Tuesday, 14 December 2021

ಹೇರ್ ಕಟ್ಟೂ..‌ ಹಾಲು ಹಲ್ಲೂ ..‌ ಟೂತ್ ಫೇರಿಯೂ..

 

ಮಗಳ ಕೂದಲು ತುಂಬಾ ಉದ್ದ ಗಿಡ್ಡ ಬೆಳೆದಿದ್ದರಿಂದ ಕಟ್ ಮಾಡಿಸಬೇಕೆಂದು ನಿನ್ನೆ ಬ್ಯೂಟಿ ಪಾರ್ಲರ್ ಗೆ ಕರೆದುಕೊಂಡು ಹೋಗಿದ್ದೆ.  ಒಂದೇ ಅಳತೆ ಕಟ್ ಮಾಡುವಾಗ ತುಸು ಜಾಸ್ತಿಯೇ ಆಯಿತು. ಮೊದಲೆ ಕಟಿಂಗ್ ಬೇಡ ಎನ್ನುತ್ತಿದ್ದ ಅವಳ ಮುಖಭಾವ ಬದಲಾದ ಕೂಡಲೆ ನಾನು ಮತ್ತು ಬ್ಯುಟಿಷಿಯನ್ ಇಬ್ಬರೂ ' ಮತ್ತೆ ಬೆಳೆಯುತ್ತೆ , ಇನ್ನು ದಪ್ಪ ಕೂದಲು ಬರುತ್ತೆ ಎಂದೆಲ್ಲ  ಸಮಾಧಾನ ಮಾಡಿದ್ದಾಯ್ತು . ಆದರೆ ಆ ಸಮಾಧಾನವೆಲ್ಲ ಪಾರ್ಲರಿನ ಒಳಗಷ್ಟೆ.  ರಸ್ತೆಯಲ್ಲಿ ಬರುವಾಗ ಇವಳದ್ದೊಂದೆ ರಾಗ .. ನಂಗೆ ಇಷ್ಟು ಗಿಡ್ಡ ಕೂದಲು ಬೇಡದಾಗಿತ್ತು .... ನಾನು ಸಮಾಧಾನ ಮಾಡುತ್ತಾ , ಪಾರ್ಲರಿನಲ್ಲಿ ಹೇಳಿದ್ದನ್ನೆ ಮತ್ತೆ ಮತ್ತೆ ಹೇಳುತ್ತಾ ಬಂದೆ. ಮನೆ ಹತ್ತಿರ ಬಂದಂತೆ ಸ್ವರವೂ ದೊಡ್ಡದಾಗಿ ಅಪ್ಪನ ಕಂಡೊಡನೆ ಅಳುವಾಗಿ ಬದಲಾಗಿ ಸ್ವಲ್ಪ ದೊಡ್ಡ ರಾದ್ಧಾಂತವೇ ಅಯ್ತು ! ಅಪ್ಪನೂ ಚಿಕ್ಕದಾಗಿ ಮುದ್ದಾಗಿ ಕಾಣ್ತಾ ಇದ್ದೆ ,ಮತ್ತೆ ಕೂದಲು ಬರ್ತು ಎಂದೆಲ್ಲ ನಂಬಿಸಿದ್ದಾಯ್ತು . ಅಂತೂ ಸಮಾಧಾನವಾಗಿ ಸ್ನಾನಕ್ಕೆ ಹೋದರೆ , ಹಲ್ಲು ತಿಕ್ಕುವಾಗ ಇಷ್ಟು ದಿನ ಅಲುಗಾಡುತ್ತಿದ್ದ ಹಾಲು ಹಲ್ಲು ಕೈ ಗೆ ಬಂತು . ಮೊದಲ ಹಲ್ಲು ..!! ತುದಿಗೊಂಚೂರು ರಕ್ತ ..! ಅಷ್ಟೇ .... ಮತ್ತೆ ಶುರು ರಗಳೆ ‌. ನನ್ನ ಹಲ್ಲು ಬಿದ್ದೋತು ಎಂದು ಜೋರಾಗಿ ಅಳು ...

ಗಿಡ್ಡ ಕೂದಲು ಮರೆತು ಹೋಯ್ತು .. ಅದರ ಜಾಗಕ್ಕೆ ಹಲ್ಲು ..

ಎಲ್ಲಾರಿಗೂ ಬೀಳ್ತು ಹಲ್ಲು , ಹೊಸ ಗಟ್ಟಿ ಹಲ್ಲು ಬರ್ತು .. ಎಲ್ಲ ಮಕ್ಕಳಿಗು ಹಲ್ಲು ಬಿದ್ರೆ ಖುಷಿ ಆಗ್ತು .( ದೇವಾರಾಣೆ ಗೊತ್ತಿಲ್ಲ !) ಅಣ್ಣ ಹಲ್ಲು ಬಿದ್ರೆ ಖುಷಿ ಪಡತ್ನಡ ಎಂದೆಲ್ಲ  ಬಾಯಿಗೆ ಬಂದಿದ್ದು ,ನೆನಪಾಗಿದ್ದೆಲ್ಲ ಹೇಳಿ ಸಮಾಧಾನ ಮಡೋ ಹೊತ್ತಿಗೆ ಸಾಕಾಗಿ ಹೋಯ್ತು . ಅಂತೂ ಸ್ನಾನ ಮಾಡಿಸಿ ರೆಡಿ ಮಾಡಿ ಕನ್ನಡಿ ನೋಡ್ಕ ಹೇಳಿ ನಾನು ಸ್ನಾನಕ್ಕೆ ಹೋದೆ . ಕನ್ನಡಿ ನೋಡು ಹೇಳಿ ದೊಡ್ಡ ತಪ್ಪು ಮಾಡಿದ್ದೆ ! ಸ್ವಲ್ಪ ಹೊತ್ತಿಗೆ ಬಾತ್ ರೂಮ್ ಬಾಗಿಲು ಬಡಿಯುತ್ತಾ ದೊಡ್ಡ ಅಳು ... ನಾ ಚಂದನೇ ಕಾಣ್ತಾ ಇಲ್ಲೆ .. ಉದ್ದ ಕೂದಲು ಇದ್ದಿದ್ರಾದ್ರು ಚೊಲೊ ಕಾಣ್ತಿದ್ನೇನೋ ಈಗ ಚಂದಾ ಕಾಣ್ತಾ ಇಲ್ಲೆ ...
ಹಲ್ಲು ಬಿದ್ದ ನೋವು ಹೋಗಿ ಚಂದದ ವಿಷಯವಾಗಿತ್ತು
ಹೊಸ ಹಲ್ಲು ಬಂದಮೇಲೆ ಸರಿ ಆಗ್ತು , ಈಗಲೂ ನೀ ಚಂದ ಇದ್ದೆ ,ಗಿಡ್ಡ ಕೂದಲಾಗಿದ್ದಕ್ಕೆ ಇನ್ನೂ ಚಂದ ಅಂತೆಲ್ಲ ಒಳಗಿಂದಲೆ ಸಮಾಧಾನ ಹೇಳಿದ್ದಾಯ್ತು . ಸ್ನಾನ ಮುಗಿಸಿ ಬರುವ ಹೊತ್ತಿಗೆ ನಿಶ್ಯಬ್ದ . ಮಗಳು ಕಾರ್ಟೂನ್  ನೋಡುತ್ತಿದ್ದಳು . ಸಮಾಧಾನವಾಯ್ತು .

ಅರ್ಧಗಂಟೆಗೆ ಹಾಜರ್" ಅಮ್ಮ ನಂಗೆ ಇವತ್ತು ಮಲಗಲೆ ಪಿಲ್ಲೋ ಬೇಕು" . "ಎಂತಕ್ಕೆ?"." ಹಲ್ಲು  ಪಿಲ್ಲೋ ಅಡಿಗೆ ಇಟ್ಗ ಮಲಗಲೆ . ಟೂತ್ ಫ಼ೇರಿ ಬಂದು ತಗಹೋಗ್ತು".

ಟೂತ್ ಫ಼ೇರಿ ಎಂಟ್ರಿ ...

ಈ  ಅಭ್ಯಾಸವಿಲ್ಲದ ಕಾರಣ , " ನೋಡು ನಮ್ಮನೆಗೆ ಬಾಲ್ಕನಿ ಇಲ್ಲದ್ದಕ್ಕೆ ಟೂತ್ ಫ಼ೇರಿ ಗೆ ಬರಲಾಗ್ತಿಲ್ಲೆ , ನೀ ಹಂಗಾಗಿ ಎದುರುಗಡೆ ಇರ ತೆಂಗಿರದ ಕೇಳಗೆ ಹಾಕಿಕ್ಕೆ ಬಾ . ಅದು ಅಲ್ಲಿಂದ ತಗಂಡು ಹೋಗ್ತು ಹೇಳಿ ತೆಂಗಿನಮರದಡಿ ಹಾಕಿಸಿದ್ದಾಯ್ತು .
ಅಲ್ಲಿಗೆ ಎಲ್ಲಾ ಮುಗಿಯಿತು ಎಂದುಕೊಂಡರೆ ಅದು ಮುಕ್ತಾಯವಲ್ಲ ಸಷೇಶ ಎಂದು ಗೊತ್ತಾಗಿದ್ದು ರಾತ್ರಿ ಹನ್ನೆರಡೂವರೆಯಲ್ಲಿ  ಮಗಳು  ಎಬ್ಬಿಸಿ  ಅಮ್ಮಾ ಬ್ಯಾಟರಿ ತಗ ಹೊರಗೆ ಹೋಪನ ಎಂದಾಗ ‌! ಎಂತಕ್ಕೆ ಎಂದೆ ಅರೆಬರೆ ಸಿಟ್ಟಲ್ಲಿ . "ಟೂತ್ ಫ಼ೇರಿ ಹಲ್ಲು ತಗಂಡು ಒಂದು  ಕಾಯಿನ್ ಇಟ್ಟಿಕೆ ಹೋಗ್ತು ಅದನ್ನ ಯಾರಾದ್ರು ಕದ್ಕ ನೆಡದ್ರೆ ... ಹೋಗಿ ತಗಬರನ ಬಾ" .. ಇಲ್ಲೆಲ್ಲ ಅದು  ಕಾಯಿನ್ ಇಡ್ತಿಲ್ಲೆ  ಅದರ ಬದಲು ನಿಂಗೆ ಸ್ಟ್ರಾಂಗ್  , ವೈಟ್ ಹಲ್ಲು ಕೊಡ್ತು ಮಲಗು ಈಗ ಅಂತಾ ಮಲಗಿಸಿದೆ .

ಬೆಳಗ್ಗೆ ಎದ್ದಕೂಡಲೆ "ಅಮ್ಮಾ  ಬಾಗ್ಲು ತೆಕ್ಕೊಡು , ಹಲ್ಲು ತಗಂಡು ಹೋಜ ನೋಡವು". ಇಲ್ಲದ ಟೂತ್ ಫ಼ೇರಿ ಹಲ್ಲು ತೆಗೆದುಕೊಂಡು ಹೋಗುವುದಾದರೂ ಹೇಗೆ .?ಇದು ಮತ್ತೊಂದು ಹಟಕ್ಕೆ ನಾಂದಿ ಎಂದುಕೊಂಡು  Safer side ಗೆ ನಾನೆ ಕತೆ ಕಟ್ಟಿದೆ .."ಅದೆಂತಾ ಒಂದೆ ಹಲ್ಲಿಗೆ ಹೇಳಿ ಬರಲಾಗ್ತ ?ರಾಶಿ ಮಕ್ಕಳ  ಹಲ್ಲು ಬಿದ್ದಾಗ ಬರ್ತನ ಈಗ ಹಲ್ಲು  ಅಲ್ಲೇ ಇದ್ರೆ ನೀ ಅಳಲಾಗ , ಬೇಜಾರ್ ಮಾಡ್ಕಳಲಾಗ ,ಅದು ಇನ್ನೊಂದಿನ ಬಂದು ತಗ ಹೋಗ್ತು" ಹೇಳಿ ಸಮಾಧಾನ ಮಾಡುತ್ತಲೆ ಬಾಗಿಲು ತೆಗೆದೆ . 
ಹೋಗಿ ನೋಡಿದರೆ ಹಲ್ಲು ಅಲ್ಲಿಲ್ಲ .. ನನ್ನ ಥರಾನೆ ನಿನ್ನೆ ರಾಶಿಜನಕ್ಕೆ ಹಲ್ಲು ಬಿದ್ದಿದ್ದೆ ಎಂದು ಮಗಳು ಸಮಾಧಾನಗೊಂಡಳು ಎಂಬಲ್ಲಿಗೆ ಮೊದಲ ಹಲ್ಲಿನ ಕತೆ ಮುಕ್ತಾಯ ..
-ಸಂಧ್ಯೆ ..
14-12-2021

Saturday, 2 March 2019

ಲೆಕ್ಕ !!

ದ್ವಾಪರದಿ ಹದಿನಾರು ಸಾವಿರವಂತೆ..
ಈಗೆಷ್ಟು ಗೋಪಿಕೆಯರೋ ..
ರಾಧೆಯರೋ  ...
ಅಂದಾಜಿಹುದೇ ಮಾಧವಾ...

ಕೊಳಲ ದನಿ ಕೇಳುತ್ತಾ
ಹೆರಳು ಹೆಣೆದು ಮುಡಿಗಿಷ್ಟು
ಮಲ್ಲಿಗೆಯಿಟ್ಟು ಕನ್ನಡಿಯಲ್ಲೇ
ನಿನ್ನ ಧೇನಿಸಿಕೊಂಡವರೆಷ್ಟೋ....

ಪುಸ್ತಕದ ಹಾಳೆಯಲ್ಲಿನ
ನವಿಲುಗರಿಯ ಸೋಕಿಸಿಕೊಂಡು
ನಿನ್ನದೇ ಸ್ಪರ್ಶವೆಂದು ನವಿರಾದವರೆಷ್ಟೋ...

ಗೋಕುಲಾಷ್ಟಮಿಯ ದಿನದಿ
ನಿನಗಿಷ್ಟು ಬೆಣ್ಣೆಯಿಟ್ಟು
ಸಂಭ್ರಮಿಸಿದವರೆಷ್ಟೋ..
ಗೋವ ಕಣ್ಣಲಿ ನಿನ್ನ ಕಂಡು
ಪುಳಕಗೊಂಡವರೆಷ್ಟೋ...

ಕರಿಮೋಡದಂಥ ಪಾದವ
ಎದೆಯಲ್ಲೇ ಅಚ್ಚೊತ್ತಿಕೊಂಡು
 ಪ್ರೀತಿ ಮಳೆಯಲ್ಲಿ  ವಿರಹದುರಿಯ
ಹರಿದುಕೊಂಡವರೆಷ್ಟೋ..

ನೀಲವರ್ಣದ ಚಿತ್ರ ರಚಿಸಿ
ನವಿಲುಗರಿ ತೊಡಿಸಿ
ಕೊಳಲ  ಪಿಡಿದ ಕೈ
ಪಕ್ಕದಲೇ ಗೋವ ಮೂಡಿಸಿ
ಕೃಷ್ಣನೆಂದು ಪೂಜಿಸಿದವರೆಷ್ಟೋ...

ದ್ವಾಪರದಿಂದ ಕಲಿಯವರೆಗೂ
ತಿರುಗಿನೋಡೋಮ್ಮೆ ನೀನು
ಸಿಗಬಹುದು ಲೆಕ್ಕಕ್ಕಿನ್ನಷ್ಟು ಸಾವಿರ..
ಮುರಳಿ ಹಿಡಿದು ಮರಳಿ
ಬಂದೊಮ್ಮೆ ನೋಡು
ಹರಿದುಬಂದೀತು ಬೃಂದಾವನಕೆ
ಗೋಪಿಕೆಯರ ಸಾಗರ...

Thursday, 15 November 2018

ಒಲವು


ನಿನ್ನಿರುವ ಚಿಗುರ ಹೊದ್ದುಕೊಂಡಂತೆ 
ನನ್ನೂರ ಹಸಿರು..
ನೊರೆ ಹಾಲ ಜೊಲ್ಲು ಸುರಿಸಿ 
ಕುಣಿವ ಕರುವಿಗೂ ಇಡಬೇಕೆನಿಸುತ್ತಿದೆ 
ನಿನ್ನ ಹೆಸರು..

ಇದು ಬೆಳಿಗ್ಗೆ ಬಸ್ ಇಳಿದು ಊರ ದಾರಿ ಹಿಡಿದು  ಮನೆಯಂಗಳದಿ ಕುಣಿವ ಕರು ನೋಡಿದ ಕೂಡಲೇ ನೆನಪಾಗಿದ್ದು. ಹಿಡಿವ ಪ್ರಯತ್ನಕ್ಕೆ ಸಿಗದ ಕರುವನ್ನು ಅಪ್ಪ ಎತ್ತಿಕೊಂಡು ಬಂದರು. ಮೆತ್ತನೆಯ ಮೈ ಸವರಿದರೆ ನಿನ್ನದೇ ಬೆಚ್ಚನೆಯ ಸ್ಪರ್ಶ ನೆನಪಾಗಿದ್ದು. " ಮೊನ್ನೆ ಹುಟ್ಟಿದ್ದು, ನೀ ಬಂದ ಮೇಲೆ ಹೆಸರಿಡುವ ಎಂದಿದ್ದೆ ಅಮ್ಮನಿಗೆ. ಇದಕ್ಕೊಂದು ಹೆಸರು ಹೇಳು ಎಂದ ಅಪ್ಪ ನಾ ಚಿಕ್ಕವಳಿದ್ದಾಗ ಎತ್ತಿಕೊಂಡಂತೆ ಎತ್ತಿಕೊಂಡಿದ್ದರು ಆ ಕರುವನ್ನು." ಮೂನ್ "  ಅಂತಾ ಇಟ್ರೆ ಓಕೆ ನಾ ಎಂದ ಅಣ್ಣನ ರಟ್ಟೆ ಚಿವುಟಿ ಒಳಗೆ ಹೋದ ಅತ್ತಿಗೆಯನ್ನು , ಅಣ್ಣನ ತುಂಟ ನಗೆಯನ್ನು ಗಮನಿಸದೇ ಇರಲಾಗಲಿಲ್ಲ. ಅಣ್ಣನಿಗೆ ಗೊತ್ತಾಗಿದೆ ಎನ್ನುವ ದುಗುಡದ ಜೊತೆಜೊತೆಗೆ ಸಮಾಧಾನವೂ ಆಯ್ತು. ಅರ್ಥವಾಗದೇ ನಿಂತ ಅಪ್ಪನಿಗೆ ಚಂದು ಎಂದೆ. "ಚಂದು ಬುಡ್ಡಾ ಅಕ್ಕ ಬಂದಿದಾಳೆ, ಇನ್ನಷ್ಟು ದಿನ ಅವಳೇ ನಿನಗೆ ಜಾಯಿ ಕುಡಿಸೋದು. ಕೈ ಕಚ್ಚಬಾರದು ಅವಳದ್ದು " ಎಂದು ಮುದ್ದಿಸುತ್ತಾ  ಅಪ್ಪ ಕರುವನ್ನು ಕೊಟ್ಟಿಗೆಗೆ ತೆಗೆದುಕೊಂಡು ಹೋಗುತ್ತಿದ್ದರೆ ಹೆಸರು ಅರ್ಥ ಮಾಡಿಸಿದಷ್ಟು ಸುಲಭವಲ್ಲ ಹೊಸ ಬಂಧದ ಬಗೆಗೆ ತಿಳಿಸುವುದು ಎನಿಸಿತು. ನಿಂತಲ್ಲೆ ನಡುಗಿದೆ. ಅಣ್ಣ ಬೆನ್ನಿಗೆ ಕೈ ಹಾಕಿ ಒಳಕರೆದುಕೊಂಡು ಬಂದ. 

ಕ್ಷಮಿಸು ಹೊರಡುವ ಮೊದಲೇ ಮಾತಾಗಿತ್ತಲ್ಲ ನಿನ್ನ ನೆನಪಿಸಿಕೊಳ್ಳಬಾರದೆಂದು. ಏನು ಮಾಡಲಿ ಉಸಿರಾಟದಷ್ಟೇ ಸರಾಗ ನೀನು. ಎನಾಗಿರಬಹುದಲ್ಲಿ ಅಬ್ಬಬ್ಬಾ ಎಂದರೆ ನಿನಗೆ ಬಿಕ್ಕಳಿಕೆ ಬಂದಿರಬಹುದು. ನಿಮ್ಮನೆಯ ಬೀದಿ ಕೊನೆಯಲ್ಲಿ ಹೋಗುತ್ತಿರುವ ಹುಡುಗಿ ನನ್ನಂತೆ ಭಾಸವಾಗಿ ನೀ ಕೆಮ್ಮಿರಬಹುದು. ನಿನ್ನ ಕೆಮ್ಮಿನ ಸದ್ದಿಗೆ ನಾನಲ್ಲದ ಅವಳು ತಿರುಗಿದರೆ ನೀ ತಲೆ ಕೆದರಿಕೊಳ್ಳುತ್ತಾ ಪೆಚ್ಚುನಗೆ ನಕ್ಕಿರಬಹುದು. ಆ ನಗೆಯೂ ಚಂದವೇ.. ದೃಷ್ಟಿಯಾದೀತು.

ಅಣ್ಣನ ಜೊತೆ ಎಂಟು ದಿನದ ಅದ್ಯಾವುದೋ ಕ್ಯಾಂಪ್ ಗೆ ಮನೆಗೆ ಬಂದವ ಎಲ್ಲರನ್ನೂ ಇಂಪ್ರೆಸ್ ಮಾಡಿಬಿಟ್ಟಿದ್ದೆಯಲ್ಲ.ನೀವೆಲ್ಲ ಸೇರಿ  ದೇವಿ ಎಂದು ನನಗೆ ರೇಗಿಸುತ್ತಿದ್ದಿರೆ ನಾ ಮುಖ ಊದಿಸಿಕೊಂಡು ತಿರುಗುತ್ತಿದ್ದೆ. ಆದರೆ ಅದೊಂದು ದಿನ ಕಾಗದದ   ಹೃದಯವನ್ನು ಪಾದದ ಮೇಲಿಟ್ಟು " ಹೃದಯವನ್ನು ಪಾದದ ಮೇಲಿಟ್ಟಾಗಿದೆ ಮುಂದಿನದು ದೇವಿ ಚಿತ್ತ" ಎಂದಾಗ ಮಾತ್ರ ದೇವಿ ಎನ್ನುವ ಶಬ್ದ ಖುಷಿಕೊಟ್ಟಿತ್ತು.  ನಿನಗೆ ಗೊತ್ತಿಲ್ಲದೇ ಆ ಹೃದಯವನ್ನು ಜೋಪಾನವಾಗಿಟ್ಟಿದ್ದೆ. ಮತ್ತು ನಿನ್ನೆದೆರು ಅದೇ ಥರದ ಬೇರೆ ಹೃದಯವನ್ನು ಮಾಡಿ ಬೆಂಕಿಗೆ ಹಾಕಿದ್ದೆ. ಅದಾದಮೇಲೆ ನನ್ನ ಡಾನ್ಸ್ ಕ್ಲಾಸ್ ಮತ್ತು ನಿ‌ನ್ನ ಸ್ಪೋರ್ಟ್ಸ್ ಕ್ಲಬ್  ಒಂದೇ ಕಡೆಯಾದಾಗ ಹತ್ತು ನಿಮಿಷದ ಪೆಟ್ಟಿಅಂಗಡಿ ಟೀ ಗೆ ಗೆಳೆಯನಾದೆ.  ಸುಮಾರು ಆರು ತಿಂಗಳ ನಂತರವಿರಬೇಕು ಅಲ್ಲವಾ ಕಾಗದದ ಹೃದಯವನ್ನು ನಿನಗೆ ವಾಪಸ್ ಕೊಟ್ಟಿದ್ದೆ. ನೀ ಎದೆಯಲ್ಲೇ ಕೂರಿಸಿಕೊಂಡುಬಿಟ್ಟೆ. ಅಲ್ಲಿ ಶುರುವಾಗಿತ್ತು ಪ್ರೀತಿ.  ನಮ್ಮ ಅಣ್ಣಂದಿರ ಗೆಳೆತನದಿಂದ ಶುರುವಾದ ಪ್ರೀತಿಯನ್ನು ಅವರಿಗೂ ಗೊತ್ತಿಲ್ಲದಂತೆ ಕಾಪಾಡಿಕೊಂಡು ಬಂದಿದ್ದಕ್ಕೆ ಹೆಮ್ಮೆ ಪಡಬೇಕೋ  ಇಲ್ಲವೋ ತಿಳಿಯುತ್ತಿಲ್ಲ. 

ನಂಗೊತ್ತು ನೀ ಮೌನದಲೆ ನನ್ನ ಕಂಡುಕೊಂಡರೆ ನಾ ಸದ್ದಿನಲೇ ನಿನ್ನ ಹುಡುಕುತ್ತೇನೆ.  ಬೆಳಗಿನ ಕಾವಳದ ಪಳ ಪಳದಲ್ಲೂ ನನ್ನ ಕಾಣುವ ನಿನ್ನನ್ನು, ನಾ ನಿಗಿ ನಿಗಿ ಕೆಂಡದ ಬುರುಬುರು ಸದ್ದು ಮಾಡುವ ಬೆಂಕಿಯ ಸದ್ದಲ್ಲಿ ಕಂಡುಕೊಳ್ಳುತ್ತೇನೆ. ಮತ್ತು ಬೆಚ್ಚಗಾಗುತ್ತೇನೆ. ನಿನಗಲ್ಲಿ ಬೆಳಗಿನ ಟೀ ಯಲ್ಲಿ , ಧ್ಯಾನ ಮಂಟಪದ ತಣ್ಣನೆಯ ಕಂಬಗಳಲ್ಲಿ,  ಕಲ್ಯಾಣಿಯ ಶಾಂತ ನೀರಲ್ಲಿ ನನ್ನದೇ ನೆನಪಾಗಿರುತ್ತೆ ಅಲ್ಲವಾ. ನೆನಪು ಮಾಡಿಕೊಳ್ಳೋದು ಬೇಡ ಎಂದಷ್ಟು ಸುಲಭವಲ್ಲ ಅದರಂತೆ ನಡೆಯೋದು ;  ಬೆಳಿಗ್ಗೆ ತಾಗಿದ ಎಳೆ ಬಿಸಿಲ ಕೋಲಲ್ಲಿ , ಮಧ್ಯಾನ್ಹ ದ ಸ್ನಾನದಲ್ಲಿ ಸುರುವಿಕೊಂಡ ಬಿಸಿ ನೀರ  ಹಿತದಲ್ಲಿ  ನೀನೆ ಇದ್ದೆ. ಅಷ್ಟೇ ಏಕೆ ಸಂಜೆ  ಅಮ್ಮ ...‌.

ಎಣ್ಣೆ ಬತ್ತಿ  ಸೇರಿದರೇನೇ ದೀಪ
ಎಂದಳು  ಜೋಡಿ ದೀಪಗಳ ಬೆಳಗುತ್ತಾ ...
ನಾನು  ಮುಗುಳುನಕ್ಕೆ 
ನಾನು ನೀನು ಬೆರೆತರೇನೇ ಪ್ರೀತಿ 
ಎಂದ ನಿನ್ನ ಜೋಡಿ ಕಣ್ಣುಗಳ 
ನೆನಪಿಸಿಕೊಳ್ಳುತ್ತಾ... 

ಊಟ ಮಾಡಿ ಹೊಡಸಲ ಬೆಂಕಿಯ ಸುತ್ತು ಕುಳಿತು ಮನೆಯವರೆಲ್ಲ ಮದುವೆಯ ವಿಷಯ ಮಾತನಾಡುತ್ತಾ ಈ ಕಾರ್ತಿಕದಲ್ಲಾದ್ರು ನೋಡಬಹುದಿತ್ತು ಎನ್ನುತ್ತಿದ್ದರೆ , ನಾನು ಮೊನ್ನೆ ನೀ ಕಳಿಸಿದ " ಇಬ್ಬನಿಯು ಸುಡುತಿಹುದು ತಂಗಾಳಿ ನಗುತಿಹುದು ಇನ್ನೆಷ್ಟು ಚಳಿಗಾಲ ಕಾಯೋದೇ ಹುಡುಗಿ " ಸಾಲುಗಳನ್ನು ಓದಿ ನಗುತ್ತಿದ್ದೆ.  ನಾವು ಮಾತನಾಡುತ್ತೇವೆ ಎಂದು ಅತ್ತಿಗೆ ಮಾಡಿದ ಸನ್ನೆಗೆ ಸದ್ದಿಲ್ಲದೇ ಅಲ್ಲಿಂದ ಎದ್ದು ಬಂದಿದ್ದೇನೆ. ಮನದೊಳಗಿನ ದುಗುಡ ಇಷ್ಟೆಲ್ಲ ಬರೆಸಿತು. ಇನ್ನು ಬಾಗಿಲ ಬಳಿಯಲ್ಲಿ ಅಪ್ಪ ಬಂದು ನಿಂತು ಮುಗುಳುನಕ್ಕರೆ ನನಗೇನೋ ಸಮಾಧಾನ. 

Monday, 29 October 2018

ಬೆಲೆ....

