Tuesday 13 October 2015

ಅದೇ ಪ್ರೀತಿ ... ಬೇರೆ ರೀತಿ ..


"ಏನಂತಾರೆ ಆ ಮನೆಯ ದೊಡ್ಡವರು ?" ಅಂದ ಅಪ್ಪನ ಧ್ವನಿಯಲ್ಲಿ ಸ್ವಲ್ಪ ಅಸಮಾಧಾನವಿತ್ತು.
"ಮೊದಲಿನಂತಿಲ್ಲ ಮೆತ್ತಗಾಗಿದ್ದಾರೆ, ಕಾಲ ಬದಲಾಗಿದೆ ಅಲ್ಲವಾ. ನಮ್ಮ ಪ್ರೇಮವನ್ನು ಒಪ್ಪಿಕೊಂಡವರು ಇವರನ್ನು ಒಪ್ಪಿಕೊಳ್ಳೋದು ಕಷ್ಟವಲ್ಲ ಅಲ್ಲವ" ಅಂದೆ.
"ಮಗನ ವಿಷಯದಲ್ಲಿ ಮೆತ್ತಗಾದವರು ತಮ್ಮನ ವಿಷಯದಲ್ಲೂ ಹೀಗೆ ನಡೆದುಕೊಂಡಿದ್ದರೆ ಈ ಮದುವೆ ಹದಿನೈದು ಇಪ್ಪತ್ತು ವರ್ಷಗಳ ಮೊದಲೇ ನಡೆದಿರುತ್ತಿತ್ತು" ಅಂದರು.
"ಆಗ ಅಷ್ಟೆಲ್ಲ ಮದುವೆಗೆ ಓಡಾಡಿದವರು ನೀವು . ಈಗ ಯಾಕೆ ಈ ಬಿಗುಮಾನ ಅಪ್ಪಾ ".
" ಆವಾಗ ನನ್ನ ಅಣ್ಣನ ಮಗಳ ಭವಿಷ್ಯ ಮಾತ್ರ ಕಣ್ಣು ಮುಂದಿತ್ತು. , ಈಗ ನನ್ನ ಮಗಳ ಬದುಕು ಕಣ್ಣಮುಂದೆ ಇದೆ. ಈ ಮದುವೆ ಮಾಡಿಸಿ ಅವರ ಕಣ್ಣಲ್ಲಿ ನೀನು ಸಣ್ಣವಳಾಗಬಾರದು. ಮೆಟ್ಟಿದ ಮನೆಯಲ್ಲಿ ನಿನ್ನ ಸ್ಥಾನ ಸ್ವಲ್ಪವೂ ಕದಲಬಾರದು. " ಅವರ ಆತಂಕ ನನಗೆ ಅರ್ಥವಾಗುತ್ತಿತ್ತು .
ಸುಮ್ಮನೆ ಭುಜದ ಮೇಲೆ ಕೈ ಇಟ್ಟೆ . ಅಪ್ಪನಿಗೆ ಅದು ಹೊಸದೇನಲ್ಲ. " ಏನು ಮಾಡ್ತೀರೋ ಮಾಡಿ, ನಿನ್ನ ಗಂಡನೇ ನಿನ್ನ ಬೆನ್ನ ಹಿಂದೆ ನಿಂತಿರುವಾಗ ನಾನೇನು ಹೇಳಲಿ ? " ಎನ್ನುತ್ತಾ ಬಾಲ್ಕನಿಯಿಂದ ಇಳಿದು ಹೋದರು.

ಅಲ್ಲಿಂದ ಶಾಲೆಯ ಬಯಲು ಚೆನ್ನಾಗಿ ಕಾಣುತ್ತಿತ್ತು. ಅದೇ ಶಾಲೆಯಲ್ಲಿ ನಾನು ಪ್ರಣವ್ ಕಲಿತಿದ್ದು . ಎದುಬದುರು ನಿಂತು ನಮಸ್ತೇ ಶಾರದಾ ದೇವಿ ... ಎಂದು ಪ್ರಾರ್ಥನೆ ಹೇಳುವಾಗಲೋ , ಅಥವಾ ಮಗ್ಗಿ ಹೇಳುವಾಗ ಅವನು ಕೈ ಸನ್ನೆ ಮಾಡಿ ಅಂಕೆಗಳನ್ನು ತೋರಿಸುತ್ತಿದ್ದಾಗಲೋ ಯಾವಾಗ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೇ ಎನ್ನುವುದು ನೆನಪಿಲ್ಲ, ಆದರೆ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಅವನೆಡೆಗೊಂದು ಆತ್ಮೀಯತೆ ಬೆಳೆದುಬಿಟ್ಟಿತ್ತು ನಾವು ಬೆಳೆದಂತೆಲ್ಲ ಅದೂ ಸ್ನೇಹವಾಗಿ ಬೆಳೆದು ಪ್ರೀತಿಯಾಗಿ ಬದಲಾಗಿತ್ತು. ಅದೇ ಊರಿನಲ್ಲೆ ಅವನು ಕೆಲಸ ಹಿಡಿದ ಮೇಲಂತೂ ಮದುವೆಯ ಮಾತುಗಳನ್ನಾಡುವುದು ಮಾತ್ರ ಉಳಿದಿದ್ದು ಎಂದು ಇಬ್ಬರೂ ತೀರ್ಮಾನಿಸಿದ್ದೆವು. ಚಿಕ್ಕ ಊರಲ್ಲಿ ಪ್ರೀತಿಯ ಗುಲ್ಲು ಏಳಬಾರದೆಂಬ ಕಾರಣಕ್ಕೆ ಓದುವ ನೆಪದಲ್ಲಿ ಲೈಬ್ರೇರಿಯನ್ನು ನಮ್ಮ ಭೇಟಿಯ ತಾಣವನ್ನಾಗಿ ಮಾಡಿಕೊಂಡಾಗಿತ್ತು. ಆದರೆ ಇದು ಅದೇ ಲೈಬ್ರೆರಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಅಕ್ಕನಿಗೆ ಹೇಗೋ ತಿಳಿದು ಬಿಟ್ಟಿತ್ತು .

"ಪ್ರೀತಿಸ್ತಾ ಇದೀಯಾ ಆ ದೊಡ್ಮನೆ ಹುಡುಗನನ್ನ ?" ಅಕ್ಕನ ನೇರವಾದ ಪ್ರಶ್ನೆ. ಅಕ್ಕ ಎಂದರೆ ನನಗಿಂತ ಹದಿನೈದು ವರ್ಷಕ್ಕೆ ದೊಡ್ಡವಳು. ಅಮ್ಮನಷ್ಟೇ ಗೌರವಿಸುತ್ತಿದ್ದ ಅವಳಿಗೆ ಸುಳ್ಳು ಹೇಳಲು ಸಾದ್ಯವಿರಲಿಲ್ಲ ." ಹೌದು "ಎಂದೆ. "ಆ ಮನೆಯ ಗೋಡೆಗಳಲ್ಲಿ ಭಗ್ನ ಪ್ರೇಮದ ಚಿತ್ತಾರಗಳೇ ಜಾಸ್ತಿ, ನನ್ನಂತೆ ಆಗಬಾರದು ನಿನಗೆ. "ಅಂದ ಅಕ್ಕನ ಮಾತುಗಳು ಅನಿರೀಕ್ಷಿತವಾಗಿದ್ದವು . ಅಕ್ಕನ ಹಿಂದೊಂದು ಮುರಿದು ಹೋದ ಪ್ರೇಮದ ಕಥೆ ಇರಬಹುದೆಂದು ಊಹಿಸಿರಲೇ ಇಲ್ಲ. ಅವಳು ಮದುವೆಯಾಗಿಲ್ಲ ಎಂದಷ್ಟೇ ಗೊತ್ತಿತ್ತೇ ವಿನಃ ಯಾಕೆ ಏನು ಅಂತ ಕೇಳಿರಲೇ ಇಲ್ಲ. ಅಷ್ಟು ನನ್ನ ಬದುಕಿನಲ್ಲೇ ಕಳೆದುಹೋಗಿದ್ದೆ ಅನಿಸಿತು . ಅವಳೇ ಮುಂದುವರೆಸಿದಳು " ನಾನು ಮತ್ತು ಆ ಮನೆಯ ಚಂದ್ರು ಅಂದರೆ ಈಗ ನೀನು ಪ್ರೀತಿಸುತ್ತಿರುವ ಹುಡುಗನ ಚಿಕ್ಕಪ್ಪ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದೆವು. ಹಳ್ಳಿಯ ಶುದ್ಧ ಗಾಳಿಯಲ್ಲಿ ಪ್ರೀತಿಯ ಸುದ್ದಿ ಬಹುಬೇಗ ಹರಡಿತು , ಆದರೆ ಮನೆಯ ಮನಸ್ಸುಗಳನ್ನು ಮಲಿನಗೊಳಿಸಿದ್ದು ವಿಪರ್ಯಾಸ. ವಿರೋಧವಿತ್ತು ಅವರ ಮನೆಯಲ್ಲಿ , ನಾನು ಹೇಗೋ ಮನೆಯವರನ್ನು ಒಪ್ಪಿಸಿದ್ದೆ . ನಿನ್ನ ಅಪ್ಪ ಅಂದರೆ ನನ್ನ ಚಿಕ್ಕಪ್ಪ ಬಹಳ ಪ್ರಯತ್ನ ಪಟ್ಟರು ಈ ಮದುವೆ ನಡೆಸಲು ,ಆದರೆ ಪ್ರಯತ್ನಗಳೆಲ್ಲ ವ್ಯರ್ಥವಾದವು. ಓಡಿ ಹೋಗುವ ಮನಸ್ಸಿರಲಿಲ್ಲ. ಸಾಯುವ ಮನಸ್ಸು ನಮಗೆ ಬರುವ ಮೊದಲೇ ಪ್ರೀತಿ ಸತ್ತು ಹೋಗಿತ್ತು ಅವನ ಅಪ್ಪನ ಸಾವಿನೊಡನೆ . ಕನಸುಗಳ ಕಟ್ಟಿಟ್ಟು ಜೀವಚ್ಛವವಾಗಿ ಬಿಟ್ಟೆವು. ಹಾಗೆಯೇ ಬದುಕುತ್ತಿದ್ದೇವೆ ಇಂದಿಗೂ. "ನನ್ನ ಕಣ್ಣಲ್ಲಿ ನೀರಿತ್ತು . ಅವಳಲ್ಲಿ ಉಳಿದಿದ್ದು ನಿಟ್ಟುಸಿರ ಮೌನ . ಮುಖದಲ್ಲಿ ಮಾತ್ರ ಎಂದಿನ ನಿರ್ಲಿಪ್ತತೆ . ಹಾಗೆ ಸರಿದು ಹೋಗಿತ್ತು ಅದೊಂದು ಸಂಜೆ.

