Tuesday, 20 August 2013

ಏನೆಂದು ಹೆಸರಿಡಲಿ ...


"ಅಲ್ಲ ಕಣೋ ಏಪ್ರಿಲ್  ಫ್ಹಸ್ಟ್  ದಿನ ಪ್ರೊಪೋಸ್ ಮಾಡಿದ್ದರೆ,ರಿಜೆಕ್ಟ್ ಮಾಡಿದ್ರೆ ಎಪ್ರಿಲ್ ಫೂಲ್ ಅಂತ ಹೇಳಿ,ದೂರದಿಂದಲೇ ನನ್ನ ಹುಡುಗಿ ಅಂತ ನೋಡ್ಕೊಂಡು ಮನಸಲ್ಲೇ ಖುಷಿ ಪಡ್ತಾ ಇರಬಹುದಿತ್ತಾ.. ಅದು ಬಿಟ್ಟು  ಹೋಗಿ ಹೋಗಿ ರಕ್ಷಾಬಂಧನದ ಹಿಂದಿನ ದಿನ ಪ್ರಪೋಸ್ ಮಾಡಿದೀಯಲ್ಲ ನಾಳೆ ಬಂದು ಹುಡುಗಿ ರಾಖಿ ಕಟ್ಟಿದರೆ ಏನ್ಲಾ ಮಾಡ್ತೀಯಾ" ಅಂತ ರೇಗಿಸಿದ್ದ ಗೆಳೆಯನಿಗೆ ಪುಸ್ತಕದಲ್ಲಿ ಹೊಡೆದು ಆಚೆಗಟ್ಟಿ ಮಲಗಿದ್ದ ಆ ಹುಡುಗ. ಆತನ  ಮನಸಲ್ಲಿದಿದ್ದನ್ನೇ ಗೆಳೆಯ  ಬಾಯಿ ಬಿಟ್ಟು ಹೇಳಿದ್ದ. ಆದ್ರೆ ಅದನ್ನ ಒಪ್ಪಿಕೊಳ್ಳುವ ಮನಸ್ಸು ಇವನದಾಗಿರಲಿಲ್ಲ . ಅದಕ್ಕೆ ಗೆಳೆಯನ್ನು ಹೊರ ಹಾಕಿದವನ ಮನದ ತುಂಬಾ ಆಕೆಯೇ ತುಂಬಿಕೊಂಡಿದ್ದಳು. ಕಲ್ಪನೆಯಲ್ಲೇ ಮನದರಸಿಯ ಜೊತೆಗೆ ಮಾತಿಗಿಳಿದಿದ್ದ ಹುಡುಗ... 

ನಿಜಕ್ಕೂ ಅವನಂದಂತೆ ನೀನು ಮಾಡುತ್ತೀಯಾ ? ನಿನ್ನ ಬಗ್ಗೆ ನಂಬಿಕೆಯೂ ಇಲ್ಲ ಬಿಡು, ನೀ ಹಾಗೇ ಮಾಡಿದರೂ ಮಾಡುವವಳೇ.  ನಿನ್ನ ಬಗ್ಗೆ ಏನು ಹೇಳಲಿ ಹೇಳು ಮಹರಾಯ್ತಿ. ನಿನ್ನ ಆ ನಗು ಎಲ್ಲಾನೂ  ಮರೆಸಿಬಿಡುತ್ತೆ. ಮಾತನ್ನೂ  ಕೂಡ.ಅದಿಕ್ಕೆ ನಿನ್ನ ಮುಂದೆ ಮೌನಿ ನಾನು.ನಿನ್ನ ಮಾತು, ಮೌನ, ಸಿಟ್ಟು, ಆ ಅಳು ಎಲ್ಲವೂ ಇಷ್ಟ ಗೊತ್ತಾ. ಇದನ್ನ ನಿನ್ನೆದುರಿಗೆ ಹೇಳಿದರೆ ಒದೆ ಗ್ಯಾರೆಂಟಿ. ಅದೇನೊ ನಿನ್ನನ್ನ ಗೆಳತಿ ಅಂತಾ ಕಲ್ಪಿಸಿಕೊಳ್ಳಲಾರೆ. ಪ್ರೇಮಿಯಾಗಿಯೇ ನನ್ನೆದೆಯೊಳಗೆ ಇಳಿದವಳು ನೀನು. ಹಾಗಾಗಿಯೆ ನಿನ್ನ ಜೊತೆ ಇನ್ಯಾರನ್ನು ಕಂಡರೂ ಉರಿ ನನಗೆ. ಅವತ್ತು  ಮಧು ಜೊತೆ ಮಾತನಾಡುತ್ತಾ ಬರುತ್ತಿದ್ದ ನಿನ್ನ ನೊಡುತ್ತಿದ್ದರೆ ನನಗೆಷ್ಟು ಉರಿಯುತ್ತಿತ್ತು ಗೊತ್ತಾ. ಅವನನ್ನು ಆ ಕಡೆ ಕಳುಹಿಸಿ ನೇರ ನನ್ನೆದುರಿಗೆ ಬಂದು ಹಾಯ್ ಎಂದವಳಿಗೆ ಬಿಗಿಯಾಗಿಯೇ ಉತ್ತರಿಸಿದ್ದೆ. ಆದರೆ ನನ್ನ ಕಣ್ಣಲ್ಲಿನ, ನನ್ನ ಮಾತಲ್ಲಿನ ಅಹಸನೆಯನ್ನು ಗುರುತಿಸಿದವಳಂತೆ, 

ಕಣ್ಣಿಗೆ ಕಂಡದ್ದೆಲ್ಲ ನಿಜವಾಗಿರಲೇ 
ಬೇಕಿಲ್ಲ.. 
ಕೃಷ್ಣನ ಪಕ್ಕ ನಿಂತ ಮಾತ್ರಕ್ಕೆ 
ರಾಧೆ ರುಕ್ಮಿಣಿ ಭಾಮೆಯರೇ ಆಗಬೇಕೆಂದೇನೂ ಇಲ್ಲ 
ಅಲ್ಲೊಬ್ಬ ಕೃಷ್ಣೇಯೂ ಇರಬಹುದಲ್ಲ ... !!

ಎಂದು ಹೇಳಿ ತಲೆ ಮೇಲೆ ನೋಟ್ ಬುಕ್ ನಿಂದ ಹೊಡೆದು ಹೋದಾಗ ಸ್ವಲ್ಪ ಪಪ್ಪಿ ಶೇಮ್ ಆಗಿದ್ದು ನಿಜ. ಆದರೆ ನನ್ನ ಮನಸ್ಸನ್ನ ಸ್ವಲ್ಪವಾದರೂ ನಿನಗೆ ತಿಳಿಸಿದ್ದೇನೆ, ಮತ್ತೂ ಅದು ನಿನಗೆ ಅರ್ಥವಾಗಿದೆ ಎನ್ನುವ ಸಣ್ಣ ಖುಷಿ ನನ್ನದಾಗಿತ್ತು. ನಿನ್ನ ಬಗ್ಗೆ ಅದ್ಯಾಕೆ ಅಷ್ಟು ಕಾಳಜಿ ಗೊತ್ತಿಲ್ಲ ನನಗೆ. ನಿನಗೊಂದು ಸಣ್ಣ ನೊವಾದರೂ ತಡೆಯಲ್ಲ ಜೀವ. ನಿನಗೇನು ಗೊತ್ತು ಕಷ್ಟ. ಆದರೂ ನನಗೆ ಜೀವ ಹಿಂಡುವಷ್ಟು ಕಷ್ಟ ಕೊಡುತ್ತೀಯ."ಅಕಸ್ಮಾತ್ ನಾನು ಸತ್ತರೆ... " ಅಂತ ಅವತ್ತು ನೀನು ಅಂದಾಗ ಅದ್ಯಾವ ಮಾಯದ ಸಿಟ್ಟೊ ಗೊತ್ತಿಲ್ಲ. ಸಡನ್ನಾಗಿ ಬಾಯಿ ಮೇಲೆ ಹೊಡೆದು ಬಿಟ್ಟಿದ್ದೆ. ತುಟಿಯೊಡೆದು ರಕ್ತ ಬಂದಿತ್ತು ನಿನಗೆ."ಅಯ್ಯೊ ಸತ್ತರೆ ಅಂತಾ ಹೆಳಿದ್ದಿಷ್ಟೆ ಕಣೊ, ನಿನ್ನ ಏಟಿಗೆ ಅನ್ಯಾಯವಾಗಿ ಕೊಲೆಯಾಗಿಬಿಡುತ್ತಿದ್ದೆನಲ್ಲೊ" ಅಂತಾ ನೀನು ಹೇಳಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು.ನಿನ್ನ ಸಮಾಧಾನಿಸುವ ಬಗೆ ತಿಳಿದಿರಲಿಲ್ಲ. ನೀ ಅದನ್ನ ಬಯಸೋದು ಇಲ್ಲ ಅಂತಾ ಗೊತ್ತಿತ್ತು.ಮರುದಿನ ಎಲ್ಲರಂತೆಯೆ ಕಾಲೇಜ್ ಗೆ ಬಂದವಳು, ಕಾಲೆಳೆಯುತ್ತಿದ್ದವರಿಗೆಲ್ಲ ಹಾಗೆಯೇ ಉತ್ತರಿಸುತ್ತಾ, ಸಂಜೆ ನನ್ನ ಬಳಿ ಬಂದು ನೋಡು ನೀ ಮಾಡಿದ ಗಾಯ, ಎಷ್ಟು ಎಂಜಾಯ್ ಮಾಡಿದೆ ಗೊತ್ತಾ ಅಂದಾಗ ನಗು ಬಂತು.ಇಷ್ಟೆಲ್ಲ ಆದರೂ ಪ್ರೀತಿಯ ನಿವೇದನೆಗೆ ಮಾತ್ರ ಅವ್ಯಕ್ತ ಭಯ. ಕೊನೆಗೂ ಇವತ್ತು ನಿಲ್ಲದ ಮನಸ್ಸನ್ನು ಹತೊಟಿಗೆ ತರದೆ ನಿನ್ನ ಮುಂದೆ ಎಲ್ಲವನ್ನೂ ಅರುಹಿ ಬಿಟ್ಟಿದ್ದೆ. ನೀನೋ ಮಹಾನ್ ಸೊಕ್ಕಿನಿಂದ ನಾಳೆ ಹೆಳ್ತೀನಿ ಎಂದು ಮಾಯವಾದೆ. ನಾಳೆ ರಕ್ಷಾಬಂಧನ ಎಂದು ಅರಿವಾಗಿದ್ದು ಆಮೇಲೆ. ನೊಡು ದಯವಿಟ್ಟು ನಾಳೆ ಆಟ ಆಡಬೇಡ. ನನಗೆ ಗೊತ್ತು ನನ್ನ ಪ್ರೀತಿಯನ್ನು ಸಿರಿಯಸ್ ಆಗಿ ನೀ ಒಪ್ಪಿಕೊಂಡರೂ ನಿನ್ನ ಪ್ರೀತಿಯಲ್ಲಿ ಸಿರಿಯಸ್ನೆಸ್ ಇರಲಾರದು.ಮಗುವಂತೆಯೆ ನಿನ್ನ ಪ್ರೀತಿ. ಸಂಭಾಳಿಸುವುದು ಕಷ್ಟ. ಆದರೂ ನಿನ್ನ ಸಂಭಾಳಿಸಬಲ್ಲೆ ಕಣೇ...