ನಾನಲ್ಲಿ ಹೋದಾಗ ಅವಳು ಇಲ್ಲದ ಕಾಲಿನ ಮುಂದೆ ಚಾಕ್ ಪೀಸ್ ನಿಂದ ಕಾಲಿನ ಚಿತ್ರ ಬರೆದು ಕುಳಿತುಕೊಂಡಿದ್ದಳು ಎನ್ನುತ್ತಾ  ಕಾಫಿ ಹೀರಿದ ಸ್ಥವಿರ.

ಎಷ್ಟೊತ್ತಿಗೆ  ಏನು ತಗೋತೀಯಾ ಅಂದಾಗೆಲ್ಲಾ ಮಗಾ ಹಾಟ್ ಇರಲಿ ಅಂತಾ ಆಲ್ಕೋಹಾಲ್ ಕ್ಯಾಬಿನ್ ಕಡೆಗೆ ಕೈ ತೋರಿಸುತ್ತಿದ್ದವನು ಇವನೇನಾ ಅನ್ನುತ್ತಾ ಹುಬ್ಬೇರಿಸಿದ ವರುಣ್ ಅವನ ಕೈ ಲಿದ್ದ ಕಾಫಿ ಕಪ್ ನೋಡುತ್ತಾ.

ವಿಚಿತ್ರ ಹುಡುಗಿ , ನಾನವಳನ್ನು ಮೊದಲ ಬಾರಿ ನೋಡಿದ್ದು  ಒಂದು accident ನಲ್ಲಿ . ಆ ಕಣ್ಣುಗಳನ್ನು ಮರೆಯೋಕೆ ಆಗದೆ ಅವಳಲ್ಲಿಗೆ ಹೋಗಿದ್ದೆ.   ಆ ಕಣ್ಣಗಳು ಅದೆಷ್ಟು ಹುಚ್ಚು ಹಿಡಿಸಿದ್ದವು ಎಂದರೆ, ಮದುವೆ ಆಗ್ತೀರಾ ಅಂದಿದ್ದೆ. ಶ್ರೀಮಂತರರಿಗೆಲ್ಲ ಕೈ ಕಾಲಿಲ್ಲದವರನ್ನು ಮದುವೆಯಾಗುವುದು ಚಾರಿಟಿ ಪ್ರೆಸ್ಟೀಜ್ ಅಡಿಯಲ್ಲಿ ಬರುತ್ತಾ ? ಅವನ್ಯಾವನೋ ಕುಡಿದು ಕಾರು ಹತ್ತಿಸಿ ಪ್ರಾಣ ತೆಗೆದು, ಹೋದ ಜೀವಕ್ಕೆ ದುಡ್ಡಲ್ಲಿ ಬೆಲೆ ಕಟ್ಟಿ ಆರಾಮಾಗಿ ಓಡಾಡುತ್ತಾನೆ. ನೀನಿಗ ಮದುವೆಯಾಗಿ ದೊಡ್ಡವನಾಗಹೊರಟಿದ್ದೀಯಾ,  ಅಂದಳು. ಅವಳ ಮಾತು ಮತ್ತು ದೃಷ್ಟಿಯ ತೀಕ್ಷ್ಣತೆಗೆ ಅಲ್ಲಿರಲಾರದೆ ಹೊರಬಂದೆ‌.

ಕಣ್ಣಸನ್ನೆಯಲ್ಲಿ ನೂರು ಹುಡುಗಿಯರನ್ನು ಬೀಳಿಸಿಕೊಳ್ಳಬಲ್ಲ ತಾಕತ್ತಿರುವ, ಅವನಾಡಿಸುವ ದುಡ್ಡಿನ ಕಂತೆಗೆ ಹಿಂದೆ ಬರುವ ಹುಡುಗಿಯರಿರುವ ದ ರಿಚ್ , ರಾಯಲ್ ,ಗ್ರೇಟ್‌ ಸ್ಥವಿರ ಎನ್ನುವ ಹುಡುಗ ಒಬ್ಬ ಕುಂಟಿಯನ್ನು ಮದುವೆಯಾಗಲು ಹೊರಟಿದ್ದನಾ ಎನ್ನುವ ಆಶ್ಚರ್ಯ ವರುಣ್ ಮುಖದ ಮೇಲಿತ್ತು.

ಸ್ಥವಿರ ಮುಂದುವರೆಸಿದ, ಹೊರಬಂದವನಿಗೆ ಅವಳಮ್ಮ "ಇದೇನೋ ಪ್ರಾಜೆಕ್ಟ್  ಅಂತಾ ಓಡಾಡುತ್ತಿದ್ದಳು . ಗೆಳೆಯರ ಜೊತೆ ಸೇರಿ ವೆಡ್ಡಿಂಗ್ ಪ್ಲಾನಿಂಗ್ , ಇವೆಂಟ್ ಮ್ಯಾನೇಜ್ಮೆಂಟ್ ನ ಬ್ಯುಸಿನೆಸ್ ಮಾಡಬೇಕೆಂದು ಅಂದುಕೊಂಡಿದ್ದಳು. ಅಷ್ಟರಲ್ಲಿ ಹೀಗೆ" .. . ಎನ್ನುತ್ತಾ  ಅವರಿಂದ ಮುಂದೆ  ಮಾತನಾಡಲಾಗಲಿಲ್ಲ. 

ಮನೆಗೆ ಬಂದವನೇ ಅವಳ ಪ್ರಾಜೆಕ್ಟ್ ಡೀಟೇಲ್ಸ್ ಸ್ಟಡಿ ಮಾಡಿ ಅವಳ ಗೆಳೆಯರನ್ನೆಲ್ಲ ಸೇರಿಸಿದೆ . ಅವಳದ್ದೇ ಆದ ಕಂಪನಿಯನ್ನು ಸ್ಟಾರ್ಟ್ ಮಾಡಿಸಿದೆ.  ಅವಳನ್ನು ಇಲ್ಲಿಗೆ ಬರುವಂತೆ ಮಾಡಿದೆ. ನಿಧಾನ ಕಂಪನಿ ಹೆಸರು , ಹಣ ಗಳಿಸಿತು. ಅವಳೆಂಥವಳೆಂದರೆ  ನನ್ನ ಹಣ ಸಹಾಯವನ್ನು ಒಂದು ಪೈಸೆ ಬಿಡದೆ ವಾಪಸ್ ಮಾಡಿದಳು.
ಏನೋ ಹೇಳಬೇಕೆಂದು ಬಾಯಿತೆರೆದ ವರುಣ್ ಗೆ ,

ಮೊದಲು ಎಲ್ಲವನ್ನು ಕೇಳು ಎನ್ನುವಂತೆ ಸನ್ನೆ ಮಾಡಿ ಸ್ಥವಿರ ಮತ್ತೆ ಮುಂದುವರೆಸಿದ..
ಮತ್ತೆ ಮಂಡಿಯೂರಿದ್ದೆ ಅವಳ ಮುಂದೆ ಬೊಗಸೆಯೊಡ್ಡಿ ಪ್ರೀತಿಗಾಗಿ.  ಆದರೆ ಅವಳು , ನಿಮ್ಮನ್ನ , ನಿಮ್ಮ ಪ್ರೀತಿಯನ್ನ ಒಪ್ಪಿಕೊಳ್ಳಬೇಕು ಎಂದುಕೊಂಡಾಗೆಲ್ಲ ಇದೇ ಅಡ್ಡಿ ಬರುತ್ತೆ ನೋಡಿ ಅಂದಳು ವಾಕಿಂಗ್ ಸ್ಟಿಕ್ ನೋಡುತ್ತಾ...  ಮಾತನಾಡುತ್ತಿದ್ದ ಸ್ಥವಿರನ ಗಂಟಲು ಕಟ್ಟಿದ್ದು ವರುಣ್ ಗಮನಕ್ಕೆ ಬಂತು..

"ನೀ ಹೇಗೆ ಇಷ್ಟೆಲ್ಲ ಬದಲಾದೆ ? ಅದೂ ಯಕಶ್ಚಿತ್ ಯಾವುದೋ ಆ್ಯಕ್ಸಿಡೆಂಟ್ ನಲ್ಲಿ ಭೇಟಿಯಾದ ಹುಡುಗಿಗಾಗಿ, ಕುಂಟಿಗಾಗಿ, ಇದು ಸಿಲ್ಲಿ ಅನ್ನಿಸ್ತಿಲ್ವಾ ನಿಂಗೆ "ಎಂದ ವರುಣ್  ಮಾತಿಗೆ ಸ್ಥವಿರ "ಇಲ್ಲ"ಎಂದು ಕಿರುಚಿದ್ದು ಆ ಮನೆಯ ಹಾಲ್ ನಲ್ಲಿ ಪ್ರತಿಧ್ವನಿಸಿತ್ತು.

" ಅವತ್ತು ಕುಡಿದ ಮತ್ತಿನಲ್ಲಿ ಆ ಆ್ಯಕ್ಸಿಡೆಂಟ್ ಮಾಡಿದ್ದು ನಾನೇ, ಕಾಲು ಕಳೆದುಕೊಂಡಿದ್ದು ಅವಳು"

ಈ ಮಾತನ್ನು ಕೇಳಿ ಉಗುಳು ನುಂಗಿಕೊಂಡ ವರುಣ್, ಹಾವು ಮೆಟ್ಟಿ ಬೆಚ್ಚಿಬಿದ್ದಂತಾಗಿದ್ದ.
"ಶ್ರೀಮಂತಿಕೆ, ಬುದ್ಧಿವಂತಿಕೆ, ಸೌಂದರ್ಯ ಎಲ್ಲ ಸೇರಿದಾಗ ಸ್ವಲ್ಪ ಹೆಚ್ಚಿನದೇ ಉಡಾಫೆ ಪೊಗರಿರುವುದು ತಪ್ಪಲ್ಲ ಎನಿಸಿತ್ತು , ಆದರೆ ಅದೆಲ್ಲ ಈಮಟ್ಟಕ್ಕೆ ಒಬ್ಬರ ಜೀವ ತೆಗೆಯುವ ಮಟ್ಟಕ್ಕೆ ನಿನ್ನ ತಳ್ಳಬಹುದು ಅಂತಾ ಗೊತ್ತಿರಲಿಲ್ಲ" ಕಣೋ ..

"ನನಗೂ ಗೊತ್ತಿರಲಿಲ್ಲ " ಎಂದು ವರುಣ್ ನ ತಬ್ಬಿಕೊಂಡ ಸ್ಥವಿರನ ಕಣ್ಣಲ್ಲಿ ನೀರಿತ್ತು. "ಸರಿ ಮಾಡಿಕೊಳ್ಳುವುದಕ್ಕೆ ಒಂದೇ ಒಂದು ಅವಕಾಶಕ್ಕೆ ಕಾಯುತ್ತಿದ್ದೀನಿ , ಅವಳನ್ನ ನೋಡುವಾಗೆಲ್ಲಾ  ಚೂರಿ ಇರಿದಂತಾಗುತ್ತೆ.  ಒಪ್ಪದ ಅವಳು ಮಾತ್ರ ತಣ್ಣನೆ ಕಣ್ಣುಗಳ ಕೊಲೆಗಾರ್ತಿ"....
***********
ಟೆರೆಸ್ ಗಾರ್ಡೆನ್ ನಲ್ಲಿ ಕಾಫಿ ಕುಡಿಯುತ್ತಾ ಕುಳಿತಿದ್ದಳು ಹರಿಣಿ.

 "ನಾನು ವರುಣ್ , ಸ್ಥವಿರನ ಬೆಸ್ಟ್ ಪ್ರೆಂಡ್ " ಪರಿಚಯ ಮಾಡಿಕೊಂಡ ವರುಣ್‌ .

ನಾನು ಹರಿಣಿ ..   ಸ್ಥವಿರ ಹೇಳಿರಬೇಕಲ್ಲ ಎಂದು ನಕ್ಕಳು..

ಥ್ಯಾಂಕ್ಸ್ ನಿಮಗೆ ,   ಅವನಲ್ಲಿನ ಬದಲಾವಣೆಗೆ... ಇವತ್ತು ನೋಡಿ  ನನ್ನ ಇಲ್ಲಿ ಬಿಟ್ಟು ಮೀಟಿಂಗ್ ಅಂತಾ ಹೋಗಿಬಿಟ್ಟ, ಒಂದಷ್ಟು ಜವಾಬ್ದಾರಿ , ಸಹನೆ , ಇನ್ನೊಬ್ಬರಿಗೆ ಸಹಾಯ ಮಾಡುವ ಒಳ್ಳೆತನ ಎಲ್ಲಾ ಬಂದಿದೆ.

ನಕ್ಕಳು ಅವಳು..

ಅವನ ಒಳ್ಳೆತನವನ್ನೂ ನೀವು ಒಪ್ಪಿಕೊಂಡಿದ್ದರೆ....  ಮಾತು ಮುಂದುವರೆಸ ಬೇಕಾ ಬೇಡವಾ ಎಂಬಂತೆ

ಹರಿಣಿಯ ಮುಖ ನೋಡಿವನಿಗೆ ಅವಳ ಮುಖದಿಂದ ನಗು ಮಾಯವಾಗಿದ್ದು ಸ್ಪಷ್ಟವಾಗಿತ್ತು.

ಸಹಾಯಕ್ಕೆ ಬದಲಾಗಿ ಪ್ರೀತಿಯನ್ನು ಒಪ್ಪಿಕೋ ಅಂತಾ ಹೇಳ್ತಿದೀರಾ ಅಲ್ಲವಾ..

ಹಾಗಲ್ಲ ಅವನು ನಿಮಗೋಸ್ಕರ, ನಿಮ್ಮಿಂದ ಬದಲಾಗಿದ್ದಾನೆ ....

ಅವರ "ಈ ಬದಲಾವಣೆಗಾಗಿ ನಾನು ತೆತ್ತ ಬೆಲೆ ನನ್ನ ಕಾಲು ವರುಣ್", ಸಹಾಯಕ್ಕೆ  ಕೃತಜ್ಞತೆಯಿದೆ, ಆದರೆ ಕೆಲ ಗಾಯಗಳೂ ಯಾವತ್ತೂ ವಾಸಿಯಾಗಲ್ಲ ಮನಸಿನ ಮೇಲಾದವುಗಳು. "ಅವತ್ತಿನ ಆ ರಾತ್ರಿಯಲ್ಲಿ , ಜಜ್ಜಿ ಅಪ್ಪಚ್ಚಿಯಾದ ಕಾಲು,  ದೂರ ಕಾರು ನಿಲ್ಲಿಸಿ , ಇಳಿದು ಒಮ್ಮೆ ನೋಡಿದ ಅವನ ಮುಖ, ಅವನೆಸೆದು ಹೋದ ದುಡ್ಡಿನ ಕಂತೆ ... ಇದೆಲ್ಲ ಇವತ್ತಿಗೂ ನನಗೆ ನಿತ್ಯವೂ ಬೀಳುವ ಕನಸಿನ ಭಾಗಗಳು"...
"ಎಲ್ಲ ತಪ್ಪುಗಳಿಗೂ ಶಿಕ್ಷೆಯಾಗಬಾರದು ಎಂದಾದರೆ , ಎಲ್ಲ ತಪ್ಪುಗಳಿಗೂ ಕ್ಷಮೆಯೂ ಇರುವುದಿಲ್ಲ" ಅಲ್ಲವಾ .

ಜೀವನ ಪರ್ಯಂತ ಶಿಕ್ಷಿಸಹೋರಟಿದ್ದೀರಾ?  ಅವನೆದುರೇ ಇದ್ದು ಕಾಡುವ ಬದಲು ದೂರ ಮರೆಯಾಗಿಬಿಡಬಹುದಲ್ಲ.

ಮದುವೆಯಾದರೆ ಎಲ್ಲಾ ಪೂರ್ಣವಾಗಲ್ಲ , ಮತ್ತಷ್ಟು ಛೇದವೇ,  ನಾನು ದಕ್ಕಿದ ಖುಷಿಗೆ ಮತ್ತೆ ಕುಡಿತ, ಮತ್ತೆ  ಡ್ರೈವಿಂಗ್ , ನಾನೇ ಅವನ ಗುರಿಯಾಗಿರುವಾಗ ನನ್ನ  ತಲುಪಿದ ಖುಷಿಗೆ ಮತ್ತೆ ಉಢಾಫೆ ಎಲ್ಲವೂ  ಮರುಕಳಿಸುತ್ತವೆ. ನಾನವನನ್ನು ಅರ್ಥಮಾಡಿಕೊಂಡಿದ್ದೇನೆ.. ಈಗ ನೀವೆಂದ ಬದಲಾವಣೆಗಳೆಲ್ಲ ಮತ್ತೆ ಮೊದಲ ಬಿಂದುವಿಗೆ ಮುಟ್ಟುತ್ತೆ ವರುಣ್ .   ನನ್ನಿರುವು, ನನ್ನೆಡೆಗಿನ ಪ್ರೀತಿ ಅವನನ್ನು ಸದಾ ಜಾಗೃತವಾಗಿಡುತ್ತದೆಯೆಂದಾದರೆ ಹಾಗೆ ಇರಲಿ...

ಇದು ಶಿಕ್ಷೆಯಲ್ಲ .. ನಿಮ್ಮ ಗೆಳೆಯನ ರಕ್ಷಣೆಗೆ ನಿಂತಿದ್ದೇನೆಂದುಕೊಳ್ಳಿ..

ಮೊದಲು ಪೋಣಿಸಿದ್ದು ಕೆಲವು ಸುಳ್ಳುಗಳು,  ಅವನೆಡೆಗಿನ ಪ್ರೀತಿಯೇ ಇದನ್ನೆಲ್ಲ ಮಾಡಿಸುತ್ತಿರುವುದು. ಎಂದು ಮನಸಿನಲ್ಲೆ ಅಂದುಕೊಳ್ಳುತ್ತಿದ್ದರೂ ಕೊನೆಯ ವಾಕ್ಯ ಹರಿಣಿಯ ಬಾಯಿಂದ ಅಪ್ರಯತ್ನವಾಗಿ ಹೊರಬಂದು ಬಿಟ್ಟಿತ್ತು.
ಅವನಿಗೆ  ಕೇಳಿಸಿತಾ ಎಂದು ತಟ್ಟನೆ ತಿರುಗಿದಳು ..

ಕೊನೆಯ ಮಾತು ತನಗೇ ಕೇಳಿಸಲೇ ಇಲ್ಲವಂಬಂತೆ ಅವಳಿಗೆ ಬೆನ್ನು ಹಾಕಿ ಹೊರಟಿದ್ದ ವರುಣ್. ಅವನಿಗೆ ಅವಳ ಪ್ರೀತಿ ಅರ್ಥವಾಗಿತ್ತು, ಮತ್ತೂ ತಾನು ಅದನ್ನೆಂದೂ ಸ್ಥವಿರನಿಗೆ ಹೇಳಲಾರೆ ಎಂದು ನಿರ್ಧರಿಸುತ್ತಲೇ ಮೆಟ್ಟಿಲಿಳಿಯತೊಡಗಿದ..

ಇತ್ತ ಮನದಲ್ಲಿ ಮೂಡುತ್ತಿದ್ದ ಸ್ಥವಿರನ ಚಿತ್ರವನ್ನು ಅಳಿಸುವಂತೆ ತಲೆಕೊಡವುತ್ತಾ ವಾಕಿಂಗ್ ಸ್ಟಿಕ್ ಹಿಡಿದು ಎದ್ದು ನಿಂತಳು ಹರಿಣಿ.

Tuesday, 26 September 2017

ಪಾರೋತಿ


"ಏನು ಪುಟ್ಟಮ್ಮ ಇಲ್ಲಿ ಕುಳಿತಿದ್ದೀರಿ, ಮಳೆ ನೋಡುಕಾ" ಎನ್ನುತ್ತಾ ಸುಟ್ಟ ಹಲಸಿನ ಹಪ್ಪಳ ಹಿಡಿದು ಪಾರೋತಿ  ಬಾಲ್ಕನಿಗೆ ಬಂದಾಗ ನಾ ಮಳೆ ದಿಟ್ಟಿಸುತ್ತಿದ್ದೆ. 

"ಕುಳಿತು ನೋಡುವಂಥ ಒಂದೇ ಒಂದು ಮಳೆ ಬರಲಿಲ್ಲ ನೋಡು" ಎಂದೆ. 

"ಮಳೆ ಏನು ನೋಡುದು, ಮಕಾ ಮುಸುಡಿ ಇಲ್ಲದೇ ಸುರಿತದೆ. ಅದ್ರಾಗ್ ಏನ್ ಚಂದವೋ ನಾ ಕಾಣೆ" ಎಂದಳು. 

ಹಾಗಲ್ವೆ ಮಳೆ ಅಂದ್ರೆ ಖುಷಿ ಅಲ್ವೇನೆ . ಈಗ ನಂಗೆ ನೋಡು ಮಳೆ ಅಂದ್ರೆ ಎಷ್ಟೆಲ್ಲ ನೆನಪು ಬರುತ್ತೆ ಗೊತ್ತಾ?    ಅಂದೆ . ಮಳೆ ಎಂದರೆ ಪ್ರಾಣ ಬಿಡುವ ನಾನು ಅವಳುತ್ತರಕ್ಕೂ ಕಾಯದೇ ನೆನಪಿಗೆ ಜಾರಿ ಬಿಟ್ಟೆ. 

ಅಪ್ಪ ಅಮ್ಮನಿಂದ ದೂರವಿರುತ್ತಿದ್ದ ನನಗೆ ಕೆಲವೊಮ್ಮೆ ಒಂಟಿತನ ಕಾಡುತ್ತಿತ್ತು‌. ಆಗೆಲ್ಲ ಕಿಟಕಿಯ ಪಕ್ಕ ಕುಳಿತು ಆಗಸ ನೋಡುತ್ತಿದ್ದೆ. ಆಗಿಂದಲೇ ನನಗೆ ಮಳೆ ಆತ್ಮೀಯವಾಗಿದ್ದು. ಉದ್ದ ಜಡೆ ಜೋರು ಮಳೆಗೆ ಒದ್ದೆಯಾದಾಗೆಲ್ಲ ಹೊಡಸಲ ಬೆಂಕಿಯಲ್ಲಿ  ಕೂದಲು ಒಣಗಿಸೋ ಸಂಭ್ರಮ.ಆಗೆಲ್ಲ ಕೂದಲಿಗೆ ಬೆಂಕಿಕಿಡಿ ತಾಗದಂತೆ ಅಜ್ಜಿ ಪಕ್ಕದಲ್ಲಿ ಕುಳಿತುಕೊಂಡು ನೋಡಿಕೊಳ್ಳುತ್ತಿದ್ದಳು. ಸಂಜೆಯಾದರೆ ಸುಟ್ಟ ಹಲಸಿನ ಹಪ್ಪಳದ ಜೊತೆ ಅದೇ ಹೊಡಸಲ ಮುಂದೆ ಕುಳಿತು ಅದೇಷ್ಟು ಭೂತ, ವರ್ತಮಾನದ ಕತೆಗಳಿಗೆ ಕಿವಿಯಾಗುತ್ತಿದ್ದೆವು ಗೊತ್ತಾ.? ಹುಟ್ಟಿದ ಭವಿಷ್ಯದ ಕನಸುಗಳೆಷ್ಟೋ.. ಅದೇ ಬೆಂಕಿಯಲ್ಲಿ ಕರಗಿದವಕ್ಕೂ ಲೆಕ್ಕವಿಲ್ಲ ಬಿಡು. ನೆನಪುಗಳು ಮತ್ತಷ್ಟು ಮತ್ತಷ್ಟುಮುತ್ತಿಕೊಳ್ಳುವ ಮೊದಲೇ  ನನ್ನದೇ ಲಹರಿಯಲ್ಲಿ  ಅವಳಸ್ತಿತ್ವವನ್ನೂ ಮರೆತು ಮಾತನಾಡುತ್ತಿದ್ದವಳು ಪಕ್ಕನೆ ತಿರುಗಿ ನಿಂಗೇನೂ ನೆನಪುಗಳಿಲ್ಲವ  ನಿಮ್ಮೂರ ಮಳೆ ಜೊತೆ? ಎಂದು ಕೇಳಿದೆ. 

"ಏನು ನೆನಪಾಗಬೇಕು ಹೇಳಿ. ಮಳೆ ಬಂದರೆ ತುಂಬಿ ಹರಿಯೋ ತುಂಗೆ. ಮನೆ ಸುತ್ತೆಲ್ಲ ನೀರು ತುಂಬಿ ದ್ವೀಪವಾಗಿಬಿಡ್ತಿತ್ತು.  ಅದ್ ಬಿಟ್ರೆ ತುಂಗೆಯಲ್ಲಿ ಕೊಚ್ಚಿ ಹೋದ ಅಪ್ಪ ಅಮ್ಮ. ಕೊನೆಯ ಸಾರಿ ಎಂಬಂತೆ ದಡಕ್ಕೆಳೆಯಲು ಪ್ರಯತ್ನಿಸಿದಾಗ ಸಿಕ್ಕ ಅಮ್ಮನ ಸೀರೆ" ಎಂದಳು. ಧ್ವನಿಯಲ್ಲಿ ಸ್ವಲ್ಪವೂ ಏರಿಳಿತವಿರಲಿಲ್ಲ !

 ನನಗೆ ಪಿಚ್ಚೆನಿಸಿ ಮಾತು ಬದಲಾಯಿಸಲು "ಈ ಊರಿನ ಮಳೆ ಜೊತೆ ? " ಎಂದು ಕೇಳಿಬಿಟ್ಟೆ. 

"ಅವ ಸಿಕ್ಕಿದ್ದು ಇಂಥದ್ದೇ ಒಂದು ಮಳೆಗಾಲದಲ್ಲಿ.. ಅವ ನನ್ನ ತೊರೆದು ತೋದದ್ದೂ ಇಂಥದೇ ಮಳೆಗಾಲದಲ್ಲೇ " ಎಂದು ಖಾಲಿಯಾದ ಬಟ್ಟಲ ತೆಗೆದುಕೊಂಡು ಸರಸರನೆ ಮೆಟ್ಟಿಲಿಳಿದು ಹೋದಳು. ಅವಳ ಮುಖವನ್ನೊಮ್ಮೆ ಓದಬೇಕೆಂದುಕೊಂಡವಳಿಗೆ ಮಬ್ಬು ಬೆಳಕಲ್ಲಿ ಕಂಡಿದ್ದು ಅವಳ ಬೆನ್ನ ಮೇಲಿದ್ದ ಬರೆ.. ಮನಸ್ಸೀಗ ಮಳೆ ತೋಯಿಸಿದ ಕೆರೆಯಾಗಿತ್ತು. ಪಾರೋತಿ ತುಂಬಿಕೊಂಡಿದ್ದಳು. 

