Saturday, 27 April 2013

ತೋಚಿದ್ದು .. ಗೀಚಿದ್ದು ...



ಸತ್ತ ಸಂಬಂಧಗಳೆಲ್ಲ .. 
ಸವಿ ನೆನಪುಗಳಾಗಿ 
ಫ್ರೇಮ್ ನಲ್ಲಿ ಕುಳಿತಿವೆ .. 

ಮುಚ್ಚಟೆಯಿಂದ 
ಮನದ ಪೆಟ್ಟಿಗೆಯಲ್ಲಿಟ್ಟು .. 
ಬೀಗ ಹಾಕಿದ್ದಾಗಿದೆ ... 

ಕೀ ಕಳೆಯಬೇಕೆಂದಾಗೆಲ್ಲ 
ಹಾಳಾದ್ದು ಕೀಲಿಯಿಟ್ಟ  ಜಾಗ 
ತಪ್ಪದೆ ನೆನಪಾಗುತ್ತದೆ...  

****************************

ಹೀಗೊಂದು ಕೆಟ್ಟ ಕನಸು... 
ಸೇತುವೆಗಳೆಲ್ಲ ಗೋಡೆಗಳಾಗಿ 
ಬದಲಾದಂತೆ ... 

*****************************
ಒಂದು ವೇಳೆ ಅವನು ಕೃಷ್ಣನಾದರೆ 


ಭಾಮೆ ನಾನೇ, ...

ನೀ ರಾಧೆಯಾಗಬೇಕಿತ್ತೇನೋ. ...

ಆದರೆ ನಾ ಭಾಮೆಯಾಗಲೂ ಇಲ್ಲ...

ನಿನಗೆ ರಾಧೆಯಾಗಲೂ ಬಿಡಲಿಲ್ಲ. ...

ಅವನು ಮಾತ್ರ ರಾಮನಾಗಿಬಿಟ್ಟ ...

ಚೆಂದದ ಅವನದೇ ಸಂಸಾರದಲ್ಲಿ. ...

************************

ನೀ ಅರ್ಧದಲ್ಲೇ ಎದ್ದು ಹೋದ 
ನಂತರವೂ ನಿನ್ನ ಹೊರತಾದ 
ಬದುಕೊಂದಿದೆ ಎಂದು 
ಅರ್ಥ ಮಾಡಿಕೊಂಡಾಗಿನಿಂದ 
ನಿನ್ನ ನೆನಪುಗಳಿಗೆ 
ಪೂರ್ಣವಿರಾಮ ಬಿದ್ದಿದೆ ... 

************************

ಮರೆವಿನ ಅಲೆಗಳು...
ಎಲ್ಲವನ್ನೂ ಅಳಿಸುತ್ತವೆ..
ಮನದ ತೀರದಲ್ಲಿ ಬರೆದ...
ನಿನ್ನ ಹೆಸರೊಂದನ್ನು ಬಿಟ್ಟು...

********************
ದ್ವೇಷಿಸಲು ಸಾಧ್ಯವಿಲ್ಲದಷ್ಟು
ನಿನ್ನನ್ನೂ ಪ್ರೀತಿಸಿದ್ದಕ್ಕೋ ಏನೋ ..
ನಿನ್ನನ್ನು ಕಳೆದುಕೊಂಡದ್ದಕ್ಕೆ 
ಬೇಸರವಿಲ್ಲ ಕಣೋ .. . 
ಆದರೆ ಕೊಟ್ಟಂತೆ ಮಾಡಿ 
ಕಸಿದುಕೊಂಡ ಬದುಕಿನ 
ಪರಿಸ್ಥಿತಿಯ ಬಗೆಗೆ 
ಒಂದು ಮೌನ ತಿರಸ್ಕಾರವಿದೆಯಷ್ಟೇ..
-----



 ಇಲ್ಲಿನ ಮೊದಲ ಮೂರು ಹನಿಗಳು ಏಪ್ರಿಲ್ ಹದಿನೆಂಟರ "ಅವಧಿ" ಯಲ್ಲಿ ಪ್ರಕಟಗೊಂಡಿದ್ದವು. 

Friday, 12 April 2013

ಹೇಳು ಇದು ಪ್ರೇಮ ಕಥೆಯಾ ??



ಹಾಗೆ ಒಂದು ದಿನ . ಅದೊಂದು ಪ್ರೇಮ ಪುಸ್ತಕ, ಎದೆಗವಚಿ ನಿದ್ದೆ ಹೋದೆ. ಮುಸ್ಸಂಜೆ ಸಮಯ. ಕಿಟಕಿಯಲ್ಲಿ ಯಾರೋ ಇಣುಕಿದಂತಾಯ್ತು .
 ನೋಡಿದರೆ ಸೂರ್ಯ ..!! 
ಚಂದ್ರನ ಕಿಟಕಿಯ ಇಣುಕುವ ಪರಿ ಗೊತ್ತು . ಇದೇನು ಸೂರ್ಯ ಬಂದಿದ್ದು??!! ಎಂದುಕೊಂಡೆ. 
ಹೊತ್ತಲ್ಲದ ಹೊತ್ತಲ್ಲಿ ಮಲಗಿದರೆ ಇನ್ನೇನಾಗುತ್ತೆ ಎಂದು ಮನಸ್ಸು ಹೇಳಿತು. 
ನೋಡು ನೋಡುತ್ತಿದ್ದಂತೆ ಸೂರ್ಯನಿಗೆ ಕಣ್ಣು , ಮೂಗು , ಬಾಯಿ  ಒಂದು ಗಿರಿಜಾ ಮೀಸೆ  ಎಲ್ಲವೂ  ಮೂಡಿದವು . ನಿಧಾನವಾಗಿ ನನ್ನ ಮಾತನಾಡಿಸತೊಡಗಿದ.
 "ಹೋಗು ನನಗೆ ನಿದ್ದೆ ಮಾಡಬೇಕು" ಎಂದು ಕೆನ್ನೆಯುಬ್ಬಿಸಿದೆ.  
"ನೀ ಆರಾಮವಾಗಿ ನಿದ್ದೆ ಮಾಡುವೆಯಂತೆ ಮೊದಲೊಂದು ಕಥೆ ಹೇಳುವೆ ಕೇಳು.. ಇದು ಪ್ರೇಮ ಕಥೆಯಾ ?? ನೀ ಹೇಳು" ಎಂದು ಶುರುವಿಟ್ಟುಕೊಂಡ. 
ಅವ ಹೇಳುತ್ತಿರುವಂತೆ ಕಲ್ಪನೆಯ ಭಿತ್ತಿಗಳಲ್ಲಿ ಚಿತ್ರ ಮೂಡುತ್ತಾ ಹೋಯಿತು .. 

ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ. ಅಲ್ಲೊಬ್ಬ ಹುಡುಗ , ಪಕ್ಕದಲ್ಲೊಬ್ಬಳು ಹುಡುಗಿ ಪ್ರತಿದಿನ ಕುಳಿತು  ನನ್ನ ನೋಡುತ್ತಿದ್ದರು. ಅವರಿಬ್ಬರೂ  ಸ್ನೇಹಿತರಿರಬಹುದೇನೋ ಗೊತ್ತಿಲ್ಲ, ಪರಿಚಿತರಂತೂ ಹೌದು. ಪ್ರೇಮಿಗಳಂತೆ ಅಂತೂ ಇರಲಿಲ್ಲ.  ಹುಡುಗನೋ ಪಕ್ಕಾ  practical . ಹುಡುಗಿಗೋ ಬದುಕಿನ ವಾಸ್ತವತೆಯ ಜೊತೆಯಲ್ಲೇ ಮಿಳಿತವಾಗುವ ಭಾವುಕತೆಯೂ ಇಷ್ಟ. ಆತನಿಗೆ  ಪ್ರಕೃತಿಯಲ್ಲಿ . ಹಕ್ಕಿಗಳ ಹಾರುವಿಕೆಯಲ್ಲಿ , ನೀರ ಹರಿಯುವಿಕೆಯಲ್ಲಿ , ಮುಳುಗೋ ಸೂರ್ಯನಲ್ಲಿ ಏನೇನೂ ವಿಶೇಷವಿಲ್ಲ. ಆದರೂ ನೋಡುತ್ತಾ ಕೂರುತ್ತಾನೆ. ಅವಳಿಗೋ ಪಕ್ಕದಲ್ಲಿ ಕುಳಿತು ಅವನ ನೋಡುವುದೇ ಖುಷಿ.ಅದು ಪ್ರೀತಿಯಲ್ಲ. ಸ್ನೇಹವನ್ನೂ ಮೀರಿದ ಆ ಭಾವಕ್ಕೆ ಹೆಸರಿಲ್ಲ.ನನ್ನ ಮತ್ತು ಭೂಮಿಯ ಸಂಬಂಧದಂತೆ.   ಅವರಿಬ್ಬರೂ ಮಾತನಾಡಿಕೊಳ್ಳುತ್ತಾರ ? ಗೊತ್ತಿಲ್ಲ .ಭೂಮಿಯನ್ನೇ  ಕೇಳಬೇಕೆನೋ.   ಆದರೆ ನೀ ನನ್ನ ತೋಳು ತಬ್ಬಿದ ದಿನ ನಾನಿಲ್ಲಿಂದ ಎದ್ದು ಹೊರಡುತ್ತೇನೆ ಎಂಬುದು ಹುಡುಗನ ಮನದ ಮಾತಾದರೆ , ನನ್ನದೇ ಆದ ಬದುಕು ನನ್ನ ಕರೆಯುವವರೆಗೂ ನಿನ್ನ ಪಕ್ಕದಲ್ಲಿ  ನಿನ್ನ ತೋಳು ತಬ್ಬದೆ ನಾ ಕೂರಬಲ್ಲೆ  ಎಂಬ ಮೌನ ಪ್ರಮಾಣ ಹುಡುಗಿಯದು.  .ಆದರೂ ನನಗೆ  ಅವರನ್ನು  ನೋಡುವ ಖುಷಿ.  ಅವರಿಗಾಗಿ ಎರಡು ನಿಮಿಷ  ತಡೆದು ಮುಳುಗಲಾ ?? ಎನ್ನುವಷ್ಟು ಇಷ್ಟವಾಗಿಬಿಟ್ಟಿದ್ದರು. ದಿನಗಳು ಹೀಗೆ ಸಾಗುತ್ತಾನೆ ಇದ್ದವು. ಒಂದು ದಿನ ಅದ್ಯಾವ ಕಾರ್ಮೋಡ ನನ್ನ ಕವಿದಿತ್ತೋ ಗೊತ್ತಿಲ್ಲ. ಮೋಡ ಸರಿದು ಬೆಳಕು ಬರುವ ಮೊದಲೇ  ಹುಡುಗಿ  ಏಕಾಂಗಿ. ಯಾವ ಕರಿ ಮೋಡಗಳ ಭಯ ಕಾಡಿತೋ ಏನೋ ಆಕೆ ಆತನ ತೋಳು ತಬ್ಬಿಬಿಟ್ಟಿದ್ದಳು. ಹುಡುಗ ಎದ್ದು ನಡೆದಿದ್ದ ಒಂದು ಮಾತೂ ಹೇಳದೆ. ಕ್ಷಮೆಯ ಇವಳ ಮಾತನ್ನೂ ಆಲಿಸದೆ. 