ಆದರೆ ನಮ್ಮ ಪ್ರೀತಿಗೆ , ಮದುವೆಗೆ ಯಾವುದೇ ಅಡೆತಡೆಗಳು ಬರಲಿಲ್ಲ . ಏಕೆಂದರೆ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವಲ್ಲ. ಎಲ್ಲರೂ ನನ್ನನ್ನು, ಅವನನ್ನು ಖುಷಿಯಿಂದ ಒಪ್ಪಿಕೊಂಡರು . ಮದುವೆ ನನ್ನದೇ ಆದರೂ ಕಾಡಿದ್ದು ಮಾತ್ರ ಆಗಾಗ ಸಂಧಿಸುತ್ತಿದ್ದ ಅವರಿಬ್ಬರ ಯಾತನಾದಾಯಕ ನೋಟಗಳು. ಅವತ್ತೇ ಅಗ್ನಿಸಾಕ್ಷಿಯಾಗಿ ನಿರ್ಧರಿಸಿದ್ದೆ ಅಕ್ಕನಿಗೆ ಅವಳ ಪ್ರೀತಿಯನ್ನು ದೊರಕಿಸಿಕೊಡಬೇಕೆಂದು. ಮನೆಗೆ ಬಂದ ಮೇಲೆ ಪ್ರಣವ್ ಗು ಹೇಳಿ ಅವನನ್ನು ಒಪ್ಪಿಸಿದ್ದೆ . ಮನೆಯಲ್ಲೂ ಪ್ರಸ್ತಾಪಿಸಿದ್ದೆ. "ನಿಮ್ಮ ಪ್ರೀತಿಯನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ , ಆದರೆ ಈಗಿನ ಒಬ್ಬರೇ ಮಕ್ಕಳ ಕಾಲದಲ್ಲಿ ನಿಮ್ಮನ್ನು ಕಳೆದುಕೊಳ್ಳುವ ಮನಸ್ಸಿಲ್ಲದೇ ಒಪ್ಪಿಗೆ ಕೊಟ್ಟಿದ್ದು, ಇಷ್ಟರಲ್ಲೇ ಇದ್ದರೆ ಒಳ್ಳೆಯದು ಎಂದು ಮಾವ ಅಬ್ಬರಿಸಿದ್ದರು . " ಮದುವೆಯಾದ ತಕ್ಷಣ ಮನೆ ಒಡೆಯು ಬೇಕೆಂದು ನೋಡುವ ಹೆಣ್ಣುಗಳ ನಡುವೆ ಮನೆಯಲ್ಲಿ ಸಂತೋಷದ ದೀಪ ಹಚ್ಚಲು ನೋಡುತ್ತಿದ್ದಾಳೆ ಒಪ್ಪಿಗೆ ಕೊಡಿ " ಎಂದು ಅತ್ತೆ ಕೇಳಿಕೊಂಡಿದ್ದು ಮಾವನ ಕಿವಿಗೆ ಬಿದ್ದಿರಲಿಲ್ಲ . ಆದರೆ ನನಗೆ ವಿಶ್ವಾಸವಿತ್ತು ಮಾವನನ್ನು ಒಪ್ಪಿಸಿಯೇ ಒಪ್ಪಿಸುತ್ತೆನೆಂದು. ಪ್ರಾಮಾಣಿಕ ಪ್ರಯತ್ನಗಳನ್ನು ಬಿಟ್ಟಿರಲಿಲ್ಲ. ಅದಾದ ಆರು ತಿಂಗಳ ನಂತರ " ಅವರವರ ಒಂಟಿತನದ ಕೋಟೆಯನ್ನು ಭೇದಿಸಿ ಸಂತೋಷವಾಗಿ ಇರುತ್ತರಾದರೆ ನನ್ನದೇನಿದೆ ? ಅಪ್ಪನನ್ನು ನೋಡಿ ಮಾತನಾಡುತ್ತೇನೆ" ಎಂದಿದ್ದರು ಮಾವ. ಆಕಾಶವೇ ಕೈ ಗೆ ಸಿಕ್ಕಷ್ಟು ಸಂಭ್ರಮ . ಮುಂದಿನದ್ದೆಲ್ಲ ಹೂವೆತ್ತಿದಷ್ಟೇ ಸರಾಗವಾಗಿ ನಡೆದಿತ್ತು . ನಾಡಿದ್ದು ಬೆಳಗಾದರೆ ಅಕ್ಕನ ಮದುವೆಯ ಸಂಭ್ರಮ ಎಂದುಕೊಳ್ಳುತ್ತಿದ್ದೆ . ಕೆಳಗಡೆಯಿಂದ ಪುಟ್ಟಿ ಕೂಗುತ್ತಿದ್ದಳು . "ಏನೇ ?" ಎಂದೇ . "ನೋಡು ಚಿಕ್ಕಮ್ಮ ಮೆಹಂದಿ ಹಾಕಿಸಿಕೊಳ್ಳೋಲ್ಲ ಅನ್ನುತ್ತಿದ್ದಾರೆ" ಎಂದು ಮುಖ ಊದಿಸಿಕೊಂಡಳು .

ಏನಾಯ್ತೆ ಅಕ್ಕಾ ? ಅಂದೆ . ಅದಕ್ಕವಳು ನೋಡು ಸುರಭಿ " ನನಗೀಗ ನಲವತ್ತೇಳು , ಈ ವಯಸ್ಸಿನಲ್ಲಿ ಮದುವೆ ಎಂಬುದೇ ಒಂಥರಾ ಮುಜುಗರದ ವಿಷಯ ಅನಿಸುತ್ತೆ. ಅಂಥದ್ದರಲ್ಲಿ ಎಳೆ ವಯಸ್ಸಿನವರಂತೆ ಇದೆಲ್ಲ ಬೇಕಾ ಅಂತ ಅನಿಸ್ತಿದೆ. ನಾಚಿಕೆಯಾಗ್ತಿದೆ ಕಣೆ " ಅಂದಳು
ಹದಿನೆಂಟರ ಪ್ರೀತಿ .. ಇಪ್ಪತ್ತೆರಡರ ನಾಚಿಕೆ ಈಗಲೂ ಜೀವಂತವಾಗಿದೆ ಅಂದರೆ ಮದರಂಗಿಯೂ ಬೇಕು ಅಕ್ಕಾ ಕೈ ನೀಡೆ ಅಂದೆ. ಅವಳ ಕೈಯಲ್ಲಿ ಮದರಂಗಿ ಮುಂದಿನ ಬದುಕಿನ ಚಿತ್ತಾರವಾಗಿ ಬಣ್ಣ ತುಂಬಿಕೊಳ್ಳುತ್ತಿತ್ತು.

Monday 31 August 2015

ಆಯೀ



( ಮೂರು ಸಣ್ಣ  ಆಲಾಪಗಳು )

೧)
ಅದೊಂದು ಹೃದ್ರೋಗ ಆಸ್ಪತ್ರೆ, ರೋಗಿಯ ಜೀವ ಉಳಿಸಲು ಡಾಕ್ಟರ್ ಗಳು ಪ್ರಯತ್ನಪಡುತ್ತಿದ್ದರು. ಆದರೆ ಹಾಸಿಗೆಯಲ್ಲಿದ್ದ ರೋಗಿಗೆ ಗೊತ್ತಾಗುತ್ತಿತ್ತು ತನ್ನ ಪುಟ್ಟ ಹೃದಯ ಈಗ ನಿಂತೇ ಹೋಗುತ್ತದೆ ಎಂದು. ಆಗ ಅವಳ ನೆನಪಾಗಿತ್ತು. ಹಣ ಸಂಪಾದಿಸುವಾಗ , ಆಸ್ತಿ ಮಾಡುವಾಗ , ಮನ ಮೆಚ್ಚಿದ ಹುಡುಗಿಯ ಮದುವೆಯಾದಾಗ , ಮಕ್ಕಳಾದಾಗ, ಪ್ರಶಸ್ತಿಗಳ ಮುಡಿಗೇರಿಸಿಕೊಂಡಾಗ, ಕೀರ್ತಿ ಯಶಸ್ಸಿನ ಮೆಟ್ಟಿಲೇರಿ ನಿಂತಾಗ ಮರೆತೇ ಹೋಗಿದ್ದ "ಆಯಿ"ಯ ಮುಖ ಮತ್ತೆ ಮತ್ತೆ ನೆನಪಾಗುತ್ತಿತ್ತು. "ಆಯೀ"  ಎಂದು ಚೀರಿಕೊಂಡು ಕಣ್ಮುಚ್ಚಿದ .............
-------------------------------------------------------------------------------------
ಇಲ್ಲಿ ಯಾವುದೋ ಯಾತನೆಯಿಂದ ತಟ್ಟನೇ ಎದ್ದು ಕುಳಿತಳು ಅವಳು. ಕತ್ತಲಲ್ಲಿ ಸ್ವಲ್ಪವೂ ತಡಕಾಡದೇ ಎದ್ದು ಹೋಗಿ ದೇವರಿಗೆ ತುಪ್ಪದ ದೀಪ ಹಚ್ಚಿ ದೇವರೆದುರು ಕಣ್ಮುಚ್ಚಿ ಕುಳಿತಳು. " ಎಲ್ಲೇ ಇದ್ರೂ ನನ್ನ ಮಗ ಚೆನ್ನಾಗಿರಲಿ " ಎನ್ನುವುದು  ಅವಳ ನಿತ್ಯ ಪ್ರಾರ್ಥನೆ ಎಂಬುದು ಅವಳಿಗೂ ಗೊತ್ತು , ದೇವರಿಗೂ ಗೊತ್ತಿತ್ತು. ಆದರೆ ಇವತ್ತು ಮಾತ್ರ ಅವಳು “ ಇದೊಂದು ಬಾರಿ ನನ್ನ ಮಗನನ್ನು ಉಳಿಸಿಕೊಡು ದೇವರೇ. ಅವನು ನನ್ನ ಬಳಿ ಬಂದೇ ಬರುತ್ತಾನೆ.” ಎಂದು ಬಿಟ್ಟಳು. ದೇವರಿಗೂ ಆಶ್ಚರ್ಯವಾಗಿತ್ತೇನೊ, ಅಸ್ತು ಎಂದನೋ ಎನೊ ಅವಳಿಗೆ ತಿಳಿಯಲಿಲ್ಲ...
------------------------------------------------------------------------
ಪ್ರಯತ್ನವೋ , ಹಾರೈಕೆಯೋ ಅಂತೂ ಅವನು ಮರುದಿನದ ಮುಂಜಾವನ್ನು ನೋಡಿದ್ದ, ಜಗತ್ತು ಹೊಸದಾದಂತೆ ಕಾಣಿಸುತ್ತಿತ್ತು. ಆಯಿಯ ಮುಖ , ಆಯಿಯ ಹಂಬಲ ಇನ್ನೂ ಬಲವಾಗಿತ್ತು. ಆಸ್ಪತ್ರೆಯಿಂದ ಮಾತ್ರವಲ್ಲ , ಎಲ್ಲದರಿಂದಲೂ ಬಿಡುಗಡೆ ಹೊಂದಿ ಆಯಿಯ ಬಳಿ ಹೋಗಲೇ ಬೇಕೆಂದು ನಿರ್ಧರಿಸಿ ಕಣ್ಣು ಮುಚ್ಚಿದ. ಅವನನ್ನು ನೋಡಿಕೊಳ್ಳುತ್ತಿದ್ದ ಸರ್ವೆಂಟ್ ಸಣ್ಣ ದನಿಯಲ್ಲಿ ಹಾಡಿಕೊಳ್ಳುತ್ತಿದ್ದಳು 