ಈ ಪಾರೋತಿ ಶೃಂಗೇರಿ ಕಡೆಯವಳು. ಇಲ್ಲಿನ ಶಂಕ್ರನನ್ನು ಮದುವೆಯಾಗಿ ಈ ಊರಿಗೆ ಬಂದವಳು ಇಲ್ಲಿನ ನಡೆ ನುಡಿಯನ್ನೂ ಅದೆಷ್ಟು ಬೇಗ ಕಲಿತಿದ್ದಳೆಂದರೆ ನಮ್ಮೂರಿನ ಮಗಳೇ ಆಗಿಬಿಟ್ಟಿದ್ದಾಳೆ.  ಸ್ವಂತ ಜಮೀನಿನಲ್ಲಿ ಬೆಳೆ ತೆಗೆಯುತ್ತಾ, ಅವರಿವರ ಮನೆ ಕೊಟ್ಟೆ ಕೊನೆ,ಮದ್ದು ಮಾಡುತ್ತಾ, ಜೇನು ಕೀಳುತ್ತಾ ಇದ್ದೊಂದು ಅಜ್ಜಿ ಯನ್ನೂ ಹೆಂಡತಿಯನ್ನೂ ನೆಮ್ಮದಿಯಿಂದ ಸಾಕುತ್ತಾ ನಾಲ್ಕು ಜನ ಮೆಚ್ಚುವಂತೆ ಸಂಸಾರ ಮಾಡುತ್ತಿದ್ದ ಶಂಕ್ರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ.ತಿಂಗಳುಗಳು ಕಳೆದರೂ ಶಂಕ್ರ ಪತ್ತೆಯಾಗದಿದ್ದಾಗ, ಅವರಿವರ ಕಾಡಿಬೇಡಿ ಒಂದು ಹೊಲಿಗೆ ಅಂಗಡಿ ಹಾಕಿಸಿಕೊಂಡು, ಸಂಸಾರವನ್ನು ತನ್ನ ಹೆಗಲಿಗೆ ತೆಗೆದುಕೊಂಡಿದ್ದಳು. ಆದರೆ ಆ ಅಜ್ಜಿ ಅದೊಂದು ದಿನ ನನ್ನ ಕನಸಲ್ಲಿ ಮೊಮ್ಮಗ ಕಂಡಿದ್ದ, ಅವನು ಬದುಕಿಲ್ಲ, ನೀ ಮುತ್ತೈದೆಯಾಗಿರಬಾರದು ಎಂದು ಯಾರು ಹೇಳಿದರೂ ಕೇಳದೆ ಪಾರೋತಿಯ ಕುಂಕುಮ, ಬಳೆ, ಹೂವುಗಳ ತೆಗೆಸಿಬಿಟ್ಟಳು. ಅವಳ ಕಣ್ಣಿಗೆ ಕಾಣದಂತೆ ಒಂದೆರಡುಬಾರಿ ಸಿಂಗರಿಸಿಕೊಂಡಿದ್ದು ಗೊತ್ತಾಗಿ ಮುದುಕಿ ಇವಳ ಬೆನ್ನಿಗೆ ಬರೆ ಎಳೆದಿದ್ದಳು.  ನಾನೊಮ್ಮೆ ಇವಳನ್ನು ಕೇಳಿದ್ದೆ "ಅಜ್ಜಿ ಹೇಳಿದ್ದು ನಿನಗೂ ನಿಜ ಅನಿಸುತ್ತಾ ?"ಅದಕ್ಕವಳು "ಇಲ್ಲ ಅದ್ರೆ ಅವಳನ್ನು ಖುಷಿಯಿಂದ ಇಡಬೇಕು ನೀನು ಅಂತ ಶಂಕ್ರ ಮಾತು ತಗಂಡಾನೆ. ಪುಟ್ಟಮ್ಮ ನಂಗೆ ನಿಮ್ ಥರ ಪ್ರೀತಿ ಪ್ರೇಮ ಅಂತ ದೊಡ್ಡ ದೊಡ್ಡ ಮಾತೆಲ್ಲ ಆಡಾಕೆ ಬರುದಿಲ್ಲ. ಆದ್ರೆ ಮದ್ವೆ ಆದ ಸುರುವಲ್ಲಿ ಶಂಕ್ರ ನಂಗೆ ನಿಮ್ಮನೆ ಟೆರ್ರೆಸ್ ಮೇಲೆ ಕುಂತು ನಕ್ಷತ್ರ ನೋಡುದು ಕಲ್ಸಿಕೊಟ್ಟಿದ್ದ. ಈಗಲೂ ಬೇಸರ ಆದಾಗೆಲ್ಲ ನಕ್ಷತ್ರ ನೋಡ್ತೆ. ಆಗೆಲ್ಲ  ನಂಗೆ ಅಲ್ಲೆಲ್ಲೋ ಶಂಕ್ರನೂ ನನ್ಹಾಂಗೆ ಇದೇ ನಕ್ಷತ್ರ ನೋಡ್ತಿದ್ದಾ ಈಗ ಅನ್ನಿಸ್ತದೆ. ನಂಗೆ ಹಾಂಗೆ ಅನ್ನಿಸ್ದೆ ಇದ್ದ ದಿನ ನಾನು ಅಜ್ಜಿ ಹೇಳಿದ್ದನ್ನ ಒಪ್ಪಿಕೊಳ್ತೀನಿ. ಅಲ್ಲಿವರೆಗೂ ಅವಳ ಸಮಾಧಾನಕ್ಕೆ ಇದೆಲ್ಲ. ಮನಸಲ್ಲಿ ನಾ ಇನ್ನೂ ಮುತ್ತೈದೆನೆಯಾ" ಎಂದಿದ್ದಳು."ಇಂದೋ ನಾಳೆ ಉದರೋ ಆ ಮುದುಕಿಗಾಗಿ ಗೇಯೋ ಬದಲು ಆ ಪುಟ್ಟಣ್ಣನ ಕಟ್ಟಿಕೊಂಡು ಚಂದ ಸಂಸಾರ ಮಾಡಬಹುದಿತ್ತು"  ಎಂದು ಅತ್ತೆ  ಆಗಾಗ ಇವಳ ನೋಡಿ ಹಲುಬುತ್ತಾರೆ.  ಪಾರೋತಿ ಮಾತ್ರ ನಿರ್ಲಿಪ್ತೆ. ಪಾರೋತಿಯ ಮಾತುಗಳ ನೆನಪಾಗಿ "ಭೂರಮೆ ಕಾಯುತ್ತಿದ್ದಾಳೆ ಬಾರೋ ಮಳೆರಾಯ" ಎಂದು ಆಗಸವನ್ನು ಬೇಡಿಕೊಂಡು ಒಳಬಂದೆ.

ಬೇಡಿಕೊಂಡಿದ್ದೇ ನಿಜವಾಗುವಂತೆ ಮಳೆ ಭಯಂಕರವಾಗಿ ಶುರುವಾಗಿತ್ತು. ಗುಡುಗು, ಮಿಂಚು , ಸಿಡಿಲ ಅಬ್ಬರಕ್ಕೆ ಮಳೆ ಬೇಕೆಂದವಳೂ ಕೂಡ ಭಯಗೊಂಡಿದ್ದೆ. ಅತ್ತೆ ಬಂದು ನನ್ನ ಪಕ್ಕದಲ್ಲೆ ಮಲಗಿದ್ದರು. 

ಬೆಳಿಗ್ಗೆ ಏಳೋ ಹೊತ್ತಿಗೆ ಮಳೆಯ ಆರ್ಭಟ ಕಡಿಮೆಯಾಗಿದ್ದರೂ ಅನಾಹುತಕ್ಕೇನೂ ಕಡಿಮೆಯಿರಲಿಲ್ಲ.  ಎದ್ದವಳು  ಎಂದಿನಂತೆ ಪಾರೋತಿಯ ಮನೆ ಕಡೆ ನೋಡಿದೆ. ತುಂಬಾ ಜನ ಸೇರಿದ್ದರೂ ಸ್ಮಶಾನ ಮೌನವಿತ್ತು. ಅತ್ತೆಯ ಮುಖ ನೋಡಿದೆ, " ನಿನ್ನೆಯ ಗಾಳಿ ಮಳೆಗೆ ನಮ್ಮೂರಿಗೆ ಬರುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದು ನಾಲ್ಕು ಜನ ಸತ್ತರಂತೆ. ಅವರಲ್ಲಿ ಶಂಕ್ರನೂ ಒಬ್ಬ. ಊರ ಬಿಟ್ಟು  ಎಲ್ಲೆಲ್ಲೋ ಅಲೆದವನ ಸಾವು ಮಾತ್ರ ಊರ ಬಾಗಿಲಲ್ಲೇ ಬರೆದಿತ್ತು ನೋಡು. ಪಾಪ  ಆ ಹೆಣ್ಣು ಜೀವ " ಎಂದರು. 

ಕೈ ಕಾಲು ಸಣ್ಣಗೆ ನಡುಗುತ್ತಿದ್ದರೂ ಪಾರೋತಿಯ ಮನೆಯಂಗಳಕ್ಕೆ ಬಂದೆ. ನನ್ನ ಕಂಡವಳೇ ಓಡಿ ಬಂದು ತಬ್ಬಿಕೊಂಡಳು. " ಮನಸ್ಸಿನಲ್ಲಿ ಮುತ್ತೈದೆಯೇ ಎಂದವಳು ಹಾಗೆಯೇ ಬದುಕಿಬಿಡುತ್ತಿದ್ದಳು. ನೀ ಬರಲೇ ಬಾರದಿತ್ತು ಹಾಗೆಯೇ ಶಂಕ್ರನೂ " ಎಂದು ಮೊದಲ ಬಾರಿಗೆ ಮಳೆಯನ್ನು ಶಪಿಸುತ್ತಿದ್ದೆ.  ನನ್ನ ಮನಸ್ಸನ್ನು ಓದಿದವಳಂತೆ " ಇಷ್ಟು ದಿನ ಇದ್ದೂ ಇಲ್ಲದಂತೆ ಬದುಕಲಿಲ್ಲವ. ಈಗ ಇಲ್ಲವೇ ಇಲ್ಲ ಎಂದುಕೊಂಡು ಬದುಕುವುದು ಕಷ್ಟವಲ್ಲ ಪುಟ್ಟಮ್ಮ . ಎಲ್ಲ ಕೆಲಸಕ್ಕೂ ನಾನೇ ಮುಂದಾಗಬೇಕು ಈಗ, ಸಂಜೆ ದುಃಖ ಕರಗಿಸಿಕೊಳ್ಳುಕೆ ಹೆಗಲು ಕೊಡಿ ಸಾಕು" ಎಂದವಳು ಮರೆಯಾದಳು.

ಆಗಸ ಹರಿದಂತೆ ಮುಸಲಧಾರೆ ಮತ್ತೆ ಶುರುವಾಯ್ತು. ಶಂಕ್ರನ ಹೆಣ, ಸುತ್ತ ನೆರೆದ ಮಂದಿ, ಗೋಳಾಡುವ ಮುದುಕಿ ಎಲ್ಲರೂ ಮಸುಕು ಮಸುಕು... ಪಾರೋತಿಯ ಚಿತ್ರ ಮಾತ್ರ ಮನಸ್ಸಿನಲ್ಲಿ ನಿಚ್ಛಳ...

Monday, 14 August 2017

ಮೇಘಶ್ಯಾಮ


ಗೊಲ್ಲನೆಂಬರು.. ನಲ್ಲನೆಂಬರು..
ನಾ ನೀಲ ವರ್ಣದವ  ಮೇಘಶ್ಯಾಮ..
ಬಾಲನಿನ್ನೂ ನಿನ್ನ ಮಗ
ಹೊಡೆಯದಿರೆ ಅಮ್ಮಾ....
 ಜೇನ ತೆಗೆಯುವವ ಕೈ ನೆಕ್ಕದೆ ಇದ್ದಾನೇನೆ ?
ಗೋ ಮಾತೆಯ ಕಾಯ್ವವ ನಾ ಕದ್ದು ಹಾಲು
ಕುಡಿದರೆ ತಪ್ಪೇನೆ ?

ಅಟ್ಟಾಡಿಸಿ ಕೋಲ ತೆಗೆದುಕೊಂಡು
ಓಡಿಸಬೇಡ ಮಹರಾಯ್ತಿ..
ದೊಡ್ಡವನಾದಂತೆ ತುಂಟಾಟಕ್ಕಿಲ್ಲವೇ ರಿಯಾಯಿತಿ..
ನಿನಗೆ ಚಾಡಿ ಹೇಳಿದವರೇ
ಸುಮ್ಮಗೆ ಕರೆದು ಕೊಡುವರು
ನೀನೆ ಕೇಳು ತಿಳೀದೀತು ನಿಜಾಯತಿ..

ಹೊಡೆದಂತೆ ನಟಿಸಿ, ಕೋಲ ಒಲೆಗೆಸೆದು..
ದೃಷ್ಟಿ ತೆಗೆದು, ನೆಟಿಕೆ ಮುರಿದು
ಮಡಿಲಲ್ಲಿ ಕೂರಿಸಿಕೊಂಡು ನೊರೆ ಹಾಲ
ಕೊಡುವವಳು ನೀ ಕ್ಷಮಾಯಾಧರಿತ್ರಿ..
ಮಡಿಲ ತುಂಬಿ ನೊರೆ ಮೀಸೆಯಡಿಯಲ್ಲಿ
ನಗುವ ನಾ ಜಗನ್ನಾಟಕ ಸೂತ್ರಧಾರಿ

Sunday, 5 February 2017

ಹಾರ್ಟ್ ಬೀಟ್....:)



ಬಹಳ ದಿನಗಳ ಮೇಲೆ ನಾನು.. ಅವಳು.. ಮತ್ತು ಕಾಫಿ...

ಏನಾದರೂ ಹೇಳು..

ಏನ್ ಹೇಳ್ಲಿ...

ಅವನ ಬಗ್ಗೆ ಹೇಳು...

ಅವನು...

ನಾನು ಕೇಳಿದ ಮೊದಲ ಹಾರ್ಟ್ ಬೀಟ್ ಅವನದ್ದೇ... ಹೌದು ಅವತ್ತು ಅದೇನೋ ಓದುತ್ತಿದ್ದವನು ನನ್ನನ್ನು ಎದೆಗೊರಗಿಸಿಕೊಂಡಿದ್ದ..... ಡಬ್ ಡಬ್.. ಊಮ್ ಮ್ ಮ್.. ಲಬ್ ಡಬ್ ಊಹು ಆ ಸದ್ದೇ ಬೇರೆ.. ಜೀವನದಲ್ಲೇ ಮೊದಲಬಾರಿ ಕೇಳಿದ್ದೆ..!! ಬಹಳ ಖುಷಿಯಾಯ್ತು.,. ಮತ್ತೆ ಮತ್ತೆ ಕೇಳಿದೆ.. ಇದೇನ್ ನೀನು ಚೆಲ್ ಚಲ್ಲಾಗಿ ಆಡಿದ್ದು ಅನ್ನಬೇಡ ಮತ್ತೆ.. ಮೊದಲ ಸಲ ಅದೇನೋ ಹೊಸದನ್ನು ಕಂಡ ಮಗುವಾಗಿತ್ತು ಮನಸ್ಸು. ಕುತೂಹಲಕ್ಕೆ ಮತ್ತೆ ಮತ್ತೆ ಕೇಳಿದ್ದು.. ಅವ ಮಾತ್ರ ನನ್ನ ದುಪ್ಪಟ್ಟಾದ ಅಂಚು ಕೂಡ ಹಿಡಿಯಲಿಲ್ಲ.. ನಸುನಗುತ್ತ ಓದುತ್ತಲೇ ಇದ್ದ.. ಋಷಿಯಂತೆ.. ಅವತ್ತು ಅಷ್ಟುದ್ದದ ಬಟ್ಟಾ ಬಯಲಿನಂಥ ಜಗುಲಿಯಲ್ಲಿ.. ಮಟಮಟ ಮಧ್ಯಾಹ್ನದಲ್ಲಿ ನಮಗಾಗಿ ಅಂಥದೊಂದು ಏಕಾಂತ ಅದ್ಹೇಗೆ ಹುಟ್ಟಿತ್ತೋ ಇಂದಿಗೂ ಕಾಣೆ.. ಮನೆಗೆ ಬಂದ ಮೇಲೂ ಮನಸ್ಸು ಕೇಳುತ್ತಿತ್ತು ಅವನನ್ನು ಏನಂತ ಕರೆಯಲೇ ಎಂದು...


ಬೀದಿಯ ಮಕ್ಕಳೆಲ್ಲ ಅವನಿಗೆ ಅಂಕಲ್ ಎನ್ನುತ್ತಿದ್ದರು. ನಾನೂ ಅವರೊಂದಿಗೆ ಆಡುವಾಗ ಅಂಕಲ್ ಬಾಲ್ ಪ್ಲೀಸ್.,. ಎಂದರೆ ಕಣ್ಣಲ್ಲೊಂದು ಅಸಹನೆ... ಬಾಲ್ ಕೊಡದೆ ಒಳಗೆ ಹೋಗುತ್ತಿದ್ದ.. ಹಿಂಬಾಲಿಸಿ ಹೋದರೆ.. ಕಿವಿ ಹಿಂಡಿ ,ಸಾರಿ ಹೇಳಿಸಿ ಬಾಲ್ ಕೊಡೊಹೊತ್ತಿಗೆ ಮಕ್ಕಳು ಬಾಲ್ ಮರೆತು ಬೇರೆ ಆಟಕ್ಕೆ ತೊಡಗುತ್ತಿದ್ದವು .ನಾನೋ ಮಕ್ಕಳನ್ನೇ ಮರೆತಿರುತ್ತಿದ್ದೆ.


ರಸ್ತೆಯಲ್ಲಿ ಹೋಗುತ್ತಿದ್ದಾಗ ಅದ್ಯಾರೋ ಬೇಕಂತಲೇ ಎಲ್ಲಿಗೋ ಕೈ ತಾಕಿಸಿ, ಕಣ್ಣುಹೊಡೆದು ಹೋಗಿರುತ್ತಾನೆ. ಇದನ್ನೆಲ್ಲ ಅವನಿಗೆ ಹೇಳಿದರೆ " ಕೈ ಹಿಡಿದು ನಿಲ್ಲಿಸಿ ಕಪಾಳಕ್ಕೆರಡು ಬಾರಿಸಿ ಬರಬೇಕಿತ್ತು. ಮುಂದೇನಾದರೂ ಆದರೆ ನಾನ್ ನೋಡಿಕೊಳ್ತಿದ್ದೆ" ಎನ್ನುವಾಗ ಅಣ್ಣ ಅವನು. ಆದರೆ ಹಾಗೆ ಕರೆಯಲು ಮನಸ್ಸೇ ಬಾರದು. ಎದುರುಮನೆಯ ಕಾಲೇಜುಹುಡುಗಿ ಅವನಿಗೆ ಅಣ್ಣಾ ಎಂದರೆ ನನಗೇನೋ ಸಮಾಧಾನ.


ಅದೆಲ್ಲ ಆವಾಗ.. ಈಗಿಂದು ಹೇಳು....


ಈಗ.,.

ಅಮ್ಮ ಅವನನ್ನು ಮಗನೆಂದಾಗ, ಅಪ್ಪ ಅವನನ್ನೇ ಆದರಿಸಿದಾಗ, ತಂಗಿ ಅವನನ್ನೇ ವಿಚಾರಿಸಿದಾಗ ನನ್ನವರನ್ನೇ ನನ್ನಿಂದ ದೂರ ಮಾಡಿದ ದುಷ್ಟ ಅವನು..


ಅವನಮ್ಮ ನನ್ನನ್ನು ಸೊಸೆ ಮುದ್ದು ಎನ್ನುವಾಗ, ಆ ಮನೆಯ ದೊಡ್ಡಪಾಲಿನ ಪ್ರೀತಿ ನನ್ನದಾದಾಗ, ಪ್ರತಿಯೊಂದು ಪ್ರಥಮಗಳೂ ನನಗಾಗೇ ಮೀಸಲಿರುವಾಗ, ಎಲ್ಲರೂ ನನ್ನನ್ನೇ ಮುದ್ದುಗರೆವಾಗ ದೂರ ನಿಂತು ನನ್ನನ್ನೇ ನೋಡೋವಾಗ ಇಷ್ಟ ಅವನು..


ತಿಂಗಳ ನೋವಲ್ಲಿ ಹೊಟ್ಟೆನೋವೆಂದರೆ ಕಷಾಯ ಮಾಡಿ ಕುಡಿಸಿ, ಕಿಪ್ಪೊಟ್ಟೆ ನೀವಿ.. ಅಂಗಾಲಿಗೆ ಎಣ್ಣೆ ಸವರಿ ನೆತ್ತಿ ತಟ್ಟಿ ಮಲಗಿಸುವಾಗ ಅಮ್ಮ ಅವನು...


ಗೊತ್ತಿಲ್ಲದೆ ತಪ್ಪಾದಾಗ, ತಪ್ಪು ಅಂತ ಗೊತ್ತಿದ್ದೂ ಮಾಡಿದ ಹುಂಬತನದ ಕೆಲಸಗಳಿಗೆ ಪಟ್ಟಾಗಿ ಕೂತು ಬುದ್ಧಿ ಹೇಳೊ ಅಪ್ಪ ಅವನು...


ಸೋತು ನಿಂತಾಗ, ನೊಂದಾಗ, ಇನ್ನು ಆಗೊಲ್ಲ ಎಂದು ಕುಸಿದು ಕುಳಿತಾಗ, ಕಣ್ಣಂಚಲ್ಲಿ ನೀರಿದ್ದಾಗ " ನಾನಿದ್ದೇನೆ" ಎನ್ನುವ ಭರವಸೆ ಅವನು...


ಮುಡಿಗಿಷ್ಟು ಹೂವಿಟ್ಟು ಗಲ್ಲ ಸವರಿ ಬೆಲ್ಲ ಕೇಳುವವನು.. ಕತ್ತಿನ ಸುತ್ತ ಮುತ್ತಿನ ಸರ.. ತೋಳಬಂದಿಯಾಗುವವ ನಲ್ಲ ಅವನು..


ಊಮ್ ಇಷ್ಟೆಲ್ಲ ಆಯ್ತು ... ಇನ್ನೇನು ಇಲ್ವಾ ಅಂತ ಕಣ್ಣು ಮಿಟುಕಿಸಿದಳು..


ಅವಳಿಂಗಿತ ಅರ್ಥವಾಗಿ ಅಂಗಾಂಗಗಳಲೆಲ್ಲ ಸಣ್ಣ ಕಂಪನ.. ಬೆನ್ನಹುರಿಯಾಳದಲೆಲ್ಲೋ ಛಳಕು... ನಸು ನಾಚುತ್ತಲೇ ಅದೇನೊ ಹೇಳಲೆಂದು ಬಾಯಿ ತೆರೆದವಳು ಹಿಂದೆ ತಿರುಗಿದೆ.. ಉಸಿರು ತಾಕುವ ಸನಿಹದಲ್ಲಿ ಅವನು.. "ನನ್ನ ನಗು ನೀನು" ಎನ್ನುತ್ತಾ ತೋಳಲ್ಲಿ ಬಳಸಿದ..

ಅವಳು ನಾಚಿ ನೀರಾಗಿ ಮರೆಯಾದಳು...


ಮತ್ತೀಗ,....


ನಾನು... ಅವನು... ಮತ್ತೊಂದು ಏಕಾಂತ....

ತುರ್ತಾಗಿ ಮತ್ತೊಮ್ಮೆ ನಾನು ಹಾರ್ಟ್ ಬೀಟ್ ಕೇಳಬೇಕು...,. :)

Sunday, 8 January 2017

ಚಂಗು...


ಚಂಗು..
ಈ ಹೆಸರನ್ನು ಅದೆಷ್ಟೋ ನೋಟ್ ಬುಕ್ ಹಿಂದಿನ ಪೇಜ್ ನಲ್ಲಿ ಬರೆದಿದ್ದೆ., ಅದೇನೊ ಖುಷಿ ಅವನ ನೆನಪಾದರೆ. ಇವತ್ತು ಈ ಹೆಸರು ಬರೆಯಲು ಮನಸ್ಸು ಭಾರ.,...

ಅದು ಬಹುಷಃ ನನ್ನ ಬಿ. ಕಾಂ ಎರಡನೆಯ ಸೆಮಿಸ್ಟರ್ ಎಕ್ಸಾಮ್ ಟೈಮ್. ನಮ್ಮನೆಯ ರಾಣಿ ನಾಲ್ಕು ಮರಿಗಳ ತಾಯಿ.. ನಮ್ಮನೆಯ ನಾಯಿ ಕಾಳು ಸತ್ತು ಒಂದೆರಡು ವರ್ಷವಾಗಿತ್ತೇನೊ, ರಾಣಿ ಬಹಳ ಡಲ್ ಆಗಿಬಿಟ್ಟಿದ್ದಳು. ಅವಳಿಗೆ ಮರಿ ಹಾಕಿಸಿ ಆ ಗೂಡಿನದೊಂದು ಮರಿ ಸಾಕುವುದೆಂದು ತೀರ್ಮಾನವಾಗಿತ್ತು. ಹಾಗೆ ನಮ್ಮನೆಯ ಮುದ್ದು ಸದಸ್ಯನಾಗಿದ್ದು ಚಂಗುವೆಂಬ ಕಂದು ಬಣ್ಣದ ಮರಿ.,. ಮೊದಲು ಅವನಿಗೇನೋ ಬೇರೆ ಹೆಸರಿಟ್ಟಿದ್ದೆವು, ನೆನಪಿಲ್ಲ. ನನ್ನ ತಂಗಿ ರಾಜಕುಮಾರ್ ಸಿನಿಮಾ ನೋಡಿ, ಚಂಗು ಎಂದು ಕರೆಯಲು ಶುರುಮಾಡಿದಾಗ ಅವನು ಎಲ್ಲರಿಗೂ ಚಂಗುವೇ ಆದ. ಹೊಸ ಹೆಸರಿಗೆ ಬಹು ಬೇಗ ಹೊಂದಿಕೊಂಡ. ಚಿಕ್ಕಂದಿನಿಂದಲೂ ಬಹಳ ಸಂಭಾವಿತ. ಅವನದು ನಾಯಿ ಬುದ್ಧಿ ಎನ್ನುವುದಕ್ಕಿಂತ, ಬಹಳ ಬುದ್ಧಿ ಯುಳ್ಳ ನಾಯಿಯಾಗಿದ್ದ‌. ನಮ್ಮ ದುಃಖ, ನಮ್ಮ ಸಂತೋಷ, ಅವನಿಗೆ ಬೈದಿದ್ದು, ಮುದ್ದಿಸಿದ್ದು ಎಲ್ಲವೂ ಅರ್ಥವಾಗುತ್ತಿತ್ತು.


ಅವನಿಗೂ ಅಪ್ಪನ ಕಂಡರೆ ನಮಗೆಷ್ಟು ಭಯವಿತ್ತೋ ಅಷ್ಟೇ ಭಯವಿತ್ತು. ಅಮ್ಮನಿಗೆ ಅವ ನಾಲ್ಕನೇ ಮಗ, ಕಾಕ ಅವನ ಬೆಸ್ಟ್ ಫ್ರೆಂಡ್, ಎಲ್ಲೇ ಕಾಕ ಹೋದರೂ ಅಲ್ಲೆಲ್ಲ ಇವನೂ ಹಾಜರ್, ನಮಗೆಲ್ಲ ಬಾಡಿಗಾರ್ಡ್.. ಊರವರಿಗೆಲ್ಲ ಡೇಂಜರ್.. ಹಾಗಂತ ಅವನೇನು ಕಚ್ಚುವ ನಾಯಿಯೇನಲ್ಲ, ಹೆಚ್ಚು ಕಡಿಮೆ ಮೂರು ಅಡಿ ಎತ್ತರದ, ಜೂಲು ಬಾಲದ, ದಪ್ಪನೆಯ, ಕೆಂಚು ಬಣ್ಣದ ನಾಯಿಯನ್ನು ನೋಡಿದರೆ ಎಲ್ಲರೂ ಹೆದರುತ್ತಿದ್ದರು. ಅದೆಷ್ಟೋ ಜನ ಬರುವ ಮೊದಲು ಫೋನ್ ಮಾಡಿ " ನಾಯಿ ಕಟ್ಟಾಕಿ, ನಂಗ ಬರ್ತಾಇದ್ಯ "ಎಂದು ಹೇಳಿಯೇ ಬರುವುದಿತ್ತು. ಬೆಂಗಳೂರಿನಿಂದ ಮನೆಗೆ ಹೋದ ತಕ್ಷಣ ಓಡಿ ಬಂದು ಕಾಲು ನೆಕ್ಕಿ , ನಮ್ಮನ್ನು ಮುದ್ದಿಸಿ, ತಾನು ಮುದ್ದಿಸಿಕೊಂಡು ಹೋಗುತ್ತಿದ್ದ ನಮ್ಮ ಚಂಗು ಇನ್ನು ನೆನಪು ಮಾತ್ರ......


ಮಂಗ ಬಂದರೆ, ದನ ಬಂದರೆ ಕೂಗದಿದ್ದಾಗ " ಅಂಗಳಕ್ಕೆ ಒಂದು ಸಿಂಗಾರಕ್ಕೆ ನಾಯಿನೆಯ, ಕೂಗದಿಲ್ಲೆ, ಮಾಡದಿಲ್ಲೆ ಎಂದು ಅಮ್ಮ ಬೈಯ್ಯುವಂತಿಲ್ಲ ಇನ್ನು, ಹೊಸಗದ್ದೆಯ ಅಂಗಳದಲ್ಲಿನ್ನು ಸಿಂಗಾರವಿಲ್ಲ, ತಂಗಿ ಪ್ರಜ್ಞಾ ಮೂರುವರೆ ಬಸ್ಸಿಗೆ ಬರುವ ಹೊತ್ತಿಗೆ ಅವಳ ಬರುವಿಕೆಯನ್ನು ಗೇಟ್ ಹತ್ತಿರ ನಿಂತು ಕಾಯುವವರಿಲ್ಲ .ಇಂದು ಗದ್ದೆಗೆ ಹೊರಡುವ ಕಾಕನ ಕಾಲುಗಳು ತಡವರಿಸಬಹುದು. ಹೊರಗಡೆಯಿಂದ ಬಂದ ತಕ್ಷಣ. " ಅವನೆಲ್ಲಿ ಬಸ್ಯಾ" ಎಂದು ಹುಡುಕುವ ಅಪ್ಪನ ಕಣ್ಣುಗಳು ನಿರಾಶೆಗೊಳ್ಳಬಹುದು. ಮುಸ್ಸಂಜೆಯಲ್ಲಿ ದೋಸೆ ತಿನ್ನುತ್ತಾ ಕೊನೆಯ ತುತ್ತೊಂದನ್ನು ನಾಯಿಗೆ ತಿನ್ನಿಸುವ ಪರಿಪಾಠವುಳ್ಳ ಅಮ್ಮನಿಗೆ ದೋಸೆ ಗಂಟಲಲ್ಲಿ ಇಳಿಯದೇ ಇರಬಹುದು. "ಈ ಕುನ್ನಿ ವಸ್ವಂತಕ್ಕೆ ಸಂಕ್ಟ"ಎಂದು ಬಯ್ಯುತ್ತಾ ನಾಯಿಯನ್ನು ಒಳಗಡೆ ಹಾಕುತ್ತಿದ್ದ ಚಿಕ್ಕಮ್ಮ ಇಂದು ತಡವರಿಸಬಹುದು. ಅವನ ಒಂದು ಕ್ಷಣವೂ ಬಿಟ್ಟಿರದ ರಾಣಿ ಮನೆಯ ಮೂರು ಸುತ್ತು ತಿರುಗಿ ಅವನಿಗಾಗಿ ಹುಡುಕಿರಬಹುದು.