ಅವಳದೇ ಆದ ಬದುಕಿನ್ನು ಅವಳನ್ನು ಕರೆದಿರಲಿಲ್ಲ. ಅವನ ನೋಡದೆ ಬದುಕುವುದು ಗೊತ್ತಿರಲಿಲ್ಲ .ನದಿ ತೀರದಲ್ಲಿ ಈಗ ಅವಳು ಏಕಾಂಗಿ. ಆದರೂ ಆಕೆಯ ಮೌನ ಒಡೆಯಲೇ ಇಲ್ಲ. ಕಾಯುವ ಮನಸ್ಸು ಕರಗಲೇ ಇಲ್ಲ.  ಅಕೆಯದೋ ಭೂಮಿಯ ತಾಳ್ಮೆ. ಹುಡುಗನೋ ನಿರ್ಧಾರದಲ್ಲಿ ಬಂಡೆ. ಆತನಿಗೆ ಮುಂದೆ ನಡೆಯುವುದೊಂದೇ ಗೊತ್ತು. ಹಿಂದೆ ತಿರುಗಿ ನೋಡಲಾರ . ಮತ್ತೆ ಹಿಂದಿರುಗಿ ಬರಲಾರ. ಆದರೆ ಆಕೆಯ ಕಾಯುವಿಕೆ ಮಾತ್ರ ನಿರಂತರ ನಾನು ಮುಳುಗಿ ಮತ್ತೆ ಹುಟ್ಟುವಂತೆ. ಮತ್ತೆ ಅವನು ಬರಬಹುದೇನೋ ಎರಡು ನಿಮಿಷ ಕಾಯಲಾ??  ಎನಿಸುವುದುಂಟು. ಆದರೆ ನಾನು ಹಾಗೆ ಮಾಡಲಾರೆನಲ್ಲ.ಅವರಲ್ಲಿಯೇ ನಾನು ನನ್ನನ್ನು ಮತ್ತು ಭೂಮಿಯನ್ನು ಕಾಣುತ್ತಿದ್ದೆ. ಅವಳೋ ನನ್ನನ್ನು ಮುತ್ತಿಕ್ಕಲಾರಳು. ನಾನೂ ಅವಳನ್ನು ತಬ್ಬಲಾರೆ. ನಾವಿಬ್ಬರೂ ದೂರವಿದ್ದರೂ ಹತ್ತಿರ.. ಅವರೋ ಹತ್ತಿರವಿದ್ದೂ ದೂರ ದೂರ. ಎಲ್ಲ ಮನಸ್ಸುಗಳೂ ಸಾಗರದಷ್ಟು ನಿಗೂಢವೇ ಎನಿಸುತ್ತಿದೆ. 
 ಹೇಳು ಇದು ಪ್ರೇಮ ಕಥೆಯಾ ?? ಎಂದ. 

ಉತ್ತರವಿರಲಿಲ್ಲ ನನ್ನ ಬಳಿ. ನಾನೂ  ಎಚ್ಚರಗೊಂಡು , ನನಗೂ  ಈ ಪ್ರೀತಿ  ಮಧ್ಯಾಹ್ನದ  ನಿನ್ನಂತೆ ಸುಡು ಬಿಸಿಲಾ ?? ಸಂಜೆ ಬಾನಿನ ರಂಗಿನೋಕುಳಿಯಾ ? ಅಥವಾ ನೀ ಮುಳುಗಿದ ಮೇಲೆ ಬರುವ ತಂಪು ಬೆಳದಿಂಗಳಾ ?? ಎಂದು ಗೊತ್ತಿಲ್ಲ  ಎನ್ನುವಷ್ಟರಲ್ಲಿ ಮಾಯವಾಗಿದ್ದ. ನಾನೂ  ಈಗ ಸೂರ್ಯನನ್ನು ಹುಡುಕಬೇಕಿದೆ. 
   

Monday, 18 March 2013

ಹೀಗೊಂದು "ಆಶ"ಯ.. ಪ್ರೀತಿಯ ಶುಭಾಷಯ..




ಆವತ್ತು ಎಂದಿನಂತೆ ಆಫೀಸ್ ಮುಗಿಸಿ ಹೊರಟವಳಿಗೆ direct  buss  ಸಿಗದೇ ಬೇರೆ buss  ಹತ್ತಿದ್ದೆ. ಸಣ್ಣ ಅಯಾಸದೊಂದಿಗೆ ಹಾಡು ಕೇಳುತ್ತಾ ಕಣ್ಣುಮುಚ್ಚಿ  ಕುಳಿತವಳಿಗೆ bus  ಎಲ್ಲಿ ಹೋಗುತ್ತಿದೆ ಅಂತ ಗೊತ್ತಿರಲಿಲ್ಲ. ಒಂದು ಕಡೆ bus ನಿಂತ ಅನುಭವವಾಗಿ ಕಣ್ ಬಿಟ್ಟರೆ, ಒಂದಿಷ್ಟು ಜನ ಇಳಿದಿದಿದ್ದು , ಹತ್ತಿದ್ದು ಕಾಣಿಸಿದ್ದು. ಹತ್ತಿ ಒಳಬಂದವರನ್ನು ನೋಡುತ್ತಿರುವಂತೆ ಕಂಡಿದ್ದು ನೀನು .!! ಹೌದಾ ? ಇದು ನಿಜವಾ ? ನೀನಾ ? ಅಂತ ಎರಡೆರಡು ಬಾರಿ ನೋಡಿಕೊಂಡೆ. ಹೌದು ಅದು ನೀನೆ ಅಂತ  ಗೊತ್ತಾದಾಗ ಮನಸ್ಸು ಎಷ್ಟು ಕುಣಿದಿತ್ತು ಗೊತ್ತಾ ? ನನ್ನ ಎದುರು ಸೀಟ್ ನಲ್ಲಿಯೇ ಕುಳಿತು ನೀ ನನ್ನನ್ನು ನೋಡದೆ ನಿನ್ನ ಪಾಡಿಗೆ ಕುಳಿತಾಗ ಮಾತ್ರ ಎಲ್ಲಿಲ್ಲದ ಸಿಟ್ಟು ಬಂತು . ಆದರೆ ಯಾವಾಗ ನೀ ನನ್ನ ನೋಡಿದೆಯೋ ಆಗ ನಿನ್ನ ಮುಖದಲ್ಲಿನ expression  ಇವತ್ತಿಗೂ ಮರೆಯಲು ಆಗೋಲ್ಲ. ಏನೋ ಒಂದು ಅಚಾನಕ್ ಆಗಿ ಸಿಕ್ಕ ಖುಷಿ ನಿನ್ನ ಕಣ್ಣಲ್ಲಿ ಕಂಡಿತ್ತು. ನಿನ್ನ ಕಣ್ಣಲ್ಲಿ ಖುಷಿ ಗೆ ನೀರು ಬರುವುದೊಂದು ಬಾಕಿ ಎನಿಸಿತ್ತು. ಈ ವರ್ಕೋ ಹಾಲಿಕ್ ಜಗತ್ತಿನಲ್ಲಿ ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಬೇಕಲ್ಲ. ಒಬ್ಬರಿಗೊಬ್ಬರು ಸಿಗುವುದಾದರೂ. ಆದರೆ ಏನೇ ಹೇಳು plan  ಪ್ರಕಾರವೇ ಸಿಕ್ಕಿದ್ದರೂ ಇಷ್ಟು ಖುಷಿಯನ್ನು ನಿನ್ನ ಕಣ್ಣಲ್ಲಿ ನಾ ನೋಡುತ್ತಿರಲಿಲ್ಲ. ನವರಂಗ್ ಲ್ಲಿ ಇಳಿದ ತಕ್ಷಣ  ಪಾನಿಪುರಿ ತಿನ್ನೋಣವಾ ಅಂತ ಕೇಳಿದವಳಿಗೆ ಬೇಡ ಎಂದರೆ , ಮದ್ಯಾಹ್ನ ಏನು ತಿಂದಿಲ್ಲ ಎಂದಾಗ ಮಾತ್ರ ಒಂದು ಗುದ್ದು ಕೊಡುವಷ್ಟು ಸಿಟ್ಟು ಬಂದಿತ್ತು. ಆದರೆ ನಿನ್ನ ಆ ಮುಖ ನೋಡಿದ್ರೆ ಅದ್ಯಾವನಿಗೆ ಹೊಡಿಯೋ ಮನಸ್ಸು ಬರುತ್ತೆ ಹೇಳು. ಬಹುಷಃ ಅದಕ್ಕೆ ನೀನು ಅಪ್ಪನ ಹತ್ತಿರ ಕೂಡ ಹೊಡೆತ ತಿಂದಿರಲಿಕ್ಕಿಲ್ಲ. ಪುಟ್ಟ ಮಗುವಂತೆ ಪಾರ್ಕ್ ನಲ್ಲಿ ಕೈ ಹಿಡಿದು ಕರೆದುಕೊಂಡು ಹೋಗಿ ಕೈ ಹಿಡಿದೇ ಕುಳಿತಿದ್ದು ತುಂಬಾ ಆಪ್ಯಾಯಮಾನವಾಗಿತ್ತು.ಎಷ್ಟೇ ಬೆಳೆದಿದ್ದೇವೆ ಎಂದುಕೊಂಡರೂ,ಇಬ್ಬರ ಪ್ರಪಂಚಗಳು ಎಷ್ಟೇ ದೊಡ್ದದ್ದಾಗಿದ್ದರೂ ನಮ್ಮ ಮಾತುಗಳು ಮಾತ್ರ ಯಾವತ್ತಿಗೂ ಆ ದಿನಗಳಿಗೆ ಮಾತ್ರ ಸೀಮಿತ ಅಲ್ಲವಾ.  ಪುಟ್ಟ ಮಗುವಂತೆ ನೀ ಖುಷಿಯನ್ನು ವ್ಯಕ್ತ ಪಡಿಸುವಾಗ ನನಗೆ ಎಲ್ಲೋ ನಿನ್ನಂತೆ ಖುಷಿಯನ್ನು ಹೊರಹಾಕಲು ಬರುತ್ತಿಲ್ಲವೇನೋ ಅನಿಸಿದ್ದು ಸುಳ್ಳಲ್ಲ. ನಮ್ಮನೆಗೆ ಬಾ ಎಂದು ಮಗುವಂತೆ ಹಠ ಮಾಡುತ್ತಿದ್ದ ನಿನ್ನ , ಆ ನಿನ್ನ ಖುಷಿಯನ್ನ ಕದಡುವ ಮನಸ್ಸಾಗಲೇ ಇಲ್ಲ. ಅದಕ್ಕೆ ಪಿಜಿ, ಆಫೀಸ್ ಎಲ್ಲವನ್ನೂ ಮರೆತು ನಿನ್ನ ಜೊತೆ ಹೆಜ್ಜೆ ಹಾಕಿದ್ದು. ಮನೆಗೆ ಹೋದರೂ ಅಷ್ಟೇ, ನಾ ಬಂದ ಸಂಭ್ರಮ ನಿನ್ನ ಹೆಜ್ಜೆ ಹೆಜ್ಜೆಗಳಲ್ಲಿ ಗೊತ್ತಾಗುತ್ತಿತ್ತು. ಮನಸ್ಸು ನಿಜಕ್ಕೂ ಮೂಕ .. ಮೋಕ.. ನಾ ಮಾಡಿದ ಪ್ರಾಜೆಕ್ಟ್ ನಿನಗೆ ತೋರಿಸಲಾ ? ಎಂದು ಕೇಳಿದಾಗ ಏನೂ ಅರ್ಥವಾಗೋಲ್ಲ ಎಂದು ಗೊತ್ತಿದ್ದರೂ ಬೇಡ ಎನ್ನುವ  ಮನಸ್ಸೇ ಬರಲಿಲ್ಲ ಕಣೆ. ಕಾರಣ ಇಷ್ಟೇ ನಿನ್ನ ಪಕ್ಕದಲ್ಲಿ ಕೂರಬೇಕಿತ್ತು. ನಿನ್ನ ಮಾತುಗಳನ್ನು ಕೇಳಬೇಕಿತ್ತು. ಒಂದು ವಿಷಯದಲ್ಲಿ ಆಳವಾಗಿ ಹೋಗಿ explain  ಮಾಡುವ ನನ್ನ ಹೈಸ್ಕೂಲಿನ ಆಶಾ ನನಗೆ ಮತ್ತೆ ಬೇಕಿತ್ತು. 