" ಇಂಧನ ತೀರಲು, ಬಂದೇ ಬರುವೆನು... ಮತ್ತೆ ನಿನ್ನ ತೊಡೆಗೆ,... ಮೂರ್ತ ಪ್ರೇಮದೆಡೆಗೆ"

******************************************************************
೨)
ಮೊನ್ನೆ ಮೊನ್ನೆವರೆಗೂ ಅವಳ ಬಗ್ಗೆ ಮಾತೇ ಬರದವರ ಬಾಯಲೆಲ್ಲ ಇವತ್ತು ಅವಳದೇ ಮಾತು. ಅವಳ ಬಗ್ಗೆ ಹಿಂದಾಡಿಕೊಂಡವರ, ಅವಳ ಮುಂದೆಯೇ ಅವಳನ್ನಾಡಿಕೊಂಡವರ ಬಾಯಲ್ಲೂ ಒಳ್ಳೆಯ ಮಾತುಗಳು ..!! ಕಾಲ ಕಸಕ್ಕಿಂತ ಕಡೆಯಾಗಿ ಕಂಡ ಮಕ್ಕಳ ಕಣ್ಣಲ್ಲೂ ಅವಳಿಗಾಗಿ ಕಣ್ಣೀರು, ಬಾಯಲ್ಲಿ ಒಳ್ಳೆಯ ಮಾತುಗಳು ..!! "ಸತ್ತ ಮೇಲೆ ಅಥವಾ ಸತ್ತಿದ್ದರಿಂದಲೇ ನಾನು ಒಳ್ಳೆಯವಳಾದೆನಾ" ಎಂದು ಅವಳ ಆತ್ಮವೂ ಆಶ್ಚರ್ಯಗೊಂಡಿತ್ತೋ ಏನೋ ?ಅವಳ ಮುಖ ಕಂಡರಾಗದಿದ್ದವರೂ ಅವಳನ್ನು ನೋಡಿಕೊಂಡು ಬಂದರು ಕೊನೆಯ ಬಾರಿಗೆಂಬಂತೆ... ಥಥ್ ಎಲ್ಲಿ ಬಿತ್ತಿದರೂ ಹುಟ್ಟಲಾರದು ಎಂದು ಬಿಸಾಡಿದ್ದ ತುಳಸಿಯೂ ಎರಡೆಲೆಯಾಗಿ ಚಿಗುರಿ ನಗುತ್ತಿತ್ತು ಅವಳ ಸಮಾಧಿಯ ಮೇಲೆ ..!!!

*********************************************************************
೩)
ಆಕೆ ರಸ್ತೆಯಂಚಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ .. ಬಸ್ ಮೆಲ್ಲನೆ ಮುಂದೆ ಸರಿಯುತ್ತಿತ್ತು.
"ಥತ್ ಇವಳದ್ದು ಯಾವಾಗಲೂ ಇದೇ ಗೋಳು" ಎಂದು ಕಂಡಕ್ಟರ್ ಗೊಣಗಿದ. "ಏನಾಗಿದೆ ಅವಳಿಗೆ" ಎಂದರು ಬಸ್ಸಲ್ಲಿದ್ದ ಹಿರಿಯರೊಬ್ಬರು. "ಎಂಟು ವರ್ಷದ ಹಿಂದೆ ಹೀಗೆ ಟಾಟ ಮಾಡಿ ಕಳಿಸಿಕೊಟ್ಟ ಇವಳ ಮಗಳೊಬ್ಬಳು ಯಾವನದೋ ಜೊತೆ ಓಡಿ ಹೋದಳಂತೆ. ತಂದೆ ಸಂಬಂಧ ಕಳೆದುಕೊಂಡು ನಿರಾಳವಾದರು. ಆದರೆ ತಾಯಿ ಕರುಳು ನೋಡಿ ಇನ್ನು ಕಾಯುತ್ತಿದೆ.ಮಗಳು ಬರುತ್ತಾಳೇನೋ ಅಂತ, ಹೀಗೆ ಕೈ ಬೀಸುತ್ತಾ... " ಎಂದವನು ಟಿಕೆಟ್ ಗಾಗಿ ಮುಂದೆ ಹೋದ. ಹಿರಿಯರ ಪಕ್ಕ ಕುಳಿತ ಆವಂತಿಗೆ ಮತ್ತೊಮ್ಮೆ ತಿರುಗಿ ಅಮ್ಮನ ಮುಖ ನೋಡಬೇಕೆನಿಸಿತ್ತು..



(ಈ ಕಥೆ "ಕುಡಿಗಥೆಗಳು " ಎಂಬ ಫೇಸ್ಬುಕ್  ಪೇಜ್ ನ ಕುಡಿಗಥೆಗಳು ಪ್ರಯತ್ನ -೬ ರಲ್ಲಿ ಬರೆದಿದ್ದು )

Saturday 11 July 2015

ಕಾಲ ತುದಿಯಲ್ಲಿನ ಕಪ್ಪು ಮಚ್ಚೆ

"ಅರೇ!  ಕಾಲ ತುದಿಯಲ್ಲೊಂದು ಮಚ್ಚೆ ಇದೆಯಲ್ಲ , ಬಹಳ ಅದೃಷ್ಟವಂತೆ ನೀನು " ಕಾಲಿನ ಹೆಬ್ಬೆರಳ ತುದಿಯ ಪುಟ್ಟ ಮಚ್ಚೆಯನ್ನು ನೋಡಿ ಎಲ್ಲರೂ ಹೇಳುವ ಮಾತು.ಅದರಂತೆ ಅದೃಷ್ಟವಂತೆ ನಾನು. ಚಂದದ ಮನೆಯಲ್ಲಿನ ಮುದ್ದು ಮಗಳು .. ಹೇಳಿದಂತೆ ಕೇಳೋ  ಅಮ್ಮ . ಅಂಗೈಯಲ್ಲೇ ಜಗತ್ತನ್ನು ತಂದಿಡುವ ಅಪ್ಪ. ದೇಶ ಸುತ್ತುವ ಚಟ ನನ್ನದು. ಅಪ್ಪನೊಂದಿಗೆ ಪ್ರಪಂಚ ಸುತ್ತುತ್ತಿದ್ದೆ.. ಹಾಗೆಯೇ ಪರದೇಶದಲ್ಲಿ ನನ್ನ ದೇಶದವನಾಗಿ  ಪರಿಚಯವಾದ ಹುಡುಗ ನೀನು ಥೇಟ್ ಡಿಡಿ ಎಲ್ ಜೆ ಯಲ್ಲಿ ಖಾಜೋಲ್ ಗೆ ಶಾರುಖ್ ಸಿಕ್ಕ ಹಾಗೆ. ಹಾಗೆಯೇ ಅಷ್ಟೇ ಬೇಗ  ಹೃದಯದಲ್ಲೂ ಇಳಿದುಬಿಟ್ಟೆ ! ಯಾರನ್ನೂ ಒಳಮನೆಯೊಳಗೆ  ಬಿಟ್ಟುಕೊಳ್ಳದವಳು ಮನಸ್ಸನ್ನೇ ನಿನಗೆ ಕೊಟ್ಟಿದ್ದೆ. ನೀ ಒಪ್ಪಿದಾಗಲಂತೂ ನನ್ನ ಅದೃಷ್ಟಕ್ಕೆ  ನಾನೇ ಹೆಮ್ಮೆ ಪಟ್ಟಿದ್ದೆ .  

ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಾಗ ಕನಸುಗಳಿಗೂ ರೆಕ್ಕೆ ಬಂದಿತ್ತು . ಆದರೆ ನಿನ್ನಮ್ಮನಿಗೆ ಸೊಸೆಯಾಗಿ ಬರುವವಳು ಡಬ್ಬಲ್ ಡಿಗ್ರಿ ಮಾಡಿರಬೇಕು ಎಂದಾಗ ಮಾತ್ರ ಸ್ವಯಂವರದಲ್ಲಿ ನಿಂತ ಅರ್ಜುನ ,ರಾಮರ ನೆನಪಾಗಿದ್ದು ಸುಳ್ಳಲ್ಲ. ದೇಶ ಸುತ್ತುವುದರಲ್ಲಿ ಇದ್ದ ಆಸಕ್ತಿ ನನಗೆ ಕೋಶ ಓದುವುದರಲ್ಲಿ ಇರಲಿಲ್ಲ. ಓದಬೇಕೆಂದು ಖಂಡಿತಾ ಆಸೆಯಿರಲಿಲ್ಲ .ಕುಳಿತು ಓದುವುದು ನನ್ನಿಂದ ಆಗದ ಮಾತಾಗಿತ್ತು. ಜಿಂಕೆಯಂತೆ ಜಿಗಿಯಬೇಕು.. ಇಲ್ಲ ರೆಕ್ಕೆ ಕಟ್ಟಿಕೊಂಡು ಹಾರಬೇಕು ಇಷ್ಟೇ ನನ್ನ ಪ್ರಪಂಚದಲ್ಲಿದ್ದುದು. ಆದರೆ  ನಿನಗಾಗಿ ಓದಲೇ ಬೇಕೆಂದು ನಿರ್ಣಯಿಸಿದೆ. ನನಗಾಗಿ  ಕಂಡ ಮೊದಲ ಕನಸು ನೀನು. ಹಾಗಾಗಿಯೇ ನಿನಗಾಗಿ ಐದು ವರ್ಷಗಳ ತಪಸ್ಸಿಗೆ ಕುಳಿತುಬಿಟ್ಟೆ..! ಒಳ್ಳೆ ಕಾಲೇಜ್ , ಒಳ್ಳೆ ಗೆಳತಿಯರು , ಎಗ್ಸಾಮ್ , ಮಾರ್ಕ್ಸ್  ಎಲ್ಲದರಲ್ಲೂ ಅದೃಷ್ಟವಂತೆ ಕಣೋ ನಾನು. ನಿಮ್ಮಮ್ಮ ಕೂಡಾ ಒಪ್ಪಿದ್ದಾರೆ, ಐದು ವರ್ಷ ಕಾಯಲು  ತಯಾರಿದ್ದಾರೆ ಎಂದಾಗಲಂತೂ  ಆಕಾಶಕ್ಕೆ ಮೂರೇ ಗೇಣು ಎನ್ನುವಂತೆ .. ಹೆಬ್ಬೆರಳ ತುದಿಯ ಪುಟ್ಟ ಮಚ್ಚೆಯ ಸವರಿ ಖುಷಿಪಟ್ಟಿದ್ದೆ. 

ವಾರಕ್ಕೊಂದು ದಿನ ನಿನ್ನೊಂದಿಗೆ ಸುತ್ತಾಟ, ಮುಸ್ಸಂಜೆಯಲ್ಲಿ ಬೆರಳು ಬೆಸೆದು ಮೂಡಿಸಿದ ಹೆಜ್ಜೆ ಗುರುತುಗಳು, ಮಧ್ಯರಾತ್ರಿಯ ಪಿಸುಮಾತುಗಳು, ಅಯ್ಯೋ ಈ ಓದು ಸಾಕು ಎಂದು ಮನಸ್ಸು ರಚ್ಚೆ ಹಿಡಿದಾಗೆಲ್ಲ  ಮತ್ತೆ ಹುರಿದುಂಬಿಸಿ ಓದುವಂತೆ ಮಾಡಿದ ನಿನ್ನ ತೆರೆದ ತೋಳುಗಳು ... ನಾಲ್ಕು ವರ್ಷಗಳು ಬೆಣ್ಣೆಯಂತೆ ಕರಗಿದ್ದು ಎಲ್ಲಿ ಗೊತ್ತಾಗಿತ್ತು ಹೇಳು. ಕೊನೆ ವರ್ಷದ ಓದು .. ಮುಗಿದರೆ  ನಿನ್ನೆಡೆಗೆ ಓಡಿ ಬರಬೇಕೆಂದುಕೊಂಡಿದ್ದೆ . 

ಆದರೆ ಅದು ಯಾವಾಗ  ವಾರದ ತಿರುಗಾಟಗಳು ಅಪರೂಪವಾಗ ತೊಡಗಿದವೋ , ಮಧ್ಯ ರಾತ್ರಿಯ ಪಿಸುಮಾತುಗಳು ಕರಗಲಾರಂಭಿಸಿದವೊ ತಿಳಿಯಲೇ ಇಲ್ಲ ನೋಡು. ಫೋನ್ ಕಾಲ್ ಗೆ , ಭೇಟಿಗೆ ಎಲ್ಲ ನೀ ಬ್ಯುಸಿ ಎನ್ನ ತೊಡಗಿದಾಗಲೆಲ್ಲ ಅನುಮಾನ ಪಡುತ್ತಿದ್ದ ಮನಸ್ಸಿಗೆ " ವಯಸ್ಸು ಜಾಸ್ತಿಯಾದಂತೆ ಮನಸ್ಸು ಮಾಗುತ್ತೆ , ಹುಡುಗ ಜೀವನದಲ್ಲಿ ಸೀರಿಯಸ್ ಆಗುತ್ತಿದ್ದಾನೆ don't worry " ಎಂದು ಸಮಾಧಾನಿಸುತ್ತಿದ್ದೆ. ಆದರೆ ನಿಧಾನವಾಗಿ ನೀ ಇನ್ನೊಂದು ಸೆಳವಿಗೆ ಜಾರುತ್ತಿರುವುದು ಮಾತ್ರ ಗೊತ್ತಾಗಲೇ ಇಲ್ಲ ನೋಡು.   ಫೋನ್   ಕಾಲ್ ಗಳು ಕಡಿಮೆಯಾಗುತ್ತಾ ಬಂದಾಗ, ನೀ ನನ್ನ avoid  ಮಾಡುತ್ತಾ ಬಂದಾಗ ನಾನು ಅರ್ಥ ಮಾಡಿಕೊಳ್ಳಬೇಕಿತ್ತು "ಕೆಲವು ಕನಸುಗಳಿಗೂ expiry date  ಇರುತ್ತದೆ" ಎಂದು. 

ಸುಮಾರು ಒಂದೂವರೆ ತಿಂಗಳ ನಂತರ  ಮೂರು ದಿನದ ಹಿಂದೆ ನಿನ್ನ ಕಾಲ್ ಬಂದಾಗ ಕಾಲು ಎಡವಿಕೊಂಡಿದ್ದೆ . ಉಗುರ ಸಹಿತ ಕಿತ್ತು ಬಂದಿತ್ತು ಚರ್ಮ. ಅವತ್ತು ಹಾಕಿದ ಬ್ಯಾಂಡೇಜ್ ಇವತ್ತು ತೆಗೆದಿದ್ದಾರೆ . ನಿನಗಲ್ಲಿ ಮದುವೆಯ ಸಂಭ್ರಮವಂತೆ  .. ನಿನ್ನ ಅಮ್ಮನಿಗಿದ್ದಷ್ಟೂ ತಾಳ್ಮೆ ನಿನ್ನಲ್ಲಿರಲಿಲ್ಲವಲ್ಲೋ ಹುಡುಗ.. ಕಾಲಿನ ಹೆಬ್ಬೆರಳನ್ನೊಮ್ಮೆ ನೋಡಿಕೊಂಡೆ. ಮಚ್ಚೆ ಅಳಿಸಿ ಹೋಗಿದೆ . ಅದೃಷ್ಟ ಕಳಚಿ ಬಿದ್ದಿದೆ. ಓದು ಕೈಯಲ್ಲಿದೆ . ಪ್ರಯತ್ನ ಕೈ ಹಿಡಿಯುತ್ತದೆ ಅಲ್ಲವಾ? ಬದುಕು ಮುನ್ನಡೆಸುತ್ತೇನೆ ಎನ್ನುವ ಭರವಸೆ ಕೊಡುತ್ತಿದೆ. ಅದರಂತೆ ಮುನ್ನಡೆಯುತ್ತಿದ್ದೇನೆ

Saturday 30 May 2015

ಶುರುವಾಗಬಹುದೇ ದೂರ ತೀರ ಯಾನ ...??

PC: Dinesh Maneer
http://www.dineshmaneer.com/

ಕರಿ ಮುಗಿಲು .... ಗಿರಿ ಸಾಲು ... 
ಒಂಟಿ ತೀರ .... ಖಾಲಿ ದೋಣಿ ... 
ನಿಂತ ನೀರು ... ಮೌನ ತೇರು ... 
ಬೀಸಬಹುದೇ  ತಂಗಾಳಿ ... 
ಹನಿಯ ಬಹುದೇ ತುಂತುರು ಮಳೆ ... 
ಮೂಡಬಹುದೇ  ಜೋಡಿ ಹೆಜ್ಜೆಗಳು ... 
ಪ್ರೀತಿ ಪಲ್ಲವ .. ನೀರ  ಕಲರವ ... 
ಶುರುವಾಗಬಹುದೇ ದೂರ ತೀರ ಯಾನ ...?? 

Saturday 4 April 2015

ನೀ ಕೊಡಿಸಿದ ಅಚ್ಚ ಬಿಳುಪಿನ ಸೀರೆಯ ಮೇಲೆ ಕೈ ಆಡಿಸುತ್ತಿದ್ದರೆ ಬಣ್ಣ ಬಣ್ಣದ ಕನಸುಗಳ ನುಣುಪು ಕೈ ಸೋಕುತ್ತಿದೆ ....


ಖಾಲಿ ಖಾಲಿಯಾಗಿತ್ತು ಹೈವೇ. ಇಳಿಸಂಜೆಯ ನೇಸರ ನೆರಳ ಬೆಳೆಸುತ್ತಿದ್ದ. ಹೊಂಬಣ್ಣದ ಧೂಳಲ್ಲಿ ಪಾದ ತೋಯಿಸಿಕೊಳ್ಳಲು ನೀನಿರಲಿಲ್ಲ. ಹೊತ್ತು ಮುಳುಗುವ ಮುನ್ನ ನಿರ್ಜನ ಹಾದಿಯ ಬದಿಯ ಹಸಿರಲ್ಲೂ ಹೊನ್ನು ತೂಗಿತ್ತು. ಅಲ್ಲಿ ನಿನ್ನ ಉಸಿರಿತ್ತು. 