ಇನ್ನು ಬೆಂಗಳೂರಿನಿಂದ ಮನೆಗೆ ಹೋದರೆ ಅವನ ಖಾಲಿ ತಟ್ಟೆ, ಸರಪಳಿಗಳು ಅವನ ನೆನಪಿನ ಸುರುಳಿ ಬಿಚ್ಚುತ್ತವೆ. ಅವನ ಬಗೆಗೆ ನೂರು ಪ್ರಶ್ನೆ ಕೇಳುವ ಪಾರ್ಥನಿಗೆ ಅಕ್ಕ ಏನೆಂದು ಉತ್ತರಿಸುತ್ತಾಳೋ.. "ಬೌ ಬೌ ನೋಡು " ಎಂದರೆ ಅರ್ಥವಾಗದೆ, " ಚಂಗು ನೋಡು" ಎಂದ ತಕ್ಷಣ ನಾಯಿಯೆಡೆಗೆ ನೋಡುವ ನನ್ನ ಮಗಳಿಗೆ ನಾನೇನು ಹೇಳಲಿ....

ಚಂಗು ಮಿಸ್ ಯು .. ಲವ್ ಯೂ..

Saturday, 6 August 2016

ಅಪ್ಪ..



ಅಪ್ಪನೆಂದರೆ ಹಸಿರು.. ಒರಟು.. ಫಲವತ್ತಾದ ನೆಲ
ಮೊದಲು ಪಾದವಿಟ್ಟು ನಕ್ಕಿದ್ದು ಅವನೆದೆಯ ಮೇಲೆ
ಅವ ಭೂಮಿ..

ಅಪ್ಪನೆಂದರೆ ಗಂಭೀರ..
ವಾತ್ಸಲ್ಯದ ಸೆಲೆ
ಒಲವ ಬಯಸಿ ಓಡುವುದು ಈ ಜೀವನದಿ
ಅವ ಮಮತೆಯ ಕಡಲು...

ಅಪ್ಪನೆಂದರೆ ತೇಜಸ್ಸು...
ತಪ್ಪಿಗೆ ಬೈದು ಬೆಚ್ಚಗಿಡಬಲ್ಲ
ಕೋಪದಿ ಮೌನದಲೇ ಸುಡಬಲ್ಲ
ಅವ ಬೆಂಕಿ...

ಅಪ್ಪನೆಂದರೆ ಪ್ರತಿದಿನದ ಉಲ್ಲಾಸ..
ಕಣ್ಣಿಗೆ ಕಾಣುವಂತಿಲ್ಲದಿದ್ದರೂ
ಬದುಕ ಪ್ರತಿ ತಿರುವಲ್ಲೂ ಬೆನ್ನಿಗಿರುವ ಅನುಭವ ಕೊಡುವ
ಅವ ಗಾಳಿ...

ಅಪ್ಪನೆಂದರೆ ಭರವಸೆ..
ಇಡುವ ಹೆಜ್ಜೆಗಳಲೆಲ್ಲ ತಾನಿದ್ದೇನೆಂಬ ಅರಿವು ಹುಟ್ಟಿಸಿ..ಗುರುವಾಗಿ..
ಎಲ್ಲೇ ಹೋದರೂ ಬೆಂಬಿಡದೇ ಹಿಂಬಾಲಿಸುವ
ಅವ ಮೇಲೆ ನೋಡಿದರೆ ಕಾಣ್ವ ಮುಗಿಲು,...

Tuesday, 13 October 2015

ಅದೇ ಪ್ರೀತಿ ... ಬೇರೆ ರೀತಿ ..


"ಏನಂತಾರೆ ಆ ಮನೆಯ ದೊಡ್ಡವರು ?" ಅಂದ ಅಪ್ಪನ ಧ್ವನಿಯಲ್ಲಿ ಸ್ವಲ್ಪ ಅಸಮಾಧಾನವಿತ್ತು.
"ಮೊದಲಿನಂತಿಲ್ಲ ಮೆತ್ತಗಾಗಿದ್ದಾರೆ, ಕಾಲ ಬದಲಾಗಿದೆ ಅಲ್ಲವಾ. ನಮ್ಮ ಪ್ರೇಮವನ್ನು ಒಪ್ಪಿಕೊಂಡವರು ಇವರನ್ನು ಒಪ್ಪಿಕೊಳ್ಳೋದು ಕಷ್ಟವಲ್ಲ ಅಲ್ಲವ" ಅಂದೆ.
"ಮಗನ ವಿಷಯದಲ್ಲಿ ಮೆತ್ತಗಾದವರು ತಮ್ಮನ ವಿಷಯದಲ್ಲೂ ಹೀಗೆ ನಡೆದುಕೊಂಡಿದ್ದರೆ ಈ ಮದುವೆ ಹದಿನೈದು ಇಪ್ಪತ್ತು ವರ್ಷಗಳ ಮೊದಲೇ ನಡೆದಿರುತ್ತಿತ್ತು" ಅಂದರು.
"ಆಗ ಅಷ್ಟೆಲ್ಲ ಮದುವೆಗೆ ಓಡಾಡಿದವರು ನೀವು . ಈಗ ಯಾಕೆ ಈ ಬಿಗುಮಾನ ಅಪ್ಪಾ ".
" ಆವಾಗ ನನ್ನ ಅಣ್ಣನ ಮಗಳ ಭವಿಷ್ಯ ಮಾತ್ರ ಕಣ್ಣು ಮುಂದಿತ್ತು. , ಈಗ ನನ್ನ ಮಗಳ ಬದುಕು ಕಣ್ಣಮುಂದೆ ಇದೆ. ಈ ಮದುವೆ ಮಾಡಿಸಿ ಅವರ ಕಣ್ಣಲ್ಲಿ ನೀನು ಸಣ್ಣವಳಾಗಬಾರದು. ಮೆಟ್ಟಿದ ಮನೆಯಲ್ಲಿ ನಿನ್ನ ಸ್ಥಾನ ಸ್ವಲ್ಪವೂ ಕದಲಬಾರದು. " ಅವರ ಆತಂಕ ನನಗೆ ಅರ್ಥವಾಗುತ್ತಿತ್ತು .
ಸುಮ್ಮನೆ ಭುಜದ ಮೇಲೆ ಕೈ ಇಟ್ಟೆ . ಅಪ್ಪನಿಗೆ ಅದು ಹೊಸದೇನಲ್ಲ. " ಏನು ಮಾಡ್ತೀರೋ ಮಾಡಿ, ನಿನ್ನ ಗಂಡನೇ ನಿನ್ನ ಬೆನ್ನ ಹಿಂದೆ ನಿಂತಿರುವಾಗ ನಾನೇನು ಹೇಳಲಿ ? " ಎನ್ನುತ್ತಾ ಬಾಲ್ಕನಿಯಿಂದ ಇಳಿದು ಹೋದರು.

ಅಲ್ಲಿಂದ ಶಾಲೆಯ ಬಯಲು ಚೆನ್ನಾಗಿ ಕಾಣುತ್ತಿತ್ತು. ಅದೇ ಶಾಲೆಯಲ್ಲಿ ನಾನು ಪ್ರಣವ್ ಕಲಿತಿದ್ದು . ಎದುಬದುರು ನಿಂತು ನಮಸ್ತೇ ಶಾರದಾ ದೇವಿ ... ಎಂದು ಪ್ರಾರ್ಥನೆ ಹೇಳುವಾಗಲೋ , ಅಥವಾ ಮಗ್ಗಿ ಹೇಳುವಾಗ ಅವನು ಕೈ ಸನ್ನೆ ಮಾಡಿ ಅಂಕೆಗಳನ್ನು ತೋರಿಸುತ್ತಿದ್ದಾಗಲೋ ಯಾವಾಗ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೇ ಎನ್ನುವುದು ನೆನಪಿಲ್ಲ, ಆದರೆ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಅವನೆಡೆಗೊಂದು ಆತ್ಮೀಯತೆ ಬೆಳೆದುಬಿಟ್ಟಿತ್ತು ನಾವು ಬೆಳೆದಂತೆಲ್ಲ ಅದೂ ಸ್ನೇಹವಾಗಿ ಬೆಳೆದು ಪ್ರೀತಿಯಾಗಿ ಬದಲಾಗಿತ್ತು. ಅದೇ ಊರಿನಲ್ಲೆ ಅವನು ಕೆಲಸ ಹಿಡಿದ ಮೇಲಂತೂ ಮದುವೆಯ ಮಾತುಗಳನ್ನಾಡುವುದು ಮಾತ್ರ ಉಳಿದಿದ್ದು ಎಂದು ಇಬ್ಬರೂ ತೀರ್ಮಾನಿಸಿದ್ದೆವು. ಚಿಕ್ಕ ಊರಲ್ಲಿ ಪ್ರೀತಿಯ ಗುಲ್ಲು ಏಳಬಾರದೆಂಬ ಕಾರಣಕ್ಕೆ ಓದುವ ನೆಪದಲ್ಲಿ ಲೈಬ್ರೇರಿಯನ್ನು ನಮ್ಮ ಭೇಟಿಯ ತಾಣವನ್ನಾಗಿ ಮಾಡಿಕೊಂಡಾಗಿತ್ತು. ಆದರೆ ಇದು ಅದೇ ಲೈಬ್ರೆರಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಅಕ್ಕನಿಗೆ ಹೇಗೋ ತಿಳಿದು ಬಿಟ್ಟಿತ್ತು .

"ಪ್ರೀತಿಸ್ತಾ ಇದೀಯಾ ಆ ದೊಡ್ಮನೆ ಹುಡುಗನನ್ನ ?" ಅಕ್ಕನ ನೇರವಾದ ಪ್ರಶ್ನೆ. ಅಕ್ಕ ಎಂದರೆ ನನಗಿಂತ ಹದಿನೈದು ವರ್ಷಕ್ಕೆ ದೊಡ್ಡವಳು. ಅಮ್ಮನಷ್ಟೇ ಗೌರವಿಸುತ್ತಿದ್ದ ಅವಳಿಗೆ ಸುಳ್ಳು ಹೇಳಲು ಸಾದ್ಯವಿರಲಿಲ್ಲ ." ಹೌದು "ಎಂದೆ. "ಆ ಮನೆಯ ಗೋಡೆಗಳಲ್ಲಿ ಭಗ್ನ ಪ್ರೇಮದ ಚಿತ್ತಾರಗಳೇ ಜಾಸ್ತಿ, ನನ್ನಂತೆ ಆಗಬಾರದು ನಿನಗೆ. "ಅಂದ ಅಕ್ಕನ ಮಾತುಗಳು ಅನಿರೀಕ್ಷಿತವಾಗಿದ್ದವು . ಅಕ್ಕನ ಹಿಂದೊಂದು ಮುರಿದು ಹೋದ ಪ್ರೇಮದ ಕಥೆ ಇರಬಹುದೆಂದು ಊಹಿಸಿರಲೇ ಇಲ್ಲ. ಅವಳು ಮದುವೆಯಾಗಿಲ್ಲ ಎಂದಷ್ಟೇ ಗೊತ್ತಿತ್ತೇ ವಿನಃ ಯಾಕೆ ಏನು ಅಂತ ಕೇಳಿರಲೇ ಇಲ್ಲ. ಅಷ್ಟು ನನ್ನ ಬದುಕಿನಲ್ಲೇ ಕಳೆದುಹೋಗಿದ್ದೆ ಅನಿಸಿತು . ಅವಳೇ ಮುಂದುವರೆಸಿದಳು " ನಾನು ಮತ್ತು ಆ ಮನೆಯ ಚಂದ್ರು ಅಂದರೆ ಈಗ ನೀನು ಪ್ರೀತಿಸುತ್ತಿರುವ ಹುಡುಗನ ಚಿಕ್ಕಪ್ಪ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೆವು. ಹಳ್ಳಿಯ ಶುದ್ಧ ಗಾಳಿಯಲ್ಲಿ ಪ್ರೀತಿಯ ಸುದ್ದಿ ಬಹುಬೇಗ ಹರಡಿತು , ಆದರೆ ಮನೆಯ ಮನಸ್ಸುಗಳನ್ನು ಮಲಿನಗೊಳಿಸಿದ್ದು ವಿಪರ್ಯಾಸ. ವಿರೋಧವಿತ್ತು ಅವರ ಮನೆಯಲ್ಲಿ , ನಾನು ಹೇಗೋ ಮನೆಯವರನ್ನು ಒಪ್ಪಿಸಿದ್ದೆ . ನಿನ್ನ ಅಪ್ಪ ಅಂದರೆ ನನ್ನ ಚಿಕ್ಕಪ್ಪ ಬಹಳ ಪ್ರಯತ್ನ ಪಟ್ಟರು ಈ ಮದುವೆ ನಡೆಸಲು ,ಆದರೆ ಪ್ರಯತ್ನಗಳೆಲ್ಲ ವ್ಯರ್ಥವಾದವು. ಓಡಿ ಹೋಗುವ ಮನಸ್ಸಿರಲಿಲ್ಲ. ಸಾಯುವ ಮನಸ್ಸು ನಮಗೆ ಬರುವ ಮೊದಲೇ ಪ್ರೀತಿ ಸತ್ತು ಹೋಗಿತ್ತು ಅವನ ಅಪ್ಪನ ಸಾವಿನೊಡನೆ . ಕನಸುಗಳ ಕಟ್ಟಿಟ್ಟು ಜೀವಚ್ಛವವಾಗಿ ಬಿಟ್ಟೆವು. ಹಾಗೆಯೇ ಬದುಕುತ್ತಿದ್ದೇವೆ ಇಂದಿಗೂ. "ನನ್ನ ಕಣ್ಣಲ್ಲಿ ನೀರಿತ್ತು . ಅವಳಲ್ಲಿ ಉಳಿದಿದ್ದು ನಿಟ್ಟುಸಿರ ಮೌನ . ಮುಖದಲ್ಲಿ ಮಾತ್ರ ಎಂದಿನ ನಿರ್ಲಿಪ್ತತೆ . ಹಾಗೆ ಸರಿದು ಹೋಗಿತ್ತು ಅದೊಂದು ಸಂಜೆ.

ಆದರೆ ನಮ್ಮ ಪ್ರೀತಿಗೆ , ಮದುವೆಗೆ ಯಾವುದೇ ಅಡೆತಡೆಗಳು ಬರಲಿಲ್ಲ . ಏಕೆಂದರೆ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವಲ್ಲ. ಎಲ್ಲರೂ ನನ್ನನ್ನು, ಅವನನ್ನು ಖುಷಿಯಿಂದ ಒಪ್ಪಿಕೊಂಡರು . ಮದುವೆ ನನ್ನದೇ ಆದರೂ ಕಾಡಿದ್ದು ಮಾತ್ರ ಆಗಾಗ ಸಂಧಿಸುತ್ತಿದ್ದ ಅವರಿಬ್ಬರ ಯಾತನಾದಾಯಕ ನೋಟಗಳು. ಅವತ್ತೇ ಅಗ್ನಿಸಾಕ್ಷಿಯಾಗಿ ನಿರ್ಧರಿಸಿದ್ದೆ ಅಕ್ಕನಿಗೆ ಅವಳ ಪ್ರೀತಿಯನ್ನು ದೊರಕಿಸಿಕೊಡಬೇಕೆಂದು. ಮನೆಗೆ ಬಂದ ಮೇಲೆ ಪ್ರಣವ್ ಗು ಹೇಳಿ ಅವನನ್ನು ಒಪ್ಪಿಸಿದ್ದೆ . ಮನೆಯಲ್ಲೂ ಪ್ರಸ್ತಾಪಿಸಿದ್ದೆ. "ನಿಮ್ಮ ಪ್ರೀತಿಯನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ , ಆದರೆ ಈಗಿನ ಒಬ್ಬರೇ ಮಕ್ಕಳ ಕಾಲದಲ್ಲಿ ನಿಮ್ಮನ್ನು ಕಳೆದುಕೊಳ್ಳುವ ಮನಸ್ಸಿಲ್ಲದೇ ಒಪ್ಪಿಗೆ ಕೊಟ್ಟಿದ್ದು, ಇಷ್ಟರಲ್ಲೇ ಇದ್ದರೆ ಒಳ್ಳೆಯದು ಎಂದು ಮಾವ ಅಬ್ಬರಿಸಿದ್ದರು . " ಮದುವೆಯಾದ ತಕ್ಷಣ ಮನೆ ಒಡೆಯು ಬೇಕೆಂದು ನೋಡುವ ಹೆಣ್ಣುಗಳ ನಡುವೆ ಮನೆಯಲ್ಲಿ ಸಂತೋಷದ ದೀಪ ಹಚ್ಚಲು ನೋಡುತ್ತಿದ್ದಾಳೆ ಒಪ್ಪಿಗೆ ಕೊಡಿ " ಎಂದು ಅತ್ತೆ ಕೇಳಿಕೊಂಡಿದ್ದು ಮಾವನ ಕಿವಿಗೆ ಬಿದ್ದಿರಲಿಲ್ಲ . ಆದರೆ ನನಗೆ ವಿಶ್ವಾಸವಿತ್ತು ಮಾವನನ್ನು ಒಪ್ಪಿಸಿಯೇ ಒಪ್ಪಿಸುತ್ತೆನೆಂದು. ಪ್ರಾಮಾಣಿಕ ಪ್ರಯತ್ನಗಳನ್ನು ಬಿಟ್ಟಿರಲಿಲ್ಲ. ಅದಾದ ಆರು ತಿಂಗಳ ನಂತರ " ಅವರವರ ಒಂಟಿತನದ ಕೋಟೆಯನ್ನು ಭೇದಿಸಿ ಸಂತೋಷವಾಗಿ ಇರುತ್ತರಾದರೆ ನನ್ನದೇನಿದೆ ? ಅಪ್ಪನನ್ನು ನೋಡಿ ಮಾತನಾಡುತ್ತೇನೆ" ಎಂದಿದ್ದರು ಮಾವ. ಆಕಾಶವೇ ಕೈ ಗೆ ಸಿಕ್ಕಷ್ಟು ಸಂಭ್ರಮ . ಮುಂದಿನದ್ದೆಲ್ಲ ಹೂವೆತ್ತಿದಷ್ಟೇ ಸರಾಗವಾಗಿ ನಡೆದಿತ್ತು . ನಾಡಿದ್ದು ಬೆಳಗಾದರೆ ಅಕ್ಕನ ಮದುವೆಯ ಸಂಭ್ರಮ ಎಂದುಕೊಳ್ಳುತ್ತಿದ್ದೆ . ಕೆಳಗಡೆಯಿಂದ ಪುಟ್ಟಿ ಕೂಗುತ್ತಿದ್ದಳು . "ಏನೇ ?" ಎಂದೇ . "ನೋಡು ಚಿಕ್ಕಮ್ಮ ಮೆಹಂದಿ ಹಾಕಿಸಿಕೊಳ್ಳೋಲ್ಲ ಅನ್ನುತ್ತಿದ್ದಾರೆ" ಎಂದು ಮುಖ ಊದಿಸಿಕೊಂಡಳು .

ಏನಾಯ್ತೆ ಅಕ್ಕಾ ? ಅಂದೆ . ಅದಕ್ಕವಳು ನೋಡು ಸುರಭಿ " ನನಗೀಗ ನಲವತ್ತೇಳು , ಈ ವಯಸ್ಸಿನಲ್ಲಿ ಮದುವೆ ಎಂಬುದೇ ಒಂಥರಾ ಮುಜುಗರದ ವಿಷಯ ಅನಿಸುತ್ತೆ. ಅಂಥದ್ದರಲ್ಲಿ ಎಳೆ ವಯಸ್ಸಿನವರಂತೆ ಇದೆಲ್ಲ ಬೇಕಾ ಅಂತ ಅನಿಸ್ತಿದೆ. ನಾಚಿಕೆಯಾಗ್ತಿದೆ ಕಣೆ " ಅಂದಳು
ಹದಿನೆಂಟರ ಪ್ರೀತಿ .. ಇಪ್ಪತ್ತೆರಡರ ನಾಚಿಕೆ ಈಗಲೂ ಜೀವಂತವಾಗಿದೆ ಅಂದರೆ ಮದರಂಗಿಯೂ ಬೇಕು ಅಕ್ಕಾ ಕೈ ನೀಡೆ ಅಂದೆ. ಅವಳ ಕೈಯಲ್ಲಿ ಮದರಂಗಿ ಮುಂದಿನ ಬದುಕಿನ ಚಿತ್ತಾರವಾಗಿ ಬಣ್ಣ ತುಂಬಿಕೊಳ್ಳುತ್ತಿತ್ತು.

Monday, 31 August 2015

ಆಯೀ



( ಮೂರು ಸಣ್ಣ  ಆಲಾಪಗಳು )

೧)
ಅದೊಂದು ಹೃದ್ರೋಗ ಆಸ್ಪತ್ರೆ, ರೋಗಿಯ ಜೀವ ಉಳಿಸಲು ಡಾಕ್ಟರ್ ಗಳು ಪ್ರಯತ್ನಪಡುತ್ತಿದ್ದರು. ಆದರೆ ಹಾಸಿಗೆಯಲ್ಲಿದ್ದ ರೋಗಿಗೆ ಗೊತ್ತಾಗುತ್ತಿತ್ತು ತನ್ನ ಪುಟ್ಟ ಹೃದಯ ಈಗ ನಿಂತೇ ಹೋಗುತ್ತದೆ ಎಂದು. ಆಗ ಅವಳ ನೆನಪಾಗಿತ್ತು. ಹಣ ಸಂಪಾದಿಸುವಾಗ , ಆಸ್ತಿ ಮಾಡುವಾಗ , ಮನ ಮೆಚ್ಚಿದ ಹುಡುಗಿಯ ಮದುವೆಯಾದಾಗ , ಮಕ್ಕಳಾದಾಗ, ಪ್ರಶಸ್ತಿಗಳ ಮುಡಿಗೇರಿಸಿಕೊಂಡಾಗ, ಕೀರ್ತಿ ಯಶಸ್ಸಿನ ಮೆಟ್ಟಿಲೇರಿ ನಿಂತಾಗ ಮರೆತೇ ಹೋಗಿದ್ದ "ಆಯಿ"ಯ ಮುಖ ಮತ್ತೆ ಮತ್ತೆ ನೆನಪಾಗುತ್ತಿತ್ತು. "ಆಯೀ"  ಎಂದು ಚೀರಿಕೊಂಡು ಕಣ್ಮುಚ್ಚಿದ .............
-------------------------------------------------------------------------------------
ಇಲ್ಲಿ ಯಾವುದೋ ಯಾತನೆಯಿಂದ ತಟ್ಟನೇ ಎದ್ದು ಕುಳಿತಳು ಅವಳು. ಕತ್ತಲಲ್ಲಿ ಸ್ವಲ್ಪವೂ ತಡಕಾಡದೇ ಎದ್ದು ಹೋಗಿ ದೇವರಿಗೆ ತುಪ್ಪದ ದೀಪ ಹಚ್ಚಿ ದೇವರೆದುರು ಕಣ್ಮುಚ್ಚಿ ಕುಳಿತಳು. " ಎಲ್ಲೇ ಇದ್ರೂ ನನ್ನ ಮಗ ಚೆನ್ನಾಗಿರಲಿ " ಎನ್ನುವುದು  ಅವಳ ನಿತ್ಯ ಪ್ರಾರ್ಥನೆ ಎಂಬುದು ಅವಳಿಗೂ ಗೊತ್ತು , ದೇವರಿಗೂ ಗೊತ್ತಿತ್ತು. ಆದರೆ ಇವತ್ತು ಮಾತ್ರ ಅವಳು “ ಇದೊಂದು ಬಾರಿ ನನ್ನ ಮಗನನ್ನು ಉಳಿಸಿಕೊಡು ದೇವರೇ. ಅವನು ನನ್ನ ಬಳಿ ಬಂದೇ ಬರುತ್ತಾನೆ.” ಎಂದು ಬಿಟ್ಟಳು. ದೇವರಿಗೂ ಆಶ್ಚರ್ಯವಾಗಿತ್ತೇನೊ, ಅಸ್ತು ಎಂದನೋ ಎನೊ ಅವಳಿಗೆ ತಿಳಿಯಲಿಲ್ಲ...
------------------------------------------------------------------------
ಪ್ರಯತ್ನವೋ , ಹಾರೈಕೆಯೋ ಅಂತೂ ಅವನು ಮರುದಿನದ ಮುಂಜಾವನ್ನು ನೋಡಿದ್ದ, ಜಗತ್ತು ಹೊಸದಾದಂತೆ ಕಾಣಿಸುತ್ತಿತ್ತು. ಆಯಿಯ ಮುಖ , ಆಯಿಯ ಹಂಬಲ ಇನ್ನೂ ಬಲವಾಗಿತ್ತು. ಆಸ್ಪತ್ರೆಯಿಂದ ಮಾತ್ರವಲ್ಲ , ಎಲ್ಲದರಿಂದಲೂ ಬಿಡುಗಡೆ ಹೊಂದಿ ಆಯಿಯ ಬಳಿ ಹೋಗಲೇ ಬೇಕೆಂದು ನಿರ್ಧರಿಸಿ ಕಣ್ಣು ಮುಚ್ಚಿದ. ಅವನನ್ನು ನೋಡಿಕೊಳ್ಳುತ್ತಿದ್ದ ಸರ್ವೆಂಟ್ ಸಣ್ಣ ದನಿಯಲ್ಲಿ ಹಾಡಿಕೊಳ್ಳುತ್ತಿದ್ದಳು 

" ಇಂಧನ ತೀರಲು, ಬಂದೇ ಬರುವೆನು... ಮತ್ತೆ ನಿನ್ನ ತೊಡೆಗೆ,... ಮೂರ್ತ ಪ್ರೇಮದೆಡೆಗೆ"

******************************************************************
೨)
ಮೊನ್ನೆ ಮೊನ್ನೆವರೆಗೂ ಅವಳ ಬಗ್ಗೆ ಮಾತೇ ಬರದವರ ಬಾಯಲೆಲ್ಲ ಇವತ್ತು ಅವಳದೇ ಮಾತು. ಅವಳ ಬಗ್ಗೆ ಹಿಂದಾಡಿಕೊಂಡವರ, ಅವಳ ಮುಂದೆಯೇ ಅವಳನ್ನಾಡಿಕೊಂಡವರ ಬಾಯಲ್ಲೂ ಒಳ್ಳೆಯ ಮಾತುಗಳು ..!! ಕಾಲ ಕಸಕ್ಕಿಂತ ಕಡೆಯಾಗಿ ಕಂಡ ಮಕ್ಕಳ ಕಣ್ಣಲ್ಲೂ ಅವಳಿಗಾಗಿ ಕಣ್ಣೀರು, ಬಾಯಲ್ಲಿ ಒಳ್ಳೆಯ ಮಾತುಗಳು ..!! "ಸತ್ತ ಮೇಲೆ ಅಥವಾ ಸತ್ತಿದ್ದರಿಂದಲೇ ನಾನು ಒಳ್ಳೆಯವಳಾದೆನಾ" ಎಂದು ಅವಳ ಆತ್ಮವೂ ಆಶ್ಚರ್ಯಗೊಂಡಿತ್ತೋ ಏನೋ ?ಅವಳ ಮುಖ ಕಂಡರಾಗದಿದ್ದವರೂ ಅವಳನ್ನು ನೋಡಿಕೊಂಡು ಬಂದರು ಕೊನೆಯ ಬಾರಿಗೆಂಬಂತೆ... ಥಥ್ ಎಲ್ಲಿ ಬಿತ್ತಿದರೂ ಹುಟ್ಟಲಾರದು ಎಂದು ಬಿಸಾಡಿದ್ದ ತುಳಸಿಯೂ ಎರಡೆಲೆಯಾಗಿ ಚಿಗುರಿ ನಗುತ್ತಿತ್ತು ಅವಳ ಸಮಾಧಿಯ ಮೇಲೆ ..!!!

*********************************************************************
೩)
ಆಕೆ ರಸ್ತೆಯಂಚಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ .. ಬಸ್ ಮೆಲ್ಲನೆ ಮುಂದೆ ಸರಿಯುತ್ತಿತ್ತು.
"ಥತ್ ಇವಳದ್ದು ಯಾವಾಗಲೂ ಇದೇ ಗೋಳು" ಎಂದು ಕಂಡಕ್ಟರ್ ಗೊಣಗಿದ. "ಏನಾಗಿದೆ ಅವಳಿಗೆ" ಎಂದರು ಬಸ್ಸಲ್ಲಿದ್ದ ಹಿರಿಯರೊಬ್ಬರು. "ಎಂಟು ವರ್ಷದ ಹಿಂದೆ ಹೀಗೆ ಟಾಟ ಮಾಡಿ ಕಳಿಸಿಕೊಟ್ಟ ಇವಳ ಮಗಳೊಬ್ಬಳು ಯಾವನದೋ ಜೊತೆ ಓಡಿ ಹೋದಳಂತೆ. ತಂದೆ ಸಂಬಂಧ ಕಳೆದುಕೊಂಡು ನಿರಾಳವಾದರು. ಆದರೆ ತಾಯಿ ಕರುಳು ನೋಡಿ ಇನ್ನು ಕಾಯುತ್ತಿದೆ.ಮಗಳು ಬರುತ್ತಾಳೇನೋ ಅಂತ, ಹೀಗೆ ಕೈ ಬೀಸುತ್ತಾ... " ಎಂದವನು ಟಿಕೆಟ್ ಗಾಗಿ ಮುಂದೆ ಹೋದ. ಹಿರಿಯರ ಪಕ್ಕ ಕುಳಿತ ಆವಂತಿಗೆ ಮತ್ತೊಮ್ಮೆ ತಿರುಗಿ ಅಮ್ಮನ ಮುಖ ನೋಡಬೇಕೆನಿಸಿತ್ತು..