ರಾತ್ರಿ ಮಲಗುವ ಮನಸ್ಸಿರಲಿಲ್ಲ , ನಿನ್ನೊಂದಿಗಿನ ಮಾತುಗಳು ಎಂದಿಗಾದರೂ ಮುಗಿದಾವಾ? ಹೇಳು. ಆದರೆ ನಾಳೆಯ ಆಫೀಸ್ ಭೂತ ಇಬ್ಬರನ್ನೂ ಕಾಡುತ್ತಿದ್ದಕ್ಕೆ ನಾವು ಮಲಗಿದ್ದು. ಒಲ್ಲದ ಮನಸ್ಸಿನಿಂದಲೇ ಮುಸುಕೆಳೆದಿದ್ದು ಸುಳ್ಳಲ್ಲ ಅಲ್ಲವಾ... ಮರುದಿನ bus  ಲ್ಲಿ ಎರಡೇ stop  ಗೆ ನೀ bus  change  ಮಾಡಬೇಕೆಂದು ಹೇಳಿದಾಗ, ಇನ್ನುಳಿದ ಅಷ್ಟು ದೂರದ ಪಯಣಕ್ಕೆ ಪಕ್ಕದಲ್ಲಿ ಯಾರನ್ನೋ ಕಲ್ಪಿಸಿಕೊಳ್ಳುವುದು ಕಷ್ಟವಾಯಿತು ಮುದ್ದು.. ಅಷ್ಟು ದೂರ ನಾನೊಬ್ಬಳೆ ಹೋಗಬೇಕಾ ? ಎಂದವಳನ್ನು , ನೋಡಿ  bus  ಇಳಿದು call  ಮಾಡ್ತೀನಿ. ಮಾತಾಡ್ತಾ ಹೋಗೋಣ ಆಫೀಸ್ ಗೆ ಎಂದವಳ ಕಣ್ಣಲ್ಲಿ ಅದೆಷ್ಟು ಪ್ರೀತಿ ಕಾಣಿಸಿತ್ತು ಗೊತ್ತಾ?. ಆಮೇಲೆ ಆಫೀಸ್ ಮೆಟ್ಟಿಲು ಹತ್ತುತ್ತಿರುವಾಗಲೇ ಗೊತ್ತಾದವರಂತೆ ಬಂದ ನಿನ್ನ reached ? ಎಂಬ ಮೆಸೇಜ್ ಗೆ reached  ಎಂದು ಕಳಿಸಿದರೂ ಕೂಡ ಮನಸ್ಸು ನಿನ್ನನ್ನು ತುಂಬಾ miss  ಮಾಡಿಕೊಳ್ಳುತ್ತಿತ್ತು . 

ಲವ್ ಯು ಕಣೋ . ಬದುಕಲ್ಲಿ ಏನು ಸಾಧಿಸಿದ್ದೇನೋ ಗೊತ್ತಿಲ್ಲ. ಆದರೆ ನಿನ್ನಂತ ಗೆಳತಿಯನ್ನು ಸಂಪಾದಿಸಿದ್ದು ಸಾಕು ಈ ಬದುಕಿಗೆ ....ಈ ಖುಷಿಗೆ.. ಜೀವನದಲ್ಲಿ ಕೆಲವು unexpected ಆಗಿ ಸಿಕ್ಕಾಗ ಆಗುವ ಖುಷಿ , ಆ ಥ್ರಿಲ್ ಇನ್ನೆಲ್ಲೂ ಸಿಗಲಾರದೇನೋ. ಎಲ್ಲೋ ಒಂದು ತಿರುವಲ್ಲಿ ನೀ surprise ಆಗಿ ಸಿಕ್ಕಂತೆಯೇ.   ಹಾಗಾಗಿಯೇ ಈ ಜೀವನ predefined  ಆಗದಿರುವುದೇ ಒಳ್ಳೆಯದು ಅಲ್ಲವಾ.. 

 Golden life ಕೊಟ್ಟ ಚಿನ್ನದಂಥಹ ಗೆಳತಿ ಗೆ 
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. ನಿನ್ನೆಲ್ಲ ಕನಸುಗಳು ನನಸಾಗಲಿ... 
 ಒಂದು ದಿನ ತಡವಾಗಿದ್ದಕ್ಕೆ ಕ್ಷಮೆಯಿರಲಿ... 

Friday, 15 March 2013

ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...

ತುಂಬಾ ಕಷ್ಟ ಪಟ್ಟು ಅಕ್ಷರಗಳನ್ನು ಜೋಡಿಸುತ್ತಿದ್ದೇನೆ. ಈ ಪತ್ರದ ಪ್ರತಿ ಶಬ್ದಗಳನ್ನು ಬರೆಯುವಾಗಲೂ ಕೈ ಕಂಪಿಸುತ್ತಿದೆ. ನಾವಿಬ್ಬರು ಪ್ರೀತಿಸುತ್ತಿದ್ದಾಗಲೂ ಪತ್ರ ಬರೆದದ್ದು ಕಡಿಮೆಯೇ, ಆದರೆ ಇವತ್ತು ಏನೂ ಅಲ್ಲದ ನನ್ನನ್ನು ಸೊಸೆಯಾಗಿ ತಂದು ಕೊಂಡು, ಸೊಸೆಯಂತೆ ಕಾಣದೆ ತಾಯಿಯಾದ ಆ ಮಮತಾಮಯಿ ನಿಮ್ಮ ಅಮ್ಮನಿಗಾಗಿ ಈ ಪತ್ರ ಬರೆಯಲೇ ಬೇಕಾಗಿದೆ.ಇದೇ ಕೊನೆಯದೇನೋ ಅನಿಸುತ್ತಿದೆ . 