ಹೀಗೆಯೇ ಯೊಚಿಸುತ್ತಾ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಹೊರಳಿದ್ದ ಹುಡುಗನ ಕಣ್ಣು ಕೆಂಪಾಗಿತ್ತು.ಹೃದಯ ಬಡಿತ ಪಕ್ಕದಲ್ಲಿ ಕುಳಿತವರಿಗೂ ಕೇಳಿಸುವಂತಿತ್ತು.ಅವನ ಮುದ್ದು ಹುಡುಗಿ ಮಾತ್ರ ಯಾವುದೇ ಬದಲಾವಣೆಗಳಿಲ್ಲದೆ ಕೈ ಲ್ಲಿ ಒಂದು ಪುಟ್ಟ ಬಾಕ್ಸ್ ಕೊಟ್ಟು ನಡೆದಿದ್ದಳು. ಓಪನ್ ಮಾಡಿ ನೋಡಿದವನಿಗೆ ಜಗವೆಲ್ಲ ಸ್ತಬ್ಧವೆನಿಸಿತ್ತು .ಅದರಲ್ಲಿ ಚಂದದೊಂದು ರಾಖಿ ನಗುತ್ತಿತ್ತು. ಕಿವಿಗೆ ಕೇಳುತ್ತಿದ್ದುದು ಆಕೆಯ ಗೆಜ್ಜೆಯ ದನಿಯೊಂದೇ. ಆಕೆ ವಾಪಸ್ ಬಂದವಳು ಇದು ನಿನಗೆ, ಅದು ನಿನಗಾಗಿ ಅಲ್ಲ. ಸಾರಿ ಕಣೊ ಎಂದು ಬಂದ ವೇಗದಲ್ಲೆ ಬೇರೆ ಬಾಕ್ಸ್ ಒಂದನ್ನು ಇವನ ಕೈಗಿಟ್ಟು ಹೋದಳು. ಹೋದ ಜೀವ ವಾಪಸ್ ಬಂದಂತಾದಾಗ ಹುಡುಗನ ಕಣ್ಣಲ್ಲಿ ಯುದ್ಧ ಗೆದ್ದ ಸಂಭ್ರಮ.


ನಿಧಾನವಾಗಿ ಒಪನ್ ಮಾಡಿದವನಿಗೆ ಕಂಡದ್ದು ಎರಡೆಳೆ ಕರಿಮಣಿಯ ಮಧ್ಯ ಜೊಡಿಸಿದ್ದ ಪುಟ್ಟ ತಾಳಿಯಂತಹ ಪದಕ. ಜೊತೆಯಲ್ಲೆ "ರಾಖಿ ಕಟ್ಟಿಯೇ ರಕ್ಷಣೆ ಮಾಡಬೇಕಿಲ್ಲ, ಇದನ್ನ ಕಟ್ಟಿದ್ರೂ ರಕ್ಷಣೆ ಮಾಡಬೇಕಾಗತ್ತೆ. ಲವ್ ಯು ಕಣೊ ಗೂಬೆ" ಎಂದು ಬರೆದ ಮುದ್ದಾದ ಅಕ್ಷರಗಳು. ನಮ್ಮದೆನ್ನುವ ಈ ಪ್ರೀತಿಯಲ್ಲಿ ತನಗಿಂತಲೂ ಗಟ್ಟಿಯಾದ ಕನಸು ಈ ಹುಡುಗಿಯದು ಎಂದುಕೊಂಡವನಿಗೆ ಹೆಮ್ಮೆಯಾಗಿತ್ತು.


ಹೊಸ ಕನಸೊಂದು ಹುಡುಗನ ಖುಷಿಯ ಜೋಳಿಗೆ ತುಂಬಿತ್ತು.

Friday, 9 August 2013

ನಲ್ಲ ಬರುವನಂತೆ ..

Photo by : Dinesh Maneer
http://www.dineshmaneer.com/




ಭಾವಗಳೂ ಬದಲಾಗುತ್ತವೆ .. 
ಸಂಜೆ ಬಾನಂಚಲ್ಲಿ 
ರಂಗು ಬದಲಾದಂತೆ ... 
ಮನದ ಮನೆಯಲ್ಲಿ 
ಅದಾಗಲೇ ಸಡಗರ ... 
ತಂಗಾಳಿ ಹೊತ್ತು ತಂದ ಸುದ್ದಿ .. 
ನಲ್ಲ ಬರುವನಂತೆ .. 


ಶಕ್ಕೊಪ್ಪಿಸಬೇಕು ನಾ 
ನನ್ನೆಲ್ಲ ಭಾವಗಳ ಪಿಸುನುಡಿಯಲ್ಲಿ 
ನಿನಗೆ ಮಾತ್ರ ಕೇಳುವಂತೆ 
ನಿನ್ನ ಬಿಸಿಯಪ್ಪುಗೆಯಲ್ಲಿ ... 
ಗಡಿಯಾರದ ಮುಳ್ಳುಗಳದೂ 
ಮುಂದೋಡಲು ಮುಷ್ಕರ 
ನೀ ಬರುವ ಹೊತ್ತಲ್ಲಿ ..


ನಾ ನನ್ನೊಳಗೆ ನಗುತಿರಲು 
ನಿನ್ನ ಪ್ರತಿಬಿಂಬ ಕಾಣುವಾಸೆ 
ಹೊರನೆಟ್ಟ ಕಂಗಳಲಿ .. 
ಚಡಪಡಿಕೆಯ ಮನಸ್ಸು 
ಕಾಯುವಿಕೆಯ ಮುನಿಸು .. 
ನಿನ್ನ ಕಂಡಾಗ 
ಮುಗುಳು ನಗೆಯಾಗಿ 
ಬದಲಾಗುವದು ತುಟಿಯಂಚಲ್ಲಿ .