(ಈ ಕಥೆ "ಕುಡಿಗಥೆಗಳು " ಎಂಬ ಫೇಸ್ಬುಕ್  ಪೇಜ್ ನ ಕುಡಿಗಥೆಗಳು ಪ್ರಯತ್ನ -೬ ರಲ್ಲಿ ಬರೆದಿದ್ದು )

Saturday, 11 July 2015

ಕಾಲ ತುದಿಯಲ್ಲಿನ ಕಪ್ಪು ಮಚ್ಚೆ

"ಅರೇ!  ಕಾಲ ತುದಿಯಲ್ಲೊಂದು ಮಚ್ಚೆ ಇದೆಯಲ್ಲ , ಬಹಳ ಅದೃಷ್ಟವಂತೆ ನೀನು " ಕಾಲಿನ ಹೆಬ್ಬೆರಳ ತುದಿಯ ಪುಟ್ಟ ಮಚ್ಚೆಯನ್ನು ನೋಡಿ ಎಲ್ಲರೂ ಹೇಳುವ ಮಾತು.ಅದರಂತೆ ಅದೃಷ್ಟವಂತೆ ನಾನು. ಚಂದದ ಮನೆಯಲ್ಲಿನ ಮುದ್ದು ಮಗಳು .. ಹೇಳಿದಂತೆ ಕೇಳೋ  ಅಮ್ಮ . ಅಂಗೈಯಲ್ಲೇ ಜಗತ್ತನ್ನು ತಂದಿಡುವ ಅಪ್ಪ. ದೇಶ ಸುತ್ತುವ ಚಟ ನನ್ನದು. ಅಪ್ಪನೊಂದಿಗೆ ಪ್ರಪಂಚ ಸುತ್ತುತ್ತಿದ್ದೆ.. ಹಾಗೆಯೇ ಪರದೇಶದಲ್ಲಿ ನನ್ನ ದೇಶದವನಾಗಿ  ಪರಿಚಯವಾದ ಹುಡುಗ ನೀನು ಥೇಟ್ ಡಿಡಿ ಎಲ್ ಜೆ ಯಲ್ಲಿ ಖಾಜೋಲ್ ಗೆ ಶಾರುಖ್ ಸಿಕ್ಕ ಹಾಗೆ. ಹಾಗೆಯೇ ಅಷ್ಟೇ ಬೇಗ  ಹೃದಯದಲ್ಲೂ ಇಳಿದುಬಿಟ್ಟೆ ! ಯಾರನ್ನೂ ಒಳಮನೆಯೊಳಗೆ  ಬಿಟ್ಟುಕೊಳ್ಳದವಳು ಮನಸ್ಸನ್ನೇ ನಿನಗೆ ಕೊಟ್ಟಿದ್ದೆ. ನೀ ಒಪ್ಪಿದಾಗಲಂತೂ ನನ್ನ ಅದೃಷ್ಟಕ್ಕೆ  ನಾನೇ ಹೆಮ್ಮೆ ಪಟ್ಟಿದ್ದೆ .  

ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಾಗ ಕನಸುಗಳಿಗೂ ರೆಕ್ಕೆ ಬಂದಿತ್ತು . ಆದರೆ ನಿನ್ನಮ್ಮನಿಗೆ ಸೊಸೆಯಾಗಿ ಬರುವವಳು ಡಬ್ಬಲ್ ಡಿಗ್ರಿ ಮಾಡಿರಬೇಕು ಎಂದಾಗ ಮಾತ್ರ ಸ್ವಯಂವರದಲ್ಲಿ ನಿಂತ ಅರ್ಜುನ ,ರಾಮರ ನೆನಪಾಗಿದ್ದು ಸುಳ್ಳಲ್ಲ. ದೇಶ ಸುತ್ತುವುದರಲ್ಲಿ ಇದ್ದ ಆಸಕ್ತಿ ನನಗೆ ಕೋಶ ಓದುವುದರಲ್ಲಿ ಇರಲಿಲ್ಲ. ಓದಬೇಕೆಂದು ಖಂಡಿತಾ ಆಸೆಯಿರಲಿಲ್ಲ .ಕುಳಿತು ಓದುವುದು ನನ್ನಿಂದ ಆಗದ ಮಾತಾಗಿತ್ತು. ಜಿಂಕೆಯಂತೆ ಜಿಗಿಯಬೇಕು.. ಇಲ್ಲ ರೆಕ್ಕೆ ಕಟ್ಟಿಕೊಂಡು ಹಾರಬೇಕು ಇಷ್ಟೇ ನನ್ನ ಪ್ರಪಂಚದಲ್ಲಿದ್ದುದು. ಆದರೆ  ನಿನಗಾಗಿ ಓದಲೇ ಬೇಕೆಂದು ನಿರ್ಣಯಿಸಿದೆ. ನನಗಾಗಿ  ಕಂಡ ಮೊದಲ ಕನಸು ನೀನು. ಹಾಗಾಗಿಯೇ ನಿನಗಾಗಿ ಐದು ವರ್ಷಗಳ ತಪಸ್ಸಿಗೆ ಕುಳಿತುಬಿಟ್ಟೆ..! ಒಳ್ಳೆ ಕಾಲೇಜ್ , ಒಳ್ಳೆ ಗೆಳತಿಯರು , ಎಗ್ಸಾಮ್ , ಮಾರ್ಕ್ಸ್  ಎಲ್ಲದರಲ್ಲೂ ಅದೃಷ್ಟವಂತೆ ಕಣೋ ನಾನು. ನಿಮ್ಮಮ್ಮ ಕೂಡಾ ಒಪ್ಪಿದ್ದಾರೆ, ಐದು ವರ್ಷ ಕಾಯಲು  ತಯಾರಿದ್ದಾರೆ ಎಂದಾಗಲಂತೂ  ಆಕಾಶಕ್ಕೆ ಮೂರೇ ಗೇಣು ಎನ್ನುವಂತೆ .. ಹೆಬ್ಬೆರಳ ತುದಿಯ ಪುಟ್ಟ ಮಚ್ಚೆಯ ಸವರಿ ಖುಷಿಪಟ್ಟಿದ್ದೆ. 

ವಾರಕ್ಕೊಂದು ದಿನ ನಿನ್ನೊಂದಿಗೆ ಸುತ್ತಾಟ, ಮುಸ್ಸಂಜೆಯಲ್ಲಿ ಬೆರಳು ಬೆಸೆದು ಮೂಡಿಸಿದ ಹೆಜ್ಜೆ ಗುರುತುಗಳು, ಮಧ್ಯರಾತ್ರಿಯ ಪಿಸುಮಾತುಗಳು, ಅಯ್ಯೋ ಈ ಓದು ಸಾಕು ಎಂದು ಮನಸ್ಸು ರಚ್ಚೆ ಹಿಡಿದಾಗೆಲ್ಲ  ಮತ್ತೆ ಹುರಿದುಂಬಿಸಿ ಓದುವಂತೆ ಮಾಡಿದ ನಿನ್ನ ತೆರೆದ ತೋಳುಗಳು ... ನಾಲ್ಕು ವರ್ಷಗಳು ಬೆಣ್ಣೆಯಂತೆ ಕರಗಿದ್ದು ಎಲ್ಲಿ ಗೊತ್ತಾಗಿತ್ತು ಹೇಳು. ಕೊನೆ ವರ್ಷದ ಓದು .. ಮುಗಿದರೆ  ನಿನ್ನೆಡೆಗೆ ಓಡಿ ಬರಬೇಕೆಂದುಕೊಂಡಿದ್ದೆ . 

ಆದರೆ ಅದು ಯಾವಾಗ  ವಾರದ ತಿರುಗಾಟಗಳು ಅಪರೂಪವಾಗ ತೊಡಗಿದವೋ , ಮಧ್ಯ ರಾತ್ರಿಯ ಪಿಸುಮಾತುಗಳು ಕರಗಲಾರಂಭಿಸಿದವೊ ತಿಳಿಯಲೇ ಇಲ್ಲ ನೋಡು. ಫೋನ್ ಕಾಲ್ ಗೆ , ಭೇಟಿಗೆ ಎಲ್ಲ ನೀ ಬ್ಯುಸಿ ಎನ್ನ ತೊಡಗಿದಾಗಲೆಲ್ಲ ಅನುಮಾನ ಪಡುತ್ತಿದ್ದ ಮನಸ್ಸಿಗೆ " ವಯಸ್ಸು ಜಾಸ್ತಿಯಾದಂತೆ ಮನಸ್ಸು ಮಾಗುತ್ತೆ , ಹುಡುಗ ಜೀವನದಲ್ಲಿ ಸೀರಿಯಸ್ ಆಗುತ್ತಿದ್ದಾನೆ don't worry " ಎಂದು ಸಮಾಧಾನಿಸುತ್ತಿದ್ದೆ. ಆದರೆ ನಿಧಾನವಾಗಿ ನೀ ಇನ್ನೊಂದು ಸೆಳವಿಗೆ ಜಾರುತ್ತಿರುವುದು ಮಾತ್ರ ಗೊತ್ತಾಗಲೇ ಇಲ್ಲ ನೋಡು.   ಫೋನ್   ಕಾಲ್ ಗಳು ಕಡಿಮೆಯಾಗುತ್ತಾ ಬಂದಾಗ, ನೀ ನನ್ನ avoid  ಮಾಡುತ್ತಾ ಬಂದಾಗ ನಾನು ಅರ್ಥ ಮಾಡಿಕೊಳ್ಳಬೇಕಿತ್ತು "ಕೆಲವು ಕನಸುಗಳಿಗೂ expiry date  ಇರುತ್ತದೆ" ಎಂದು. 

ಸುಮಾರು ಒಂದೂವರೆ ತಿಂಗಳ ನಂತರ  ಮೂರು ದಿನದ ಹಿಂದೆ ನಿನ್ನ ಕಾಲ್ ಬಂದಾಗ ಕಾಲು ಎಡವಿಕೊಂಡಿದ್ದೆ . ಉಗುರ ಸಹಿತ ಕಿತ್ತು ಬಂದಿತ್ತು ಚರ್ಮ. ಅವತ್ತು ಹಾಕಿದ ಬ್ಯಾಂಡೇಜ್ ಇವತ್ತು ತೆಗೆದಿದ್ದಾರೆ . ನಿನಗಲ್ಲಿ ಮದುವೆಯ ಸಂಭ್ರಮವಂತೆ  .. ನಿನ್ನ ಅಮ್ಮನಿಗಿದ್ದಷ್ಟೂ ತಾಳ್ಮೆ ನಿನ್ನಲ್ಲಿರಲಿಲ್ಲವಲ್ಲೋ ಹುಡುಗ.. ಕಾಲಿನ ಹೆಬ್ಬೆರಳನ್ನೊಮ್ಮೆ ನೋಡಿಕೊಂಡೆ. ಮಚ್ಚೆ ಅಳಿಸಿ ಹೋಗಿದೆ . ಅದೃಷ್ಟ ಕಳಚಿ ಬಿದ್ದಿದೆ. ಓದು ಕೈಯಲ್ಲಿದೆ . ಪ್ರಯತ್ನ ಕೈ ಹಿಡಿಯುತ್ತದೆ ಅಲ್ಲವಾ? ಬದುಕು ಮುನ್ನಡೆಸುತ್ತೇನೆ ಎನ್ನುವ ಭರವಸೆ ಕೊಡುತ್ತಿದೆ. ಅದರಂತೆ ಮುನ್ನಡೆಯುತ್ತಿದ್ದೇನೆ

Saturday, 30 May 2015

ಶುರುವಾಗಬಹುದೇ ದೂರ ತೀರ ಯಾನ ...??

PC: Dinesh Maneer
http://www.dineshmaneer.com/

ಕರಿ ಮುಗಿಲು .... ಗಿರಿ ಸಾಲು ... 
ಒಂಟಿ ತೀರ .... ಖಾಲಿ ದೋಣಿ ... 
ನಿಂತ ನೀರು ... ಮೌನ ತೇರು ... 
ಬೀಸಬಹುದೇ  ತಂಗಾಳಿ ... 
ಹನಿಯ ಬಹುದೇ ತುಂತುರು ಮಳೆ ... 
ಮೂಡಬಹುದೇ  ಜೋಡಿ ಹೆಜ್ಜೆಗಳು ... 
ಪ್ರೀತಿ ಪಲ್ಲವ .. ನೀರ  ಕಲರವ ... 
ಶುರುವಾಗಬಹುದೇ ದೂರ ತೀರ ಯಾನ ...?? 

Saturday, 4 April 2015

ನೀ ಕೊಡಿಸಿದ ಅಚ್ಚ ಬಿಳುಪಿನ ಸೀರೆಯ ಮೇಲೆ ಕೈ ಆಡಿಸುತ್ತಿದ್ದರೆ ಬಣ್ಣ ಬಣ್ಣದ ಕನಸುಗಳ ನುಣುಪು ಕೈ ಸೋಕುತ್ತಿದೆ ....


ಖಾಲಿ ಖಾಲಿಯಾಗಿತ್ತು ಹೈವೇ. ಇಳಿಸಂಜೆಯ ನೇಸರ ನೆರಳ ಬೆಳೆಸುತ್ತಿದ್ದ. ಹೊಂಬಣ್ಣದ ಧೂಳಲ್ಲಿ ಪಾದ ತೋಯಿಸಿಕೊಳ್ಳಲು ನೀನಿರಲಿಲ್ಲ. ಹೊತ್ತು ಮುಳುಗುವ ಮುನ್ನ ನಿರ್ಜನ ಹಾದಿಯ ಬದಿಯ ಹಸಿರಲ್ಲೂ ಹೊನ್ನು ತೂಗಿತ್ತು. ಅಲ್ಲಿ ನಿನ್ನ ಉಸಿರಿತ್ತು. 


"Golden dust on the road"-PC: Krishna Bhat

ನಿನ್ನದೇ ನೆನಪಿನಲ್ಲಿ ಹೆಜ್ಜೆಯಿಟ್ಟು ಬಂದವಳು ಈ ಮುಸ್ಸಂಜೆಯಲ್ಲಿ ನಿನ್ನ ಹೆಸರಲ್ಲಿ ದೀಪ ಹಚ್ಚಿದ್ದೇನೆ. ದೀಪವು ನಿನ್ನದೇ .. ಗಾಳಿಯು ನಿನ್ನದೇ ... ಎಂದು ಹಾಡುವ ಬದಲು ಅವನ ಹೆಸರಲ್ಲಿ ಹಚ್ಚಿದ ದೀಪವಾಗಿದ್ದರಿಂದ ಅದು ನನ್ನದೇ... ನೀ ಆರಿಸಬೇಡ ಬೆಳಕನ್ನು ಎಂದು ಗಾಳಿಯನ್ನು ಗದರಿಕೊಂಡಿದ್ದೇನೆ. ಅದೇ ... ಅದೇ ಬೆಳಕಂಥ ಕಣ್ಣುಗಳೇ ನನ್ನನ್ನು ನಿನ್ನ ಬಳಿಗೆ ಸೆಳೆದದ್ದು. ನಿಮ್ಮ ಮನೆಯಲ್ಲಿ ನನ್ನನ್ನೂ ಒಬ್ಬಳಾಗಿ ಮಾಡಿದ್ದು. ಹಾಸ್ಟೆಲ್ ನಲ್ಲಿ ಹೋಮ್ ಸಿಕ್ ಆಗಿ, ಅಳುಬುರುಕಿಯಂತೆ ಇರುತ್ತಿದ್ದವಳಿಗೆ ಮನೆ ಮರೆಸಿ ನಗು ಕಲಿಸಿಕೊಟ್ಟಿದ್ದು. ಅಮ್ಮಾ miss you. ಅಪ್ಪಾ miss you ಅಂತ ಬರೆಯುತ್ತಿದ್ದಲ್ಲೆಲ್ಲ i miss you .. i love you ಅಂತಾ ಬರೆವಂತೆ ಮಾಡಿದ್ದು. ವಿಜ್ಞಾನಿಯೊಬ್ಬ ನನ್ನೆದೆಯಲ್ಲಿ ರಾಜ್ಯಭಾರ ಮಾಡಬಲ್ಲ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಸೂರ್ಯ ,ಚಂದ್ರ , ನಕ್ಷತ್ರಗಳು ಹೇಗೆ ಉಂಟಾದವು ಎಂದು ಪ್ರಾಕ್ಟಿಕಲ್ ಆಗಿ ಹೇಳಬಲ್ಲ ನೀನು "ಆ ಬೆಟ್ಟದಲ್ಲಿ .. ಬೆಳದಿಂಗಳಲ್ಲಿ.... ಸುಳಿದಾಡಬೇಡ ಗೆಳತಿ ... " ಎಂದು ಹಾಡಲೂ ಬಲ್ಲೆ .. 


ನಿನ್ನೊಂದಿಗೆ , ನಿನ್ನವರೊಂದಿಗೆ ಕಳೆದು ಹೋಗಿದ್ದವಳಿಗೆ ಅಪ್ಪನ ಹೆಸರಿದ್ದ ಎರಡು ಟಾಟ ಸುಮೋಗಳು ಎದುರು ಬಂದು ನಿಂತಾಗಲೇ "ದುಗುಡ" ಎನ್ನುವ ಪದ ಮತ್ತೆ ಹುಟ್ಟಿಕೊಂಡಿದ್ದು. ಹತ್ತು ಎನ್ನುವಂತೆ ರಾಮಣ್ಣ ಕಣ್ಣು ಸನ್ನೆ ಮಾಡಿದ್ದ , ಮರು ಮಾತನಾಡದೆ ಹತ್ತಿ ಕುಳಿತಿದ್ದೆ . ರಾಮಣ್ಣ ಅಪ್ಪನ ಬಲಗೈ ಬಂಟ. ಅಪ್ಪ ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಕ್ಕೆ ಇರುವ ಏಕೈಕ ಜೀವಂತ ಸಾಕ್ಷಿ..! ಒಳಗಡೆ ಏನಾಗುತ್ತಿದೆ ಎಂದು ಚೂರು ಹೊರಗಡೆಯ ಪ್ರಪಂಚಕ್ಕೆ ಗೊತ್ತಾಗದಷ್ಟು ಎತ್ತರದ ಗೋಡೆ . ನಾಲ್ಕು ಜನರು ಒತ್ತಿ ಹಾಕಬೇಕಾದಂಥ ದೊಡ್ಡ ಬಾಗಿಲು . ಅದರೊಳಗಿನ ಮೂವತ್ತೆರಡಂಕಣದ ದೊಡ್ಡ ಮನೆ. ಆಚೆ ಇದ್ದವರು ಕಾಣಿಸದಂಥಹ ದೊಡ್ಡ ಮುಂಡಿಗೆ ಕಂಬಗಳು . ಎಡವಿಕೊಂಡರೆ ರಕ್ತ ಕಿತ್ತು ಬರುವಂಥ ಹೊಸಿಲುಗಳು... ಹಳೆ ಕಾಲದ ಕತ್ತಿ ಗುರಾಣಿಗಳಿಂದ ಅಲಂಕಾರಗೊಂಡ ಗೋಡೆಗಳು. ಹೊರಗಡೆಯಿಂದ ಬಂದವರಿಗೆ ಇದು ಮ್ಯುಸಿಯಮ್ ಥರ ಅನಿಸಿದರೆ ನನಗಿದು ಸ್ವರ್ಗ .. ಇದು ನಾನು ಆಡಿ ಬೆಳೆದ ಮನೆ. ಎಂದಿನಂತೆ ಭವ್ಯ ಸ್ವಾಗತವೇನೋ ಇತ್ತು. ಆದರೆ ಸಂತೋಷಿಸುವ ಮನಸ್ಸು ನನ್ನದಾಗಿರಲಿಲ್ಲ . ಯಾವುದೋ ಅವ್ಯಕ್ತ ಭಯ ಮನದಲ್ಲಿ ..

ಊಹೆ ನಿಜವಾಗಿತ್ತು . ಮನೆಯಲ್ಲಿ ಮದುವೆಗೆ ತಯಾರಿ ನಡೆಯುತ್ತಿತ್ತು. ಬಹಳ ಗಾಬರಿಯಲ್ಲಿ ನಿನಗೆ ಫೋನ್ ಮಾಡಿ ವಿಷಯ ತಿಳಿಸಿದ್ದೆ . " ನೋಡು ನೀ ದಾಟಿ ಬರಬೇಕಿರುವುದು ಆ ದೊಡ್ಡ ಮನೆಯ ಹೊಸ್ತಿಲಷ್ಟೇ ಹೊರಗಡೆಯ ಪ್ರಪಂಚ ದೊಡ್ಡದಿದೆ, ಅಲ್ಲಿ ನಾನಿದ್ದೇನೆ . ಮನೆಯವರಿಗೆ ವಿಷಯ ತಿಳಿಸು . ಒಪ್ಪದಿದ್ದರೆ ಹೊರಟು ಬಂದು ಬಿಡು " ಎಂದ ನಿನ್ನ ಮಾತು ಕೇಳಿ ಅವತ್ತು ಎಲ್ಲರೆದುರು ಧೈರ್ಯವಾಗಿ ನಮ್ಮ ಪ್ರೀತಿಯ ವಿಷಯವನ್ನು ತಿಳಿಸಿದ್ದೆ . ಅಷ್ಟೇ .. ... ಅಪ್ಪ ಎಲ್ಲರೂ ಹೋಗಬಹುದು ಎಂಬಂತೆ ಸನ್ನೆ ಮಾಡಿದ್ದರು , ಅದರರ್ಥ ಅವರಿಗೆ ಏಕಾಂತದ ಅವಶ್ಯಕತೆ ಇದೆ ಎಂಬುದು . ಮನೆ ಎಷ್ಟು ನಿಶ್ಯಬ್ದವಾಗಿತ್ತೆಂದರೆ ಅಮ್ಮ ಹಾಲಿನ ಲೋಟವನ್ನು ತಂದಿಟ್ಟ ಟನ್ ಎಂಬ ಶಬ್ದ ಬಿಟ್ಟರೆ , ನಾನು ಕುಡಿದಾದ ಮೇಲೆ ಗಂಟಲಿನಿಂದ ಹೊರಟ ಕುಳರ್ ಎನ್ನುವಂತ ಶಬ್ದ ಮಾತ್ರ ಕೇಳಿಸಿತ್ತು. ಈ ಅಸಹಜ ಮೌನ ಕಿತ್ತು ತಿನ್ನುವಂತಿತ್ತು . ಯಾವ ಭರವಸೆಗಳೂ ಉಳಿದಿರಲಿಲ್ಲ . ಮುಂಜಾವಿನಲ್ಲೇ ಎದ್ದು ಹೊರಟವಳನ್ನು ತಡೆದು ನಿಲ್ಲಿಸಿದ್ದು " ಗೆಜ್ಜೆ ತೆಗೆದಿಟ್ಟು ಹೊರಟಿದ್ದೀಯಾ ? ನಾನು ಎತ್ತಿ ಬೆಳೆಸಿದ ಕಂದ ನೀನು ... ಸದ್ದಾಗಂತೆ ಹೊಸಿಲ ದಾಟಬೇಡ " ಎಂದ ಅಪ್ಪನ ಮಾತುಗಳು. "ಆ ಹುಡುಗನನ್ನು ಕರೆಸು ನಾನು ಮಾತನಾಡಬೇಕಿದೆ " ಎಂದು ಖಡ್ಗದ ಅಲುಗಿನ ಮೇಲೆ ಕೈಯಾಡಿಸುತ್ತಾ ಅಪ್ಪ ಹೇಳುವಾಗ ಅವರ ಮುಖ ನೋಡುವ ಧೈರ್ಯವಾಗದೆ ಫೋನ್ ಕೈಗೆತ್ತಿಕೊಂಡಿದ್ದೆ .

ನಿನಗೆ ಫೋನ್ ಮಾಡಿ ಬಂದವಳಿಗೆ ಕಾಣುತ್ತಿದುದು ಕತ್ತಿಯ ಅಲುಗಿನ ಮೇಲೆ ಆಡಿಸುತ್ತಿದ್ದ ಅಪ್ಪನ ಕೈ ಬೆರಳುಗಳಷ್ಟೇ . "ಕ್ರೋಧಗೊಂಡರೆ ನಿನ್ನಪ್ಪ ಮನುಷ್ಯನೇ ಅಲ್ಲ " ಅಂತ ಅಮ್ಮ ಹೇಳುತ್ತಾಳೆ . ಇಷ್ಟು ವರ್ಷದಲ್ಲಿ ನಾನೂ ಒಂದೋ ಎರಡೋ ಬಾರಿ ಅಪ್ಪನ ಕ್ರೋಧವನ್ನು ಕಂಡಿದ್ದೇನೆ . ಮನದಲ್ಲಿ ಸಾವಿರ ಯೋಚನೆಗಳು . ಏನು ಮಾಡಬಹುದು ಅಪ್ಪ ? ನಿನ್ನನ್ನು ಕೊಂದು ಬಿಡಬಹುದೇ ? ನೀನಂತೂ ರೀಲ್ ನಲ್ಲೂ ರಿಯಲ್ ನಲ್ಲೂ ಹೀರೋ ಅಲ್ಲ , ಆದರೆ ನನ್ನಪ್ಪನ ಕಡೆಯವರು ಮಾತ್ರ ರಿಯಲ್ ವಿಲ್ಲನ್ ಗಳು . " ಎಂಟು ಜನರನ್ನು ಅಡ್ಡಡ್ಡ ಸೀಳಿ ದಿಡ್ಡಿ ಬಾಗಿಲಿಗೆ ನೇತು ಹಾಕಿದ ವಂಶದಲ್ಲಿ ಕತ್ತಿ ಸರಿಯಾಗಿ ಹಿಡಿಯಲು ಬಾರದ ನೀನು ಹೇಗೆ ಹುಟ್ಟಿದೆಯೋ " ಎಂದು ಚಿಕ್ಕಪ್ಪನಿಗೆ ಅಜ್ಜಿ ಬಯ್ಯುತ್ತಿದ್ದ ಮಾತು ಬೇಡವೆಂದರೂ ನೆನಪಾಗುತ್ತಿತ್ತು. ಯಾವುದೋ comedy ಸಿನಿಮಾದ " ರಕ್ತಪಾತದ ವಂಶ ನಮ್ಮದು " ಎಂಬ ಡೈಲಾಗ್ ನಮ್ಮ ವಂಶದ ಸೀರಿಯಸ್ ಟ್ಯಾಗ್ ಲೈನ್ ಆಗಿ ಗೋಚರಿಸತೊಡಗಿತ್ತು ..!! ನಿನ್ನನ್ನು ಇಲ್ಲಿಗೆ ಕರೆದು ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಪದೇ ಪದೇ ಅನಿಸತೊಡಗಿತ್ತು .

ಆದರೆ ಮರುದಿನದ ಬೆಳಗು ಬೇರೆಯೇ ಆಗಿತ್ತು. ಎಲ್ಲರನ್ನು ಸ್ವಾಗತಿಸುವಂತೆಯೇ ದೊಡ್ಡ ಮನೆ ನಿನ್ನನ್ನೂ ಸ್ವಾಗತಿಸಿತ್ತು. ಹೆಣ್ಣಿನ ತಂದೆಯಾಗಿ ಅಪ್ಪ ಕೊಂಚ ಬಿಗುವಾಗಿಯೇ ಮಾತನಾಡುತ್ತಿದ್ದರೆ ನೀನು ಮಾತ್ರ ಎಲ್ಲ ಬಿಗುಮಾನಗಳನ್ನು ತೊರೆದು ಸಹಜವೆಂಬಂತೆ ಮಾತನಾಡಿದ್ದೆ . ಕಪಟತನವಿಲ್ಲದೆ , ಅತೀ ವಿನಯವಂತಾಗದೆ ಎಲ್ಲವನ್ನೂ ತಿಳಿಸಿ ಹೇಳಿದ್ದೆ . ನೀ ಇದ್ದ ಎರಡು ದಿನಗಳು ನನ್ನೊಂದಿಗೆ ಮಾತನಾಡಿದ್ದು ಕಡಿಮೆಯೇ . ನೀ ಹೊರಟು ನಿಂತಾಗ ಕಳುಹಿಸಿಕೊಟ್ಟು ಬಾ ಎನ್ನುವಂತೆ ಅಪ್ಪ ಸನ್ನೆ ಮಾಡಿದ್ದರು . ನಿನ್ನೊಂದಿಗೆ ದುಗುಡದಿಂದಲೇ ಹೆಜ್ಜೆ ಹಾಕುತ್ತಿದ್ದರೆ ನೀನು ಮಾತ್ರ ನಿರಾಳನಾದವನಂತೆ " ನೀ ದಾಟಬೇಕಿರುವುದು ಈ ದೊಡ್ಡ ಮನೆಯ ಹೊಸಿಲಷ್ಟೇ ಎಂದುಕೊಂಡಿದ್ದೆ , ಆದರೆ ಮನೆಯೊಳಗಡೆ ನಿನಗೆಂದೇ ಒಂದು ಪ್ರಪಂಚವಿದೆ ಎಂದು ಗೊತ್ತಿರಲಿಲ್ಲ. ನಿನ್ನಪ್ಪ ಒಪ್ಪಿದರಷ್ಟೇ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ " ಎಂದು ಹೈವೇ ಎಂದೂ ಕೂಡ ಗಮನಿಸದೆ ಹಣೆಯ ಮೇಲೊಂದು ಮುತ್ತಿಟ್ಟು ಹೊರಟುಬಿಟ್ಟಿದ್ದೆ . ಮಬ್ಬು ಬೆಳಕಿನಲ್ಲಿ ನೀನಿತ್ತ ಮುತ್ತಿಗೆ ದೂರದಲ್ಲಿ ಬರುತ್ತಿದ್ದ ವಾಹನದ ಬೆಳಕೊಂದು ನಾಚಿಕೊಂಡಿತ್ತು .