ಆರು ವರ್ಷಗಳು ಕೇವಲ ಆರೇ ವರ್ಷಗಳ ಹಿಂದೆ ಎಷ್ಟು ಚೆನ್ನಾಗಿತ್ತು ನಮ್ಮ ಜೀವನ. ನಿಮಗೊಂದು ಒಳ್ಳೆಯ ಕೆಲಸವಿತ್ತು. ನಮ್ಮ ಪ್ರೀತಿಯಿತ್ತು , ನನ್ನನ್ನು ನಿಮ್ಮಮ್ಮನಿಗೆ ಪರಿಚಯ ಮಾಡಿಸಲು ಕರೆದುಕೊಂಡು ಹೋಗುವಾಗ "ನೋಡು ನಮ್ಮಮ್ಮನಿಗೆ ದವಡೆಯ ಆಪರೇಶನ್ ಆಗಿರುವುದರಿಂದ ಮುಖ ಸ್ವಲ್ಪ ವಿಕಾರವಾಗಿದೆ. ಅವರನ್ನು ನೋಡಿ ಹೆದರಬೇಡ. ನನ್ನ ಮದುವೆಯಾದ ಮೇಲೂ ಎಂದಿಗೂ ಅವರನ್ನು ಹೀಯಾಳಿಸ ಬಾರದು" ಎಂದು. ಅವರನ್ನು  ನೋಡಿದಾಗ ಸ್ವಲ್ಪ ಭಯ ಎನಿಸಿದರೂ, ಅವರ ಮಮತೆ ಎಲ್ಲವನ್ನು ಮರೆಸಿತ್ತು. " ನೋಡಮ್ಮ ನನ್ನ ಮಗ ಕೆಲಸದಲ್ಲಿರುವುದು ನಿಜ, ಆದರೆ ಅವನ ಸಂಬಳ ತಿಂಗಳ ಮನೆ ಖರ್ಚುಗಳಿಗೆ ಸರಿ ಹೋಗತ್ತೆ. ಗಳಿಕೆಯ ಉಳಿಕೆ ಕಡಿಮೆಯೇ . ಮದುವೆಯಾದ ಮೇಲೆ ನಿನ್ನ ಎಲ್ಲ ಆಸೆಗಳು ಈಡೇರಬಹುದು  ಎಂಬ ಭರವಸೆ ಕೊಡಲಾರೆನಮ್ಮ  , ಒಪ್ಪಿಗೆ ಇದ್ದರೆ ಈ ಮನೆ ದೀಪ ಬೆಳಗು ತಾಯಿ" ಎಂದಿದ್ದರು ನಿಮ್ಮಮ್ಮ , ಒಪ್ಪಿ ನಿಮ್ಮ ಕೈ ಹಿಡಿದು ಆ  ಮನೆ ಸೊಸೆಯಾದೆ.(ಆ ಮನೆ ಎಂದು ನಾನೇಕೆ ಹೇಳಿದೆ ಎಂಬುದು ನಿಮಗೂ ಗೊತ್ತು ) ಆ ಪುಟ್ಟ ಮನೆಯಲ್ಲಿ ಖುಷಿ ಮಾತ್ರ ಇತ್ತು  . ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಬರುತ್ತಿದ್ದ ನೀವು . ಅದು ಇದು ಮಾತನಾಡುತ್ತ ಬೆಳಿಗ್ಗೆಯಿಂದ ಸಂಜೆಯವರೆಗೆ ಕೆಲಸ ಮುಗಿಸಿರುತ್ತಿದ್ದ ನಾವು , ಆಮೇಲೆ ಮೂವರು ಸೇರಿ ಮನೆಯಂಗಳದಲ್ಲೇ ಇದ್ದ ಮಾವನವರ ಸಮಾಧಿಯ ಮುಂದೆ ತಾಸುಗಟ್ಟಲೆ ಕುಳಿತು ಮಾಡುತ್ತಿದ್ದ ಭಜನೆ. ಅಪರೂಪಕ್ಕೆ ಬೇಗ ಬಂದರೆ ಓಣಿಯ ಮಕ್ಕಳನ್ನೆಲ್ಲ ಸೇರಿಸಿ ಗಾಳಿಪಟ ಬಿಡುತ್ತಿದ್ದುದ್ದು , ಭಾನುವಾರ ಎಲ್ಲಾ ಸೇರಿಕೊಂಡು ಅಡಿಗೆ ಮಾಡಿ ಅಮ್ಮನ ಕೈತುತ್ತು ತಿನ್ನುತ್ತಿದ್ದುದು. ಸಂಜೆ ಅಮ್ಮ ದೇವಸ್ಥಾನಕ್ಕೆ  ಹೋದರೆ ನಾವಿಬ್ಬರೇ ಟೆರೆಸ್ ಮೇಲೆ ಕುಳಿತು ಹರಟುತ್ತಿದ್ದುದು....  .ಎಲ್ಲಿ ಹೋದವು ಆ ದಿನಗಳು ಮತ್ತೆ ಬರಲಾರದಷ್ಟು ದೂರ ...

ಇಷ್ಟು ಚೆನ್ನಾಗಿದ್ದಾಗ ಜೀವನ, ಅದ್ಯಾರು ತುಂಬಿದರೋ ನಿಮ್ಮ ತಲೆಗೆ ಬ್ಯುಸಿನೆಸ್ ಮಾಡುವ ವಿಚಾರವನ್ನು , ನನ್ನ ಬಳಿ ಹೇಳಿದಾಗಲೂ ಅಚ್ಚುಕಟ್ಟಾದ ಜೀವನಕ್ಕೆ, ಮುಂದೆ ಮಕ್ಕಳಾದರೆ ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು ನಾನೂ  ಸಪೋರ್ಟ್ ಮಾಡಿದೆ."ಅಮ್ಮಾ  ಸಾಲ ಮಾಡಿ ಬ್ಯುಸಿನೆಸ್ ಮಾಡಬೇಕೆಂದಿದ್ದೇನೆ" ಎಂದಾಗ ನಿಮ್ಮಮ್ಮ  "ಬೇಡ ಮಗು ಸಾಲದ ಶೂಲ ಕಷ್ಟವಪ್ಪ , ನನ್ನ ಬಳಿ ನಿಮ್ಮಪ್ಪನ ಸಮಾಧಿಯ ಮೇಲೆ ಗುಡಿ ಕಟ್ಟಿಸಲು ಕೂಡಿಟ್ಟ ಹಣವಿದೆ ಅದನ್ನೇ ಕೊಡುತ್ತೇನೆ ಬಳಸಿಕೋ , ಬ್ಯುಸಿನೆಸ್ ಚೆನ್ನಾಗಿ ನಡೆಸಿ ಅಲ್ಲೊಂದು ಗುಡಿ ನೀನೆ ಕಟ್ಟಿಸುವೆಯಂತೆ"  ಎಂದು ಹಣ ಕೊಟ್ಟರು. ಆ  ತಾಯಿ ಒಳ್ಳೆಯ ಕಾರ್ಯಕ್ಕಾಗಿ, ಒಳ್ಳೆ ಮನಸ್ಸಿನಿಂದ ಹಣ ಕೊಟ್ಟಿದ್ದರ ಪರಿಣಾಮ ನಿಮಗೂ ಒಳ್ಳೆಯದೇ ಆಯಿತು , ಮಾಡಿದ ಬ್ಯುಸಿನೆಸ್ ಕೈ ಹಿಡಿಯಿತು. ನಮ್ಮ ಜೀವನ ಬದಲಾಯಿತು, ಜೊತೆಗೆ ನೀವೂ ಕೂಡ.  ಕೆಲಸ, ಕೆಲಸ, ಕೆಲಸದಲ್ಲೇ ಮುಳುಗಿ ಹೋದಿರಿ. ನೀವು ಬೇಗ ಮನೆಗೆ ಬಂದಿದ್ದೇ  ಮರೆತು ಹೋಗಿದೆ ನನಗೆ. ಸ್ಟೇಟಸ್ ಗೆ ತಕ್ಕಂತೆ ಇರಬೇಕು ಎನ್ನುತ್ತಾ ಆ ಪುಟ್ಟ ಮನೆ ಬಿಡಿಸಿ ಇದ್ಯಾವುದೋ ಫ್ಲಾಟ್ ಎಂಬ ಭೂತ ಬಂಗಲೆಗೆ ತಂದಿರಿಸಿದಿರಿ. ಇದು ಮನೆಯೆಂದು ನಂಗೆ ಯಾವತ್ತೂ  ಅನಿಸಲೇ ಇಲ್ಲ. ಪುಟ್ಟ ಮಕ್ಕಳ ಜೊತೆಗಿನ ಗಾಳಿಪಟದ ಖುಷಿ ಮತ್ತೆ ಕಾಣಲೇ ಇಲ್ಲ, ನಿಮಗೆ ಭಾನುವಾರಗಳೇ ನೆನಪಿನಲ್ಲಿರುವುದು ದೂರವಾದ ಮೇಲೆ,  ಭಾನುವಾರದ ಅಡಿಗೆ, ಕೈ ತುತ್ತುಗಳ ನೆನಪೇ ಇಲ್ಲ, ಒಂದರ್ಧ ಗಂಟೆ ಭಜನೆಗೆ ಬಂದ ನೆನಪು ನಿಮಗಿದೆಯೇ?ನೆನಪಿಸಿಕೊಳ್ಳಿ . ಈ ಮನೆಯ ಟೆರೆಸ್ ಇನ್ನೂ ನೋಡೇ ಇಲ್ಲ , ಇವೆಲ್ಲ ಕೆಲಸದಲ್ಲಿ ಬ್ಯುಸಿ ಇರುವ ಗಂಡನ ಬಗ್ಗೆ ಹೆಂಡತಿಯಾದವಳು ಮಾಡುವ ನಾರ್ಮಲ್ ಕಂಪ್ಲೈಂಟ್ ಗಳು ಎನ್ನುತ್ತಾರೆ ಗೊತ್ತು ಅದಕ್ಕೆ ಇದನ್ನು ನಿಮ್ಮ ಮುಂದೆ ಎಂದು ಆಡಿರಲಿಲ್ಲ . 