"Golden dust on the road"-PC: Krishna Bhat

ನಿನ್ನದೇ ನೆನಪಿನಲ್ಲಿ ಹೆಜ್ಜೆಯಿಟ್ಟು ಬಂದವಳು ಈ ಮುಸ್ಸಂಜೆಯಲ್ಲಿ ನಿನ್ನ ಹೆಸರಲ್ಲಿ ದೀಪ ಹಚ್ಚಿದ್ದೇನೆ. ದೀಪವು ನಿನ್ನದೇ .. ಗಾಳಿಯು ನಿನ್ನದೇ ... ಎಂದು ಹಾಡುವ ಬದಲು ಅವನ ಹೆಸರಲ್ಲಿ ಹಚ್ಚಿದ ದೀಪವಾಗಿದ್ದರಿಂದ ಅದು ನನ್ನದೇ... ನೀ ಆರಿಸಬೇಡ ಬೆಳಕನ್ನು ಎಂದು ಗಾಳಿಯನ್ನು ಗದರಿಕೊಂಡಿದ್ದೇನೆ. ಅದೇ ... ಅದೇ ಬೆಳಕಂಥ ಕಣ್ಣುಗಳೇ ನನ್ನನ್ನು ನಿನ್ನ ಬಳಿಗೆ ಸೆಳೆದದ್ದು. ನಿಮ್ಮ ಮನೆಯಲ್ಲಿ ನನ್ನನ್ನೂ ಒಬ್ಬಳಾಗಿ ಮಾಡಿದ್ದು. ಹಾಸ್ಟೆಲ್ ನಲ್ಲಿ ಹೋಮ್ ಸಿಕ್ ಆಗಿ, ಅಳುಬುರುಕಿಯಂತೆ ಇರುತ್ತಿದ್ದವಳಿಗೆ ಮನೆ ಮರೆಸಿ ನಗು ಕಲಿಸಿಕೊಟ್ಟಿದ್ದು. ಅಮ್ಮಾ miss you. ಅಪ್ಪಾ miss you ಅಂತ ಬರೆಯುತ್ತಿದ್ದಲ್ಲೆಲ್ಲ i miss you .. i love you ಅಂತಾ ಬರೆವಂತೆ ಮಾಡಿದ್ದು. ವಿಜ್ಞಾನಿಯೊಬ್ಬ ನನ್ನೆದೆಯಲ್ಲಿ ರಾಜ್ಯಭಾರ ಮಾಡಬಲ್ಲ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಸೂರ್ಯ ,ಚಂದ್ರ , ನಕ್ಷತ್ರಗಳು ಹೇಗೆ ಉಂಟಾದವು ಎಂದು ಪ್ರಾಕ್ಟಿಕಲ್ ಆಗಿ ಹೇಳಬಲ್ಲ ನೀನು "ಆ ಬೆಟ್ಟದಲ್ಲಿ .. ಬೆಳದಿಂಗಳಲ್ಲಿ.... ಸುಳಿದಾಡಬೇಡ ಗೆಳತಿ ... " ಎಂದು ಹಾಡಲೂ ಬಲ್ಲೆ .. 


ನಿನ್ನೊಂದಿಗೆ , ನಿನ್ನವರೊಂದಿಗೆ ಕಳೆದು ಹೋಗಿದ್ದವಳಿಗೆ ಅಪ್ಪನ ಹೆಸರಿದ್ದ ಎರಡು ಟಾಟ ಸುಮೋಗಳು ಎದುರು ಬಂದು ನಿಂತಾಗಲೇ "ದುಗುಡ" ಎನ್ನುವ ಪದ ಮತ್ತೆ ಹುಟ್ಟಿಕೊಂಡಿದ್ದು. ಹತ್ತು ಎನ್ನುವಂತೆ ರಾಮಣ್ಣ ಕಣ್ಣು ಸನ್ನೆ ಮಾಡಿದ್ದ , ಮರು ಮಾತನಾಡದೆ ಹತ್ತಿ ಕುಳಿತಿದ್ದೆ . ರಾಮಣ್ಣ ಅಪ್ಪನ ಬಲಗೈ ಬಂಟ. ಅಪ್ಪ ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಕ್ಕೆ ಇರುವ ಏಕೈಕ ಜೀವಂತ ಸಾಕ್ಷಿ..! ಒಳಗಡೆ ಏನಾಗುತ್ತಿದೆ ಎಂದು ಚೂರು ಹೊರಗಡೆಯ ಪ್ರಪಂಚಕ್ಕೆ ಗೊತ್ತಾಗದಷ್ಟು ಎತ್ತರದ ಗೋಡೆ . ನಾಲ್ಕು ಜನರು ಒತ್ತಿ ಹಾಕಬೇಕಾದಂಥ ದೊಡ್ಡ ಬಾಗಿಲು . ಅದರೊಳಗಿನ ಮೂವತ್ತೆರಡಂಕಣದ ದೊಡ್ಡ ಮನೆ. ಆಚೆ ಇದ್ದವರು ಕಾಣಿಸದಂಥಹ ದೊಡ್ಡ ಮುಂಡಿಗೆ ಕಂಬಗಳು . ಎಡವಿಕೊಂಡರೆ ರಕ್ತ ಕಿತ್ತು ಬರುವಂಥ ಹೊಸಿಲುಗಳು... ಹಳೆ ಕಾಲದ ಕತ್ತಿ ಗುರಾಣಿಗಳಿಂದ ಅಲಂಕಾರಗೊಂಡ ಗೋಡೆಗಳು. ಹೊರಗಡೆಯಿಂದ ಬಂದವರಿಗೆ ಇದು ಮ್ಯುಸಿಯಮ್ ಥರ ಅನಿಸಿದರೆ ನನಗಿದು ಸ್ವರ್ಗ .. ಇದು ನಾನು ಆಡಿ ಬೆಳೆದ ಮನೆ. ಎಂದಿನಂತೆ ಭವ್ಯ ಸ್ವಾಗತವೇನೋ ಇತ್ತು. ಆದರೆ ಸಂತೋಷಿಸುವ ಮನಸ್ಸು ನನ್ನದಾಗಿರಲಿಲ್ಲ . ಯಾವುದೋ ಅವ್ಯಕ್ತ ಭಯ ಮನದಲ್ಲಿ ..

ಊಹೆ ನಿಜವಾಗಿತ್ತು . ಮನೆಯಲ್ಲಿ ಮದುವೆಗೆ ತಯಾರಿ ನಡೆಯುತ್ತಿತ್ತು. ಬಹಳ ಗಾಬರಿಯಲ್ಲಿ ನಿನಗೆ ಫೋನ್ ಮಾಡಿ ವಿಷಯ ತಿಳಿಸಿದ್ದೆ . " ನೋಡು ನೀ ದಾಟಿ ಬರಬೇಕಿರುವುದು ಆ ದೊಡ್ಡ ಮನೆಯ ಹೊಸ್ತಿಲಷ್ಟೇ ಹೊರಗಡೆಯ ಪ್ರಪಂಚ ದೊಡ್ಡದಿದೆ, ಅಲ್ಲಿ ನಾನಿದ್ದೇನೆ . ಮನೆಯವರಿಗೆ ವಿಷಯ ತಿಳಿಸು . ಒಪ್ಪದಿದ್ದರೆ ಹೊರಟು ಬಂದು ಬಿಡು " ಎಂದ ನಿನ್ನ ಮಾತು ಕೇಳಿ ಅವತ್ತು ಎಲ್ಲರೆದುರು ಧೈರ್ಯವಾಗಿ ನಮ್ಮ ಪ್ರೀತಿಯ ವಿಷಯವನ್ನು ತಿಳಿಸಿದ್ದೆ . ಅಷ್ಟೇ .. ... ಅಪ್ಪ ಎಲ್ಲರೂ ಹೋಗಬಹುದು ಎಂಬಂತೆ ಸನ್ನೆ ಮಾಡಿದ್ದರು , ಅದರರ್ಥ ಅವರಿಗೆ ಏಕಾಂತದ ಅವಶ್ಯಕತೆ ಇದೆ ಎಂಬುದು . ಮನೆ ಎಷ್ಟು ನಿಶ್ಯಬ್ದವಾಗಿತ್ತೆಂದರೆ ಅಮ್ಮ ಹಾಲಿನ ಲೋಟವನ್ನು ತಂದಿಟ್ಟ ಟನ್ ಎಂಬ ಶಬ್ದ ಬಿಟ್ಟರೆ , ನಾನು ಕುಡಿದಾದ ಮೇಲೆ ಗಂಟಲಿನಿಂದ ಹೊರಟ ಕುಳರ್ ಎನ್ನುವಂತ ಶಬ್ದ ಮಾತ್ರ ಕೇಳಿಸಿತ್ತು. ಈ ಅಸಹಜ ಮೌನ ಕಿತ್ತು ತಿನ್ನುವಂತಿತ್ತು . ಯಾವ ಭರವಸೆಗಳೂ ಉಳಿದಿರಲಿಲ್ಲ . ಮುಂಜಾವಿನಲ್ಲೇ ಎದ್ದು ಹೊರಟವಳನ್ನು ತಡೆದು ನಿಲ್ಲಿಸಿದ್ದು " ಗೆಜ್ಜೆ ತೆಗೆದಿಟ್ಟು ಹೊರಟಿದ್ದೀಯಾ ? ನಾನು ಎತ್ತಿ ಬೆಳೆಸಿದ ಕಂದ ನೀನು ... ಸದ್ದಾಗಂತೆ ಹೊಸಿಲ ದಾಟಬೇಡ " ಎಂದ ಅಪ್ಪನ ಮಾತುಗಳು. "ಆ ಹುಡುಗನನ್ನು ಕರೆಸು ನಾನು ಮಾತನಾಡಬೇಕಿದೆ " ಎಂದು ಖಡ್ಗದ ಅಲುಗಿನ ಮೇಲೆ ಕೈಯಾಡಿಸುತ್ತಾ ಅಪ್ಪ ಹೇಳುವಾಗ ಅವರ ಮುಖ ನೋಡುವ ಧೈರ್ಯವಾಗದೆ ಫೋನ್ ಕೈಗೆತ್ತಿಕೊಂಡಿದ್ದೆ .