ಕಣ್ಣಂಚಲ್ಲಿದ್ದ ನೀರನ್ನು ಒರೆಸಿಕೊಳ್ಳುತ್ತಾ ಮನೆಯ ಮೆಟ್ಟಿಲು ಹತ್ತಿದವಳನ್ನು ಕರೆದು ಅಪ್ಪ " ಆ ಹುಡುಗ ಜೀವನವನ್ನು ಬಹಳ ಪ್ರೀತಿಸುತ್ತಾನೆ. ಇಂಥವನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ನನ್ನ ಜೀವನ್ಮುಖಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಭರವಸೆಯಿದೆ . ಒಳ್ಳೆ ದಿನ ನೋಡಿ ಅವನ ಹಿರಿಯರಿಗೆ ಬರಹೆಳ್ತೇನೆ. ನೀ ತೆಗೆದಿಟ್ಟ ಗೆಜ್ಜೆ ಹಾಕಿಕೋ ಹೋಗು " ಎಂದರು . ಅವತ್ತು ಅನಿಸಿದ್ದು " ಹಿರಿಯರ ಭಾವನೆಗಳಿಗೆ ಬೆಲೆಕೊಡುವ ನಿನ್ನಂಥ ಒಳ್ಳೆಯ ಪ್ರೆಮಿಗಳಿರುವಂತೆಯೇ , ಕಿರಿಯರ ಭಾವನೆಗಳನ್ನು ಅರ್ಥೈಸಿಕೊಳ್ಳದಂಥಹ ಕೆಟ್ಟ ತಂದೆಯರೂ ಇರುವುದಿಲ್ಲ ಎಂದು .


ಇದೆಲ್ಲ ನಡೆದು ಸುಮಾರು ಒಂದು ತಿಂಗಳೇ ಕಳೆದಿದೆ. ನಾಳೆ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ. ನಾಳೆಗಾಗಿ ನೀ ಕೊಡಿಸಿದ ಅಚ್ಚ ಬಿಳುಪಿನ ಸೀರೆಯ ಮೇಲೆ ಕೈ ಆಡಿಸುತ್ತಿದ್ದರೆ ಬಣ್ಣ ಬಣ್ಣದ ಕನಸುಗಳ ನುಣುಪು ಕೈ ಸೋಕುತ್ತಿದೆ ....

(ಗೆಳೆಯ ಕೃಷ್ಣ ಭಟ್ ತೆಗೆದ ಈ ಫೋಟೊ ಗೆ ಮೊದಲ ನಾಲ್ಕು ಸಾಲುಗಳನ್ನು ಗೀಚಿದ್ದೆ . ಅದೇ ಮುಂದೆ ಕಥೆಯಾಯ್ತು . ಥ್ಯಾಂಕ್ಯು ಕೃಷ್ಣ ಭಟ್ )

Monday, 9 March 2015

(ಕು)ರೂಪ


ಗುಡ್ ಮಾರ್ನಿಂಗ್ .. ಹೇಗಿದ್ದೀರಾ ? ಎನ್ನುತ್ತಾ ನಂದಿನಿ ಎಬ್ಬಿಸಿದಾಗ ನಿಧಾನಕ್ಕೆ ಕಣ್ಣು ತೆರೆದ ಮಹೇಶನಿಗ್ಯಾಕೋ ಬೆಳಕಿಗೆ ಕಣ್ಣು  ಹೊಂದಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು. ಎದುರಿದ್ದ ನಂದಿನಿಯ ನಗು ಬೆಳಗಿಗೆ ಹೊಸ ರಂಗು ಕೊಟ್ಟಂತಾಗಿ ತಾನೂ ಮುಗುಳ್ನಕ್ಕ. "ಎರಡು ದಿನ ಬಿಡದೆ ಕಾಡಿದ ಜ್ವರ ಎಷ್ಟು ಸುಸ್ತು ಹೊಡೆಸಿದೆ ನೋಡಿ, ಕಣ್ಣೆಲ್ಲ ಹೇಗಾಗಿದೆ ನೋಡಿ,ಮಾಧುರಿಯ ಬಗೆಗೆಲ್ಲ ಕನವರಿಸುತ್ತಿದ್ದಿರಿ ಗೊತ್ತಾ. ಕಾಫಿ ತರ್ತೀನಿ ಇರಿ " ಎನ್ನುತ್ತಾ ಎದ್ದು ಹೋದ ನಂದಿನಿಯನ್ನು ನೋಡುತ್ತಿದ್ದವನಿಗೆ ಮಾಧುರಿ ನೆನಪಾದಳು. 

'ಮಾಧುರಿ' ಸೌಂದರ್ಯದಲ್ಲಿ ಮಾಧುರ್ಯವನ್ನು ಹೊಂದಿದವಳು. ಮೊದಲ ನೋಟದಲ್ಲೇ ಮರುಳಾಗಿದ್ದ. ತನಗಿದ್ದ ಅಸಾದ್ಯ ಬುದ್ದಿಮತ್ತೆ ಆಕೆಯನ್ನು ಬಳಿ ಸೆಳೆದಿತ್ತು. ಆಕೆಯೊಂದಿಗೆ ಒಡನಾಡುತ್ತ ಕೊನೆಗೊಮ್ಮೆ ಆಕೆಗೆ ತನ್ನ ಪ್ರೀತಿಯನ್ನು ತಿಳಿಸಿದ್ದ. ತಿರಸ್ಕಾರವಿತ್ತು ಆಕೆಯಿಂದ, ಆಕೆಯ ತಿರಸ್ಕಾರಕ್ಕಿಂತ ಆಕೆ ಕೊಟ್ಟ ಕಾರಣಗಳೇ ತನ್ನನ್ನು ಎಷ್ಟು ಜರ್ಜರಿತಗೊಳಿಸಿತ್ತು. " ನಿನ್ನ ಹಣ, ಗುಣಾವಗುಣಗಳೇನೆ ಇದ್ದರೂ ನಾನು ಮದುವೆಯಾಗುವವನಲ್ಲಿ, ಪ್ರೀತಿಸುವವನಲ್ಲಿ ಚಂದ ಬಯಸುತ್ತೇನೆ, ಪ್ರೀತಿ, ಕಾಮ ಎರಡಕ್ಕೂ ಚಂದ ಮುಖ್ಯ ಕಣೋ. ಸ್ನೇಹಕ್ಕೆ ಹಾಗಲ್ಲ. ನನ್ನ ಮರೆತುಬಿಡು. ನಿನ್ನೊಂದಿಗೆ ಬದುಕು ನನಗೆ ಸಾಧ್ಯವಿಲ್ಲ " ಎಂದು ಬದುಕಿನಿಂದ ಎದ್ದು ನಡೆದಿದ್ದಳು. ಚೆಲುವಾಂತ ಚೆನ್ನಿಗನೆಂದೇ ಬಿರುದು ಪಡೆದ, ಹುಡುಗಿಯರ ಕನಸು ಎನ್ನುವಂತಿದ್ದ ಗೌತಮ್ ನ ಮದುವೆಯಾಗಿದ್ದಳು. ಅವಳು ಹೋದ ಮೇಲೆ ಅಲ್ಲಿಯವರೆಗೂ ಯಾವುದಕ್ಕೂ ತೊಡಕಾಗದ ರೂಪ ತೊಡಕಾಗತೊಡಗಿತ್ತು. ಕನ್ನಡಿ ನೋಡಿಕೊಳ್ಳುವಾಗೆಲ್ಲ, ತಾನೊಬ್ಬ ಡಾಕ್ಟರ್ ಆಗಿಯೂ ಕೂಡ ತನ್ನ ರೂಪಕ್ಕೆ ತಾನೇನೂ ಮಾಡಿಕೊಳ್ಳಲಾರೆನಲ್ಲ ಎಂದು ಬೇಸರವಾಗುತ್ತಿತ್ತು. ಹೆಣ್ಣುಮಕ್ಕಳನ್ನು ಮಾತನಾಡಿಸುವುದನ್ನು ಬಿಟ್ಟಿದ್ದೆ. ಅಮ್ಮ ಮದುವೆಯ ಸುದ್ದಿ ಎತ್ತಿದ್ದರೂ ಹೆಣ್ಣು ನೋಡಲು ಹೋಗುತ್ತಿರಲಿಲ್ಲ. ನಂದಿನಿಯ ತಂದೆ ಅವರ ಮನೆಗೇ ಹುಡುಕಿಕೊಂಡು ಬಂದು ಹೆಣ್ಣು ಕೊಡುತ್ತೇವೆ ಎಂದಾಗಲೂ ಕೇಳಿದ್ದೆ, ನನ್ನ ಕುರೂಪವನ್ನು ನಿಮ್ಮ ಮಗಳು ಒಪ್ಪಿಕೊಳ್ಳುತ್ತಾಳ ? ಎಂದು. ಅದಕ್ಕವರು " ನಮ್ಮ ಮಗಳು ನಾವು ಹೇಳಿದಂತೆ ಕೇಳುತ್ತಾಳೆ ನೀವದರ ಬಗ್ಗೆ ಯೋಚಿಸಬೇಡಿ" ಎಂದಿದ್ದರು. ಮದುವೆಗೆ ಮೊದಲು ಎರಡು ಮೂರು ಬಾರಿ ಮೀಟ್ ಆಗಿದ್ದರೂ ನನ್ನನ್ನು ಇಷ್ಟಪಟ್ಟೆ ಮದುವೆಯಾಗುತ್ತಿದ್ದೀಯ ? ಎಂದು ನಂದಿನಿಯನ್ನು ಕೇಳಲು ಆಗಿರಲೇ ಇಲ್ಲ. ನಂದಿನಿಯೊಂದಿಗಿನ ಸಂಸಾರದಲ್ಲಿ ಮಾಧುರಿ ಆಗಾಗ ನೆನಪಾಗುತ್ತಿದ್ದರೂ ಮೊದಲಿನಂತೆ ಕಾಡುತ್ತಿರಲಿಲ್ಲ. 

ಮೊನ್ನೆ ಎಮರ್ಜೆನ್ಸಿ ಕಾಲ್ ಬಂದು ಹಾಸ್ಪಿಟಲ್ ಗೆ ಹೋದರೆ ಅದೊಂದು  ಆಕ್ಸಿಡೆಂಟ್ ಕೇಸ್ ಆಗಿತ್ತು. ಮಾಧುರಿಯ ಗಂಡ ಗೌತಮ್ rash driving  ಮಾಡಿ ಕಂಟ್ರೋಲ್ ಮಾಡಲಾಗದೆ construction  ಹಂತದಲ್ಲಿದ್ದ ಮೊರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದ. ಆ ರಭಸಕ್ಕೆ ಕಬ್ಬಿಣದ ಸರಳೊಂದು ಅವನ ಕೆನ್ನೆಯನ್ನು ಹೊಕ್ಕಿತ್ತು. ಒಪರೆಟ್ ಮಾಡಿದರೂ ಕೊಡ ಮುಖವನ್ನು ಮೊದಲಿನಂತೆ ಮಾಡಲು ಸಾಧ್ಯವಿರಲಿಲ್ಲ. ದವಡೆಯ ಮೂಳೆಯೊಂದನ್ನು ತೆಗೆಯಬೇಕಾಗಿ ಬಂದಿತ್ತು. ಒಪರೆಶನ್ ಮುಗಿದ ತಕ್ಷಣ ಅವನನ್ನು ನೋಡಿದ ಮಾಧುರಿ ಹಾಸ್ಪಿಟಲ್ ಎನ್ನುವುದನ್ನು ಮರೆತು ಕಿರುಚಿದ್ದಳು. ಅವಳನ್ನು ಸಮಾಧಾನಿಸುವ ಮನಸ್ಸಾದರೂ ನಂದಿನಿಯ ನೆನಪಾಗಿ ಸುಮ್ಮನೆ ಬಂದಿದ್ದೆ. ನಂದಿನಿಯು ಅಷ್ಟೇ ಮೊದಮೊದಲು ಹೆಂಡತಿಯಾದರೂ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳು. ಯಾವತ್ತಿಗೂ ನನ್ನ ಕುರೂಪದ ಬಗ್ಗೆ ಮಾತನಾಡದಿದ್ದರೂ, ಅವಳಲ್ಲಿ ಬೇಸರವಿತ್ತು ಎಂಬುದು ಗೊತ್ತಾಗುತ್ತಿತ್ತು.  ಅವಳ ಗೆಳತಿಯರಿಗೆ ನನ್ನ ಪರಿಚಯಿಸಲು ಸಂಕೋಚ ಪಡುತ್ತಿದ್ದಳು. ಆದರೆ ಈಗೀಗಂತೂ ಇನ್ನಿಲ್ಲದಂತೆ ಪ್ರೀತಿಸತೊಡಗಿದ್ದಾಳೆ. ಪ್ರತಿ ಹೆಜ್ಜೆಗಿರುತ್ತಾಳೆ. ಎಲ್ಲ ಅವಶ್ಯಕತೆಗಳ ನೋಡಿಕೊಳ್ಳುತ್ತಾಳೆ. ಪ್ರತಿ ಕ್ಷಣಕ್ಕೂ ತನ್ನ ನೆನಪಿಸಿಕೊಡುತ್ತಾಳೆ, ನನ್ನುಸಿರಲ್ಲಿ ಹಸಿರಾಗಿರುತ್ತಾಳೆ. ಎರಡು ದಿನದ ಜ್ವರದ ಸುಸ್ತು ಕೂಡಾ ಅವಳ ಸನಿಹ, ಅವಳ ಸ್ಪರ್ಶವಿದ್ದರೆ ಮಾಯ ಎಂದುಕೊಂಡವನಿಗೆ ಅವಳನ್ನೊಮ್ಮೆ ಬಿಗಿಯಾಗಿ ಅಪ್ಪಿಕೊಳ್ಳುವ ಮನಸ್ಸಾಗಿ ರೂಂ ನಿಂದ ಎದ್ದು ಹೊರಬಂದ....  
 
ಇತ್ತ ಕಾಫಿ ಮಾಡುತ್ತಿದ್ದ ನಂದಿನಿಯ ತಲೆಯಲ್ಲೂ ಯೋಚನೆಗಳು ಸಾಲು ಸಾಲಾಗಿದ್ದವು. ಯಾಕೋ ಮಾಧುರಿಯ ಹೆಸರೆತ್ತಿದ್ದು ತಪ್ಪೆನಿಸಿದ್ದರೂ ಆಕೆ ಕಾಡತೊಡಗಿದ್ದಳು.ಹೌದು ಪ್ರೀತಿ , ಕಾಮ ಎರಡೂ ಚಂದವನ್ನೇ ಬಯಸುತ್ತವೆ. ಒಂದು ಹೆಣ್ಣು ಇವೆರಡರಲ್ಲೂ ಚಂದವನ್ನೇ ಬಯಸುತ್ತಾಳೆ.ನಾನೂ ಅದಕ್ಕೆ ಹೊರತಾಗಿರಲಿಲ್ಲ.  ಬಹುಶಃ ಆಕೆಗಾದರೆ ಆಯ್ಕೆಗಳಿದ್ದವು ಅಂತ ಕಾಣುತ್ತೆ. ಅದಕ್ಕೆ ತನಗೆ ಬೇಕಾದ್ದನ್ನು ಆಯ್ದುಕೊಂಡಳು. ಆದರೆ ನನಗೆ ? ನನಗೆ ಆಯ್ಕೆಯೆಂಬ ಸ್ವಾತಂತ್ರ್ಯವೇ ಇರಲಿಲ್ಲ. ನಾವೊಪ್ಪಿದ ಹುಡುಗ ನೀನು ಒಪ್ಪಿಕೊಳ್ಳಲೇ ಬೇಕು ಎನ್ನುವಂತೆಯೇ ಮಾತಾಡಿದ್ದು. ನನಗೆ ಆಯ್ಕೆಯ ಸ್ವಾತಂತ್ರ್ಯವಿದ್ದಿದ್ದರೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿರಲಿಲ್ಲ. ಆ ದೊಡ್ಡ ಮೂಗು, ದಪ್ಪ ದಪ್ಪ ಕಪ್ಪು ತುಟಿಗಳು, ಕೆನ್ನೆ ತುಂಬಾ ಮೊಡವೆ ಕಲೆಗಳು, ಬೇಡ ಬೇಡ ಎಂದು ಮನಸ್ಸಿನಲ್ಲಿದ್ದರೂ ಹೇಳಲಾರದೆ ಮದುವೆಯೂ ನಡೆದುಹೋಗಿತ್ತು. ಮೊದಮೊದಲು ಮುದ್ದಿಸುವಾಗ ಅಸಹ್ಯವಾಗುತ್ತಿತ್ತು. ಗೆಳತಿಯರಿಗೆ ಪರಿಚಯ ಮಾಡಿಕೊಡುವಾಗ ತಡೆ ತಡೆದು ಪರಿಚಯಿಸಿದ್ದೆ. " ಏನೇ ಹಣ ನೋಡಿ ಒಪ್ಪಿಕೊಂಡೆಯೇನೆ ? " ಎಂದು ಗೆಳತಿಯೊಬ್ಬಳು ಕೇಳಿದಾಗಲಂತೂ ಮಯೆಲ್ಲ ಉರಿದಿತ್ತು. ಆದರೆ ಸಂಸಾರ ಸಾಗಿದಂತೆ, ನೀವು ಅರ್ಥವಾಗುತ್ತಾ ಹೋದಂತೆಲ್ಲ ಇಷ್ಟವಾಗುತ್ತಾ ಹೋದಿರಿ. ನಿಮ್ಮ ಒಳ್ಳೆತನ, ನಿಮ್ಮ ನಡವಳಿಕೆಗಳು, ನಿಮ್ಮೊಂದಿಗೆ ಮನಸ್ಸು ಸ್ಪಂದಿಸತೊಡಗಿದಂತೆ ಪ್ರೀತಿ ತನ್ನದೇ ಹೊಳಪು ಪಡೆದುಕೊಂಡಿತು. ಒಳ್ಳೆಯಗುಣ ಎಲ್ಲವನ್ನು ಮರೆಸತೊಡಗಿತು. ನಿಮ್ಮ ಮನಸಿನಂತೆ,ದೇಹವನ್ನೂ ಅರಿವಿಲ್ಲದಂತೆ ಪ್ರೀತಿಸತೊಡಗಿದ್ದೇನೆ. ಕಪ್ಪು ತುಟಿಗಳ ತುಂಟಾಟಕ್ಕೆ ಕೆನ್ನೆ ನಾಚುತ್ತೆ, ಕಾಯುತ್ತೆ. ದೊಡ್ಡ ಮೂಗನ್ನು ಮುದ್ದಿಸುವ ಮನಸ್ಸಾಗುತ್ತೆ, ನಾ ಕೊಟ್ಟ ಮುತ್ತುಗಳೆಲ್ಲ ನಿನ್ನ ಮೊಡವೆ ಕಲೆಗಳಲ್ಲಿ ಕುಳಿತು ನಗುವಾಗ ಖುಷಿಯಾಗುತ್ತೆ. ತವರ ಮರೆಸಿದ ಪ್ರೀತಿ ನಿನ್ನದು.ಸೌಂದರ್ಯ, ಐಶ್ವರ್ಯಕ್ಕಿಂತ ಗುಣವೊಂದೇ ಮುಖ್ಯ ಎನ್ನುವ ನಿಲುವು ನನ್ನದಲ್ಲದಿದ್ದರೂ. ಒಳ್ಳೆಯತನ, ಒಳ್ಳೆಯಗುಣ ಕುರೂಪವನ್ನು ಮರೆಸಬಲ್ಲದು ಎಂದು ಅರ್ಥವಾಗಿದೆ.  ನೀವು  ಹೇಗಿದ್ದರೂ ನೀವು  ನನ್ನವರೇ , ನಿಮ್ಮನ್ನ  ಕಳೆದುಕೊಳ್ಳಲಾರೆ.   ಎಂದುಕೊಳ್ಳುವ ಹೊತ್ತಿಗೆ ಬಿಸಿ ಬಿಸಿ ಕಾಫಿ ರೆಡಿ ಆಗಿತ್ತು. ಕಾಫಿಯೊಂದಿಗಿನ ಇಂದಿನ ಮುತ್ತಲ್ಲಿ ಎಲ್ಲ ಪ್ರೀತಿಯ ಸುರಿದುಕೊಡುತ್ತೇನೆ ಎಂದುಕೊಂಡು ಅಡಿಗೆಮನೆಯಿಂದ ಹೊರಬರುವುದಕ್ಕೂ , ಮಹೇಶ್ ರೂಮಿಂದ ಹೊರಬರುವುದಕ್ಕೂ ಸರಿಹೋಯಿತು. ಇಬ್ಬರೂ ಒಬ್ಬರಿಗೊಬ್ಬರೂ ಮುಖ ನೋಡಿಕೊಂಡು ನಕ್ಕರು.  ಒಬ್ಬರ ಭಾವಗಳು ಒಬ್ಬರಿಗೆ ಅರ್ಥವಾದಂತೆ.  ಮಾತುಗಳಿಲ್ಲದ ಭಾವಗಳೆಲ್ಲ ಜೀವ ತುಂಬಿಕೊಂಡು ಅದಲುಬದಲಾದಂತೆನಿಸಿತು. ಮರುಕ್ಷಣ ಅವನಪ್ಪುಗೆಯಲ್ಲಿ ಆಕೆ ಕಾಫಿಯಲ್ಲಿ ಸಕ್ಕರೆ ಬೆರೆತಂತೆ ಕರಗಿದರೆ, ಅವಳ ಹಣೆ ತಾಕಿದ ಅವನ ಮುತ್ತು ಜೇನು ಸುರಿದಂತಾಗಿತ್ತು. 

ಸ್ನಾನ ಮಾಡಿ ರೆಡಿಯಾಗಿ ಹಾಸ್ಪಿಟಲ್ ಗೆ ಹೊರಟನಾದರೂ ಮನಸ್ಸಲ್ಲಿ ಮಾತ್ರ ಅವ್ಯಕ್ತ ಭಯವಿದ್ದಂತೆ ಎನಿಸಿತ್ತು. ಚೇಂಬರ್ ಗೆ ಬಂದು ಕಣ್ಮುಚ್ಚಿ ಕುಳಿತವನನ್ನು ನರ್ಸ್ ಮಾತು ಎಚ್ಚ್ಚರಿಸಿತು. "ಸರ್  ಮಿಸ್ಟರ್ ಗೌತಮ್ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ " ಎಂದಳು. 

" ಯಾರಿದ್ದಾರೆ ಅವರ ಜೊತೆ ? " ಎಂದು ಕೇಳಿದ. 

" ಅಪ್ಪ, ಅಮ್ಮ ಅನಿಸುತ್ತೆ ಸರ್, ಅವತ್ತು ಕಿರುಚಿಕೊಂಡು ಹೋದ ಅವರ ವೈಫ್ ನಿನ್ನೆ ಒಂದು ಸಾರಿ ಬಂದಿದ್ದರು " ಎಂದ ನರ್ಸ್ ಗೆ ಆಯ್ತು ಎನ್ನುವಂತೆ ತಲೆಯಾಡಿಸಿದವನು ಯಾಕೋ ಕಸಿವಿಸಿಯಾದಂತಾಗಿ ಗೌತಮ್ ಇದ್ದ ವಾರ್ಡ್ ಗೆ ಹೋದ. ಹಾಸಿಗೆಯಲ್ಲಿ ಮಲಗಿದ್ದ ಗೌತಮ್ ನ ಕಣ್ಣುಗಳು ಆಳಕ್ಕಿಳಿದು ಹೋಗಿದ್ದವು. ದವಡೆಯ ಮೂಳೆಯೇ ಮುರಿದಿದ್ದರಿಂದ  ಮುಖ ವಿಕಾರವಾಗಿತ್ತು. ಅದೆಂದಿಗೂ ಸರಿಯಾಗಲಾರದು ಎಂದುಕೊಳ್ಳುತ್ತಾ ರಿಪೋರ್ಟ್ಸ ಎಲ್ಲಾ ನೋಡಿ ಮಾತ್ರೆಗಳನ್ನು ಬದಲಾಯಿಸಿ ಬರೆದು ವಾಪಸ್ ಇಡುವ ಹೊತ್ತಿಗೆ ಪಕ್ಕದಲ್ಲಿದ್ದ ಪೇಪರ್ ಗಳು ಕಣ್ಣಿಗೆ ಬಿದ್ದವು. ಎತ್ತಿಹಿಡಿದು ನೋಡಿದರೆ ಮಾಧುರಿಯ ಕಡೆಯಿಂದ ಬಂದ ಡೈವೋರ್ಸ್ ನೋಟಿಸ್ ಆಗಿತ್ತು ಅದು .  ಗೌತಮ್ ನ ಮುಖ ನೋಡಿದ, ಇವನ ನೋಟ ಎದುರಿಸಲಾರದೇ ಗೌತಮ್ ಆ ಕಡೆ ಮುಖ ತಿರುಗಿಸಿದನಾದರೂ ಅವನ ಕಣ್ಣಂಚಿನ ನೀರು ಮಹೇಶ್ ಗೆ ಕಾಣದೆ ಇರಲಿಲ್ಲ. ಯಾಕೋ ಕೈಯಲ್ಲಿದ್ದ ಡೈವೋರ್ಸ್ ನೋಟಿಸ್  ಗಹಗಹಿಸಿ ನಗುತ್ತಿರುವಂತೆ ಭಾಸವಾಯ್ತು. ಒಂದು ಕಾಲದಲ್ಲಿ ಸುಂದರಿಯೆನಿಸಿ ಮನಸ್ಸಿನಲ್ಲಿ ಅಚ್ಚ್ಹೊತ್ತಿದ್ದ ಮಾಧುರಿಯ ರೂಪವೂ ಕುರೂಪವಾಗುತ್ತಿರುವಂತೆ ಕಾಣತೊಡಗಿತು.      

Friday, 28 November 2014

ಅಕ್ಷತೆಯೊಂದಿಗೆ ಅಕ್ಷಯವಾಗಲಿ ಬದುಕು ..

ಖುಷಿಯಾಗುತ್ತಿದೆ . ಗೆಳೆಯ ಗೆಳತಿಯರೆಲ್ಲ ಹೊಸ ಬಾಳಿಗೆ ಅಡಿ ಇಡುತ್ತಿದ್ದಾರೆ . ನವೆಂಬರ್ 28 ರಿಂದ ಡಿಸೆಂಬರ್ 18 ರವರೆಗಿನ ಸರಿ ಸುಮಾರು 7 ರಿಂದ 8 invitation card ಗಳು ನನ್ನ ಕೈಲಿವೆ . ಮದುವೆಯೆಂದರೆ ... ಅಂತ ಶುರು ಮಾಡಿ ಅದರ ಆದಿ ಅಂತ್ಯದವರೆಗೆ ಬರೆದು ಇತಿಶ್ರೀ ಹಾಡಿ ಎಲ್ಲರನ್ನು bore ಹೊಡೆಸಲಾರೆ .

"ಪ್ರತಿದಿನವೂ ಹೊಸ ಕುತೂಹಲಗಳೊಂದಿಗೆ ಶುರುವಾಗಿ , ನಾಳೆಯೆಡೆಗೊಂದಿಷ್ಟು  ಕುತೂಹಲ , ಕನಸುಗಳನ್ನು ಕೊಡುತ್ತಾ ಸಶೇಷವಾಗಲಿ  ಬದುಕು .. "

ಗೆಳತಿ ಮಮತಾಳ  ಮದುವೆ ಕರೆಯೋಲೆಗಾಗಿ ಒಂದೆರಡು ಸಾಲುಗಳನ್ನು ಗೀಚಿದ್ದೆ.  ಅದರೊಂದಿಗೆ ಎಲ್ಲ ಗೆಳೆಯ ಗೆಳತಿಯರಿಗೂ , ಅವರೊಡನಾಡಿಯಾಗಿ , ಜೀವನಾಡಿಗಳಾಗಿ  ಬರುವವರಿಗೂ ನನ್ನ  ಪುಟ್ಟದೊಂದು ಹಾರೈಕೆಯಿದೆ 

ಎದೆಯೆತ್ತರಕ್ಕೆ ಬೆಳೆದ ಮಗಳು ತೊಡೆಯೇರಿ 
ಕುಳಿತಿರಲು ಹೊಸ ಬಾಳ ಪಯಣಕ್ಕೆ "ನಾಂದಿ"

ಮಂಟಪದಿ ಅಂತರಪಟ ಸರಿಯೇ "ಮಾಲೆ"ಗಳು 
ಬದಲಾಗಲು ಭಾವದಲ್ಲೂ ಬದಲಾವಣೆ .. 