ಆದರೆ ನೀವು ನಿಮ್ಮಮ್ಮನಿಗೆ ಮಾಡುತ್ತಿರುವ ಇಂಚಿಂಚು ಮೋಸವನ್ನು ಹೇಗೆ ಸಹಿಸಿಕೊಳ್ಳಲಿ. "ಗುಡಿ ಯಾವಾಗ ಕಟ್ಟಿಸುತ್ತಾನೆ ಎಂದು ಕೇಳಬೇಕಮ್ಮ, ಇವನು ಇತ್ತೀಚೆಗೆ ಮನೆಗೆ ಬರುವುದು ತಡವಾಗುತ್ತಿದೆ ಮನಸು ಯಾಕೋ ಸರಿ ಇಲ್ಲ ,  ನಿಮ್ಮ ಮಾವನರ ಸಮಾಧಿಯ ಮುಂದೆ ಒಂದು ಅರ್ಧ ಗಂಟೆ ಕುಳಿತುಬರಬೇಕು  ಎನಿಸುತ್ತಿದೆ, ನನ್ನ ಕರ್ಕೊಂಡು ಹೋಗ್ತಿಯ ಮಾ" ಎಂದು ಬೇಡುವಾಗ , "ಇಲ್ಲಮ್ಮ ನಿಮ್ಮ ಮಗ ಆ ಮನೆ ಮತ್ತು ಆ ಜಾಗ ಮಾರಿ ಬ್ಯುಸಿನೆಸ್ ಗೆ ಹಣ ಸುರಿದಿದ್ದಾರೆ" ಎಂದು ಹೇಗೆ ಹೇಳಲಿ ನಾನು ? ಇತ್ತೀಚಿಗೆ ಅಸ್ತಮ ಸ್ವಲ್ಪ ಜಾಸ್ತಿಯಾಗಿ ಕೆಮ್ಮುತ್ತಿದ್ದರೆ , ಅಮ್ಮ ಡಾಕ್ಟರ ಹತ್ರ ಹೋಗಿ ಬಾರಮ್ಮ ,ನನ್ನ ಕ್ಲೈಂಟ್, ಅಥವಾ ಗೆಳೆಯರೆಲ್ಲ ಬಂದಾಗ ನೀ ಹೀಗೆ ಕೆಮ್ಮುತ್ತ ಇದ್ದರೆ ಚೆನ್ನಾಗಿರಲ್ಲ ಎಂದಿದ್ದಕ್ಕಾಗಿ , ಮನೆಗೆ ಯಾರಾದರೂ ಬಂದರೆ ಬಚ್ಚಲಮನೆಯಲ್ಲಿ ಕುಳಿತು ಬರುವ ಕೆಮ್ಮನ್ನು ತಡೆ ಹಿಡಿಯಲು ಪ್ರಯತ್ನಿಸುತ್ತಾ ಕಷ್ಟ ಪಡುವ ಅವರನ್ನು ಹೇಗೆ ನೋಡುತ್ತಾ ಇರಲಿ ನಾನು ?ನಾನೇ ಡಾಕ್ಟರ್ ಹತ್ತಿರ  ಕರೆದು ಕೊಂಡು ಹೋಗುತ್ತೇನೆ ಎಂಬ ಮಾತು ನಿಮ್ಮ ಬಾಯಿಂದ ಬರಲೇ ಇಲ್ಲ .  ಮೊನ್ನೆ ನಿಮ್ಮ ಗೆಳೆಯನ ಮಗು ಅತ್ತೆಯನ್ನು ಕಂಡು ಕಿರುಚಿತ್ತು ಎನ್ನುವ ಕಾರಣಕ್ಕೆ , ನಿನ್ನ ಮುಖ ವಿಕಾರ ಎಂದು ಗೊತ್ತಿದ್ದರೂ ಯಾಕಮ್ಮ ಎದುರಿಗೆ ಬರಬೇಕಿತ್ತು ? ನೋಡು ಇನ್ಯಾವತ್ತೂ ಆತ  ನಮ್ಮನೆಗೆ ಬರಲಾರ ಎಂದು ಮುಖಕ್ಕೆಹೊಡೆದಂತೆ ನೀವು ಬೈದಿದ್ದನ್ನು ಹೇಗೆ ಸಹಿಸಿಕೊಳ್ಳಲಿ ? ಮೌನವಾಗಿ ಕಣ್ಣೀರು ಹಾಕುತ್ತಿರುವ ಆಕೆಯನ್ನು ಹೇಗೆ ಸಮಾಧಾನಿಸಲಿ ?

ಇದೆಲ್ಲದಕ್ಕಿಂತ ಹೆಚ್ಚಾಗಿ ಬೆಳಿಗ್ಗೆ ನೀವು ವೃದ್ಧಾಶ್ರಮದವರ  ಬಳಿ ಮಾತಾಡಿದ್ದನ್ನು ಕೇಳಿದ್ದೆ. ನೀವು ಅಲ್ಲಿಯ ಫಾರಂ ತಂದಿದ್ದು ಗೊತ್ತು ನನಗೆ. ಇದನ್ನು ಸಹಿಸಿಕೊಳ್ಳಲು ಸಾದ್ಯವಿಲ್ಲ . ಆ ಮಮತಾಮಯಿ ತಾಯಿಯನ್ನು ಯಾರೂ ಇಲ್ಲದ ಅನಾಥೆಯಂತೆ ಅಲ್ಲಿ ಬಿಡಲು ನಾನು ತಯಾರಿಲ್ಲ . ಅಚ್ಚುಕಟ್ಟಾದ ಜೀವನಕ್ಕೆ ಸಹಾಯವಾಗಬಹುದೆಂಬ  ನಿಮ್ಮ ಬ್ಯುಸಿನೆಸ್ ನನ್ನ ಸಂಸಾರದ ಚೌಕಟ್ಟನ್ನೇ ಒಡೆಯುತ್ತದೆ ಎಂದಾದರೆ ನನಗೆ ಆ ಬ್ಯುಸಿನೆಸ್ ಮತ್ತು ಅದರ ಹಣ ಎರಡೂ  ಬೇಕಾಗಿಲ್ಲ . ನಿಮಗೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಕೆಲಸಕ್ಕೆ ಹೊಗುತ್ತಿರಲಿಲ್ಲ , ಬಿಟ್ಟರೆ ನಿಮ್ಮಮ್ಮನಿಗೆ ಎರಡು ಹೊತ್ತು ಊಟ ಹಾಕಿ ನೆಮ್ಮದಿಯ ಬದುಕು ನೀಡುವಷ್ಟು ಸಂಬಳ ಬರುವ ಕೆಲಸ ಸಿಗುವಷ್ಟು ವಿದ್ಯೆ ನನ್ನಲ್ಲಿದೆ. ನಾನವರನ್ನು ಸಾಕುತ್ತೇನೆ . ಎಲ್ಲ ಸತ್ಯವನ್ನು ಅವರಿಗೆ ತಿಳಿಸಿ ಒಂದು ಹೊಸ ಬದುಕನ್ನು ಕಟ್ಟುತ್ತೇನೆ ಹಾಗಾಗಿಯೇ ಅವರನ್ನು ಕರೆದುಕೊಂಡು ಈ ಮನೆಯಿಂದ ಹೊರಡುತ್ತಿದ್ದೇನೆ. ದುಡ್ಡಿನ ಮದವಿಲ್ಲದೆ ಹುಡುಕಿ ಬಂದರೆ ನಮ್ಮ ಬದುಕಿನಲ್ಲಿ ನಿಮಗೂ ಒಂದು ಜಾಗ ಸಿಗಬಹುದೇನೋ ...

Tuesday, 5 March 2013

ಬಾಲ್ಯಕ್ಕಿಷ್ಟೇ ಗೊತ್ತು ..



ರೂಪದರ್ಶಿ : ಶ್ರೇಯಾ . ಫೋಟೋ : ವಿನೋದ್ ಕುಮಾರ್  




ಸ್ನಿಗ್ದ ನಗುವಿಗೊಂದು
ಮುಗ್ದತೆಯ ಚೌಕಟ್ಟು... 
ಪುಟ್ಟ ತಲೆಯೊಳಗೊಂದು ... 
ತುಂಟಾಟದ ಜಗತ್ತು ... 
ಬಾಲ್ಯಕ್ಕಿಷ್ಟೇ ಗೊತ್ತು ..  


ರೂಪದರ್ಶಿ : ಪ್ರಣತಿ ಹೆಗಡೆ , ಫೋಟೊ : ಸುಷಮಾ ಭಟ್ 
ಇಲ್ಲ ಬೆಡಗು ಬಿನ್ನಾಣ              
ಒನಪು ವಯ್ಯಾರಗಳ        
ಜರೂರತ್ತು . ...                             
ಬೆರಗು ಕಂಗಳಲಿ ... 
ಕುತೂಹಲದ  ಸುರುಳಿ ... 
ಬಾಲ್ಯಕ್ಕಿಷ್ಟೇ ಗೊತ್ತು ... 

    









ರೂಪದರ್ಶಿ:ಅಬ್ಜಾ ದಿಗ್ವಾಸ್ , ಪ್ರಾಚಿ ,
 ಫೋಟೊ : ದಿಗ್ವಾಸ್ ಜಿ . ಹೆಚ್ 
ಬೇಕಿಲ್ಲ ಬದುಕಿಗೊಂದೇ ದಾರಿ .. 
ಬದುಕಲ್ಲೊಂದೇ ಗುರಿಯೆಂಬ ಉಯಿಲು  
ಪುಟ್ಟ ಕಂಗಳಿಗೆ 
ಕಾಣೋದೆಲ್ಲ ಆಟದ ಬಯಲು 
ಬಾಲ್ಯಕ್ಕಿಷ್ಟೇ ಗೊತ್ತು .. 

