಯ ಮಾಡುವ ಒಳ್ಳೆತನ ಎಲ್ಲಾ ಬಂದಿದೆ.

ನಕ್ಕಳು ಅವಳು..

ಅವನ ಒಳ್ಳೆತನವನ್ನೂ ನೀವು ಒಪ್ಪಿಕೊಂಡಿದ್ದರೆ....  ಮಾತು ಮುಂದುವರೆಸ ಬೇಕಾ ಬೇಡವಾ ಎಂಬಂತೆ

ಹರಿಣಿಯ ಮುಖ ನೋಡಿವನಿಗೆ ಅವಳ ಮುಖದಿಂದ ನಗು ಮಾಯವಾಗಿದ್ದು ಸ್ಪಷ್ಟವಾಗಿತ್ತು.

ಸಹಾಯಕ್ಕೆ ಬದಲಾಗಿ ಪ್ರೀತಿಯನ್ನು ಒಪ್ಪಿಕೋ ಅಂತಾ ಹೇಳ್ತಿದೀರಾ ಅಲ್ಲವಾ..

ಹಾಗಲ್ಲ ಅವನು ನಿಮಗೋಸ್ಕರ, ನಿಮ್ಮಿಂದ ಬದಲಾಗಿದ್ದಾನೆ ....

ಅವರ "ಈ ಬದಲಾವಣೆಗಾಗಿ ನಾನು ತೆತ್ತ ಬೆಲೆ ನನ್ನ ಕಾಲು ವರುಣ್", ಸಹಾಯಕ್ಕೆ  ಕೃತಜ್ಞತೆಯಿದೆ, ಆದರೆ ಕೆಲ ಗಾಯಗಳೂ ಯಾವತ್ತೂ ವಾಸಿಯಾಗಲ್ಲ ಮನಸಿನ ಮೇಲಾದವುಗಳು. "ಅವತ್ತಿನ ಆ ರಾತ್ರಿಯಲ್ಲಿ , ಜಜ್ಜಿ ಅಪ್ಪಚ್ಚಿಯಾದ ಕಾಲು,  ದೂರ ಕಾರು ನಿಲ್ಲಿಸಿ , ಇಳಿದು ಒಮ್ಮೆ ನೋಡಿದ ಅವನ ಮುಖ, ಅವನೆಸೆದು ಹೋದ ದುಡ್ಡಿನ ಕಂತೆ ... ಇದೆಲ್ಲ ಇವತ್ತಿಗೂ ನನಗೆ ನಿತ್ಯವೂ ಬೀಳುವ ಕನಸಿನ ಭಾಗಗಳು"...
"ಎಲ್ಲ ತಪ್ಪುಗಳಿಗೂ ಶಿಕ್ಷೆಯಾಗಬಾರದು ಎಂದಾದರೆ , ಎಲ್ಲ ತಪ್ಪುಗಳಿಗೂ ಕ್ಷಮೆಯೂ ಇರುವುದಿಲ್ಲ" ಅಲ್ಲವಾ .

ಜೀವನ ಪರ್ಯಂತ ಶಿಕ್ಷಿಸಹೋರಟಿದ್ದೀರಾ?  ಅವನೆದುರೇ ಇದ್ದು ಕಾಡುವ ಬದಲು ದೂರ ಮರೆಯಾಗಿಬಿಡಬಹುದಲ್ಲ.

ಮದುವೆಯಾದರೆ ಎಲ್ಲಾ ಪೂರ್ಣವಾಗಲ್ಲ , ಮತ್ತಷ್ಟು ಛೇದವೇ,  ನಾನು ದಕ್ಕಿದ ಖುಷಿಗೆ ಮತ್ತೆ ಕುಡಿತ, ಮತ್ತೆ  ಡ್ರೈವಿಂಗ್ , ನಾನೇ ಅವನ ಗುರಿಯಾಗಿರುವಾಗ ನನ್ನ  ತಲುಪಿದ ಖುಷಿಗೆ ಮತ್ತೆ ಉಢಾಫೆ ಎಲ್ಲವೂ  ಮರುಕಳಿಸುತ್ತವೆ. ನಾನವನನ್ನು ಅರ್ಥಮಾಡಿಕೊಂಡಿದ್ದೇನೆ.. ಈಗ ನೀವೆಂದ ಬದಲಾವಣೆಗಳೆಲ್ಲ ಮತ್ತೆ ಮೊದಲ ಬಿಂದುವಿಗೆ ಮುಟ್ಟುತ್ತೆ ವರುಣ್ .   ನನ್ನಿರುವು, ನನ್ನೆಡೆಗಿನ ಪ್ರೀತಿ ಅವನನ್ನು ಸದಾ ಜಾಗೃತವಾಗಿಡುತ್ತದೆಯೆಂದಾದರೆ ಹಾಗೆ ಇರಲಿ...

ಇದು ಶಿಕ್ಷೆಯಲ್ಲ .. ನಿಮ್ಮ ಗೆಳೆಯನ ರಕ್ಷಣೆಗೆ ನಿಂತಿದ್ದೇನೆಂದುಕೊಳ್ಳಿ..

ಮೊದಲು ಪೋಣಿಸಿದ್ದು ಕೆಲವು ಸುಳ್ಳುಗಳು,  ಅವನೆಡೆಗಿನ ಪ್ರೀತಿಯೇ ಇದನ್ನೆಲ್ಲ ಮಾಡಿಸುತ್ತಿರುವುದು. ಎಂದು ಮನಸಿನಲ್ಲೆ ಅಂದುಕೊಳ್ಳುತ್ತಿದ್ದರೂ ಕೊನೆಯ ವಾಕ್ಯ ಹರಿಣಿಯ ಬಾಯಿಂದ ಅಪ್ರಯತ್ನವಾಗಿ ಹೊರಬಂದು ಬಿಟ್ಟಿತ್ತು.
ಅವನಿಗೆ  ಕೇಳಿಸಿತಾ ಎಂದು ತಟ್ಟನೆ ತಿರುಗಿದಳು ..

ಕೊನೆಯ ಮಾತು ತನಗೇ ಕೇಳಿಸಲೇ ಇಲ್ಲವಂಬಂತೆ ಅವಳಿಗೆ ಬೆನ್ನು ಹಾಕಿ ಹೊರಟಿದ್ದ ವರುಣ್. ಅವನಿಗೆ ಅವಳ ಪ್ರೀತಿ ಅರ್ಥವಾಗಿತ್ತು, ಮತ್ತೂ ತಾನು ಅದನ್ನೆಂದೂ ಸ್ಥವಿರನಿಗೆ ಹೇಳಲಾರೆ ಎಂದು ನಿರ್ಧರಿಸುತ್ತಲೇ ಮೆಟ್ಟಿಲಿಳಿಯತೊಡಗಿದ..

ಇತ್ತ ಮನದಲ್ಲಿ ಮೂಡುತ್ತಿದ್ದ ಸ್ಥವಿರನ ಚಿತ್ರವನ್ನು ಅಳಿಸುವಂತೆ ತಲೆಕೊಡವುತ್ತಾ ವಾಕಿಂಗ್ ಸ್ಟಿಕ್ ಹಿಡಿದು ಎದ್ದು ನಿಂತಳು ಹರಿಣಿ.