"ತಾಳಿ" ತಾಳ್ಮೆಗೆ ಸಂಕೇತವಾದರೆ "ಪಾಣಿಗ್ರಹಣ"ದಿ 
ಜೊತೆಯಿರುವ ಭರವಸೆ ... 

ಲೆಕ್ಕಕ್ಕೆ ಏಳಾದರೂ ಲೆಕ್ಕವಿರದಷ್ಟು  ಹೆಜ್ಜೆಗಳಿಗೆ 
"ಸಪ್ತಪದಿ"ಯ ಮುನ್ನುಡಿ .. 

ಹೊಸ ಸಂಸ್ಕಾರಕ್ಕೆ "ಅಗ್ನಿಸಾಕ್ಷಿ "

"ವರಪೂಜೆ" ಯಲ್ಲಿ  ಅಳಿಯ ದೇವರಾದರೆ 
ಗೃಹಲಕ್ಷ್ಮಿಯಾಗಿ "ವಧುಪ್ರವೇಶ" .. 


ಅಕ್ಷತೆಯೊಂದಿಗೆ  ಅಕ್ಷಯವಾಗಲಿ ಬದುಕು .. ಜೀವನದಿಯಾಗಲಿ ಪ್ರೀತಿ .. 

Thursday, 16 October 2014

ಇಡಿಯಾದದ್ದು ಒಡೆದು ಹಿಡಿಹಿಡಿಯಾಗಿ...

ಮಿಡ್ಲ್ ಸ್ಕೂಲ್ ದಿನಗಳವು. ಅವನ ಕಣ್ಣುಗಳು ಬಹಳ ಇಷ್ಟವಾಗಿ ಬಿಟ್ಟಿದ್ದವು. ನೋಟಕ್ಕೆ ಪ್ರತಿ ನೋಟ , ಕಳ್ಳ ಸನ್ನೆಗಳಲ್ಲಿ ಹತ್ತಿರವಾಗಿ ಬಿಟ್ಟಿದ್ದೆವು. ಮಕ್ಕಳೆಲ್ಲಾದರೂ ಹಾದಿ ತಪ್ಪಿ ಬಿಟ್ಟರೆ ಎಂಬ ಕಾರಣದಿಂದ ಹಾಕಿದ ಪಾಲಕರ ಸರ್ಪಗಾವಲಿನಿಂದಾಗಿ ಪ್ರಯಾಸವಾಗಿ, ಭೇಟಿಯಾಗಬೇಕಿತ್ತು. ಯಾರಾದರೂ ನೋಡಿದರೆ, ಮನೆಯಲ್ಲಿ ಹೇಳಿಬಿಟ್ಟರೆ .. ಎಂಬ ಭಯ ಕಾಡುತ್ತಿತ್ತು. ಆ ಭಯದ ಭೇಟಿಗಳಲ್ಲೂ ಹಿತವಿರುತ್ತಿತ್ತು. ಪ್ರತಿ ಸಲವೂ ಮನೆಯವರನ್ನು ಗೆದ್ದೆನೆಂಬ ಅಹಂ ಭಾವವಿರುತ್ತಿತ್ತು.


ಪ್ರೇಮ ಪತ್ರಗಳ ವಿನಿಮಯ, ಸಣ್ಣ ಪುಟ್ಟ ಗಿಫ್ಟ್ ಗಳ ವಿನಿಮಯವೂ ನಡೆದಿತ್ತು. ಅವನು ಮುದ್ದಿಸಿದ್ದು , ಮುತ್ತಿಟ್ಟಿದ್ದೆಲ್ಲ ಪ್ರಥಮ ರೋಮಾಂಚನಗಳು. ಎಸ್ ಎಲ್ ಸಿಮುಗಿಸಿ ಬೇರೆ ಊರಿಗೆ ಹೊರಟವನು ಕೂಡ ಕತ್ತಿಗೆ ಮುತ್ತಿಕ್ಕಿ "ನೋಡು ನಾ ಕೊಟ್ಟ ಗಿಫ್ಟ್ ಮತ್ತು ಪತ್ರಗಳನ್ನೆಲ್ಲ ಜೋಪಾನವಾಗಿಟ್ಟುಕೋ. ನೀನೆ ನನ್ನ ಜೀವ" ಅಂತ ಹೇಳಿ ಹೊರಟಿದ್ದ . ಅದಾಗಿ ಮೂರು ವರುಷಗಳು ಅವನ ಪತ್ತೆಯಿಲ್ಲ. ಕಾಲೇಜಿನ ದಿನಗಳು. ಹೊಸ ಹೊಸ ಪರಿಚಯಗಳು. ಅದೆಷ್ಟೋ ಜನ ಪರಿಚಿತರಾದರೂ ಅವನು ಮಾತ್ರ ಮನಸಿನಿಂದ ದೂರವಾಗಿರಲೇ ಇಲ್ಲ. ಅದ್ಯಾವುದೋ ಹುಡುಗನ ಮೇಲೆ ಆ ಕ್ಷಣಕ್ಕೊಂದು ವಿನಾಕಾರಣದ ಆಕರ್ಷಣೆ ಮೊಳಕೆಯೊಡೆದರೂ, ಅದು ಕ್ಷಣಿಕವೇ ಆಗಿರುತ್ತಿತ್ತು. ಮನಸ್ಸಿನಲ್ಲಿ ಅವನೊಬ್ಬನಿಗೆ ಜಾಗವಿತ್ತು. ನನ್ನೊಳಗಿನ ಕೋಟೆಯಲ್ಲಿ ಅವನನ್ನು ಭದ್ರವಾಗಿರಿಸಿಕೊಂಡಿದ್ದೆ. ಯಾರನ್ನೂ ಗೆಳೆಯರನ್ನಾಗಿಸಿಕೊಳ್ಳಲಿಲ್ಲ. ಇದ್ದ ಹುಡುಗಿಯರು ಕೂಡ ಹಾಯ್ .. ಬಾಯ್ ಎನ್ನುವಂತೆ ಗೆಳತಿಯರಾಗಿದ್ದರು. ಅವನ ಪತ್ರಗಳು , ಗಿಫ್ಟ್ ಗಳ ಜೊತೆ ಅವನಿಗಾಗಿ ಕಾಯುತ್ತಿದ್ದವಳಿಗೆ ಅವೊತ್ತೊಂದು ದಿನ ಬಂತು ಒಂದು ಪತ್ರ. ಅವನದೇ ಪತ್ರಗಳಲ್ಲೇ ಉಸಿರಾಡಿಕೊಂಡಿದ್ದವಳಿಗೆ ಅವನ ಕೈ ಬರಹ ತಿಳಿಯದೇ ಇರಲಿಲ್ಲ. ಅಪ್ಪ ಅಮ್ಮಂದಿರ ಅನುಮಾನದ ದೃಷ್ಟಿ ನನಗಲ್ಲವೆಂಬಂತೆ ಓಡಿ ಹೋಗಿ ಬಾಗಿಲು ಹಾಕಿಕೊಂಡು ಓದಿದ್ದೆ . ಕುಶಲೋಪರಿಗಳ ಮಾತುಗಳಾದ ಮೇಲೆ ಊರಿಗೆ ಬಂದಿದ್ದೇನೆ. ನನಗಿರುವ ಏಕೈಕ ಸ್ನೇಹಿತೆ ನೀನು ಹಾಗಾಗಿ ನಿನ್ನನ್ನು ಭೇಟಿಯಾಗಬೇಕೆಂದು ಬರೆದಿದ್ದನ್ನು ಓದಿದಾಗ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂಥಹ ಖುಷಿ. ಅಲ್ಲಿ ಬರೆದಿದ್ದ "ಏಕೈಕ ಸ್ನೇಹಿತೆ " ಎಂಬ ಮಾತು ಖುಷಿ ಕೊಡುತ್ತಿತ್ತು.


ಹಳೆಯ ಸವಿಗಳ ಮೆಲಕು ಹಾಕುತ್ತಾ , ಅವನಲ್ಲಿಗೆ ಹೋದಾಗ ಯಾಕೋ ಹೃದಯ ಕಂಪಿಸುತ್ತಿತ್ತು. ನನ್ನೆಲ್ಲ ಖುಷಿಗಳೊಂದಿಗೆ , ಅವನ ಹಳೆಯ ಪತ್ರಗಳು , ಗಿಫ್ಟ್ ಗಳು ,ಅವನಿಗೆಂದೇ ಬರೆದ, ಪೋಸ್ಟ್ ಮಾಡದ ಪತ್ರಗಳು ,ಅವನಿಗಾಗಿ ತೆಗೆದುಕೊಂಡಿದ್ದ ಬರ್ತ್ ಡೇ ಗಿಫ್ಟ್ ಎಲ್ಲವನ್ನೂ ಅವನೆದುರು ಹರಡಿದಾಗ ಪುಟ್ಟ ಮಗುವೆಂಬಂತೆ ನೋಡಿದ್ದ ಅವನು ."ನೋಡು ಎಲ್ಲ ಎಷ್ಟು ಜೋಪಾನವಾಗಿಟ್ಟಿದ್ದೀನಿ, ನಿನ್ನನ್ನು ನನ್ನೆದೆಯಲ್ಲೇ ಹೀಗೆ ಜೋಪಾನ ಮಾಡುತ್ತೀನಿ, ಐ ಲವ್ ಯು ಕಣೋ" ಎಂದೆ. " ಸಿಲ್ಲಿ ಗರ್ಲ್ ಇದನ್ನೆಲ್ಲಾ ಇನ್ನೂ ಇಟ್ಕೊಂಡಿದೀಯಾ ? ಏನು ಬೆಲೆ ಬಾಳುತ್ತವೆ ಇವೆಲ್ಲ , ಗುಜರಿಗೆ ಹಾಕೊದಲ್ಲವಾ "ಎನ್ನುವ ಮಾತುಗಳು ಅವನ ಬಾಯಿಂದಲೇ ಬಂದದ್ದು ಎಂದು ಅರ್ಥಮಾಡಿಕೊಳ್ಳಲು ತುಂಬಾ ಕ್ಷಣಗಳೇ ಹಿಡಿದವು. ಸಣ್ಣಗೆ ಕಂಪಿಸುತ್ತಾ " ಅಲ್ಲ ಕಣೋ , ಅವತ್ತಿನ ಪ್ರೀತಿ , ನೀ ಮುದ್ದಿಸಿದ್ದು , ಮುತ್ತಿಟ್ಟಿದ್ದು ಇದಕ್ಕೆಲ್ಲ ಏನರ್ಥ ?"ಎಂದು ಮುಗ್ದತೆಯಿಂದ ಕೇಳಿದ್ದೆ .ಅದಕ್ಕೆ ಅವನು " ಯಾವ ಕಾಲದಲ್ಲಿದೀಯಾ ತಾಯಿ , ಅದೆಲ್ಲ ಆ ಏಜ್ ನ ಅಟ್ರ್ಯಾ ಕ್ಷನ್ ಅಷ್ಟೇ, ಗರ್ಲ್ಸ್ ತುಂಬಾ ಜನ ಫ್ರೆಂಡ್ಸ್ ಆಗಬಹುದು, ಆದ್ರೆ ಎಲ್ಲಾರು ಗರ್ಲ್ ಫ್ರೆಂಡ್ ಆಗೋದಿಕ್ಕೆ ಚಾನ್ಸ್ ಇಲ್ಲ .ಸುಮ್ನೆ ಈ ಪ್ರೀತಿ ಪ್ರೇಮ ಅಂತೆಲ್ಲ ತಲೆ ಕೆಡಿಸಿಕೊಳ್ಳಬೇಡ. ಓದಿನ ಕಡೆ ಗಮನ ಹರಿಸು. ನೀ ನನ್ ಫ್ರೆಂಡ್ ಅಷ್ಟೇ ಕಣೆ , ಯು ಆರ್ ಮೈ ಫ್ರೆಂಡ್ , ಅಂಡ್ ಫ್ರೆಂಡ್ ಓನ್ಲಿ " ಎಂದುಮಾತು ಮುಗಿಸಿದ್ದ.


ಇಡಿಯಾದ ಪ್ರೀತಿ ಹಿಡಿ ಹಿಡಿಯಾಗಿ ಒಡೆದಿತ್ತು . ಅಂದಿನಿಂದ ಚೂರಾದ ಪ್ರತಿ ಹೃದಯದ ತುಂಡಿನಲ್ಲೂ ಒಬ್ಬೊಬ್ಬ ಹುಡುಗರು ಕಾಣತೊಡಗಿದರು ಒಡೆದ ಕನ್ನಡಿಯಚೂರುಗಳಲ್ಲಿ ಮೂಡುವ ಪ್ರತಿಬಿಂಬಗಳಂತೆ.ಪ್ರತಿಯೋಬ್ಬನನ್ನು ಪ್ರೀತಿಸಿದೆ. ಪ್ರತಿಯೊಬ್ಬನಿಗೂ ಅವನಿಗಂದ ಪ್ರೀತಿಯ ಮಾತುಗಳನ್ನೇ ಹೇಳಿದೆ. ಪ್ರತಿಯೊಬ್ಬರೂ ಅವನಂದ ಪ್ರೀತಿಯ ಮಾತುಗಳನ್ನೇ ಆಡಿದರು ..!! ಬೇಜಾರಾದಾಗೆಲ್ಲ ಬದಲಾಯಿಸಿದೆ ಹುಡುಗರನ್ನು ಬಟ್ಟೆ ಬದಲಾಯಿಸಿದಂತೆ. ಮೊಬೈಲ್ ಕಂಪನಿಗಳೆಲ್ಲ ನನ್ನಿಂದಲೇ ಉಸಿರಾಡಿಕೊಂಡಿವೆಯೇನೋ ಅನಿಸುತ್ತೆ. ಅದೆಷ್ಟೋ ಸಿಮ್ ಗಳು ಬದಲಾದವು ಹುಡುಗರು ಬದಲಾದಂತೆ. ಅದೆಷ್ಟೋ ಸಿಮ್ ಗಳು ಮುರಿದುಹೋದವು ಪ್ರೀತಿ ಮುರಿದು ಹೋದಂತೆ. ಹಪಹಪಿಸುತ್ತಿರುತ್ತದೆ ಮನಸ್ಸು ಮತ್ತೊಬ್ಬ ಹುಡುಗನಿಗಾಗಿ ಅವನ ಮೇಲೆ ಸೇಡು ತೀರಿಸಿಕೊಳ್ಳಲು. ಸ್ವಲ್ಪ ಪ್ರೀತಿ ತೋರಿಸುವ , ಸ್ವಲ್ಪ ಕೇರ್ ಮಾಡುವ ಹುಡುಗ ಸಿಕ್ಕರೂ ಸಾಕು ಪ್ರೀತಿಯಾಗಿ ಬದಲಾಯಿಸಿಕೊಳ್ಳುತ್ತಿದ್ದೆ ನಾನು. ಮೊದಮೊದಲು ನನ್ನ ಬಗೆಗೆ ಗೆಳತಿಯರು, ಓರಗೆಯ ಹುಡುಗಿಯರೆಲ್ಲ ಆಡಿಕೊಳ್ಳುವಾಗ ತುಂಬಾ ಬೇಸರವಾಗುತ್ತಿತ್ತು. ಆಮೇಲಾಮೇಲೆ ಎಲ್ಲವೂ ಮಾಮೂಲಿ ಅನ್ನಿಸತೊಡಗಿತ್ತು. " ಈ ವಾರ ಯಾವ ಹುಡುಗನ ಬೈಕಿನ ಬ್ಯಾಕ್ ಸೀಟ್ ಮೇಲೆ ಹೆಸರಿದೆಯೇ ಹುಡುಗಿ ?" ಅಂತ ಕಣ್ಣರಳಿಸಿ ಯಾರಾದರೂ ಗೆಳತಿಯರು ಕೇಳಿದರೆ wait and watch ಎಂದು ಕಣ್ಣು ಹೊಡೆದು ಬರುತ್ತಿದ್ದೆ. ಅದೆಷ್ಟೋ ಅಪರಿಚಿತರು ಪರಿಚಿತರಾದರು. ಅದೆಷ್ಟೋ ನಿರ್ಜನ ಪ್ರದೇಶಗಳು ಆಪ್ತವಾದವು. ಊರೂರು ಸುತ್ತಿದೆ. ಮುಖವೇ ನೋಡಿರದೆ ಇದ್ದ ಯಾವುದೋ ಹುಡುಗನಿಗಾಗಿ ಅವನೂರಿನವರೆಗೆ ಅಲೆದೆ. ಸ್ನಾನದ ಮನೆಯ ಮಂದ ಬೆಳಕಿನಲ್ಲಿ ಮೈ ಮೇಲಿನ ಕಲೆಗಳನ್ನು ಎಣಿಸತೊಡಗಿದೆ. ಎಲ್ಲರಲ್ಲೂ ಅವನೇ ಕಾಣುತ್ತಿದ್ದ. ಗಾಯದ ಮೇಲೆ ಬರೆ ಎಳೆಯುವಂಥವರೇ ಸಿಕ್ಕರಾ ? ಅಥವಾ ನಾನೇ ಅಂಥವರನ್ನು ಹುಡುಕಿಕೊಂಡು ಹೊರಟೇನಾ ? ಗೊತ್ತಿಲ್ಲ. ಮನಸ್ಸೆಂಬ ಮಾಯಾ ಕುದುರೆ ಲಂಗು ಲಗಾಮಿಲ್ಲದೆ ಓಡುತ್ತಿತ್ತು . ಸಂಬಂಧಗಳನ್ನು ಉಳಿಸಿಕೊಳ್ಳುವ ಭರದಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತಿದ್ದೆ, ಅವು ಉಸಿರು ಕಟ್ಟಿ ಸತ್ತು ಹೋಗುತ್ತಿದ್ದವು. ಸಡಿಲ ಬಿಟ್ಟ ಸಂಬಂಧಗಳೆಲ್ಲ ಗಾಳಿಗೆ ಹರವಿ ಬಿಟ್ಟ ಕೂದಲುಗಳಂತೆ ಸಿಕ್ಕು ಸಿಕ್ಕು.. ಹಿಡಿತದ ಹದ ಕೊನೆಗೂ ಸಿಕ್ಕಿಲ್ಲ. ಅಪ್ಪ ಅಮ್ಮನಕಣ್ಣಲ್ಲಿ ವಿಲ್ಲನ್ ನಾನು. ಗೆಳತಿಯರ ಸರ್ಕಲ್ ನಲ್ಲಿ ಚೆಲ್ಲು .. ಸುತ್ತಲಿನವರ ದೃಷ್ಟಿಯಲ್ಲಿ ನಡತೆ ಸರಿಯಿಲ್ಲದ ಹುಡುಗಿ. ಮೊದಲು ಅಮ್ಮನ ಬೈಗುಳ , ಅಪ್ಪನ ನೋಟಗಳೆಲ್ಲ ಭಯ ಹುಟ್ಟಿಸುತ್ತಿದ್ದವು. ಈಗ ಅಪ್ಪ ಅಮ್ಮನ ಬುದ್ಧ್ಹಿಮಾತುಗಳನ್ನೂ ಕೇಳದ ಮಟ್ಟಕ್ಕೆ ಬೆಳೆದು ನಿಂತು ಬಿಟ್ಟೆ. ಈಗೀಗ ಅವರ ಮೌನ ಕೂಡಾ ನನ್ನಲ್ಲಿ ಭಯ ಹುಟ್ಟಿಸುವುದಿಲ್ಲ. ಅವರೆಲ್ಲರ ತಿರಸ್ಕಾರದ ನೋಟಗಳ ಮೆಟ್ಟಿ ನಿಲ್ಲಲು ಬೇಕು ಹುಡುಗನೊಬ್ಬನ ತೆಕ್ಕೆ.ಸಿಗುವ ಯಾರೋ ಒಬ್ಬನ ಜೊತೆ ಹ್ಯಾಂಗ್ ಔಟ್ .

ಮನೆಯಲ್ಲಿ ಮದುವೆ ಮಾಡಿ ಕೈ ತೊಳೆದುಕೊಳ್ಳುವ ತವಕ. ಯೋಗ್ಯ ವರನಿಗಾಗಿ ಹುಡುಕಾಟ. ಅಲ್ಯಾವುದೋ ಹುಡುಗನ ಜೊತೆ ಮದುವೆ ಮಾತುಕಥೆಗಳು ನಡೆಯುತ್ತಿದ್ದರೆ ನಾನಿಲ್ಯಾರದೋ ತೋಳತೆಕ್ಕೆಯಲ್ಲಿ ಬಂಧಿಯಾಗಿರುತ್ತೇನೆ. ರೂಪಕ್ಕೆ ಮರುಳಾದವ ಯಾರೋ ಒಬ್ಬ ನೋಡಲು ಬರುತ್ತಾನೆ. ಅವನ ಮುಂದೆ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ. ಮನೆಗೆ ಹೋಗಿ ಉತ್ತರ ತಿಳಿಸುತ್ತೇನೆ ಎನ್ನುವವರ ಉತ್ತರ ಏನಾಗಿರುತ್ತದೆ ಎಂಬುದು ನನಗೂ ಗೊತ್ತಿರುತ್ತದೆ ; ಅಪ್ಪ ಅಮ್ಮನಿಗೂ ಕೂಡ. ಆಗ ಮನೆ ಅಸಹನೀಯವಾಗಿರುತ್ತದೆ. ಮನೆಯಲ್ಲಿನ ನಿಶ್ಯಬ್ದ, ಮೌನದ ಪೊರೆಯೊಳಗಿನ ಅವರ ಸಿಟ್ಟು , ಅಸಮಾಧಾನದ ನಿಟ್ಟುಸಿರು ಎಲ್ಲವನ್ನೂ ಎದುರಿಸಲಾರದೆ ಕೋಣೆಯ ಕದವಿಕ್ಕಿ ಬಿಕ್ಕುತ್ತೇನೆ.ಮತ್ತೆ ಶುರುವಾಗುತ್ತದೆ ಮನೆಯಲ್ಲಿ ಹುಡುಕಾಟ ಯೋಗ್ಯ ವರನಿಗಾಗಿ, ನಾನೂ ಯಾರೋ ಒಬ್ಬನ ತೋಳಲ್ಲಿ ಬಂಧಿಯಾಗಿ , ಕತ್ತಿನ ಇಳಿಜಾರಲ್ಲಿ ಅವನಿಡುವ ಮುತ್ತುಗಳ ಎಣಿಸುತ್ತ ಕೂತಿರುತ್ತೇನೆ. ಅದ್ಯಾವುದೋ ದೂರದ ಗುಡ್ಡದ ಮರೆಯಲ್ಲಿ.. ಅದೊಂದು ಮುಸ್ಸಂಜೆಯಲ್ಲಿ .. 


                                                    -ಕನ್ನಿಕೆಯ ಡೈರಿಯ ಪುಟಗಳಿಂದ ....


(ಈ ಲೇಖನ ಮಾರ್ಚ್ ೨೨ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು )

Monday, 25 August 2014

ಕಿಟಕಿಯ ಪಕ್ಕ ಕುಳಿತು ಕನಸು ನೇಯುವ ತವಕ ....




"ಏನೇ ಒಳ್ಳೆ ಕಾಲು ಸುಟ್ಟ ಬೆಕ್ಕಿನ ಥರ ಆ ಕಡೆಯಿಂದ ಈ ಕಡೆ .. ಈ ಕಡೆಯಿಂದ ಆ ಕಡೆ ಓಡಾಡ್ತಾ ಇದ್ದೀಯ ?" ಅಂತ ಅಣ್ಣ ಕೇಳಿದಾಗ " ಕೀರ್ತಿ ಗೆ ಮದ್ವೆ ಮಾಡ್ತಾರಂತೆ ಕಣೋ " ಅನ್ನೋ ಮಾತು ಅನಾಯಾಸವಾಗಿ ಬಾಯಿಂದ ಹೊರಬಂದಿತ್ತು . "ಅಯ್ಯೋ ಹಳ್ಳಕ್ಕೆ ಬೀಳೋನು ಅವನು.. ಹುಡುಕೋ ಕಷ್ಟ ಅವನ ಮನೆಯವರಿಗೆ .. ನಿಂದೇನು ಗಂಟು ಹೋಗೋದು ?" ಎಂದು ಅಣ್ಣ ಹುಬ್ಬು ಹಾರಿಸಿದಾಗ ಛೇ ನನ್ನ ಮಾತಲ್ಲಿನ ಅಸಹನೆ ಸ್ವಲ್ಪನಾದ್ರು ಇವನಿಗೆ ಗೊತ್ತಾಗಿದ್ರೆ ನನ್ನ ಮನಸ್ಸು ತಿಳಿಯುತ್ತಿತ್ತೇನೋ ಅನಿಸಿತ್ತು . "ಏನಿಲ್ಲಾ ಬಿಡು " ಅಂತ ಹೇಳಿ ರೂಮ್ ಗೆ ಬಂದೆ. ಯಾರದೋ ದೂರದ ಸಂಬಂಧಿಗಳ ಮದುವೆಯಲ್ಲಿ ಬಹಳ ಹತ್ತಿರದವನಾಗಿ ಪರಿಚಯ ಆದವನು ನೀನು. ಅದೇನೋ ಯಾರನ್ನು ಪರಿಚಯ ಮಾಡಿಕೊಂಡರೂ ಅನಾಯಾಸವಾಗಿ "ಅಣ್ಣ " ಎಂದು ಬಾಯಿಗೆ ಬರುತ್ತಿದ್ದ ಪದವೊಂದು ನಿನ್ನ ಪರಿಚಯವಾದಾಗ ಜಪ್ಪಯ್ಯ ಅಂದರೂ ಬರಲಿಲ್ಲ ..!!


ಪಯಣದಿಂದಲೇ ಪರಿಚಯ ಗಾಢವಾಗಿದ್ದು . ಅವತ್ತು ಹೆಸರಿಡದೆ ಶುರುವಾದ ನಿನ್ನೊಂದಿಗಿನ ಪಯಣವನ್ನು journey of love ಅಂತ ಹೇಳಲಾ ? journey of life ಅಂತ ಹೇಳಲಾ ? ಅಂತ ಇವತ್ತು confusion ನಲ್ಲಿ ಇದ್ದೀನಿ . ಅದ್ಯಾವುದೋ ಗುಡ್ಡದ ದೇವರ ಪೂಜೆಗೆ ಹೋಗಿ ವಾಪಸ್ ಬರುವಾಗ ನಿನ್ನೊಂದಿಗೆ ಬೈಕ್ ನಲ್ಲಿ ಬರುವಂತಾಗಿತ್ತು . ಒಂದೇ ದಿನದ ಒಡನಾಟದಲ್ಲಿ ಅಷ್ಟು ಪರಿಚಿತನಲ್ಲದ ನಿನಗಿಂತ ಅಣ್ಣ ನ ಜೊತೆ ಹೋಗುವುದೇ ಹಿತ ಎನಿಸಿ ಅಣ್ಣನೆಡೆಗೆ ನೋಡಿದರೆ ಮಾವನ ಮಗಳು ಪಲ್ಲವಿ ಆಗಲೇ ಅಣ್ಣನ ಬೈಕ್ ಏರಿಯಾಗಿತ್ತು . ಒಲ್ಲದ ಮನಸ್ಸಿನಿಂದಲೇ ನಿನ್ನ ಬೈಕ್ ನಲ್ಲಿ ಕುಳಿತಿದ್ದೆ . ಡೆಸ್ಟಿನೇಷನ್ ದೂರದ್ದಾದಾಗ ಮಾತಿರದ ಪಯಣ ಎಷ್ಟು ಹೊತ್ತು ? ಮೌನ ಪೊರೆ ಕಳಚಿ ಮಾತಿಗೆ ಜಾಗ ಕೊಟ್ಟಿತ್ತು. ಸದ್ದಿಲ್ಲದ ಆ ಕಾಡಿನ ಪರಿಸರದಲ್ಲಿ ನನ್ನದೊಂದೇ ಗದ್ದಲವೇನೋ ಎಂಬಂತೆ ಸಾವಿರ ಪ್ರಶ್ನೆಗಳನ್ನು ಕೇಳಿದ್ದೆ ನಿನ್ನ ಬಳಿ . ಎಲ್ಲದಕ್ಕೂ ತಾಳ್ಮೆಯಿಂದ ಉತ್ತರಿಸಿದ್ದೆ ನೀನು. ದಾರಿ ಮಧ್ಯದಲ್ಲಿ ಅದೆಲ್ಲೋ ಕವಲು ದಾರಿಯಲ್ಲಿ ನಿಲ್ಲಿಸಿ , "ಇಲ್ಲಿಂದ ಎಂಟು ಕಿಲೋಮೀಟರ್ ಹೋದರೆ ಡೆಡ್ ಎಂಡ್ ಲ್ಲಿ ನಮ್ಮನೆ ಇರೋದು" ಅಂತ ಮೈ ಮುರಿಯುತ್ತಾ ಹೇಳಿದಾಗ , ಬೈಕ್ ಲ್ಲಿ ಕೂತು ಬೋರಾದ ನನಗೂ ಇನ್ನೂ ಅಷ್ಟು ದೂರವಾ ?ಅನಿಸಿದ್ದು ಸುಳ್ಳಲ್ಲ . ಈ ನಡುವೆ ನನ್ನ ತೋಳುಗಳು ನಿನ್ನ ಕೊರಳು ಬಳಸಿದ್ದು , ಗಲ್ಲಕ್ಕೆ ನಿನ್ನ ಹೆಗಲು ಆಸರೆಯಾಗಿದ್ದು , ಹಾರಾಡುವ ಕೂದಲುಗಳು ಕೆನ್ನೆಯೊಂದಿಗೆ ಕಚಗುಳಿಯ ಆಟವಾಡಿದ್ದು ಯಾವ ಮಾಯದಲ್ಲಿ ನಡೆದಿತ್ತೋ ಗೊತ್ತಾಗಿರಲೇ ಇಲ್ಲ . ಬೈಕ್ ನಿಮ್ಮನೆ ಮುಂದೆ ನಿಂತಾಗ ಇಳಿದು ಮತ್ತೆ ಮದುವೆ ಮನೆ ಗದ್ದಲದಲ್ಲಿ ಸೇರಿ ಹೋಗುವಾಗ ಮಾತ್ರ ಡೆಡ್ ಎಂಡ್ ಗೆ ಬಂದು ನಿಂತ ಈ  ಪಯಣ, ಇಲ್ಲಿಂದಲೇ ಶುರುವಾಗಿ ಕಾಡಿನ ದಾರಿಗಳಲ್ಲಿ , ಕವಲುಗಳಲ್ಲಿ , ಆ ಹಾವಿನ ತಿರುವುಗಳಲ್ಲಿ ನಾವಿಬ್ಬರೂ ಕಳೆದು ಹೋಗಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಏಕಾಂತ ಬೇಕಿತ್ತು ಮನಸ್ಸಿಗೆ ಈಗ , ಮೌನದ ಪೋರೆಯಲ್ಲಿ ಮತ್ತೆ ಸೇರಲು ಹವಣಿಸುತ್ತಿತ್ತು ಮನಸ್ಸು. ಅದರೂ ನಾವಿಬ್ಬರೂ ಗದ್ದಲದ ಸಂತೆಯಲ್ಲಿ ಕಳೆದುಹೋದೆವು .