ನಿನಗೆ ಫೋನ್ ಮಾಡಿ ಬಂದವಳಿಗೆ ಕಾಣುತ್ತಿದುದು ಕತ್ತಿಯ ಅಲುಗಿನ ಮೇಲೆ ಆಡಿಸುತ್ತಿದ್ದ ಅಪ್ಪನ ಕೈ ಬೆರಳುಗಳಷ್ಟೇ . "ಕ್ರೋಧಗೊಂಡರೆ ನಿನ್ನಪ್ಪ ಮನುಷ್ಯನೇ ಅಲ್ಲ " ಅಂತ ಅಮ್ಮ ಹೇಳುತ್ತಾಳೆ . ಇಷ್ಟು ವರ್ಷದಲ್ಲಿ ನಾನೂ ಒಂದೋ ಎರಡೋ ಬಾರಿ ಅಪ್ಪನ ಕ್ರೋಧವನ್ನು ಕಂಡಿದ್ದೇನೆ . ಮನದಲ್ಲಿ ಸಾವಿರ ಯೋಚನೆಗಳು . ಏನು ಮಾಡಬಹುದು ಅಪ್ಪ ? ನಿನ್ನನ್ನು ಕೊಂದು ಬಿಡಬಹುದೇ ? ನೀನಂತೂ ರೀಲ್ ನಲ್ಲೂ ರಿಯಲ್ ನಲ್ಲೂ ಹೀರೋ ಅಲ್ಲ , ಆದರೆ ನನ್ನಪ್ಪನ ಕಡೆಯವರು ಮಾತ್ರ ರಿಯಲ್ ವಿಲ್ಲನ್ ಗಳು . " ಎಂಟು ಜನರನ್ನು ಅಡ್ಡಡ್ಡ ಸೀಳಿ ದಿಡ್ಡಿ ಬಾಗಿಲಿಗೆ ನೇತು ಹಾಕಿದ ವಂಶದಲ್ಲಿ ಕತ್ತಿ ಸರಿಯಾಗಿ ಹಿಡಿಯಲು ಬಾರದ ನೀನು ಹೇಗೆ ಹುಟ್ಟಿದೆಯೋ " ಎಂದು ಚಿಕ್ಕಪ್ಪನಿಗೆ ಅಜ್ಜಿ ಬಯ್ಯುತ್ತಿದ್ದ ಮಾತು ಬೇಡವೆಂದರೂ ನೆನಪಾಗುತ್ತಿತ್ತು. ಯಾವುದೋ comedy ಸಿನಿಮಾದ " ರಕ್ತಪಾತದ ವಂಶ ನಮ್ಮದು " ಎಂಬ ಡೈಲಾಗ್ ನಮ್ಮ ವಂಶದ ಸೀರಿಯಸ್ ಟ್ಯಾಗ್ ಲೈನ್ ಆಗಿ ಗೋಚರಿಸತೊಡಗಿತ್ತು ..!! ನಿನ್ನನ್ನು ಇಲ್ಲಿಗೆ ಕರೆದು ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಪದೇ ಪದೇ ಅನಿಸತೊಡಗಿತ್ತು .

ಆದರೆ ಮರುದಿನದ ಬೆಳಗು ಬೇರೆಯೇ ಆಗಿತ್ತು. ಎಲ್ಲರನ್ನು ಸ್ವಾಗತಿಸುವಂತೆಯೇ ದೊಡ್ಡ ಮನೆ ನಿನ್ನನ್ನೂ ಸ್ವಾಗತಿಸಿತ್ತು. ಹೆಣ್ಣಿನ ತಂದೆಯಾಗಿ ಅಪ್ಪ ಕೊಂಚ ಬಿಗುವಾಗಿಯೇ ಮಾತನಾಡುತ್ತಿದ್ದರೆ ನೀನು ಮಾತ್ರ ಎಲ್ಲ ಬಿಗುಮಾನಗಳನ್ನು ತೊರೆದು ಸಹಜವೆಂಬಂತೆ ಮಾತನಾಡಿದ್ದೆ . ಕಪಟತನವಿಲ್ಲದೆ , ಅತೀ ವಿನಯವಂತಾಗದೆ ಎಲ್ಲವನ್ನೂ ತಿಳಿಸಿ ಹೇಳಿದ್ದೆ . ನೀ ಇದ್ದ ಎರಡು ದಿನಗಳು ನನ್ನೊಂದಿಗೆ ಮಾತನಾಡಿದ್ದು ಕಡಿಮೆಯೇ . ನೀ ಹೊರಟು ನಿಂತಾಗ ಕಳುಹಿಸಿಕೊಟ್ಟು ಬಾ ಎನ್ನುವಂತೆ ಅಪ್ಪ ಸನ್ನೆ ಮಾಡಿದ್ದರು . ನಿನ್ನೊಂದಿಗೆ ದುಗುಡದಿಂದಲೇ ಹೆಜ್ಜೆ ಹಾಕುತ್ತಿದ್ದರೆ ನೀನು ಮಾತ್ರ ನಿರಾಳನಾದವನಂತೆ " ನೀ ದಾಟಬೇಕಿರುವುದು ಈ ದೊಡ್ಡ ಮನೆಯ ಹೊಸಿಲಷ್ಟೇ ಎಂದುಕೊಂಡಿದ್ದೆ , ಆದರೆ ಮನೆಯೊಳಗಡೆ ನಿನಗೆಂದೇ ಒಂದು ಪ್ರಪಂಚವಿದೆ ಎಂದು ಗೊತ್ತಿರಲಿಲ್ಲ. ನಿನ್ನಪ್ಪ ಒಪ್ಪಿದರಷ್ಟೇ ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ " ಎಂದು ಹೈವೇ ಎಂದೂ ಕೂಡ ಗಮನಿಸದೆ ಹಣೆಯ ಮೇಲೊಂದು ಮುತ್ತಿಟ್ಟು ಹೊರಟುಬಿಟ್ಟಿದ್ದೆ . ಮಬ್ಬು ಬೆಳಕಿನಲ್ಲಿ ನೀನಿತ್ತ ಮುತ್ತಿಗೆ ದೂರದಲ್ಲಿ ಬರುತ್ತಿದ್ದ ವಾಹನದ ಬೆಳಕೊಂದು ನಾಚಿಕೊಂಡಿತ್ತು .

ಕಣ್ಣಂಚಲ್ಲಿದ್ದ ನೀರನ್ನು ಒರೆಸಿಕೊಳ್ಳುತ್ತಾ ಮನೆಯ ಮೆಟ್ಟಿಲು ಹತ್ತಿದವಳನ್ನು ಕರೆದು ಅಪ್ಪ " ಆ ಹುಡುಗ ಜೀವನವನ್ನು ಬಹಳ ಪ್ರೀತಿಸುತ್ತಾನೆ. ಇಂಥವನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ನನ್ನ ಜೀವನ್ಮುಖಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಭರವಸೆಯಿದೆ . ಒಳ್ಳೆ ದಿನ ನೋಡಿ ಅವನ ಹಿರಿಯರಿಗೆ ಬರಹೆಳ್ತೇನೆ. ನೀ ತೆಗೆದಿಟ್ಟ ಗೆಜ್ಜೆ ಹಾಕಿಕೋ ಹೋಗು " ಎಂದರು . ಅವತ್ತು ಅನಿಸಿದ್ದು " ಹಿರಿಯರ ಭಾವನೆಗಳಿಗೆ ಬೆಲೆಕೊಡುವ ನಿನ್ನಂಥ ಒಳ್ಳೆಯ ಪ್ರೆಮಿಗಳಿರುವಂತೆಯೇ , ಕಿರಿಯರ ಭಾವನೆಗಳನ್ನು ಅರ್ಥೈಸಿಕೊಳ್ಳದಂಥಹ ಕೆಟ್ಟ ತಂದೆಯರೂ ಇರುವುದಿಲ್ಲ ಎಂದು .


ಇದೆಲ್ಲ ನಡೆದು ಸುಮಾರು ಒಂದು ತಿಂಗಳೇ ಕಳೆದಿದೆ. ನಾಳೆ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ. ನಾಳೆಗಾಗಿ ನೀ ಕೊಡಿಸಿದ ಅಚ್ಚ ಬಿಳುಪಿನ ಸೀರೆಯ ಮೇಲೆ ಕೈ ಆಡಿಸುತ್ತಿದ್ದರೆ ಬಣ್ಣ ಬಣ್ಣದ ಕನಸುಗಳ ನುಣುಪು ಕೈ ಸೋಕುತ್ತಿದೆ ....

(ಗೆಳೆಯ ಕೃಷ್ಣ ಭಟ್ ತೆಗೆದ ಈ ಫೋಟೊ ಗೆ ಮೊದಲ ನಾಲ್ಕು ಸಾಲುಗಳನ್ನು ಗೀಚಿದ್ದೆ . ಅದೇ ಮುಂದೆ ಕಥೆಯಾಯ್ತು . ಥ್ಯಾಂಕ್ಯು ಕೃಷ್ಣ ಭಟ್ )

Monday 9 March 2015

(ಕು)ರೂಪ


ಗುಡ್ ಮಾರ್ನಿಂಗ್ .. ಹೇಗಿದ್ದೀರಾ ? ಎನ್ನುತ್ತಾ ನಂದಿನಿ ಎಬ್ಬಿಸಿದಾಗ ನಿಧಾನಕ್ಕೆ ಕಣ್ಣು ತೆರೆದ ಮಹೇಶನಿಗ್ಯಾಕೋ ಬೆಳಕಿಗೆ ಕಣ್ಣು  ಹೊಂದಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು. ಎದುರಿದ್ದ ನಂದಿನಿಯ ನಗು ಬೆಳಗಿಗೆ ಹೊಸ ರಂಗು ಕೊಟ್ಟಂತಾಗಿ ತಾನೂ ಮುಗುಳ್ನಕ್ಕ. "ಎರಡು ದಿನ ಬಿಡದೆ ಕಾಡಿದ ಜ್ವರ ಎಷ್ಟು ಸುಸ್ತು ಹೊಡೆಸಿದೆ ನೋಡಿ, ಕಣ್ಣೆಲ್ಲ ಹೇಗಾಗಿದೆ ನೋಡಿ,ಮಾಧುರಿಯ ಬಗೆಗೆಲ್ಲ ಕನವರಿಸುತ್ತಿದ್ದಿರಿ ಗೊತ್ತಾ. ಕಾಫಿ ತರ್ತೀನಿ ಇರಿ " ಎನ್ನುತ್ತಾ ಎದ್ದು ಹೋದ ನಂದಿನಿಯನ್ನು ನೋಡುತ್ತಿದ್ದವನಿಗೆ ಮಾಧುರಿ ನೆನಪಾದಳು. 