ಗೊತ್ತಿಲ್ಲ ಸಮಾಜ 
ಅದಕ್ಕೊಂದಿಷ್ಟು ಕಟ್ಟು ಪಾಡು .. 
ಪುಟ್ಟ ಗುಲಾಬಿ  ತುಟಿಗಳಲಿ 
ಹಾಲುಗಲ್ಲದ ತೊದಲ ಹಾಡು 
ಬಾಲ್ಯಕ್ಕಿಷ್ಟೇ ಗೊತ್ತು .. 




ರೂಪದರ್ಶಿ: ಪಾರ್ಥ , ಫೋಟೊ : ಸುಷಮಾ ಭಟ್ 

ತಿಳಿದಿಲ್ಲ ಅನಾಚಾರ .. 
ಅದರದಿಷ್ಟು ಲೆಕ್ಕಾಚಾರ .. 
ಬೊಗಸೆ ಕೈಗಳಲಿ 
ಹಿಡಿದ ಸ್ಲೇಟು ಬಳಪದ ಚಿತ್ತಾರ 
ಬಾಲ್ಯಕ್ಕ್ಕಿಷ್ಟೇ ಗೊತ್ತು ... 

Friday, 15 February 2013

ಪ್ರೀತಿಯೆಂದರೆ ಏನೆಲ್ಲಾ...



 ಪ್ರೀತಿಯೆಂದರೆ ಏನೆಲ್ಲಾ... 
ಪ್ರೀತಿಯೆಂದರೆ ಏನೂ ಇಲ್ಲಾ ...
ಪ್ರೀತಿಯೋಳಗಡೆ ಏನಿಲ್ಲ..??
ಪ್ರೀತಿಯಿಂದಲೇ ಎಲ್ಲ ...
ಈ ಪ್ರೀತಿಗೆ ಹುಡುಕಿದಷ್ಟೂ ಹೊಸ ಅರ್ಥಗಳಲ್ಲ..??

ದೇವನೊಬ್ಬ ನಾಮ ಹಲವಂತೆ. ಪ್ರೀತಿನೂ ದೇವರು ಅಂತಾರೆ. ಅಂದರೆ ಪ್ರೀತಿ ದೇವರಿಗೆ ಒಂದು ಹೆಸರಂತೆ. ಆದರೆ ಒಬ್ಬಳನ್ನು/ ಒಬ್ಬನನ್ನು ಮರೆತು ಇನ್ಯಾರದ್ದೋ ಪ್ರೀತಿಯೆಡೆಗೆ ಆಕರ್ಷಿತರಾಗುತ್ತಾರೆ ಅಂತಾದ್ರೆ ಮನುಷ್ಯನಿಗೆ ದೇವರೂ ಅವಾಗಾವಾಗ ಬದಲಾಗುತ್ತಿರುತ್ತಾನ? 

ಪ್ರೀತಿ ,ಸ್ನೇಹ , ಶಾಂತಿ ಶಬ್ದಗಳನ್ನು ಸೋದರಿಕೆಯ ಸಂಬಂಧದಂತೆ ಬಳಸುತ್ತಾರೆ .ಆದರೂ ಪ್ರೀತಿಗಾಗಿ ಯುದ್ಧಗಳಾಗುತ್ತವೆ.  ಶಾಂತಿ ಕದಡುತ್ತವೆ. ರಕ್ತಪಾತಗಳಾಗುತ್ತವೆ . ಪ್ರೀತಿ ಸಂಬಂಧಗಳನ್ನು ಬೆಸೆಯುತ್ತದೆ ಅಂತಾರೆ ಅದರೂ ರಕ್ತ ಸಂಬಂಧಗಳನ್ನು ಕಳೆದುಕೊಳ್ಳುತ್ತಾರೆ. 

ಕಾಮವೆಂಬುದು ಪ್ರೀತಿಯ ಉತ್ತುಂಗತೆ ಅಂತಾರೆ. ಆದರೆ ಅತ್ಯಾಚಾರದಂತಹ ಕೃತ್ಯಗಳಲ್ಲಿ ಪ್ರೀತಿಯ ಲವಲೇಶವೂ ಕಾಣದಿರುವಾಗ ಉತ್ತುಂಗತೆಯ ಪ್ರಶ್ನೆ ಎಲ್ಲಿ ಬಂತು ? ಅಂತಹ ಮೃಗೀಯ ಕೃತ್ಯಗಳಲ್ಲಿ ದೈವಿಕತೆಯನ್ನು ಹುಡುಕಲು ಸಾಧ್ಯವಾ? ಪ್ರೀತಿ ದೈವವೆಂದರೆ ನಂಬಬೇಕಾ ? 
 
ಪ್ರೀತಿ ಸರ್ವವ್ಯಾಪಿ ಅಂತಾರೆ. ಆದ್ರೆ ಪ್ರೀತಿಗೆ ಚೌಕಟ್ಟು ಹಾಕಿಟ್ಟುಕೊಳ್ಳೋಕೆ  ನೋಡ್ತಾರೆ.

ಪ್ರೀತಿನಾ ಪ್ರೀತಿಯಿಂದ ಪ್ರೀತ್ಸಿ ಅನ್ನೋರೆಲ್ಲ ಆಮೇಲೆ ಪ್ರೀತಿನಾ ಅಧಿಕಾರದಿಂದ ಪ್ರೀತಿಸುತ್ತಾರೆ. 

ನಿಸ್ವಾರ್ಥ ಪ್ರೀತಿ ಅನ್ನೋರೆಲ್ಲ ಪ್ರೀತಿಸುತ್ತಾ ಸ್ವಾರ್ಥಿಗಳಾಗಿ ಬಿಡ್ತಾರೆ.

ಪ್ರೀತಿ ಪವಿತ್ರ .. ಪ್ರೀತಿ ಪಾವನ ಅಂತಾರೆ.. ಆದರೂ ಪಾರ್ಕ್ ಗಳಲ್ಲಿ ಅಸಭ್ಯವಾಗಿ ಪ್ರೀತಿಯ ಮಾನ ತೆಗೆಯುತ್ತಾರೆ.


ನಿನ್ನೆ ತಾನೇ ಪ್ರೀತಿಯ ಹಬ್ಬ ಮುಗಿದಿದೆ. ಪ್ರೀತಿಸುವವರಿಗೆ ಪ್ರತಿದಿನವೂ ಪ್ರೇಮಿಗಳ ದಿನವೇ ಎಂದರೂ ಅದೇನೋ ಒಂದು ಸಣ್ಣ ಆನಂದ ಎಲ್ಲಿಂದಲೋ ಮೈ ತಾಕಿರುತ್ತದೆ ಫೆಬ್ರವರಿ ೧೪ ರಂದು. ಇದು ನಮ್ಮ ಆಚರಣೆಯಲ್ಲ , ಇದು ಸರಿಯಲ್ಲ ಎಂದು ಯಾರೇನೇ , ಎಷ್ಟೇ ಬಾಯಿ ಬಡಿದು ಕೊಂಡರೂ ಪ್ರೀತಿಯ ಸಂಭ್ರಮಕ್ಕೇನೂ ಕೊರತೆ ಇಲ್ಲ. ಧರಿಸುವ ಉಡುಪುಗಳ ಬಣ್ಣಗಳಿಗೆಲ್ಲ ಒಂದೊಂದು ಅರ್ಥ.ಅಲ್ಲಲ್ಲೇ ರೇಗಿಸುವ ಗೆಳತಿಯರ ಗುಂಪು. ಅದೆಷ್ಟು ಸಂಭ್ರಮದ ಹೊಳಪು ಕಣ್ಣಲ್ಲಿ. ಮನದಲ್ಲಿ , ಪ್ರೀತಿ ಸಿಕ್ಕ ಖುಷಿ , ಪ್ರೀತಿ ಉಳಿದ ಖುಷಿ , ಮುನಿಸು ಮರೆತು ಒಂದಾದ ಖುಷಿ. ಅಬ್ಬಾ ..!! ಪ್ರೀತಿಯೆಂದರೇ ಖುಷಿ .. 