ಪರಿಚಯದ ಹತ್ತು ತಿಂಗಳಲ್ಲಿ ಅದದೇ ಭಾವಗಳು ಮತ್ತೆ ಮತ್ತೆ ಕಾಡುವಾಗ ಇದಕ್ಕೆ ಪ್ರೀತಿಯಲ್ಲದೇ ಬೇರೇನು ಹೆಸರಿಡಲಿ ? " ಅಮ್ಮಾ ಕೀರ್ತಿ ಇದಾನಲ್ಲ " ಅಂತಾ ಶುರು ಮಾಡೋ ಹೊತ್ತಿಗೆ ಅಮ್ಮ " ಅದೇನೇ ಕೀರ್ತಿ ಅಂದ್ಕೊಂಡು ಕೀರ್ತಿ ಅಣ್ಣ ಅಂತ ಹೇಳೋಕೆ ಏನ್ ದೊಡ್ಡ ರೋಗ ನಿಂಗೆ ? "ಅಂತ ಕೇಳಿದರೆ  ಸಿಟ್ಟು ಬರುತ್ತೆ . ಇಷ್ಟೆಲ್ಲಾ ಕೇಳೋ ಅಮ್ಮನ ಕಣ್ಣಲ್ಲಿ ಒಂದು ಅನುಮಾನದ ಎಳೆ ಮೂಡಬಾರದ ? ನನ್ನನ್ನು ಕೇಳಬಾರದಾ ಅನಿಸುತ್ತೆ . ಅವಳಾಗೇ ಕೇಳಿದರೆ ಕೋಲೆ ಬಸವನ ಥರ ತಲೆ ಆಡಿಸುವುದೇ ಸುಲಭ , ತಡವರಿಸುತ್ತಾ ಮಾತುಗಳ ಪೋಣಿಸುವ ಬದಲು . ಅದಕ್ಕೆ ನಿನ್ನ ಕಾಗದ ಬಂದರೆ ಇನ್ನಿಲ್ಲದಂತೆ ಸಂಭ್ರಮಿಸುತ್ತೇನೆ . ಆದರೂ "ನಾನೇಕೆ ಹೀಗೆ?" ಅನ್ನೋ ಅನುಮಾನದ ಭೂತ ಮನೆಯಲ್ಲಿ ಯಾರ ಕಣ್ಣಲ್ಲೂ ಪ್ರತಿಫಲಿಸಲ್ಲ ಹಾಳಾದ್ದು . ನೀನೋ ಅಷ್ಟುದ್ದ ಪತ್ರವನ್ನು ಹಾಲ್ ಎಂಬೋ ಸಂತೆಯಲ್ಲಿ ಕೂತು ಓದುವಂತೆ ಬರೆದಿರುತ್ತೀಯ ವಿನಃ ರೂಮ್ ಎಂಬ ನನ್ನದೇ ಲೋಕದಲ್ಲಿ ಕದವಿಕ್ಕಿಕೊಂಡು ಕಿಟಕಿಯ ಪಕ್ಕ ಕುಳಿತು ಕನಸು ನೇಯುವಂತಹ ನಾಲ್ಕು ಸಾಲುಗಳನ್ನೂ ಬರೆಯುವುದಿಲ್ಲ ..


ನಿನಗೆ ರಾಖಿ ಕಳಿಸು ಅಂದ ಅಮ್ಮನಿಗೆ ಇನ್ನಿಲ್ಲದಂತೆ ನೆಪ ಹೇಳಿ ತಪ್ಪಿಸಿಕೊಂಡಿದ್ದೇನೆ . ರಕ್ಷಾ ಬಂಧನದ ಬದಲು ಭಾವ ಬಂಧನದ ಬಗೆಗೆ ಈ ನಾಲ್ಕು ಸಾಲುಗಳನ್ನು ನಿನಗಾಗಿ ಬರೆದೆ. ರಾಖಿ ಹಬ್ಬವಾಗಿ ವಾರದೊಳಗಾಗಿ ಈ ಪತ್ರ ಕೈ ಸೇರಿದಾಗ ಅಲ್ಲಿ ನಿನ್ನೆದೆಯಲ್ಲೆಲ್ಲೋ "ಒಳಗಡೆ ರಾಖಿಯಿರಬಹುದಾ ?" ಅಂತ ಒಂದು ಸಣ್ಣ ತಲ್ಲಣವಾದರೂ ಇಲ್ಲಿ ನನ್ನೆದೆ ಗೂಡೊಳಗೆ ಖುಷಿಯ ಕಲರವ...


ನಿನ್ನಿಂದ ಬರಬಹುದಾದ ಕಿಟಕಿಯ ಪಕ್ಕ ಕುಳಿತು ಕನಸು ನೇಯುವಂಥಹ ನಾಲ್ಕು ಸಾಲುಗಳ ನಿರೀಕ್ಷೆಯಲ್ಲಿ ...

Monday, 28 July 2014

ನಿನಗೊಂದು ಹ್ಯಾಪಿ ಬರ್ತ್ ಡೇ




ನಿನ್ನೊಡನೆ ನೇರವಾಗಿ ಆಡದ , ಆಡಲಾಗದ ಮಾತುಗಳಿವೆ . 
ಎದುರು ನಿಂತು  ಆಡದ ಜಗಳಗಳಿವೆ . 
ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ನೀ ಕೊಟ್ಟ ಸಂಸ್ಕಾರ ದೊಡ್ಡದಿದೆ .. 

ಬಾಸುಂಡೆ ಬರುವಂತೆ ನಿನ್ನಿಂದ ಹೊಡೆತ ತಿಂದಿದ್ದಿದೆ . 
ದೊಡ್ದವರಾಗುವವರೆಗೂ ನಿನ್ನಿಂದ ಬೈಸಿಕೊಂಡಿದ್ದಿದೆ . 
ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ಅಂದು ನೀ ಕೊಟ್ಟ ಶಿಕ್ಷೆ ಇಂದು ಶಿಕ್ಷಣವಾಗಿದೆ ... 

ನೀ ತೆಗೆದುಕೊಂಡ ಕೆಲವು ಕಠಿಣ ನಿರ್ಧಾರಗಳಿಂದ ಚಿಕ್ಕ  ಬೇಸರವಾಗಿದೆ .
ಹೊಡೆತ ತಿಂದ ಮೇಲೂ ಅಳಲು ಬಿಡದ ನಿನ್ನ ಮೇಲೆ ಸಣ್ಣ ದ್ವೇಷವಿದೆ . 
ಆದರೆ ಇದೆಲ್ಲಕ್ಕೂ ಮಿಗಿಲಾಗಿ ನೀ ಕೊಟ್ಟ ಮತ್ತೂ ನಿನಗೆ ನಾವು ಕೊಡಲೇಬೇಕಾದ  ಹಿಮಾಲಯದಷ್ಟು ಪ್ರೀತಿಯಿದೆ .. 

ಇವತ್ತು ಅದೇ ಪ್ರೀತಿಯಿಂದ ನಿನಗೊಂದು ಹ್ಯಾಪಿ ಬರ್ತ್ ಡೇ ಅಪ್ಪಾ ... :)

Friday, 4 July 2014

ಕ್ರಶ್ ...:)



ಆಗ ತಾನೆ ಬಟ್ಟೆ ಒಗೆದು ಬಂದು ಗೋಡೆಗೆ ಆನಿಕೊಂಡು ಕುಳಿತಿದ್ದಳು ಸ್ಮಿತಾ. ಕೈ ಲ್ಲಿ ಮೊಬೈಲ್ ಇತ್ತಾದರೂ ಎನೂ ಮಾಡದೆ ಕುಳಿತಿದ್ದಳು. ತನ್ನನ್ನು ಒಮ್ಮೆಯಾದರೂ ನೋಡಬಹುದೇನೋ ಎನ್ನುತ್ತಲೆ ಮೊಬೈಲ್ ಎರಡು ಬಾರಿ ಕೂಗಿತ್ತಾದರೂ ಅದರ ಕಡೆಗೆ ಲಕ್ಷ್ಯವಿರಲಿಲ್ಲ ಇವಳಿಗೆ. ಸ್ಮಿತಾ ಹೆಸರಿಗೆ ತಕ್ಕಂತೆ ನಗುವ ನಗಿಸುವ ಹುಡುಗಿ. ಅವಳಿಗಿಂತ ಮುಂಚೆ ನಗು ಮನೆಯೊಳಗೆ ಕಾಲಿಟ್ಟಿರುತ್ತದೆ. ಅಂಥ ಹುಡುಗಿಯ ಗಂಭೀರವದನ ಯಾಕೊ ಆಕೆಯ ಗೆಳತಿಯರಿಗೆ ಇಷ್ಟವಾಗಲಿಲ್ಲ. ಕೊರಳ ತಬ್ಬಿ ಧನ್ಯಾ ಕೇಳಿದಳು, " ಏನಾಯ್ತೆ ಪಾಪಚ್ಚೀ?"

" ಬಟ್ಟೆ ಒಣಹಾಕಿ ಬಂದ ಐದೇ ನಿಮಿಷಕ್ಕೆ ಮಳೆ ಬಂತಲ್ಲ , ಅದಕ್ಕೆ ಅಮ್ಮಾವ್ರಿಗೆ ಹೊಟ್ಟೆ ಉರಿತಿರಬೇಕು" ಎಂದು ಸಾಂಬಾರ್ ಗೆ ಉಪ್ಪು ಹಾಕುತ್ತಾ ಇಲ್ಲೊಂಚೂರು ಉಪ್ಪು ಸುರಿದಳು ಚಂದು.

ಒಂದು ನಿಟ್ಟುಸಿರಿನೊಂದಿಗೆ ಸ್ಮಿತಾಳ ಬಾಯಿಂದ ಬಂದ ಮಾತು "ಪವನ್ ನ ನೋಡಿದೆ ಕಣ್ರೆ , ಅವನ ವೈಫ್ ಜೊತೆ" ಇಷ್ಟೇ ಅಲ್ಲೊಂದು ಮೌನವೂ ಕೂಡಿಕೊಂಡು ಬಿಟ್ಟಿತ್ತು ಆ ಮೂವರ ನಡುವೆ.

ಈಗೊಂದು ಫ್ಲಾಶ್ ಬ್ಯಾಕ್ ಬೇಕಲ್ಲ.. ತಗೋಳಿ ..

ಈ ಮೂವರು ಹುಡುಗಿಯರು ಒಂದಾತ್ಮ ಮೂರು ಜೀವಾ ಅಂತ ಹೇಳದಿದ್ರೂ ಹಂಗೆ ಇದಾರೆ. ಒಂದೊಳ್ಳೆ residencial ಏರಿಯಾದಲ್ಲಿ ಒಂದು ಬಿಲ್ಡಿಂಗ್ ನ ನಾಲ್ಕನೇ ಫ್ಲೋರ್ ನಲ್ಲಿ ಇವರದೊಂದು ರೂಮು. ಹಗಲೆಲ್ಲ ಕೆಲಸ, ರಾತ್ರಿ ಸ್ವಲ್ಪ ಮಸ್ತಿ , ಕುಸ್ತಿ, ಗಲಾಟೆ ಜೀವನ ನಮ್ಮ ಹೆಣ್ಮಕ್ಕಳದ್ದು. ಅವರೊದ್ದೊಂದು ಪ್ರಪಂಚ, ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅಲ್ಲಾಗಿದ್ದು ಹೊರಗಡೆ ಹೋಗಲ್ಲ.. :) ಸೇರಿಯಸ್ನೆಸ್ ಅನ್ನೋದನ್ನ ಜೀವನದಲ್ಲಿ ಎಲ್ಲಿ ಬೇಕೋ ಅಲ್ಲೊಂದೆ ಉಪಯೋಗಿಸಿಕೊಂಡು, ಉಳಿದ ಟೈಮ್ ಲ್ಲಿ ಜೀವನಕ್ಕೆ ನಗೋದು ಕಲಿಸುತ್ತಾ ಬದುಕುವ ಸಿಂಪಲ್ ಲೈಫು ನಮ್ಮ ಹುಡುಗಿಯರದು. ಈ ಕ್ರಶ್ ಅನ್ನೊದು ಹೆಂಗೆ ಬೇಕಾದ್ರು ಆಗಬಹುದು. ಅದು ರೂಪದ ಮೇಲೆ ಮಾತ್ರ ಡಿಪೆಂಡ್ ಅಲ್ಲ ಎನ್ನುವುದು ಇವರ ವಾದ. ಈಗ ಧನ್ಯಾಗೆ ಅವಳ ಬಾಸ್ ಮೇಲೆ ಫ಼ುಲ್ ಲವ್ ಇದೆ. ಹಂಗಂತ ಅವನೇನು ಸುರಸುಂದರಾಂಗನೂ ಅಲ್ಲ. ಅವನಿಗೆ ಆಗಲೇ ಮೂವತ್ತರ ಮೇಲಾಗಿದೆ ವಯಸ್ಸು. ಅದು ಅವರ ನಾಲೇಡ್ಜ್ ಬಗ್ಗೆ ಅವಳಿಗಾದ ಕ್ರಶ್ಚ್ಯ್. ಹಾಗೆ ನಮ್ಮ ಚಂದನಾಗೂ ಪಕ್ಕದ ಸೆಕೆಂಡ್ ಫ಼್ಲೋರ್ ನ ಶ್ಯಾಮ್ ಕಂಡ್ರೆ ಇಷ್ಟ.ಹಂಗಂತ ಅವ್ಳು ಏನು ರೂಪಕ್ಕೆ ಮರುಳಾದವಳಲ್ಲ. ಅದು ಅವನ ಬಳಿ ಇರುವ ಯುನಿಕಾರ್ನ್ ಬೈಕ್ ಮತ್ತು ಸ್ವಲ್ಪ ಮಟ್ಟಿನ ಅವನ ಸ್ಟೈಲ್ ನಿಂದ ಬಂದಿದ್ದು. ಹಾಗೆ ಅವಳಿಗೆ ಆ ಕಾರ್ನರ್ ಮನೆಯ ತ್ರಿ-ಫ಼ೊರ್ಥ್ ಕೂಡಾ ಕೂಡಾ ಇಷ್ಟ. ಈ ತ್ರಿ-ಫೋರ್ಥ್ ಅಂದ್ರೆ ಆತನ ಹೆಸರು ಗೊತ್ತಿಲ್ಲ. ಅವನನ್ನು ನೋಡಿದ್ದೆಲ್ಲ ತ್ರಿ-ಫೋರ್ಥ್ ನಲ್ಲೆ. ಹಂಗಾಗಿ ಆ ಹೆಸರು. ಅವನು ಯಾಕಿಷ್ಟ ಅಂದ್ರೆ ಅದಕ್ಕೆ ಕಾರಣ ಅವನ ಬಳಿ ಇರೊ ಒಂದು ದೈತ್ಯಾಕಾರದ ಲ್ಯಾಬ್ರಡಾರ್ ನಾಯಿ. ಇನ್ನು ನಮ್ಮ ಕಥಾನಾಯಕಿ ವಿಶ್ಯಕ್ಕೆ ಬಂದ್ರೆ ಅವಳಿಗೂ ಎದುರು ಮನೆಯ ನಡೆದಾಡುವ ಲೈಬ್ರೆರಿ ಚಂದನ್, (ಯಾವಾಗಲೂ ಏನಾದರೂ ಓದುತ್ತಿರುತ್ತಾನೆಂದು ಅವನಿಗೆ ಆ ಹೆಸರು ಎಂದು ಬಿಡಿಸಿ ಹೇಳಬೇಕಾಗಿಲ್ಲ ತಾನೆ,) ಹಾಗೆ ಕೆಳಗಡೆಯ ಅಂಗಡಿ ಹುಡುಗ ಕಿರಣ್ ಇವರೆಲ್ಲ ಮೇಲೂ ಕ್ರಶ್ ಇದ್ದೇ ಇದೆ. ಇಲ್ಲಿ ಒಬ್ಬರಿಗೆ ಒಬ್ಬನ ಮೇಲೆ ಮಾತ್ರ ಕ್ರಶ್ ಆಗಬೇಕೆಂಬ ನಿಯಮವಿಲ್ಲ. ಇವರ ಪ್ರಕಾರ ಕ್ರಶ್ ಎಷ್ಟು ಜನರ ಮೇಲೂ ಯಾವಾಗ ಬೇಕಾದರೂ ಆಗಬಹುದು. ಮತ್ತೂ ಒಬ್ಬನ ಮೇಲೆ ಇಬ್ಬರಿಗೂ ಕ್ರಶ್ ಆಗಬಹುದು..!! ಅದಕ್ಕಾಗಿ ಜಗಳ ಕಾದಾಟಗಳೇಲ್ಲ ಇಲ್ಲ. ಈ ಎಲ್ಲ ವಿಷಯಗಳು ಅವರ ಹರಟೆಕಟ್ಟೆ ಹಾಟ್ ಸ್ಪಾಟ್ ಟೆರ್ರೆಸ್ ಮೇಲೆ ನಿತ್ಯ ಚರ್ಚಿತ.

ಹಾಗಂತ ನಮ್ಮ ಹುಡುಗಿರೇನು ಚೆಲ್ಲು ಚೆಲ್ಲು ಅಂದ್ಕೊಂಡ್ರೆ ತಪ್ಪಾಗಿ ಬಿಡುತ್ತೆ. ತುಂಬಾ ಡೀಸೆಂಟ್ ಹುಡುಗಿರು. ಊರಿಗೆ ಇವರಷ್ಟೇ ಪದ್ಮಾವತಿಯರಲ್ಲದಿದ್ದರೂ ಇವರನ್ನು ಮಾತನಾಡಿಸಲು ಪ್ರಯತ್ನ ಪಟ್ಟು ಸೋತವರ ಲಿಸ್ಟ್ ಉದ್ದದ್ದಿದೆ. ಮೇಲೆ ಹೇಳಿದ ಇವರೆಲ್ಲರ ಕ್ರಶ್ ಗಳ ಬಳಿಯೂ ಮಾತನಾಡಿದವರಲ್ಲ ಇವರುಗಳು. ಪಕ್ಕದ ಟೆರ್ರೆಸ್ ನ ಹುಡುಗರು ಏನಾದರೂ ಕೇಳಿದರೂ ಕೂಡಾ ಕೇಳಿದ್ದಷ್ಟಕ್ಕೆ ಬಿಗಿಯಾದ ಉತ್ತರದೊಂದಿಗೆ ಮಾತು ಮುಕ್ತಾಯ.

ಇಂತಿಪ್ಪ ನಮ್ಮ ಹುಡುಗಿಯರಿಗೊಬ್ಬ ಮಿಸ್ಟರ್ ಪರ್ಫೆಕ್ಟ್  ಇದ್ದ. ಆತನೆಂದರೆ ಮೂವರಿಗೂ ಇಷ್ಟ. ಅವನೆಂದರೆ ಮೂವರಿಗೂ "ನಮ್ಮೆಜಮಾನ್ರು".. :) ಆ ಹುಡುಗನ ಕೂಲ್ ಕೂಲ್ ಕಣ್ಣುಗಳು, ಆತನ ಬ್ಲ್ಯಾಕ್ ಹೊಂಡಾ ಕಾರು, ಬ್ರೌನ್ ಸ್ಪಾನಿಯಲ್ ಜಾತಿಯ ನಾಯಿ ಇವೆಲ್ಲದರಿಂದ ಅವನು ನಮ್ಮ ಹುಡುಗಿಯರಿಗೆ ಹಾಟ್ ಕೇಕ್. ಟೆರ್ರೆಸ್ ನ ಹರಟೆಯಲ್ಲಿ ಅವನನ್ನು ನೋಡುವುದು ಒಂದು ಭಾಗ. ಅದೊಂದು ದಿನ ಏದುಸಿರು ಬಿಡುತ್ತಾ ಬಂದ ಚಂದುವಿಗೆ ಎನಾಯ್ತೊ ಎಂದು ಉಳಿದಿಬ್ಬರು ತಲೆ ಕೆಡಿಸಿಕೊಂಡರೆ ಇವಳು ನಿಧಾನಕ್ಕೆ ನೀರು ಕುಡಿದು "ಅವನ ಹೆಸರು ಪವನ್ ಕಣ್ರಲೇ "ಎಂದಾಗ, ಎಲ್ಲರೂ ತಮ್ಮ ಹೆಸರುಗಳ ಮುಂದೆ ಪವನ್ ಎಂದು ಬರೆದು ಖುಷಿ ಪಟ್ಟಿದ್ದೆ ಪಟ್ಟಿದ್ದು. ಅವನ ಕಂಡರೆ ಆ ದಿನವೇನೊ ಖುಷಿ.. ಅವನು ಬೆಳಿಗ್ಗೆ ಆಫೀಸ್ ಹೊರಟರೆ ನಮ್ಮ ಹುಡುಗಿಯರೆಲ್ಲ ಒಂದೊಂದು ನೆಪದಲ್ಲಿ ಹೊರ ಹೋಗಿ ಅವನ ನೋಡಿ ಕೂಲ್ ಕೂಲ್ ಅನ್ನುತ್ತಾ ಬರುವುದು ದಿನಚರಿ. ಇನ್ನು ರಾತ್ರಿಯ ನಾಯಿ ಜೊತೆಯ ವಾಕಿಂಗ್ ಅಂತೂ ಅವನಿಗಿಂತ ಶ್ರದ್ದೆಯಿಂದ ಕಾಯುವವರು ಈ ಹುಡುಗಿಯರು. ಅವನೇನು ವಿಶ್ವಾಮಿತ್ರನೇನಲ್ಲ, ನಮ್ಮ ಹುಡುಗಿಯರು ನೋಡುವುದು ಅವನಿಗೂ ಗೊತ್ತು. ಅವನದು ಇವರ ಕಡೆಗೊಂದು ಕಳ್ಳ ನೋಟ ಇರುತ್ತಿತ್ತು. ಆದರೆ ನಗು ಮಾತ್ರ ಅದ್ಯಾಕೋ ಸ್ಮಿತಾಳಿಗೆ ಮಾತ್ರ ಮೀಸಲು. ಅವನು ಸ್ಮೈಲ್ ಕೊಟ್ಟಾ ಕಣ್ರೆ ಎನ್ನುತ್ತಾ ಸ್ಮಿತಾ ಬಂದರೆ ಉಳಿದಿಬ್ಬರಿಗೆ ಸ್ವಲ್ಪ ಹೊಟ್ಟೆ ಉರಿಯುತ್ತಿತ್ತು. ಹಿಂಗಿತ್ತು ಲೈಫು ಅಂದ್ಕೊಳೋ ಹೊತ್ತಿಗೆ ಒಂದು ದಿನ ಹಠಾತ್ತಾಗಿ ಹುಡುಗ ಗಾಯಬ್..!!! ಆಗಿನ ವಿರಹ ವೇದನೆಯನ್ನು ವಿವರಿಸಲು ಪದಗಳಿಲ್ಲ ಬಿಡಿ. ಹಂಗಾಗಿ ಆ ಪ್ರಯತ್ನಕ್ಕೆ ಹೋಗಲ್ಲ. ಇನ್ನು ತುಂಬಾ ಕ್ರಶ್ ಗಳಿದ್ದರೂ, ಹೊಸಬರೂ add ಆಗುತ್ತಿದ್ದರೂ ಪವನ್ ಮರೆಯಾಗಿರಲಿಲ್ಲ. ಅವನಿಗೊಂದು ಜಾಗ ಹಾರ್ಟ್ ಲ್ಲಿ, ಅವನಿಗಾಗಿ ಸ್ವಲ್ಪ ಟೈಮ್ ಹರಟೆಯಲ್ಲಿ ಇದ್ದೇ ಇತ್ತು. ಇಂತಿರುವಾಗ ಸುಮಾರು ಮೂರು ತಿಂಗಳ ನಂತರ ಅವನ ಮನೆ ಮುಂದೆ ಶಾಮಿಯಾನ , ತೋರಣಗಳನ್ನೂ ನೋಡಿದ ಹುಡುಗೀರಿಗೆ ಅಸೆ ಚಿಗುರಿದ್ದು ಪವನ್ ನೋಡಬಹುದೆಂದು. ಟೆರ್ರೆಸ್ ಮೇಲೆ ಉಟ ಮಾಡಿ ಶಬರಿಯರಂತೆ ಕಾದ ಇವರಿಗೆ ಶ್ರೀರಾಮ ದರ್ಶನವಾದದ್ದು ಮದುಮಗನಾಗಿ, ಸಾಕ್ಷಾತ್ ಸೀತಾಮಾತೆಯೊಂದಿಗೆ. ಅವನ ಮದುವೆ ಇವರೆಲ್ಲರಿಗೂ ಹೃದಯ ವಿದ್ರಾವಕ ಘಟನೆಯಂತೆ ಭಾಸವಾಗಿತ್ತು. ಅಂದಿನ ಹರಟೆ ಕಟ್ಟೆಯೂ ಮೌನವಾಗಿತ್ತು.

ನವ್ ಕಮ್ ಟು ದಿ ಪಾಯಿಂಟ್, ಅದು ನಡೆದು ಒಂದು ವಾರದ ಮೇಲೆ ಸ್ಮಿತಾ ನೋಡಿದ್ದು ಅದೇ ಪವನ್ ನ ಅವನ ಪತ್ನಿಯೊಂದಿಗೆ. ಹಾಗಾಗಿಯೇ ಮೌನ ಗೌರಿಯಂತೆ ಕುಳಿತಿದ್ದು. ಇದೇ ವಿಷ್ಯ ಉಳಿದವರಿಗೆ ಇಷ್ಟವಾಗಿರಲಿಲ್ಲ.

ಅದಕ್ಕೆ ಧನ್ಯಾ "ನೋಡೆ ಈ ಕ್ರಶ್ ನೆಲ್ಲ ಸಿರಿಯಸ್ ಆಗಿ ತಗೊಂಡು, ಮುಂದೆ ಲವ್ವು ಪವ್ವು ಅಂದ್ಕೊಂಡ್ರೆ ಜೀವನ ಹಾಳಾಗಿಹೋಗುತ್ತೆ. ನಡಿ ಪಕ್ಕದ ಗ್ರೀನ್ ಬಿಲ್ಡಿಂಗ್ ಗೆ ಹೊಸದಾಗಿ ಯಾರೋ ಬಾಡಿಗೆಗೆ ಬಂದಿದ್ದಾರಂತೆ ಚಂದು ಹೇಳ್ತಿದ್ಲು, ನೋಡ್ಕೊಂಡು ವಯಸ್ಸಿಗೊಂಚೂರು ಮರ್ಯಾದಿ ಇಡೋಣ "ಎನ್ನುತ್ತಾ ಟೆರ್ರೆಸ್ ಗೆ ಎಳೆದುಕೊಂಡು ಬಂದರೂ ಸ್ಮಿತಾಳ ಮನಸ್ಸ್ಯಾಕೋ ಹಿಂಬಾಗಿಲ ಕಿಟಕಿಯ ಕಡೆಗೇ ಎಳೆಯುತ್ತಿತ್ತು .