Monday, 15 July 2013

"ಜೀವಂತು ಶರದಾಂ ಶತಮ್ "




"ಆತ್ಮ ಬಂಧು"   ಈ ಶಬ್ದ ಕೇಳಿದರೆ ಅದ್ಯಾಕೋ ನಿನ್ನ ಹೆಸರು ನೆನಪಾಗಿ ಬಿಡುತ್ತೆ. ದುಃಖವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಆದರೂ ಕಡಿಮೆ ಮಾಡಿಕೊಳ್ಳಬೇಕು ಎನಿಸಿದರೆ ನಿನ್ನ ನೆನಪಾಗಿಬಿಡುತ್ತೆ. ಯಾವುದೋ ಒಂದು ಮೂಡ್ ನಿಂದ ಹೊರಬರಬೇಕು ಆಗಲೂ ನಿನ್ನದೇ ನೆನಪು. ಸುಮ್ನೆ ಹರಟಬೇಕು, ಗಟ್ಟಿಯಾಗಿ ನಗಬೇಕು ಕಣ್ಣಲ್ಲಿ ನೀರು ಬರುವಷ್ಟು ಎನಿಸಿದರೆ again  ನಿನ್ನದೇ ನೆನಪಪ್ಪಾ.  ನನಗೆ ತುಂಬಾ ಮುದ್ದಿಸಿಕೊಳ್ಳಬೇಕು, ಚಿಕ್ಕಮಗುವಿನಂತೆ ಹಠ ಮಾಡಬೇಕು ಅಂದರೆ ಅದಕ್ಕೆ ನೀನೆ ಬೇಕು. ನಗಿಸಿ ಕಣ್ಣೀರಾಗಿಸಿದವ ನೀನು ಇದುವರೆಗೂ ನಿನ್ನಿಂದಾಗಿ ನನ್ನ ಅಳಿಸಿದವನಲ್ಲ,
ನಿನ್ನ ಫೋನ್ ಎತ್ತಿದ ತಕ್ಷಣ "ಒಪಿ ಸೊಕ್ಕು ಮುದ್ದು ಜಾಣು ಅಂತ ಮಾತಿದ್ದಡ" ಎಂಬ ಮುದ್ದು ಭಾಷೆಯ  ನಿನ್ನ ಮಾತು ಕೇಳಿದರೆ ಸಾಕು ಅದೆಷ್ಟೇ ದುಃಖ, ಟೆನ್ಶನ್ ಲಿ ಕಾಲ್ ಮಾಡಿದ್ದರೂ ಎಲ್ಲವೂ ಖಲ್ಲಾಸ್. ಆಮೇಲೆ ಬಿಡು ಮಾತಿಗಿಂತ ಜಾಸ್ತಿ ನಗುವೇ.. :) 

ಪುಟ್ಟ ಬೊಮ್ಮಟೆ ಪಾಪುವಾಗಿದ್ದಾಗ ನಿನ್ನ ಎತ್ತಿಕೊಂಡ ನೆನಪಿಲ್ಲ. ಕೈ ಹಿಡಿದು ಶಾಲೆಗೇ ಕರೆದುಕೊಂಡು ಹೋದದ್ದು ನೆನಪಿಲ್ಲ. ಹೋಂ ವರ್ಕ್ ಮಾಡಿಕೊಟ್ಟಿಲ್ಲ ಬಿಡು. ಹೈ ಸ್ಕೂಲ್ ನಲ್ಲಿದ್ದಾಗ ನಾ ಬಸ್ ಇಳಿಯುವ ಮುನ್ನ ಕಾದಿದ್ದು, ನಿನ್ನ ಸೈಕಲ್ ಮೇಲೆ ನನ್ನ ಕರೆದುಕೊಂಡು ಬಂದಿದ್ದು ನೆನಪಿದೆ. ಆಮೇಲೆ ನೀ ಕಾಲೇಜ್ ಗೆ ಹೋಗುವಾಗ ನನ್ನ ಕಾಲೇಜ್ ಹತ್ತಿರ ಸಡನ್ ಆಗಿ ಬೈಕ್ ತಂದು ನಿಲ್ಲಿಸಿ ನನ್ನನ್ನು ಕರೆದುಕೊಂಡು ಬಂದಿದ್ದು ನೆನಪಿದೆ. ಎಷ್ಟೋ ಜನ ತಂಗಿಯರನ್ನು ಅವರ ಅಣ್ಣಂದಿರು ಕಾಲೇಜ್ ಗೆ ಡ್ರಾಪ್ , ಪಿಕ್ ಅಪ್ ಮಾಡುವಾಗ, ನನಗೂ ಒಬ್ಬ ಅಣ್ಣನಿರಬೇಕಿತ್ತು ಅಂದುಕೊಳ್ಳುತ್ತಿದ್ದ ನನಗೆ, ತಮ್ಮನಾದವನು ಅಣ್ಣನಿಗಿಂತ ಗ್ರೇಟ್ ಅಂತ ಅವತ್ತು ಅನಿಸಿತ್ತು.  ನನಗೆ ಸೈಕಲ್ ಕಲಿಸಬೇಕೆಂದು ನೀ ಪಟ್ಟ ಪಾಡು  ಇನ್ನೂ ಮರೆತಿಲ್ಲ, ಮತ್ತೂ ನನಗಿನ್ನೂ ಸೈಕಲ್ ಓಡಿಸಲು ಬರುವುದಿಲ್ಲ ಬಿಡು..:) ನಿನಗೂ ಗೊತ್ತು. 

ನೀನು,  ನಿನ್ನೊಡನೆ ವಸಂತ ಇಬ್ಬರಿದ್ದಲ್ಲಿ ಅಲ್ಲಿ ಖುಷಿ ಬಿಟ್ಟರೆ ಬೇರೆಯದಕ್ಕೆ ಜಾಗವೇ ಇಲ್ಲ. ನಿಮ್ಮೊಂದಿಗಿದ್ರೆ  ನಗುವಿಗೆ ಬ್ರೇಕ್ ಇಲ್ಲ. ಮೂವರೂ  ಒಬ್ಬರಿಗೊಬ್ಬರೂ ಮುಖ  ನೋಡಿಕೊಂಡರಂತೂ ಆ ನಗು ನಿಲ್ಲುವುದಿಲ್ಲ. ಅದಕ್ಕೆ ಎಷ್ಟೋ ವಿಚಾರಗಳ discussions ಆಗುವಾಗ  ನಾವೂ  ಮುಖ ನೋಡಿಕೊಳ್ಳುವುದಿಲ್ಲ ...  ಅದರಲ್ಲೂ ದೊಡ್ಡವರ ಎದುರಲ್ಲಿ...:)    " ಬಡಿ ಬಡಿ ಭಟ್ಟನ ಕಂಡರೆ ಈಶ್ವರನ ತಲೆ ಮೇಲಿನ ಬಿಲ್ವ ಪತ್ರೆಯೂ ಹುಬ್ಬು ಹಾರ್ಸಿತ್ತಡ " ಎಂಬ ಒಂದು ಗಾದೆಯನ್ನ ಉಟಕ್ಕೆ ಕುಳಿತಾಗ ನೆನಪಿಸಿಕೊಂಡು ನಕ್ಕಿದ್ದು, ತುತ್ತು ಗಂಟಲು ಸಿಕ್ಕಿಕೊಂಡಿದ್ದು  ನೆನಪಿದೆ. "ಮಾಣಿಕ್ಯ ಮುಕುಟಾಕಾರ ಜಾನುದ್ವಯ  ವಿರಾಜಿತ " ಎಂಬ ಲಲಿತಾ ಸಹಸ್ರನಾಮದ ಶ್ಲೋಕವನ್ನು ಅಪ್ಪ ತಮಾಷೆಯಾಗಿ " ಮಾಣಿಕ್ಯ ಮರ್ಕಟಾಕಾರ ಬಾಲದ್ವಯ  ವಿರಾಜಿತ " ಎಂದು ಬದಲಾಯಿಸಿದ್ದು ನಿಮಗಾಗಿಯೇ, ಬೈಯಿಸಿಕೊಳ್ಳುವುದು ಮತ್ತು ಜಗಳಗಳಲ್ಲಿ ನಾವ್ಯಾವತ್ತು ಒಂದೇ ಪಾರ್ಟಿ ಬಿಡು. ಮೂವರೂ ಸೇರಿ ಬೈಸಿಕೊಂಡಿದ್ದೇವೆ ಹೊರತು, ಒಬ್ಬರಿಗೊಬ್ಬರು ಚಾಡಿ ಹೇಳಿ ಬೈಸಿಕೊಂಡಿದ್ದಿಲ್ಲ. ಬೈಸಿಕೊಂಡ ಘಟನೆಗಳ ನೆನಪು ಮಾಡಿದರೆ ಕಾದಂಬರಿಯಾಗಿಬಿಡುತ್ತೆ ಅಲ್ವಾ.  ಜಗಳಗಳ ಜುಗಲ್ ಬಂದಿ ಇದ್ದಿದ್ದೆ. ಆದರೆ ಜಗಳವಾಡಿದಷ್ಟೇ ಹೊತ್ತು.ಮತ್ತೆಲ್ಲ ಏಕದಂ ಮಾಮೂಲಿ. 