ನಿನ್ನೆ ಎಂದಿನಂತೆ ಆಫೀಸ್ ಮುಗಿದು ಪಿ ಜಿ ಸೇರಿದರೆ ಒಬ್ಬೊಬ್ಬರದು ಒಂದೊಂದು ಭಾವ, ಸಂತೋಷ , ದುಃಖ ಎಲ್ಲವು ಸಿಕ್ಕಿದ್ದು. ಅವನ ಮೊದಲ ಉಡುಗೊರೆ ಇದು ಎಂದು ಕಣ್ಣು ಮಿಟುಕಿಸಿದ್ದು ಒಬ್ಬಳಾದರೆ, stupid ನೋಡು ನಂಗಿಷ್ಟ ಆಗದೆ ಇರೋ ಕಲರ್ ಡ್ರೆಸ್ ಕೊಟ್ಟಿದಾನೆ ಕೋತಿ ಅಂತ ಪ್ರೀತಿಯ ಕಂಪ್ಲೇಂಟ್ ಇನ್ನೊಬ್ಬಳ ಕಡೆಯಿಂದ. ಅದರೂ ಅವನಿಗಾಗಿ ಇದನ್ನ ಹಾಕೊಳ್ತೀನಿ.ಅವನಿಗಾಗಿ ಬದಲಾಗೊದ್ರಲ್ಲೇ ಖುಷಿ ಇದೆ ಅಂತ ಡ್ರೆಸ್ ಹಾಕಿಕೊಂಡು ಕನ್ನಡಿ ಮುಂದೆ..:)  break up  ಅಂತ mood  upset  ಆಗಿ ಕಣ್ಣಲ್ಲಿ ನೀರು ತುಂಬಿ ಕೊಂಡವಳೊಬ್ಬಳಾದರೆ, ಅಪ್ಪ ಅಮ್ಮನ ಒಪ್ಪಿಗೆಯ ಮುದ್ರೆ ಬಿತ್ತು ಕಣೆ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಅಪ್ಪಿಕೊಂಡಿದ್ದು ಇನ್ನೊಬ್ಬಳು. " ನೀರು ತುಂಬಿರುವ ಎಲ್ಲಾ ಕಣ್ಣುಗಳೂ ಪ್ರೀತಿ ಮುರಿದ ದುಃಖದಲ್ಲಿವೆ ಎಂದು ಭಾವಿಸಬೇಡ ; ಆ ಪ್ರೀತಿ ಸಿಕ್ಕಿರಲೂ ಬಹುದು " ಎಂದು ಎಲ್ಲೋ ಓದಿದ ನೆನಪು ಬಂತು. ದೂರದಲ್ಲಿನ ಪತಿ ಕಳಿಸಿದ ಟೆಡ್ಡಿ , ಚಾಕೊಲೇಟ್  ಖುಷಿ ಕೊಟ್ಟರೂ ಅವರು ಇದ್ದರೆ ಜೊತೆಗೆ it  will be more  romantic  ಎನ್ನುತ್ತಾ ಮಿಸ್ ಮಾಡಿಕೊಳ್ಳುತ್ತಿದವಳು ಇನ್ನೊಬ್ಬಳು. ಅವನಿಗೆ ಓಕೆ ಅಂದೆ, ಪಾಪಿ ಕೊನೆಗೂ ಸೋಲೋ ಹಾಗೆ ಮಾಡಿಬಿಟ್ಟ , ಛೇ ನಂಗೆ ಇದು ಬೇಡವಾಗಿತ್ತು ಕಣೆ ಅಂತಾಳೆ ಮತ್ತೊಬ್ಬ ಗೆಳತಿ. ಬೇಡವೆಂದರೆ ಬಿಡೆ ಅಂದರೆ , ಹೋಗೆ ನೀ ಪ್ರೀತಿ ಮಾಡು ಗೊತ್ತಾಗತ್ತೆ ಅಂತ ಗುರ್ ಅನ್ನೋದು ಬೇರೆ. ಇನ್ನು single  ಆಗಿದ್ದವರಿಗಂತೂ ಎಷ್ಟು proposals  ಬಂತು ?? ಯಾರು rose  ಕೊಟ್ಟಿಲ್ಲವಾ ?? are  you  still single ?? ಅಂತಾ ಕಣ್ಣರಳಿಸುತ್ತಾ questions ಗಳ ಸುರಿಮಳೆ. 

ಲವ್ ಅಂದ್ರೆ ಬರಿ ಹುಡುಗ ಹುಡುಗಿ ನಡುವೆ ಮಾತ್ರಾನ ? ಎಷ್ಟು ಜನ ಅಪ್ಪ ಅಮ್ಮಂಗೆ, freinds  ಗೆ,ಅಣ್ಣ , ಅಕ್ಕ ,ತಮ್ಮ, ತಂಗಿಗೆ wish  ಮಾಡಿದ್ರಿ ಅಂತ ಇನ್ನೊಬ್ಬಳ ಪ್ರಶ್ನೆ. its  all  over  buddy .. cheer up .. ನಾವೆಲ್ಲಾ ಇದೀವಿ. ತಪ್ಪು ಯಾರದೇ ಇದ್ರೂ ಆ ಪ್ರೀತಿ ಉಳಿಸಿಕೊಳ್ಳೋಕೆ ಇಬ್ಬರಿಂದಾನು ಆಗಿಲ್ಲ ಅಂದಮೇಲೆ ಕಣ್ಣೀರು ಹಾಕೊದೇಕೆ ಎಂಬ ಸಾಂತ್ವನದ ಮಾತುಗಳು. ಒಂದೇ ದಿನದಲ್ಲಿ ಎಷ್ಟೆಲ್ಲಾ ಭಾವ ಭಂಗಿಗಳನ್ನ ನೋಡಿದ್ದು . ಒಂದು colorful  day ಬಣ್ಣ ಬಣ್ಣಗಳಲ್ಲಿ ಮುಗಿದ್ದು ನಿಜ ಎನಿಸಿತು .

Tuesday, 5 February 2013

ಅಕ್ಕಾ ಎಂಬ ಅಮ್ಮನ ಬಗೆಗೊಂಚೂರು....



ತಾಯಿಯ ಬಗೆಗೆ ಎಷ್ಟೆಲ್ಲಾ ಬರೆದರೂ ಮುಗಿಯುವುದಿಲ್ಲ ಯಾವಾಗಲೂ. ಬರೆದಷ್ಟೂ ಅಕ್ಷಯವಾಗುತ್ತಾ ಹೋಗುತ್ತಾಳೆ ಈ ಅಮ್ಮ ಎನ್ನುವವಳು. ಥೇಟ್  ಅಮ್ಮಂತಹುದೇ ಇನ್ನೊಂದು ಜೀವವಿರುತ್ತದೆ . ಅವಳು ಎರಡನೇ ತಾಯಿಯಾಗುತ್ತಾಳೆ, ಗೆಳತಿಯಾಗುತ್ತಾಳೆ, ಒಮ್ಮೊಮ್ಮೆ ವೈರಿ ಎನಿಸಿಬಿಡುತ್ತಾಳೆ, ಮುನಿಸಿಕೊಳ್ಳುತ್ತಾಳೆ, ಮಾತು ಬಿಡುತ್ತಾಳೆ. ಮುದ್ದುಗರೆಯುತ್ತಾಳೆ. ನಮಗಿಂತ ದೊಡ್ಡವಳಾಗಿರುತ್ತಾಳೆ. ಹೌದು ಅವಳು "ಅಕ್ಕ"  ಆಗಿರುತ್ತಾಳೆ. 

ಈ ಅಕ್ಕಂದಿರು ಯಾವಾಗಲೂ ಸಾವಿರಕ್ಕೊಬ್ಬರು  ಎನಿಸಿಬಿಡುತ್ತಾರೆ. ತಂಗಿಯರ ಮೊದಲ ಮಾಡೆಲ್ ಅಕ್ಕಂದಿರೇ ಅನಿಸುತ್ತದೆ. ಅಕ್ಕನನ್ನು ನೋಡುತ್ತಾ ತಂಗಿ ಬೆಳೆಯುತ್ತಾಳೆ. ಹಾಗಾಗಿಯೇ ಇರಬೇಕು "ಹಿರಿಯಕ್ಕನ ಚಾಳಿ ಮನೆ ಮಂದಿಗೆ " ಎಂಬ ಗಾದೆ ಹುಟ್ಟಿಕೊಂಡಿದ್ದು.  ಅಕ್ಕನಂತೆ ಎಲ್ಲವೂ ಬೇಕು. ಅಕ್ಕ ಹೇಗೆ ಮಾಡ್ತಾಳೋ ಹಾಗೆ ತಾನೂ ಮಾಡಬೇಕು. ಅಕ್ಕನಿಗೆ ಏನೇ ತಂದು ಕೊಟ್ಟರೂ ಅದು ತನಗೂ ಬೇಕು. ಅಕ್ಕ ಚೂಡಿ ಹಾಕುವಷ್ಟು ದೊಡ್ಡವಳಾಗಿದ್ದಾಳೆಂದು ಚೂಡಿ ತಂದು ಕೊಟ್ಟರೆ, ತನಗೆ ಚೂಡಿ ಹಾಕಲು ಬರದಿದ್ದರೂ ಚಿಂತೆಯಿಲ್ಲ , ತಂಗಿಗೆ ಅದೂ ಬೇಕು. ತಂಗಿಯ ಈ ತರಹದ ಹಠಗಳಿಂದ ಪಾಪ ಅಕ್ಕ ಎನ್ನುವವಳು ಎಷ್ಟೆಲ್ಲಾ ತ್ಯಾಗ ಮಾಡಬೇಕಾಗುತ್ತದೆ. "ನೀ ದೊಡ್ದವಳಲ್ಲವ ಹೊಂದಿಕೊಂಡು ಹೋಗು" ಎಂದು ಹಿರಿಯರ ಉಪದೇಶ ಬೇರೆ. ಎಲ್ಲದರಲ್ಲೂ ಪಾಲು ಕೊಡಬೇಕಿರುತ್ತದೆ. ಮಾಡದ ತಪ್ಪಿಗಾಗಿ ಅದೆಷ್ಟು ಸಲ ಬೈಸಿಕೊಳ್ಳುತ್ತಾರೋ ಏನೋ. ತಂಗಿಯ ತಪ್ಪಿಗಾಗಿ ಎಷ್ಟೋ ಸಲ ಬೈಸಿಕೊಳ್ಳುತ್ತಾಳೆ. ಹೊಡೆತ ಕೂಡಾ ತಿನ್ನುತ್ತಾಳೆ.