'ಮಾಧುರಿ' ಸೌಂದರ್ಯದಲ್ಲಿ ಮಾಧುರ್ಯವನ್ನು ಹೊಂದಿದವಳು. ಮೊದಲ ನೋಟದಲ್ಲೇ ಮರುಳಾಗಿದ್ದ. ತನಗಿದ್ದ ಅಸಾದ್ಯ ಬುದ್ದಿಮತ್ತೆ ಆಕೆಯನ್ನು ಬಳಿ ಸೆಳೆದಿತ್ತು. ಆಕೆಯೊಂದಿಗೆ ಒಡನಾಡುತ್ತ ಕೊನೆಗೊಮ್ಮೆ ಆಕೆಗೆ ತನ್ನ ಪ್ರೀತಿಯನ್ನು ತಿಳಿಸಿದ್ದ. ತಿರಸ್ಕಾರವಿತ್ತು ಆಕೆಯಿಂದ, ಆಕೆಯ ತಿರಸ್ಕಾರಕ್ಕಿಂತ ಆಕೆ ಕೊಟ್ಟ ಕಾರಣಗಳೇ ತನ್ನನ್ನು ಎಷ್ಟು ಜರ್ಜರಿತಗೊಳಿಸಿತ್ತು. " ನಿನ್ನ ಹಣ, ಗುಣಾವಗುಣಗಳೇನೆ ಇದ್ದರೂ ನಾನು ಮದುವೆಯಾಗುವವನಲ್ಲಿ, ಪ್ರೀತಿಸುವವನಲ್ಲಿ ಚಂದ ಬಯಸುತ್ತೇನೆ, ಪ್ರೀತಿ, ಕಾಮ ಎರಡಕ್ಕೂ ಚಂದ ಮುಖ್ಯ ಕಣೋ. ಸ್ನೇಹಕ್ಕೆ ಹಾಗಲ್ಲ. ನನ್ನ ಮರೆತುಬಿಡು. ನಿನ್ನೊಂದಿಗೆ ಬದುಕು ನನಗೆ ಸಾಧ್ಯವಿಲ್ಲ " ಎಂದು ಬದುಕಿನಿಂದ ಎದ್ದು ನಡೆದಿದ್ದಳು. ಚೆಲುವಾಂತ ಚೆನ್ನಿಗನೆಂದೇ ಬಿರುದು ಪಡೆದ, ಹುಡುಗಿಯರ ಕನಸು ಎನ್ನುವಂತಿದ್ದ ಗೌತಮ್ ನ ಮದುವೆಯಾಗಿದ್ದಳು. ಅವಳು ಹೋದ ಮೇಲೆ ಅಲ್ಲಿಯವರೆಗೂ ಯಾವುದಕ್ಕೂ ತೊಡಕಾಗದ ರೂಪ ತೊಡಕಾಗತೊಡಗಿತ್ತು. ಕನ್ನಡಿ ನೋಡಿಕೊಳ್ಳುವಾಗೆಲ್ಲ, ತಾನೊಬ್ಬ ಡಾಕ್ಟರ್ ಆಗಿಯೂ ಕೂಡ ತನ್ನ ರೂಪಕ್ಕೆ ತಾನೇನೂ ಮಾಡಿಕೊಳ್ಳಲಾರೆನಲ್ಲ ಎಂದು ಬೇಸರವಾಗುತ್ತಿತ್ತು. ಹೆಣ್ಣುಮಕ್ಕಳನ್ನು ಮಾತನಾಡಿಸುವುದನ್ನು ಬಿಟ್ಟಿದ್ದೆ. ಅಮ್ಮ ಮದುವೆಯ ಸುದ್ದಿ ಎತ್ತಿದ್ದರೂ ಹೆಣ್ಣು ನೋಡಲು ಹೋಗುತ್ತಿರಲಿಲ್ಲ. ನಂದಿನಿಯ ತಂದೆ ಅವರ ಮನೆಗೇ ಹುಡುಕಿಕೊಂಡು ಬಂದು ಹೆಣ್ಣು ಕೊಡುತ್ತೇವೆ ಎಂದಾಗಲೂ ಕೇಳಿದ್ದೆ, ನನ್ನ ಕುರೂಪವನ್ನು ನಿಮ್ಮ ಮಗಳು ಒಪ್ಪಿಕೊಳ್ಳುತ್ತಾಳ ? ಎಂದು. ಅದಕ್ಕವರು " ನಮ್ಮ ಮಗಳು ನಾವು ಹೇಳಿದಂತೆ ಕೇಳುತ್ತಾಳೆ ನೀವದರ ಬಗ್ಗೆ ಯೋಚಿಸಬೇಡಿ" ಎಂದಿದ್ದರು. ಮದುವೆಗೆ ಮೊದಲು ಎರಡು ಮೂರು ಬಾರಿ ಮೀಟ್ ಆಗಿದ್ದರೂ ನನ್ನನ್ನು ಇಷ್ಟಪಟ್ಟೆ ಮದುವೆಯಾಗುತ್ತಿದ್ದೀಯ ? ಎಂದು ನಂದಿನಿಯನ್ನು ಕೇಳಲು ಆಗಿರಲೇ ಇಲ್ಲ. ನಂದಿನಿಯೊಂದಿಗಿನ ಸಂಸಾರದಲ್ಲಿ ಮಾಧುರಿ ಆಗಾಗ ನೆನಪಾಗುತ್ತಿದ್ದರೂ ಮೊದಲಿನಂತೆ ಕಾಡುತ್ತಿರಲಿಲ್ಲ. 

ಮೊನ್ನೆ ಎಮರ್ಜೆನ್ಸಿ ಕಾಲ್ ಬಂದು ಹಾಸ್ಪಿಟಲ್ ಗೆ ಹೋದರೆ ಅದೊಂದು  ಆಕ್ಸಿಡೆಂಟ್ ಕೇಸ್ ಆಗಿತ್ತು. ಮಾಧುರಿಯ ಗಂಡ ಗೌತಮ್ rash driving  ಮಾಡಿ ಕಂಟ್ರೋಲ್ ಮಾಡಲಾಗದೆ construction  ಹಂತದಲ್ಲಿದ್ದ ಮೊರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದ. ಆ ರಭಸಕ್ಕೆ ಕಬ್ಬಿಣದ ಸರಳೊಂದು ಅವನ ಕೆನ್ನೆಯನ್ನು ಹೊಕ್ಕಿತ್ತು. ಒಪರೆಟ್ ಮಾಡಿದರೂ ಕೊಡ ಮುಖವನ್ನು ಮೊದಲಿನಂತೆ ಮಾಡಲು ಸಾಧ್ಯವಿರಲಿಲ್ಲ. ದವಡೆಯ ಮೂಳೆಯೊಂದನ್ನು ತೆಗೆಯಬೇಕಾಗಿ ಬಂದಿತ್ತು. ಒಪರೆಶನ್ ಮುಗಿದ ತಕ್ಷಣ ಅವನನ್ನು ನೋಡಿದ ಮಾಧುರಿ ಹಾಸ್ಪಿಟಲ್ ಎನ್ನುವುದನ್ನು ಮರೆತು ಕಿರುಚಿದ್ದಳು. ಅವಳನ್ನು ಸಮಾಧಾನಿಸುವ ಮನಸ್ಸಾದರೂ ನಂದಿನಿಯ ನೆನಪಾಗಿ ಸುಮ್ಮನೆ ಬಂದಿದ್ದೆ. ನಂದಿನಿಯು ಅಷ್ಟೇ ಮೊದಮೊದಲು ಹೆಂಡತಿಯಾದರೂ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಳು. ಯಾವತ್ತಿಗೂ ನನ್ನ ಕುರೂಪದ ಬಗ್ಗೆ ಮಾತನಾಡದಿದ್ದರೂ, ಅವಳಲ್ಲಿ ಬೇಸರವಿತ್ತು ಎಂಬುದು ಗೊತ್ತಾಗುತ್ತಿತ್ತು.  ಅವಳ ಗೆಳತಿಯರಿಗೆ ನನ್ನ ಪರಿಚಯಿಸಲು ಸಂಕೋಚ ಪಡುತ್ತಿದ್ದಳು. ಆದರೆ ಈಗೀಗಂತೂ ಇನ್ನಿಲ್ಲದಂತೆ ಪ್ರೀತಿಸತೊಡಗಿದ್ದಾಳೆ. ಪ್ರತಿ ಹೆಜ್ಜೆಗಿರುತ್ತಾಳೆ. ಎಲ್ಲ ಅವಶ್ಯಕತೆಗಳ ನೋಡಿಕೊಳ್ಳುತ್ತಾಳೆ. ಪ್ರತಿ ಕ್ಷಣಕ್ಕೂ ತನ್ನ ನೆನಪಿಸಿಕೊಡುತ್ತಾಳೆ, ನನ್ನುಸಿರಲ್ಲಿ ಹಸಿರಾಗಿರುತ್ತಾಳೆ. ಎರಡು ದಿನದ ಜ್ವರದ ಸುಸ್ತು ಕೂಡಾ ಅವಳ ಸನಿಹ, ಅವಳ ಸ್ಪರ್ಶವಿದ್ದರೆ ಮಾಯ ಎಂದುಕೊಂಡವನಿಗೆ ಅವಳನ್ನೊಮ್ಮೆ ಬಿಗಿಯಾಗಿ ಅಪ್ಪಿಕೊಳ್ಳುವ ಮನಸ್ಸಾಗಿ ರೂಂ ನಿಂದ ಎದ್ದು ಹೊರಬಂದ....  
 