ನನಗಿಬ್ಬರು ಮುದ್ದಿನ ತಮ್ಮಂದಿರಿದ್ದಾರೆ ಎಂದುಕೊಳ್ಳುವ ಹೊತ್ತಿಗೆ ನೀವಿಬ್ಬರೂ ಅಣ್ಣಂದಿರಾಗಿಬಿಟ್ಟಿರುತ್ತೀರಿ.  ನನ್ನಿಷ್ಟಗಳೆಲ್ಲ  ನನಗಿಂತ ಚೆನ್ನಾಗಿ ನಿಮಗೇ ಗೊತ್ತು. ನನ್ನ ಮೊಬೈಲ್ ಮೆಮೊರಿ ಕಾರ್ಡ್ ನಲ್ಲಿ ನೀವೇ ಸೆಲೆಕ್ಟ್ ಮಾಡಿದ ಹಾಡುಗಳಿವೆ, ಇದುವರೆಗೂ ಒಂದೇ ಒಂದು ಹಾಡು ನಾನು ಡಿಲೀಟ್ ಮಾಡಿಲ್ಲ. ಇದು ನಿನಗಿಷ್ಟ ಆಗುತ್ತೆ ತಗೋ ಅಂತ ನೀವು ಕೊಟ್ಟ/ಕೊಡುವ  ಎಲ್ಲ ವಸ್ತುಗಳು ನನಗಿಷ್ಟವಾದದ್ದೆ. ನಿಮ್ಮಬ್ಬರದು ಬೇರೆ ಬೇರೆ ರೀತಿಯ ಪ್ರೀತಿ, ಎರಡೂ ನನಗಿಷ್ಟ. ಮಕ್ಕಳು ಎದೆಯೆತ್ತರಕ್ಕೆ ಬೆಳೆದರು ಅಂತ ಅಪ್ಪ , ಕಾಕ ಹೆಮ್ಮೆಯಿಂದ ಹೇಳುವಾಗ ನನಗೂ ಹೆಮ್ಮೆಯೆನಿಸುತ್ತೆ.  ನೀವಿಬ್ಬರೂ ಒಂದು ಜೀವ, ಎರಡು ದೇಹ , ನಮಗೆಲ್ಲ ಎರಡೂ ಕಣ್ಣುಗಳಿದ್ದಂತೆ. ಅಮ್ಮಂದಿರ ಮುದ್ದಿನ ಕೂಸುಗಳು. ಇಬ್ಬರಿಗೂ ಬೇರೆ ಬೇರೆಯದೇ ಕನಸುಗಳಿವೆ. ಹೊಸ ಕನಸುಗಳ ಹೊಸ್ತಿಲಲ್ಲಿದ್ದೀರಿ ಇವತ್ತು. . ನಿಮ್ಮ ಗುರಿ ನೀವು ತಲುಪಿದರೆ ನಮ್ಮೆಲ್ಲರ ಕನಸುಗಳು ನನಸಾದಂತೆ. ಇಬ್ಬರಿಗೂ ಒಳ್ಳೆಯದಾಗಲಿ ನನ್ನ ಮುದ್ದೂಸ್...

"ಜೀವಂತು ಶರದಾಂ ಶತಮ್ " 

ಹಾಂ ನನ್ನ ಪುಟ್ಟು ನಿನ್ನ ಹುಟ್ಟಿದ ದಿನ ಇವತ್ತು. ಎಷ್ಟು ವರ್ಷವಾಯಿತು ನಿನಗೆ ? ಬೇಕಾಗಿಲ್ಲ ಬಿಡು ತಮ್ಮನಿಗಿಂತ ಅಣ್ಣನಾಗಿ ಬಿಟ್ಟಿದ್ದೀಯ. ಅಣ್ಣಂದಿರಿಗೆ ವಯಸ್ಸಾದಂತೆ ತಂಗಿಯರು ಚಿಕ್ಕವರಾಗುತ್ತಾರಂತೆ. ನಾ ಚಿಕ್ಕವಳಾಗಿಯೇ ಇರ್ತೀನಿ ನಿನ್ನ ಮುಂದೆ. 

ಹ್ಯಾಪಿ ಹ್ಯಾಪಿ ಬರ್ತ್ ಡೆ ಪದ್ದು..  ಲವ್ ಯು ಕಣೋ..

ಮೂರು ದಿಕ್ಕುಗಳಲ್ಲಿ ಮೂವರಿದ್ದರೂ ಪ್ರೀತಿ ಮತ್ತು ನಗು ನಮ್ಮ ನಿರಂತರ ಜೀವಸೆಲೆ..   

Thursday, 11 July 2013

ಈ ಸ್ನೇಹವೇ ಅಪ್ಯಾಯಮಾನ..

"ಮೌನ ಗೌರಿ.. ಅದೆಷ್ಟು ಮುದ್ದಾಗಿ ಕಾಣ್ತಾ ಇದ್ದೀಯ. ಹಬ್ಬದ ದಿನ ಹೆಣ್ಣು ಮಕ್ಕಳು ಹೀಗೆ  ರೆಡಿ ಆಗಿ ಮನೆತುಂಬಾ ಓಡಾಡ್ಕೊಂಡು ಇದ್ರೆ ಎಷ್ಟು ಖುಷಿ ಗೊತ್ತಾ" ಅಂತ ಅಮ್ಮ  ಗಲ್ಲಕ್ಕೊಂದು ಪುಟ್ಟ ಬೊಟ್ಟಿಟ್ಟು ಹೊರಗೆ ಹೋದಳು. ಅಷ್ಟು ಚಂದವಿದ್ದೀನಾ ? ಅಂದುಕೊಂಡು ಕನ್ನಡಿ ನೋಡಿಕೊಂಡೆ. ಯಾಕೋ ಹಿಂದೆ ನಿಂತು ನೀನೇ ನಕ್ಕಂತಾಯಿತು. ನನ್ನ ತುಟಿಯಂಚಿನ ಪುಟ್ಟ ನಗು ನೆನಪಿನ ಸುರುಳಿ ಬಿಚ್ಚಿಟ್ಟಿತ್ತು. ಆ ಕನ್ನಡಿಯೂ ನಿನ್ನದೇ ಉಡುಗೊರೆ ತಾನೇ. ಅದೊಂದು ಹುಟ್ಟು ಹಬ್ಬದ ದಿನ ಬೆಳಿಗ್ಗೆ ಮನೆ ಬಾಗಿಲ ಮುಂದೆ ಇದ್ದ ಆಳೆತ್ತರದ ಗಿಫ್ಟ್ ಪ್ಯಾಕ್ ನೋಡಿ ಏನಿರಬಹುದು ಎಂದು ಓಪನ್ ಮಾಡಿದವಳಿಗೆ ಕಂಡಿದ್ದು ನನ್ನದೇ  ಸಂಪೂರ್ಣ ರೂಪ. 

ಅವತ್ತು  ನಾನು ಅಮ್ಮ ನೋಡು ನೋಡುತ್ತಿದ್ದಂತೆ ನೀ ಬೈಕ್ ನಿಂದ ಬಿದ್ದಿದ್ದೆ. ಹೋಗಿ ಯಮ ಗಾತ್ರದ ರಾಯಲ್ ಎನ್ಫಿಲ್ದ್ ಬೈಕ್ ನ ಎತ್ತಿ ನಿನ್ನನ್ನು ಎಬ್ಬಿಸಿ ನಿಲ್ಲಿಸಿದವಳಿಗೆ ನೀನು ಡ್ರೈವ್ ಮಾಡಲಾರೆ ಎನಿಸಿತ್ತು . ಅದೇ ಬೀದಿಯ ತುದಿಯವನೆಂದು ಗೊತ್ತಿತ್ತು .ಅದಕ್ಕೆ ಬೈಕ್ ಸ್ಟಾರ್ಟ್ ಮಾಡಿ ಕುಳಿತುಕೋ ಎಂದವಳನ್ನು ಅನುಮಾನದಿಂದ ನೋಡಿದ್ದೆ ನೀನು. " ಬೈಕ್ ಓಡ್ಸೋಕೆ ಬರುತ್ತೆ ರೀ " ಎಂದು ವಿಥ್ ಗೇರ್ ಡ್ರೈವಿಂಗ್ ಲೈಸೆನ್ಸ್ ತೋರಿಸಿದ್ದೆ ನಾನು. ಒಂದು ನಗು , ಸಣ್ಣ ಸಹಾಯ , ಸಾಕಲ್ಲವಾ ಒಂದು ಗೆಳತನಕ್ಕೆ. ಬೆಳಿಗ್ಗೆ ಬೆಳಿಗ್ಗೆ ಕಣ್ಣಿಗೆ ಬೆಳಕು ಬಂದು ಎಚ್ಚರವಾಗುತ್ತದೆ ಎಂದು ಬಯ್ಯುತ್ತಿದ್ದ ನನ್ನ ರೂಮಿನ ದೊಡ್ಡ ಕಿಟಕಿಗಳು ಪ್ರೀತಿಯಾಗತೊಡಗಿದ್ದು  ಆ ಕಿಟಕಿಗಳಿಂದ ನಿಮ್ಮನೆಯ ಟೆರ್ರೆಸ್ ಕಾಣುತ್ತದೆ ಎಂದು ಗೊತ್ತಾದಾಗಲೇ. ಅಲ್ಲಿ ಟೆರ್ರೆಸ್ ಮೇಲೆ ಓಡಾಡುತ್ತಾ ನೀನು ಮೆಸೇಜ್ ಮಾಡಿದರೆ ಇಲ್ಲಿ ಕಿಟಕಿಯ ಬಳಿಯಲ್ಲಿ ಕುಳಿತು ರಿಪ್ಲೈ ಟೈಪಿಸುವುದು . ರಿಪ್ಲೈ ಗೆ ಸ್ವಲ್ಪ ತಡವಾದರೂ ಸಾಕು ಸನ್ನೆಗಳಲ್ಲಿ ಜಗಳ ಶುರು. ಬೆಳಿಗ್ಗೆ ನಿನ್ನದೇ ಕಾಲ್ ನಿಂದ  ನಾನೆದ್ದು ಕಿಟಕಿಯ ಹತ್ತಿರ ಬಂದರೆ ಅಲ್ಲೇ ಟೆರ್ರೆಸ್ ಮೇಲೆ ನಿಂತು ಕೈ ಬೀಸಿ ಹಾಯ್ ಎನ್ನುತ್ತಿದ್ದ ನೀನು . ನಿನ್ನ ಪರಿಚಯ ಗಟ್ಟಿ ಆದ ದಿನದಿಂದ ಆ ಕಿಟಕಿಗಳ ಕರ್ಟನ್ಸ್ ತೆಗೆದುಬಿಟ್ಟಿದ್ದೆ ನಾನು. 