ತಂಗಿಯರು ಸುಮಾರು ಪ್ರಾಥಮಿಕ ಶಿಕ್ಷಣ ಮುಗಿಸಿ , ಹತ್ತನೇ ತರಗತಿಯವರೆಗೆ  ಬರುವವರೆಗೂ ಅಕ್ಕಂದಿರು ತಮ್ಮ ಜೊತೆಗೆ ಸೇರಿಸಿಕೊಳ್ಳುವುದಿಲ್ಲ. ಆಗೆಲ್ಲ ಅಕ್ಕ ವೈರಿಯಂತೆ ಕಾಣುತ್ತಾಳೆನೀ ಸಣ್ಣವಳು ನೀ ಬೇಡ ಅಂತ. ಅಮ್ಮಂದಿರು ಅವಳನ್ನೂ ಕರೆದುಕೊಂಡು ಹೋಗೆ ಅಂದ್ರು ಕೂಡಾ "ಹೋಗಮ್ಮ ಅವಳು ನನ್ನ ಜೊತೆ ಬರುವುದು ಬೇಡ" ಅಂತ ಹೇಳಿ ಹೊರಟು ಬಿಡುತ್ತಾರೆ. . ಅಕ್ಕನ ಬಗ್ಗೆ ಚಾಡಿ ಹೇಳಿ ಅಕ್ಕನಿಗೆ ಬೈಸುವುದೆಂದರೆ ಒಂಥರಾ ಖುಷಿ ಇರುತ್ತದೆ.ಆ ವಯಸ್ಸಿನಲ್ಲಿ. ಅಕ್ಕ ತಂಗಿಯರ ನಡುವೆ ವಾಕ್ ಯುದ್ದಗಳು ಸಾಮಾನ್ಯ ಅವಾಗ. ಕೆಲವೊಮ್ಮೆ  ಹೊಡೆದಾಟಗಳೂ  ನಡೆಯುತ್ತವೆ.ಅಕ್ಕನಿಗೆ ಸಣ್ಣದಾಗಿದ್ದೋ ಅಥವಾ ಅವಳು ಕಾಲೇಜಿಗೆ ಹಾಕದ ಡ್ರೆಸ್ ಗಳನ್ನೂ ನೀನು ಹಾಕಿಕೊ ಅಂತ ಅಮ್ಮ ಕೊಟ್ಟರೆ  ತಂಗಿಯೆದೆಯಲ್ಲಿ ಸಣ್ಣ ಅಸಮಾಧಾನ. ಅಕ್ಕನಿಗೆ ಒಂದು ಹೊಸ ಡ್ರೆಸ್ ತಂದುಕೊಟ್ಟರೂ ಅಕ್ಕನ ಬಗೆಗೊಂಚೂರು ಅಸೂಯೆ. 
 
ತಂಗಿ ಕಾಲೇಜ್ ಹೋಗುವಷ್ಟು ದೊಡ್ಡವಳಾದ ತಕ್ಷಣ ಅಕ್ಕ ಗೆಳತಿಯಾಗಿ ಬಿಡುತ್ತಾಳೆ. ಬಹುಶಃ ಆವಾಗೊಂದು ಸಣ್ಣ ಮೆಚುರಿಟಿ ಬಂದಿರುತ್ತದೆ ಎಂಬ ಕಾರಣಕ್ಕಿರಬೇಕು. ಅಕ್ಕಂದಿರು ಮೆಚ್ಯೂರ್ಡ್ ಆಗಿರುತ್ತಾರಲ್ಲ. ಈ ತಂಗಿಯರೂ ಅಷ್ಟೇ ಅಲ್ಲಿವರೆಗೂ ಅಕ್ಕನ ಮಾತುಗಳ ವಿರುದ್ಧವೇ ಹೋಗುತ್ತಾ , ಅಕ್ಕ ಹೇಳಿದ್ದನ್ನು ಕೇಳದೆ ಇದ್ದವರು ಅಕ್ಕನ ಮಾತಿಗೆ ಬೆಲೆ ಕೊಡತೊಡಗುತ್ತಾರೆ. ಅಕ್ಕ ಫಸ್ಟ್ ಅಂಡ್ ಬೆಸ್ಟ್ ಫ್ರೆಂಡ್ ಆಗಿಬಿಡುತ್ತಾಳೆ. ಅಕ್ಕಂದಿರಿಗೂ ತಂಗಿಯರು ಗೆಳತಿಯರಾಗುತ್ತಾರೆ. ಗುಟ್ಟಿನ ವಿಷಯಗಳಿಗೆಲ್ಲ ಕಿವಿಯಾಗುತ್ತಾರೆ. ಅಪ್ಪ ಅಮ್ಮಂದಿರೆದುರು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುವಂತಾಗುತ್ತಾರೆ. ಎಗ್ಸಾಮ್ಸ್  ಟೈಮ್ ನಲ್ಲಿ ಅವಳೇ ಗುರು . ಎಷ್ಟೋ ಪ್ರಾಬ್ಲೆಮ್ ಗಳಿಗೆಲ್ಲ ಸೊಲ್ಯುಷನ್ ಅವಳು. ಕಾಲೇಜಿನಲ್ಲಿನ ಎಲ್ಲ ವಿಷಯಗಳನ್ನು ಅವಳ ಕಿವಿಗೆ ಹಾಕಲೇಬೇಕು. ಕೆಲವೊಂದು ವಿಷಯಗಳನ್ನು ಹಗುರವಾಗಿ ತೆಗೆದುಕೊಂಡು ನಕ್ಕು ಬಿಡುವ ಅಕ್ಕಂದಿರು, ಕೆಲವೊಮ್ಮೆ ಥೇಟ್ ಅಮ್ಮನ ಚಾರ್ಜ್  ತೆಗೆದುಕೊಂಡು ಬೈಯ್ಯುತ್ತಾರೆ. ಕಾರಣ ಇಷ್ಟೇ ತಂಗಿ ಆಗಷ್ಟೇ ಕಣ್ಣು ಬಿಡುತ್ತಿರುವ ವಯಸ್ಸನ್ನು ಅವರು ದಾಟಿ ಬಂದಿರುತ್ತಾರೆ. ಅನುಭವದ ಆಧಾರದಲ್ಲಿ ಬುದ್ದಿ ಹೇಳುತಾರೆ. ಎಷ್ಟೋ ಸಲ ನನಗಾದಂತೆ ತಂಗಿಗೆ ಆಗಬಾರದು ಎಂಬ ಕಳಕಳಿ ಇರುತ್ತದೆ. 

ಹೀಗೆಯೇ ಅಕ್ಕ ಗೆಳತಿಯಾಗಿ , ಅಮ್ಮನಾಗಿರುವಾಗ, ಅಕ್ಕನ ಮದುವೆಯ ಮಾತುಗಳು ಶುರು. ಮನೆಯಲ್ಲಿ ಮದುವೆ ಸಂಭ್ರವೇನೋ ನಿಜ. ಆದರೆ  ಮಾತು ಮಾತಿಗೂ ಅಕ್ಕ ಅಕ್ಕ ಎಂದು ಕರೆಯುತ್ತಿರುವಾಗ ಇನ್ನು ಅವಳು ಇಲ್ಲಿರುವುದಿಲ್ಲ ಎನ್ನುವ ಬೇಸರ ಶುರು. ತನ್ನೊಂದಿಗೆ ಮಾತು ಸ್ವಲ್ಪ ಕಡಿಮೆ ಮಾಡಿ ಮದುವೆಯಾಗುವವನ ಜೊತೆ ಜಾಸ್ತಿ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಭಾವನಾಗಿ ಬರುವವನ ಮೇಲೆ ಅಸೂಯೆ, ತನ್ನ ಜಾಗವನ್ನು ಇಂಚಿಂಚಾಗಿ ಆಕ್ರಮಿಸಿಕೊಳ್ಳುವನನ ಬಗೆಗೆ ಈರ್ಷ್ಯೆ. ಇಷ್ಟಿದ್ದರೂ ಅಕ್ಕನ ಮದುವೆಯಲ್ಲಿ ಹಿರೋಯಿನ್ ಗಳಂತೆ ಮೆರೆದಾಟ. ಆಮೇಲೆ  ತಬ್ಬಿ ಅತ್ತು  ಕಳಿಸಿಕೊಡುವಾಗ ನೋವಾದರೂ ಹೊಸ ಮನೆಯಲ್ಲಿ ಸಂತೋಷವಾಗಿರುತ್ತಾಳಲ್ಲ ಎನ್ನುವ ಭರವಸೆ. ಮದುವೆಯಾದ ಅಕ್ಕ ಮನೆಗೆ ಬರುತ್ತಾಳೆಂದರೆ ಮತ್ತೆ ಮನೆಯಲ್ಲಿ ಸಂಭ್ರಮ. ಅವತ್ತು ರಾತ್ರಿ ಅಕ್ಕನ ಪಕ್ಕದಲ್ಲೇ ಹಾಸಿಗೆ ಹಾಸಿಕೊಂಡು ಗುಟ್ಟಾಗಿ ಪಿಸು ಪಿಸು ಮಾತಾಡುತ್ತಾ, ಸಣ್ಣಗೆ ಮುಸಿ ಮುಸಿ  ನಗುತ್ತಾ , ಅಮ್ಮನೋ, ಅಪ್ಪನೋ , " ಸಾಕು ಮಲಗ್ರೆ ಲೇಟ್ ಆಯ್ತು . ನಾಳೇನು ದಿನ ಇದೆ " ಇದೆ ಎಂದಾಗ ಒಲ್ಲದ ಮನಸ್ಸಿಂದ ಮುಸುಕೆಳೆದುಕೊಳ್ಳುವ ಮಜವೇ ಬೇರೆ.

ಚಾಂದೊಂಕಾ ತಾರೊಂಕಾ ಸಬ್ ಕಾ ಕೆಹನಾ ಹೇ
ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೇ
"ಸಾರೀ ಊಮಾರ್ ಹಮೆ ಸಂಘ್ ರೆಹನಾ ಹೇ" ಅಂತ ಹಾಡುವುದರಲ್ಲೇ ಏನೋ ಖುಷಿಯಿದೆ.

(ದಿನಾಂಕ ೨೯.೦೧.೨೦೧೩ ರ ಲವಲವಿಕೆಯಲ್ಲಿ ಪ್ರಕಟವಾಗಿತ್ತು )