ಇತ್ತ ಕಾಫಿ ಮಾಡುತ್ತಿದ್ದ ನಂದಿನಿಯ ತಲೆಯಲ್ಲೂ ಯೋಚನೆಗಳು ಸಾಲು ಸಾಲಾಗಿದ್ದವು. ಯಾಕೋ ಮಾಧುರಿಯ ಹೆಸರೆತ್ತಿದ್ದು ತಪ್ಪೆನಿಸಿದ್ದರೂ ಆಕೆ ಕಾಡತೊಡಗಿದ್ದಳು.ಹೌದು ಪ್ರೀತಿ , ಕಾಮ ಎರಡೂ ಚಂದವನ್ನೇ ಬಯಸುತ್ತವೆ. ಒಂದು ಹೆಣ್ಣು ಇವೆರಡರಲ್ಲೂ ಚಂದವನ್ನೇ ಬಯಸುತ್ತಾಳೆ.ನಾನೂ ಅದಕ್ಕೆ ಹೊರತಾಗಿರಲಿಲ್ಲ.  ಬಹುಶಃ ಆಕೆಗಾದರೆ ಆಯ್ಕೆಗಳಿದ್ದವು ಅಂತ ಕಾಣುತ್ತೆ. ಅದಕ್ಕೆ ತನಗೆ ಬೇಕಾದ್ದನ್ನು ಆಯ್ದುಕೊಂಡಳು. ಆದರೆ ನನಗೆ ? ನನಗೆ ಆಯ್ಕೆಯೆಂಬ ಸ್ವಾತಂತ್ರ್ಯವೇ ಇರಲಿಲ್ಲ. ನಾವೊಪ್ಪಿದ ಹುಡುಗ ನೀನು ಒಪ್ಪಿಕೊಳ್ಳಲೇ ಬೇಕು ಎನ್ನುವಂತೆಯೇ ಮಾತಾಡಿದ್ದು. ನನಗೆ ಆಯ್ಕೆಯ ಸ್ವಾತಂತ್ರ್ಯವಿದ್ದಿದ್ದರೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿರಲಿಲ್ಲ. ಆ ದೊಡ್ಡ ಮೂಗು, ದಪ್ಪ ದಪ್ಪ ಕಪ್ಪು ತುಟಿಗಳು, ಕೆನ್ನೆ ತುಂಬಾ ಮೊಡವೆ ಕಲೆಗಳು, ಬೇಡ ಬೇಡ ಎಂದು ಮನಸ್ಸಿನಲ್ಲಿದ್ದರೂ ಹೇಳಲಾರದೆ ಮದುವೆಯೂ ನಡೆದುಹೋಗಿತ್ತು. ಮೊದಮೊದಲು ಮುದ್ದಿಸುವಾಗ ಅಸಹ್ಯವಾಗುತ್ತಿತ್ತು. ಗೆಳತಿಯರಿಗೆ ಪರಿಚಯ ಮಾಡಿಕೊಡುವಾಗ ತಡೆ ತಡೆದು ಪರಿಚಯಿಸಿದ್ದೆ. " ಏನೇ ಹಣ ನೋಡಿ ಒಪ್ಪಿಕೊಂಡೆಯೇನೆ ? " ಎಂದು ಗೆಳತಿಯೊಬ್ಬಳು ಕೇಳಿದಾಗಲಂತೂ ಮಯೆಲ್ಲ ಉರಿದಿತ್ತು. ಆದರೆ ಸಂಸಾರ ಸಾಗಿದಂತೆ, ನೀವು ಅರ್ಥವಾಗುತ್ತಾ ಹೋದಂತೆಲ್ಲ ಇಷ್ಟವಾಗುತ್ತಾ ಹೋದಿರಿ. ನಿಮ್ಮ ಒಳ್ಳೆತನ, ನಿಮ್ಮ ನಡವಳಿಕೆಗಳು, ನಿಮ್ಮೊಂದಿಗೆ ಮನಸ್ಸು ಸ್ಪಂದಿಸತೊಡಗಿದಂತೆ ಪ್ರೀತಿ ತನ್ನದೇ ಹೊಳಪು ಪಡೆದುಕೊಂಡಿತು. ಒಳ್ಳೆಯಗುಣ ಎಲ್ಲವನ್ನು ಮರೆಸತೊಡಗಿತು. ನಿಮ್ಮ ಮನಸಿನಂತೆ,ದೇಹವನ್ನೂ ಅರಿವಿಲ್ಲದಂತೆ ಪ್ರೀತಿಸತೊಡಗಿದ್ದೇನೆ. ಕಪ್ಪು ತುಟಿಗಳ ತುಂಟಾಟಕ್ಕೆ ಕೆನ್ನೆ ನಾಚುತ್ತೆ, ಕಾಯುತ್ತೆ. ದೊಡ್ಡ ಮೂಗನ್ನು ಮುದ್ದಿಸುವ ಮನಸ್ಸಾಗುತ್ತೆ, ನಾ ಕೊಟ್ಟ ಮುತ್ತುಗಳೆಲ್ಲ ನಿನ್ನ ಮೊಡವೆ ಕಲೆಗಳಲ್ಲಿ ಕುಳಿತು ನಗುವಾಗ ಖುಷಿಯಾಗುತ್ತೆ. ತವರ ಮರೆಸಿದ ಪ್ರೀತಿ ನಿನ್ನದು.ಸೌಂದರ್ಯ, ಐಶ್ವರ್ಯಕ್ಕಿಂತ ಗುಣವೊಂದೇ ಮುಖ್ಯ ಎನ್ನುವ ನಿಲುವು ನನ್ನದಲ್ಲದಿದ್ದರೂ. ಒಳ್ಳೆಯತನ, ಒಳ್ಳೆಯಗುಣ ಕುರೂಪವನ್ನು ಮರೆಸಬಲ್ಲದು ಎಂದು ಅರ್ಥವಾಗಿದೆ.  ನೀವು  ಹೇಗಿದ್ದರೂ ನೀವು  ನನ್ನವರೇ , ನಿಮ್ಮನ್ನ  ಕಳೆದುಕೊಳ್ಳಲಾರೆ.   ಎಂದುಕೊಳ್ಳುವ ಹೊತ್ತಿಗೆ ಬಿಸಿ ಬಿಸಿ ಕಾಫಿ ರೆಡಿ ಆಗಿತ್ತು. ಕಾಫಿಯೊಂದಿಗಿನ ಇಂದಿನ ಮುತ್ತಲ್ಲಿ ಎಲ್ಲ ಪ್ರೀತಿಯ ಸುರಿದುಕೊಡುತ್ತೇನೆ ಎಂದುಕೊಂಡು ಅಡಿಗೆಮನೆಯಿಂದ ಹೊರಬರುವುದಕ್ಕೂ , ಮಹೇಶ್ ರೂಮಿಂದ ಹೊರಬರುವುದಕ್ಕೂ ಸರಿಹೋಯಿತು. ಇಬ್ಬರೂ ಒಬ್ಬರಿಗೊಬ್ಬರೂ ಮುಖ ನೋಡಿಕೊಂಡು ನಕ್ಕರು.  ಒಬ್ಬರ ಭಾವಗಳು ಒಬ್ಬರಿಗೆ ಅರ್ಥವಾದಂತೆ.  ಮಾತುಗಳಿಲ್ಲದ ಭಾವಗಳೆಲ್ಲ ಜೀವ ತುಂಬಿಕೊಂಡು ಅದಲುಬದಲಾದಂತೆನಿಸಿತು. ಮರುಕ್ಷಣ ಅವನಪ್ಪುಗೆಯಲ್ಲಿ ಆಕೆ ಕಾಫಿಯಲ್ಲಿ ಸಕ್ಕರೆ ಬೆರೆತಂತೆ ಕರಗಿದರೆ, ಅವಳ ಹಣೆ ತಾಕಿದ ಅವನ ಮುತ್ತು ಜೇನು ಸುರಿದಂತಾಗಿತ್ತು. 

ಸ್ನಾನ ಮಾಡಿ ರೆಡಿಯಾಗಿ ಹಾಸ್ಪಿಟಲ್ ಗೆ ಹೊರಟನಾದರೂ ಮನಸ್ಸಲ್ಲಿ ಮಾತ್ರ ಅವ್ಯಕ್ತ ಭಯವಿದ್ದಂತೆ ಎನಿಸಿತ್ತು. ಚೇಂಬರ್ ಗೆ ಬಂದು ಕಣ್ಮುಚ್ಚಿ ಕುಳಿತವನನ್ನು ನರ್ಸ್ ಮಾತು ಎಚ್ಚ್ಚರಿಸಿತು. "ಸರ್  ಮಿಸ್ಟರ್ ಗೌತಮ್ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ " ಎಂದಳು. 

" ಯಾರಿದ್ದಾರೆ ಅವರ ಜೊತೆ ? " ಎಂದು ಕೇಳಿದ. 

" ಅಪ್ಪ, ಅಮ್ಮ ಅನಿಸುತ್ತೆ ಸರ್, ಅವತ್ತು ಕಿರುಚಿಕೊಂಡು ಹೋದ ಅವರ ವೈಫ್ ನಿನ್ನೆ ಒಂದು ಸಾರಿ ಬಂದಿದ್ದರು " ಎಂದ ನರ್ಸ್ ಗೆ ಆಯ್ತು ಎನ್ನುವಂತೆ ತಲೆಯಾಡಿಸಿದವನು ಯಾಕೋ ಕಸಿವಿಸಿಯಾದಂತಾಗಿ ಗೌತಮ್ ಇದ್ದ ವಾರ್ಡ್ ಗೆ ಹೋದ. ಹಾಸಿಗೆಯಲ್ಲಿ ಮಲಗಿದ್ದ ಗೌತಮ್ ನ ಕಣ್ಣುಗಳು ಆಳಕ್ಕಿಳಿದು ಹೋಗಿದ್ದವು. ದವಡೆಯ ಮೂಳೆಯೇ ಮುರಿದಿದ್ದರಿಂದ  ಮುಖ ವಿಕಾರವಾಗಿತ್ತು. ಅದೆಂದಿಗೂ ಸರಿಯಾಗಲಾರದು ಎಂದುಕೊಳ್ಳುತ್ತಾ ರಿಪೋರ್ಟ್ಸ ಎಲ್ಲಾ ನೋಡಿ ಮಾತ್ರೆಗಳನ್ನು ಬದಲಾಯಿಸಿ ಬರೆದು ವಾಪಸ್ ಇಡುವ ಹೊತ್ತಿಗೆ ಪಕ್ಕದಲ್ಲಿದ್ದ ಪೇಪರ್ ಗಳು ಕಣ್ಣಿಗೆ ಬಿದ್ದವು. ಎತ್ತಿಹಿಡಿದು ನೋಡಿದರೆ ಮಾಧುರಿಯ ಕಡೆಯಿಂದ ಬಂದ ಡೈವೋರ್ಸ್ ನೋಟಿಸ್ ಆಗಿತ್ತು ಅದು .  ಗೌತಮ್ ನ ಮುಖ ನೋಡಿದ, ಇವನ ನೋಟ ಎದುರಿಸಲಾರದೇ ಗೌತಮ್ ಆ ಕಡೆ ಮುಖ ತಿರುಗಿಸಿದನಾದರೂ ಅವನ ಕಣ್ಣಂಚಿನ ನೀರು ಮಹೇಶ್ ಗೆ ಕಾಣದೆ ಇರಲಿಲ್ಲ. ಯಾಕೋ ಕೈಯಲ್ಲಿದ್ದ ಡೈವೋರ್ಸ್ ನೋಟಿಸ್  ಗಹಗಹಿಸಿ ನಗುತ್ತಿರುವಂತೆ ಭಾಸವಾಯ್ತು. ಒಂದು ಕಾಲದಲ್ಲಿ ಸುಂದರಿಯೆನಿಸಿ ಮನಸ್ಸಿನಲ್ಲಿ ಅಚ್ಚ್ಹೊತ್ತಿದ್ದ ಮಾಧುರಿಯ ರೂಪವೂ ಕುರೂಪವಾಗುತ್ತಿರುವಂತೆ ಕಾಣತೊಡಗಿತು.