ಗೆಳೆತನವನ್ನು ಅಷ್ಟಾಗಿ ಹಚ್ಚಿಕೊಳ್ಳದೆ ಬೆಳೆದ ನನಗೆ ಮೊದಲ ಬಾರಿ ಗೆಳೆತನದ ಬಗೆಗೆ ಪ್ರೀತಿ ಮೂಡಿಸಿದ್ದು  ಸರ್ವಗುಣ ಸಂಪನ್ನ(?)ನ್ನಾಗಿ ಸಿಕ್ಕ ನೀನು ..!! ಮನೆಯಲ್ಲಿ ಜವಬ್ದಾರಿಯುತ ಮಗ ಎನಿಸಿಕೊಂಡು ಊರಲ್ಲೂ ಪರೋಪಕಾರಿ ಎಂದು ಹೇಳಿಸಿಕೊಳ್ಳುವವನು., ಕೆಲವೊಮ್ಮೆ ಅದ್ಯಾರಿಗೋ ರಕ್ತ ಬರುವಂತೆ ಚಚ್ಚ್ಚಿ ಬಂದು  ಮನಸೋ ಇಚ್ಛೆ ಬಿಯರ್ ಕುಡಿಯುತ್ತಾ ತಣ್ಣಗೆ ಕುಳಿತುಕೊಳ್ಳುತ್ತಿದ್ದೆ. ಟ್ರಿಪ್ ,ಎಕ್ಷ್ಸ್ಕರ್ಶನ್ಸ್  ಅಂತ ಹೊರಗಡೆ ಹೋದಾಗ, ಎಷ್ಟೇ ತಡವಾದರೂ ನನ್ನನ್ನು ಸೇಫ್ ಆಗಿ ಮನೆ ತಲುಪಿಸಿದ್ದ ನೀನೇ ,ನನ್ನ ಜೊತೆ ಬರಬೇಡ ಅಂತ ಹೇಳಿದರೂ ಕೂಡ ಅದೆಲ್ಲಿಗೋ ನಾನೂ ಬರುತ್ತೇನೆ ಎಂದು ನಿನ್ನ ಬೆನ್ನಿಗಂಟಿ ಕುಳಿತ ನನ್ನನ್ನು ಮದ್ಯ ದಾರಿಯಲ್ಲಿ ಬೀಳಿಸಿ ತಿರುಗಿ ನೋಡದೆ ಹೋಗಿದ್ದೆ .  ಕೆಟ್ಟತನ ಮತ್ತು ಒಳ್ಳೆತನ ಎಲ್ಲವನ್ನೂ ಮೀರಿ ನಿನ್ನನ್ನು ಇಡಿಯಾಗಿ ಒಪ್ಪಿಕೊಂಡಿದ್ದಕ್ಕೆ ದ್ವೇಷಿಸುವ ಮನಸ್ಸೇ ಬರಲಿಲ್ಲ. long drive  ಎಂದು ಎಲ್ಲಾದರೂ ಕರೆದುಕೊಂಡು ಹೋಗಿ ಸುಮ್ಮನೆ ಬಿಯರ್ ಕುಡಿಯುತ್ತಾ ಕುಳಿತುಬಿಡುತ್ತಿದ್ದೆ. " ನನ್ನನ್ನೇಕೆ ಕರೆತಂದಿದ್ದು ಎಂದು ಕೇಳಿದರೆ , ವಾಪಸ್ ಸೇಫ್ ಆಗಿ ಮನೆ ತಲುಪಿಸಲು ಡ್ರೈವರ್ ಬೇಕಲ್ಲ ಎಂದು ನಗುತ್ತಿದ್ದೆ. ನಿನ್ನ ಆ ನಗು ನನಗಿಷ್ಟ.  ಡೆಲ್ಲಿ ರಾಜಕೀಯದಿಂದ ಹಿಡಿದು ಪಕ್ಕದ ಬೀದಿಯ ಹುಡುಗಿಯ ಬಗ್ಗೆ ಎಲ್ಲವನ್ನೂ ಮಾತನಾಡುವ ನೀನು ಪ್ರೀತಿ ವಿಷಯದಲ್ಲಿ ಮಾತ್ರ ಮೌನಿಯಾಗಿಬಿಡುತ್ತಿದ್ದೆ. ನಿನಗೆ ಯಾವುದೇ flash back ಗಳಿಲ್ಲದಿದ್ದರೂ ನಿನ್ನ ಮೌನಕ್ಕೆ ಮಾತ್ರ ಉತ್ತರ ಸಿಕ್ಕಿಲ್ಲ ನನಗೆ. ಗೆಜ್ಜೆ ಸದ್ದು ಕೇಳೋಕೆ ಚಂದ ಕಣೆ ಎಂದ ನಿನ್ನ ಮಾತಿನಿಂದ ಘಲ್ ಘಲ್ ಎನ್ನುವ ಗೆಜ್ಜೆ ಹಾಕುವುದ ಕಲಿತಿದ್ದೆ. "ಏನಾದ್ರು ಗಿಫ್ಟ್ ಕೊಡಬೇಕು ಅನಿಸ್ತಿದೆ ಏನು ಕೊಡಲಿ" ಎಂದು ಕೇಳಿದವಳಿಗೆ, "ರೀಡ್ ಆಂಡ್ ಟೈಲರ್ ಫುಲ್ ಫಾರ್ಮಲ್ ಸೆಟ್ ಕೊಡ್ಸು" ಎಂದಿದ್ದಕ್ಕಾಗಿ ಅಪ್ಪ ಕೊಡುವ ಪಾಕೆಟ್ ಮನಿಯಲ್ಲಿ ಉಳಿಸತೋಡಗಿದ್ದೆ. ಬದುಕು  ಹೀಗೆಯೇ ಸಾಗುತ್ತಿದ್ದಾಗ ಅದ್ಯಾವ ಮಾಯದಲ್ಲಿ ಭಾವನೆಗಳು ಬದಲಾಗತೊಡಗಿದವೋ ಗೊತ್ತಿಲ್ಲ. ಮನಸ್ಸು ನಿನಗೆ ಅಂಕುಶ ಹಾಕತೊಡಗಿತ್ತು. ಫಾಸ್ಟ್ ಆಗಿ ಡ್ರೈವ್ ಮಾಡಬೇಡ , ಅದೆಷ್ಟು ಕುಡಿಯೋದು ? ಯಾಕೆ ಲೇಟ್ ? ಎಂದೆಲ್ಲ ಸಣ್ಣ ಸಣ್ಣ ವಿಷಯಗಳಿಗೂ ನಿನ್ನೊಡನೆ ಜಗಳ ಆಡತೊಡಗಿದ್ದೆ. ಬೇರೆ ಹುಡುಗಿಯರ ಜೊತೆ ನೀ ಮಾತನಾಡುವುದು ನನಗೆ ಇರುಸು ಮುರಿಸಾಗತೊಡಗಿತ್ತು. ಯಾವಾಗ ನಿನ್ನನ್ನು ಬಿಟ್ಟು ಹೋಗಬೇಕೆಂದು ಸಿಕ್ಕ ಒಳ್ಳೆ ಕೆಲಸವನ್ನು ಒಪ್ಪಿಕೊಳ್ಳಲು ಮನಸ್ಸಾಗಲಿಲ್ಲವೋ ಅವತ್ತು ಭಾವನೆಗಳು ಬದಲಾಗಿವೆ ಎಂದು ಅರ್ಥವಾಗಿ  ಬಿಟ್ಟಿತು. ಯಾಕೋ ಪ್ರೀತಿಯ ಚೌಕಟ್ಟು ಹಾಕುವ ಮನಸ್ಸಾಗದೆ , ಒಲ್ಲದ ಮನಸ್ಸನ್ನು ಒಪ್ಪಿಸಿ  ಇಲ್ಲಿಗೆ ಬಂದು ಬಿಟ್ಟೆ.

"Thanks ನೀ ಕೊಟ್ಟ ನಗುವಿಗೆ" ಎಂದು ಪುಟ್ಟದಾಗಿ ಬರೆದಿಟ್ಟು ಬಂದವಳು, ಇಲ್ಲಿಗೆ ಬಂದ  ಮೇಲೆ ಕಣ್ಣಲ್ಲಿ ನೀರು ತುಂಬುವಷ್ಟು ನಗಲೇ ಇಲ್ಲ. ಇಲ್ಲಿರುವ ದೊಡ್ಡ ಕಿಟಕಿಗಳಿಗೆ ಯಾವಾಗಲೂ ಕರ್ಟನ್ ಗಳಿಂದ ಅಲಂಕಾರ. ಸದ್ದು ಮಾಡದ ನನ್ನ ಕಾಲುಚೈನ್ , ರೋಡ್ ಲ್ಲಿ ಕಾಣುವ ರಾಯಲ್ ಎನ್ಫಿಲ್ದ್ ಗಳು , ಅಲ್ಲೆಲ್ಲೋ ಕಾಣುವ 
ರೀಡ್ ಅಂಡ್ ಟೈಲರ್ ಶಾಪ್ ಎಲ್ಲವೂ ನಿನ್ನನ್ನು ನೆನಪಿಸುತ್ತವೆ. 

ಅಪರೂಪಕ್ಕೊಮ್ಮೆ ಬರುವ ನಿನ್ನ ಕಾಲ್. long drive ಹೋಗಬೇಕಿತ್ತು, ನೀನಿಲ್ಲ ಕಣೆ , miss you idiot ಎಂಬ ನಿನ್ನ ಮೆಸೇಜ್ ಗಳು ಖುಷಿ ಕೊಡುತ್ತವೆ. 

ಬಿಟ್ಟಿರಲಾರೆ ಎಂಬ ಪ್ರೀತಿಯ ಚೌಕಟ್ಟಿಗಿಂತ ಬಿಟ್ಟರೂ ಬಿಡದಂತಿರುವ ಈ ಸ್ನೇಹವೇ ಅಪ್ಯಾಯಮಾನ.. 

Monday, 17 June 2013

ಯಾಕಾಯಿತು ನಿನ್ನ ಪರಿಚಯ ... ಅರೆಕಾಲದ ಖುಷಿಗಾಗಿ ...



ಯಾಕಾಯಿತು ನಿನ್ನ ಪರಿಚಯ ... ಅರೆಕಾಲದ ಖುಷಿಗಾಗಿ ... 

ನಿನ್ನ ಅಸ್ತಿತ್ವವೇ ಗೊತ್ತಿಲ್ಲದಾಗ ... 

ನನ್ನದೇ ಆದ ಪ್ರಪಂಚ . ತುಂಬಿ ತುಳುಕವ ಖುಷಿ. ನಕ್ಕಷ್ಟು ಇಮ್ಮಡಿಯಲ್ಲಿ ನಗು.  ಅಲ್ಲಿ ನಾನು. ನನ್ನದೊಂದು ದೊಡ್ಡ ಅವಕಾಶ . ಯಾರಿಗೂ ಸೋತಿದ್ದಿಲ್ಲ , ಬಗ್ಗಿದ್ದಿಲ್ಲ. ನಡೆದಿದ್ದೇ  ದಾರಿ. ಕಂಡಷ್ಟೂ ನನ್ನದೇ. ಪುಟಿಪುಟಿಯುವ ಜೀವ ಸೆಲೆಯಲ್ಲಿ  ಆರಾಮಾಗಿದ್ದೆ ನಾನು... 

ನಿನ್ನ ಅಸ್ತಿತ್ವ ಗೊತ್ತಾದಾಗ ... 

ನನ್ನ ಪ್ರಪಂಚದ ಬಹು ಭಾಗ ನೀನಾದೆ.ನಿನ್ನಿಂದ ಬೆಳಗು.. ನಿನ್ನೊಂದಿಗೆ ಮುಗಿವ ಇರುಳು. ನಿನ್ನವೇ ಮಾತುಗಳು.. ನೀ ಕೊಟ್ಟರೆ ಮಾತ್ರ ಅಲ್ಲಿ ಮೌನಕ್ಕೆ ಆಸ್ಪದ .  ನಿನಗಾಗಿ ಇಲ್ಲದ ಛಲ .. ಎಲ್ಲ ಗೆಲ್ಲಬಲ್ಲೆ ಎಂಬ ಹಂಬಲ. ಪ್ರಪಂಚ ಎದುರಾದರೂ ನಿನ್ನ ಜೊತೆಯಿದೆ ಎಂಬ ಬೆಂಬಲ. ಖುಷಿಯಾಗಿದ್ದೆ ನಾನು ... 

ನಿನ್ನ ಅಸ್ತಿತ್ವ ಇದ್ದೂ ಇಲ್ಲದಂತಾದಾಗ ... 

ನನ್ನ ಪ್ರಪಂಚವೇ ಖಾಲಿಯಾದಂತೆ ಭಾಸ. ತುಂಬಿಕೊಂಡಿದ್ದ ಖುಷಿಯೀಗ ತೂತು ಮಡಿಕೆಯಲ್ಲಿನ ನೀರು.   ಸಂಜೆಗಳಿಗೆಲ್ಲ ಮೌನದ ಹೊದಿಕೆ. ಕಂಡ ಕನಸುಗಳೆಲ್ಲ ಕಾದ ಗಾಜಿನಂತೆ. ಕಣ್ಣೀರಿಗೂ ಹೊರಬರಲು ಭಯ. ಬೊಗಸೆಯೊಡ್ಡಿಯೂ ಗೊತ್ತಿಲ್ಲದ ನಾನು ಎರಡೂ ತೋಳು ಚಾಚಿ ನಿಂತಿದ್ದೆ ನಿನ್ನ ಮುಂದೆ.  ಸೋಲೇ  ಗೊತ್ತಿಲ್ಲದ ನಾನೆಂಬ ನಾನು ಸೋತಿದ್ದೆ .. 

ನಿನ್ನ ಅಸ್ತಿತ್ವವೇ ಇಲ್ಲದಂತಾದಾಗ ... 

ನಾನೇ ಕುಸಿದಂಥ  ಭಾವ . ನನ್ನ ಪ್ರಪಂಚ ಖಾಲಿ ಖಾಲಿ. ಕಣ್ಣೀರು ಖಾಲಿಯಾಯ್ತಾ? ಗೊತ್ತಿಲ್ಲ . ಅಳು ಬರಲೇ ಇಲ್ಲ. ಮಾತಿದೆಯಾ? ಗೊತ್ತಿಲ್ಲ . ಮೌನ ಸಹನೀಯ. ಬಡಿಯುತ್ತಿರುವ ಹೃದಯ ಬಂಡೆಯಾಗಿದೆ.  ಹೆಪ್ಪುಗಟ್ಟಿದ ಹನಿಗಳದು ಹೊರಬಲಾರೆನೆಂಬ ಮುಷ್ಕರ. ಮುಚ್ಚ್ಹಿದ ಕತ್ತಲ ಬಾಗಿಲಾಚೆಗೊಂದು ಬೆಳಕಿರಬಹುದಾ ? ಆ ಬೆಳಕಿನಲ್ಲಿ ನೀನಿರಬಹುದಾ ? ಎಂಬ ಭ್ರಮೆಯಲ್ಲಿ ಸತ್ತು ಬದುಕುತ್ತಿದ್ದೇನೆ; ಕನಸುಗಳು ಉಸಿರಾಡುತ್ತಿವೆಯಲ್ಲ....

Tuesday, 28 May 2013

ಪ್ರೀತಿಯ ಕೊಳಲನ್ನು ಮುರಿದು ನಿಶ್ಯಬ್ದದಲ್ಲಿ ಬದುಕಬೇಕಿದೆ.

ಇವತ್ತೇಕೋ ಬರೆಯಬೇಕೆನಿಸುತ್ತಿದೆ.  ಈ ಪೂಪಿ ಗೆ ಎಲ್ಲವನ್ನು ನೇರವಾಗಿಯೇ ಹೇಳಿ ಅಭ್ಯಾಸವಿದ್ದಿದ್ದು.   ಈಗಲೂ ಅಷ್ಟೇ ಜಿಯಾ ನಿನ್ನೆದುರು ಕಾಲೂರಿ ನಿಂತು , ಕಣ್ಣಲ್ಲಿ ಕಣ್ಣಿಟ್ಟು ಮುಂದೆ ಬರೆಯುವ ಎಲ್ಲ ಸತ್ಯಗಳನ್ನು ಹೇಳಬಲ್ಲೆ .
ಒಂದು ಚಂದದ ಗೆಳೆತನವಿತ್ತು ಅಲ್ಲವಾ.  'ಪೂಪಿ' , 'ಜಿಯಾ', ಅವನೊಬ್ಬನಿದ್ದ 'ಸನ್ನು'. ಅದೇನದು ನಮ್ಮ ಮೂವರನ್ನೂ ಕಂಡು ಎಲ್ಲ ಹೇಳುತ್ತಿದ್ದಿದ್ದು " ಒಬ್ಬ ಕೃಷ್ಣ ರಾಧೆಯರಿಬ್ಬರು" ಅಂತ ಅಲ್ವಾ .  

ಒಂದು ವೇಳೆ ಅವನು ಕೃಷ್ಣನಾದರೆ
 ಭಾಮೆ ನಾನೇ
ನೀ ರಾಧೆಯಾಗಬೇಕಿತ್ತೇನೋ.
 ಆದರೆ ನಾ ಭಾಮೆಯಾಗಲೂ ಇಲ್ಲ. 
ನಿನಗೆ ರಾಧೆಯಾಗಲೂ ಬಿಡಲಿಲ್ಲ. 
ಅವನು ಮಾತ್ರ ರಾಮನಾಗಿಬಿಟ್ಟ ಚೆಂದದ ಅವನದೇ ಸಂಸಾರದಲ್ಲಿ.

ನೀನು ಬಹುಶಃ ಸೀತೆಯಂತೆ ಬದುಕುತ್ತಿರಬಹುದು. ಆದರೆ ನಾನು ... Never.... ಅಪ್ಪನದು ರಾಜಕೀಯದ ತುಪ್ಪ , ಅಣ್ಣನದು  ರೌಡಿಸಂ ಉರಿ...  ಇದೆರಡರ ಮಧ್ಯೆ ಹೂ ಅರಳಲು ಸಾಧ್ಯವಾ ನಾ ಬೆಳೆದದ್ದು ಹಾಗೆಯೇ. ಸೋತು ಗೊತ್ತಿರಲಿಲ್ಲ. ಸೋಲನ್ನು ಸಹಿಕೊಂಡು ಗೊತ್ತಿಲ್ಲ.ಕೇಳುವ ಮೊದಲೇ ಎಲ್ಲವೂ ಕಾಲಡಿಯಲ್ಲಿರುತ್ತಿತ್ತು. ಇಲ್ಲವೆಂದರೆ  ಕೇಳಿ ಗೊತ್ತು ಕೊಡದಿದ್ದರೆ ಕಿತ್ತುಕೊಳ್ಳುವುದು ಗೊತ್ತು. ಹಂಚಿಕೊಳ್ಳುವುದು..  ಹೊಂದಾಣಿಕೆ...  ಊಹುಂ ... ಗೊತ್ತಿಲ್ಲ...  ಯಾರ ಮಾತನ್ನು ಕೇಳದೆ Don't   care  ಎನ್ನುವ ನನ್ನನ್ನು ಮಾತು ಕೇಳಿಸುವ ತಾಕತ್ತು ನಿಮ್ಮಿಬ್ಬರಿಗಿತ್ತು. ನಿನ್ನ ಸ್ಪರ್ಶ ಮತ್ತು ಅವನ ಕಣ್ಣುಗಳು ನನ್ನನ್ನು ಎಷ್ಟೋ ವಿಷಯಗಳಲ್ಲಿ ತಡೆಯುತ್ತಿದ್ದವು. 

ನಿನ್ನ ಮತ್ತು ಸನ್ನುವನ್ನು ನೋಡಿ ಇಡಿ ಕಾಲೇಜ್  ಒಳ್ಳೆ ಜೋಡಿ ಎನ್ನುತ್ತಿತ್ತು. ನನಗೆ ನಿಜಕ್ಕೂ ಇದನ್ನು ಸಹಿಕೊಳ್ಳಲು ಸಾದ್ಯವಿರಲಿಲ್ಲ. ಹಾಗಂತ ನಾನೇನು ಸನ್ನುವನ್ನು ಬಯಸುತ್ತಿರಲಿಲ್ಲ. ನಿಮ್ಮಿಬ್ಬರನ್ನು ಕಳೆದುಕೊಳ್ಳುವ ಮನಸ್ಸಿರಲಿಲ್ಲ. ನೀವಿಬ್ಬರು ಒಂದಾಗಿ ನಿಮ್ಮ ನಡುವೆ ನಾನಿದ್ದೇನೆ ಎನ್ನುವ ಭಾವನೆಯಲ್ಲಿ ಬದುಕುವುದಕ್ಕೆ ನಾನು ತಯಾರಿರಲಿಲ್ಲ. ಯಾವಾಗ ಸನ್ನುವಿನೆಡೆಗಿನ ನಿನ್ನ ಭಾವನೆಗಳು ಬದಲಾಗ ತೊಡಗಿದ್ದು ನನಗೆ ತಿಳಿಯಿತೋ    ಎಲ್ಲೋ ಸ್ನೇಹ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಕಾಡತೊಡಗಿತು. ಅದಕ್ಕೆ ನಿಮ್ಮಿಬ್ಬರಿಗೆ  ಬೇಕಂತಲೇ ಅಡ್ಡ ನಿಂತೆ ನಾನು. ಸನ್ನುವನ್ನು ನಾನು ಪ್ರೀತಿಸುತ್ತಿದ್ದೇನೆ ಎನ್ನುವ ಮಾತನ್ನು ನಿನ್ನ ಮುಂದೆ ಆಡಿದ್ದೆ.  ಮುಗ್ದೆ ನೀನುನಿನಗೆ ತಿಳಿಯಲೇ ಇಲ್ಲ. ಅವನಲ್ಲಿ ಯಾವ ಭಾವನೆಗಳ ತಾಕಲಾಟವೂ ಇರಲಿಲ್ಲ ಕಣೆ. ನನ್ನ ಹಠ ಗೊತ್ತಿತ್ತು ನಿನಗೆನನ್ನ ಸಿಟ್ಟು ದ್ವೇಷಗಳನ್ನು ಚೆನ್ನಾಗಿ ತಿಳಿದವಳು ನೀನು. ಮತ್ತೂ ಅದೇನೋ ತ್ಯಾಗ ಸಹನೆಕರುಣೆ ಅನ್ನೋ ಅಂಥಹ ಹೆಣ್ಣ್ ಸಹಜ ಗುಣಗಳ ಸರ್ವ ಸಂಪನ್ನೆಯಾಗಿದ್ದೆಯಲ್ಲ ನೀನು. ಅದಕ್ಕಾಗಿಯೆ ದೂರ ಹೋಗುವಾಗ ತ್ಯಾಗ ಎಂಬ ಶಬ್ದವನ್ನು ನಿನ್ನ ಸಮಾಧಾನಕ್ಕೆ ಇಟ್ಟುಕೊಂಡು ಹೊರಟೆಯಲ್ಲ. ನೀ ಮಾಡಿದ್ದು ತ್ಯಾಗವಲ್ಲ  ಕಣೆ ದಡ್ಡಿ ಅದು ಪಲಾಯನ. ನಿನ್ನ ಜಾಗದಲ್ಲಿ ನಾನಿದ್ದರೆ ಕಿತ್ತುಕೊಳ್ಳುತ್ತಿದ್ದೆ.

ಅತ್ತ  ಕಾಲೇಜ್ ಮುಗಿದ ಮೇಲೆ Rank Student  ಆದ ನಿನಗೆ ಒಳ್ಳೆಯ ಕೆಲಸವೇ ಸಿಕ್ಕಿತ್ತು. ಇತ್ತ ಸನ್ನು ಕೂಡ ಒಳ್ಳೆಯ ಕೆಲಸದಲ್ಲಿ ಸೆಟ್ಲ್ ಆಗಿದ್ದ.ಸನ್ನು ನಾನು ವಾರಕ್ಕೊಮ್ಮೆ ಸಿಗುತ್ತಿದ್ದೆವು. ಈ ಮದ್ಯೆ ಎಲ್ಲೋ ನನಗೆ ಸನ್ನು ಇಷ್ಟವಾಗ ತೊಡಗಿದ್ದ. ಅವನ ಕಣ್ಣುಗಳಲ್ಲಿ ಕಳೆದು ಹೋಗುವ ಭಯ ಕಾಡುತ್ತಿತ್ತು.ಅವನಿಗೆ ನಾನಾಗಿಯೇ ಸೋಲಲು ನನಗೆ ಇಷ್ಟವಿರಲಿಲ್ಲ. ದೇಹಿ ಎಂದು ನನ್ನೆಡೆಗೆ ಬರಲಿ ಎಂದುಕೊಳ್ಳುತ್ತಿದ್ದೆ. ಆದರೆ ಈಗಲೂ ಅವನ ಭಾವನೆಗಳಲ್ಲಿ ಯಾವ ಏರಿಳಿತಗಳೂ ಇರಲಿಲ್ಲ.  ಮನೆಯಲ್ಲೂ ಮದುವೆಯ ಮಾತುಕಥೆಗಳು ಜೋರಾಗಿಯೇ ಸಾಗುತ್ತಿದ್ದವು. ರಾಜಕಾರಣಿಯ ಮಗಳಿಗೆ ಸಂಬಂಧಗಳು ಬರುವುದೇನು ಕಡಿಮೆಯೇ ?   ಮನೆಯಿಂದಲೇ ಅವನ ಜೊತೆಗೆ ಮದುವೆಯ ಪ್ರಸ್ತಾಪ  ಬಂದಾಗ ನಿಜಕ್ಕೂ ಖುಷಿಯಾಗಿದ್ದೆ ಕಣೆ. ಆಗ ಬಂತು ನೋಡು ನಿನ್ನ ನೆನಪು. ಅವನಿಗೆ ಸೋತುನಿನ್ನ ತ್ಯಾಗಕ್ಕೆ ಬೆಲೆ ಕೊಡಲು ನನಗಿಷ್ಟವಿರಲಿಲ್ಲ. again  ಇಲ್ಲೂ ನನಗೆ ಸೋಲಲು ,ಸೋಲೋಪ್ಪಿಕ್ಕೊಳ್ಳಲು ಇಷ್ಟವಿರಲಿಲ್ಲ. ಅದಕ್ಕೆ ಅವನನ್ನು ಬೇಕಂತಲೇ ತಿರಸ್ಕರಿಸಿದೆ. ಕಾರಣವನ್ನು ನೇರವಾಗಿಯೇ ಹೇಳಿದೆ. ಅದಕ್ಕೆ " ನೀನು ಸಣ್ಣವಳಂತೆ ಆಡುತ್ತೀಯ ಅಂದೊಕೊಂಡಿದ್ದೆ ಆದರೆ ಇಷ್ಟೆಲ್ಲಾ ಸಣ್ಣತನಗಳು ಇದೆ ಎಂದು ಗೊತ್ತಿರಲಿಲ್ಲ ಎಂದು ದೂರ ಹೋದ. 

ಅವನು ಹೋದ ಮೇಲೆ ಒಂಟಿ ಎನಿಸಲಿಲ್ಲ. ಒಂಟಿತನ ನನ್ನ ಕಾಡಲಿಲ್ಲ. ಕಾಡುತ್ತಿರುವುದು ಪ್ರೀತಿ.  . ಸೋಲಲು ಇಷ್ಟವಿಲ್ಲವೆಂದವಳನ್ನು ಪ್ರೀತಿ ಸೋಲಿಸಿಬಿಟ್ಟಿದೆ. ಯಾವ ಭಾವಗಳಿಗೂ ಸಿಗದಂತೆ ಬದುಕುತ್ತಿದ್ದವಳ ಹೊಸ ಭಾವಗಳು ಸುತ್ತಿಕೊಳ್ಳುತ್ತಿವೆ. ಬಹುಶಃ ಇಂಥ ಮಧುರ ಅನುಭೂತಿಗಳೇ ಪ್ರೇಮಿಗಳನ್ನು ಖುಷಿಯಿಂದ ಇಡುತ್ತವೇನೋ. ನೆನಪುಗಳ ಭಾರವನ್ನು ಪ್ರೀತಿಯಲ್ಲಿ ಸೋತವರು ಮಾತ್ರ ಅರಿಯಬಲ್ಲರೆನೋ ಅಲ್ಲವಾ ?   ಚಿವುಟಿದಷ್ಟೂ ಚಿಗುರುತ್ತಾ ಹೆಣ್ತನವನ್ನು ಜಾಗೃತಗೊಳಿಸುತ್ತ ಜ್ವಾಲಾಮುಖಿಯಂತೆ ಒಳಗೊಳಗೇ ಕುದಿಯುತ್ತಿದೆ. ಉಹೂಂ ಸೋಲಲಾರೆ ನಾನು.  ಅವನು ಕೊಟ್ಟು ಹೋದ ಹೊಸ ರಾಗಗಳ ನುಡಿಸುವ  ಪ್ರೀತಿಯ  ಕೊಳಲನ್ನು ಮುರಿದು ನಿಶ್ಯಬ್ದದಲ್ಲಿ ಬದುಕಬೇಕಿದೆ.ಮುಖವಾಡ ಕಳಚಿ ಮಂಡಿಯೂರಲಾರೆ.  ಜ್ವಾಲೆಯ  ಕಾವು ನನ್ನೊಳಗೆ ಆರಿ ಅಗ್ನಿಶಿಲೆಯಾಗಿಬಿಡಲಿ..  

ಇಷ್ಟೆಲ್ಲಾ ಬರೆದವಳು ಕ್ಷಮೆ ಕೇಳುತ್ತೇನೆ ಎಂದುಕೊಳ್ಳಬೇಡ. ನನ್ನ ನೇರಕ್ಕೆ ನಾ ಮಾಡಿದ್ದೆಲ್ಲವೂ ಸರಿಯೇ. ನಿನಗೆ ಗೊತ್ತಲ್ಲ ನನಗೆ ಕ್ಷಮೆ ಕೇಳಿಯೂ ಗೊತ್ತಿಲ್ಲ. ಕ್ಷಮಿಸಿಯೂ ಗೊತ್ತಿಲ್ಲ.  
-ಪೂಫಿ....  
(ಇದು 19 ಮೇ 2013 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು )                               

Monday, 13 May 2013

ನೀನಿರಬೇಕಿತ್ತು ..





ಮಿತ್ರ ದಿನೇಶ್ ಮನೀರ್ ತೆಗೆದ ಈ  ಫೋಟೊ ನೋಡಿ ಬರೆದ ಸಾಲುಗಳಿವು. ಅವರದೇ ವೆಬ್ಸೈಟ್ ನ ಚಿತ್ರ -ಕಾವ್ಯ ಸರಣಿಯಲ್ಲಿ ನನಗೊಂದು ಅವಕಾಶ ಸಿಕ್ಕಿತ್ತು. ನನ್ನ ಸಾಲುಗಳಿಗಿಂತಲೂ ಚಂದದ ಫೋಟೋ ಇಲ್ಲಿದೆ. ಒಮ್ಮೆ ನೋಡಿ ಬನ್ನಿ .

Thank you Dineshanna for this opportunity ... 


ಹೊಸ ಬೆಳಗಿನಲ್ಲಿ ... 
ಅಂಗಳದ ತುಂಬಾ 
ಹರಳು ಇಬ್ಬನಿಯ  
ರಂಗವಲ್ಲಿ ಮೂಡಿತ್ತು ...

ಎಳೆ ಬಿಸಿಲ ಉಂಗುರಗಳ 
ಜೊತೆಯಾಗಿ ನೀನಿರಬೇಕಿತ್ತು ..  

ಊರಂಚಿನ ಹಸಿರ ಮೇರೆಯೆಲ್ಲ 
ಆಗಸದ ಕೆಂಪಿನಲ್ಲಿ ಕರಗಿ 
ಕತ್ತಲ ಮಡಿಲಲ್ಲಿ  ಮಲಗುತಿರಲು 
ಬೀಸು ತಂಗಾಳಿಯಲ್ಲಿ 
ಹಿತವಾದ ಮೌನವಿತ್ತು 

 ಮೌನಕ್ಕೆ ಜೊತೆಯಾಗಿ 
 ಸಖ ನೀನಿರಬೇಕಿತ್ತು 
ಹೊಳೆಯಂಚಿನ ಹಾದಿಯಲ್ಲಿ 
ಸುಮ್ಮನೆ ನಡೆವಾಗ .. 
ಏಕಾಂಗಿ ಮನ ಜೊತೆಯಲ್ಲಿ 
ನಿನ್ನ ಕಲ್ಪಿಸಲು 
ಆಡುವ ಸಾವಿರ ಮಾತುಗಳಿತ್ತು .. 

ನನ್ನೊಲವ ಮಾತುಗಳ 
ಜೊತೆಯಾಗಿ ನೀನಿರಬೇಕಿತ್ತು .. 

ಪಾದ ತೋಯಿಸಿದ ಅಲೆಗಳು 

ಮರಳಿ ಬರುವುದರೊಳಗಾಗಿ ... 
ಹಸಿ ಮರಳ ಮೇಲೆ 
ಹೆಜ್ಜೆಗುರುತು ಮೂಡಿತ್ತು  .. 

ಜೋಡಿ ಹೆಜ್ಜೆಗಳಿಗೆ 
ಜೊತೆಯಾಗಿ ನೀನಿರಬೇಕಿತ್ತು...